Karnataka Rains: ಮುಂದಿನ 2 ದಿನ ಈ ಜಿಲ್ಲೆಗಳಿಗೆ ಭಾರೀ ಮಳೆ ಎಚ್ಚರಿಕೆ, ಹವಾಮಾನ ವರದಿ
ಬೆಂಗಳೂರು, ಮಾರ್ಚ್ 25: ಕರ್ನಾಟಕದಾದ್ಯಂತ ಪೂರ್ವ ಮುಂಗಾರು ಮಳೆ ಚುರುಕಾಗಿದೆ. ಅರ್ಧ ರಾಜ್ಯಕ್ಕೆ ಮಳೆ ಅಬ್ಬರಿಸಿದರೆ, ಇನ್ನರ್ಧ ಭಾಗದಲ್ಲಿ ತೀವ್ರ ಬಿಸಿಲು ದಾಖಲಾಗುತ್ತಿದೆ. ಒಣಹವೆಯ ಪ್ರದೇಶವಾದ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲೂ ಕೆಲ ದಿನಗಳಿಂದ ಉತ್ತಮ ಮಳೆ ಆಗಿದೆ. ರಣ ಬಿಸಲಿಗೆ ಕಾದ ಭೂಮಿ ತಂಪಾಗಿವೆ. ಉತ್ತರ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರೀ ಮಳೆ ಮುಂದುವರಿಯಲಿದೆ. ಮಾರ್ಚ್ 31ರವರೆಗೆ ರಾಜ್ಯಕ್ಕೆ ನೀಡಲಾದ ಮುನ್ಸೂಚನೆ ವಿವರ ಇಲ್ಲಿದೆ.
ರಾಜ್ಯದಲ್ಲಿ ಕಳೆದ 10 ದಿನಗಳಿಂದ ಪೂರ್ವ ಮುಂಗಾರು ಮಳೆ ಸಕ್ರಿಯವಾಗಿದೆ. ಮೈಸೂರು, ಕೊಡಗು, ಚಾಮರಾಜನಗರ, ಉಡುಪಿ, ದಕ್ಷಿಣ ಕನ್ನಡ, ಹಾಸನ, ಶಿವಮೊಗ್ಗ ಜಿಲ್ಲೆಗಳಲ್ಲಿ ಸುರಿಯುತ್ತಲೇ ಇದೆ. ಎರಡು ದಿನಗಳಿಂದ ಉತ್ತರ ಕರ್ನಾಟಕದ ಹಾವೇರಿ, ಧಾರವಾಡ, ಕಲಬುರಗಿ, ಬಾಗಲಕೋಟೆ ಬಾಗಕ್ಕೂ ಮಳೆ ವಿಸ್ತರಿಸಿದೆ. ಈ ಮಳೆ ಮುಂದಿನ ಎರಡು ಮತ್ತಷ್ಟು ಚುರುಕಾಗಿರಲಿದೆ. ನಂತರ ಒಣ ಹವೆಯೇ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮುಂದಿನ 2 ದಿನ ಭರ್ಜರಿ ಮಳೆ
ಮುಂದಿನ 48 ಗಂಟೆ (ಮಾರ್ಚ್ 27ರವರೆಗೆ) ದಕ್ಷಿಣ ಒಳನಾಡಿನ ಕೊಡಗು, ಹಾಸನ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಗುಡುಗು ಸಹಿತ ಹಗುರದಿಂದ ಸಾಧಾರಣ ಮಳೆ ಸುರಿಯುವ ಸಾಧ್ಯತೆ ಇದೆ. ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಕೆಲವು ಸ್ಥಳಗಳಲ್ಲೂ ಪೂರ್ವ ಮುಂಗಾರು ಚುರುಕಾಗಿರಲಿದೆ.
ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಗದಗ, ಹಾವೇರಿ ಮತ್ತು ಬಾಗಲಕೋಟೆ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಇಂದಿನಿಂದಲೇ ಗುಡುಗ ಮಿಂಚು ಸಹಿತ ಹಗುರದಿಂದ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ. ಉತ್ತರ ಕರ್ನಾಟಕದ ಕೆಲವು ಸ್ಥಳಗಳಲ್ಲಿ ಗಂಟೆಗೆ 40-50 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ. ಈ ಮೇಲಿನ ಜಿಲ್ಲೆಗಳ ಹೊರತಾಗಿ ಬೇರೆ ಕಡೆಗಳಲ್ಲಿ ಶುಷ್ಕ ವಾರವರಣ ಕಂಡು ಬರಲಿದೆ ಎಂದು ಐಎಂಡಿ ತಿಳಿಸಿದೆ.
ಮಳೆ ಬೆನ್ನಲ್ಲೆ ತೀವ್ರ ತಾಪಮಾನ ಮುನ್ಸೂಚನೆ
ಮಳೆ ಕಾರಣಕ್ಕೆ ಈ ಜಿಲ್ಲೆಗಳಲ್ಲಿ ಉಷ್ಣಾಂಶ ಪ್ರಮಾಣ ಇಳಿಕೆ ಆಗಿದ್ದು, ಜನರು ಮಳೆ ಕಂಡು ಖುಷಿಪಟ್ಟಿದ್ದರು. ಈ ಮಳೆಗೆ ಮುಂದಿನ ಎರಡು ಮೂರು ದಿನಗಳಲ್ಲಿ ಅಂತ್ಯಗೊಳ್ಳಲಿದೆ. ನಂತರ ಮತ್ತೆ ರಾಜ್ಯಾದ್ಯಂತ ಒಣಹವೆ, ಅತ್ಯಧಿಕ ತಾಪಮಾನ ಶುರುವಾಗಲಿದೆ ಎನ್ನುವ ಮುನ್ಸೂಚನೆ ಇದೆ.

ಮಾರ್ಚ್ 28 ರಿಂದ ಮಾರ್ಚ್ 31ರವರೆಗೆ ರಾಜ್ಯಾದ್ಯಂತ ಒಣ ಹವಾಮಾನದ ವಾತಾವರಣ ಕಂಡು ಬರಲಿದೆ. ಆಗ ಮಲೆನಾಡು, ಕರಾವಳಿ, ಉತ್ತರ ಮತ್ತು ದಕ್ಷಿಣ ಕರ್ನಾಟಕದ ಯಾವ ಭಾಗಗಳಲ್ಲಿ ಮಳೆ ದುರ್ಬಲಗೊಣಡಯ ಒಣಹವೆ ಸೃಷ್ಟಿಯಾಗಲಿದೆ. ಮತ್ತೆ ಜನರಿಗೆ ಬಿರು ಬೇಸಿಗೆಯ ಅನುಭವ ಉಂಟು ಮಾಡಲಿದೆ ಎಂದು ಸದ್ಯದ ಹವಾಮಾನ ವರದಿ ಮಾಹಿತಿ ನೀಡಿದೆ.
ಎಲ್ಲೆಲ್ಲಿ ಗರಿಷ್ಠ ತಾಪಮಾನ ದಾಖಲಾಗಿದೆ?
ರಾಜ್ಯದ ಗರಿಷ್ಠ ತಾಪಮಾನ ಬಾಗಲಕೋಟೆ ಮತ್ತು ಕಲಬುರಗಿ ಜಿಲ್ಲೆ ವ್ಯಾಪ್ತಿಯಲ್ಲಿ (ತಲಾ 38 ಡಿಗ್ರಿ ಸೆಲ್ಸಿಯಸ್) ದಾಖಲಾಗಿದೆ. ಬೆಳಗಾವಿ ವಿಮಾನ ನಿಲ್ದಾಣ, ಹಾವೇರಿ ಮತ್ತು ದಾವಣಗೆರೆಯಲ್ಲಿ ತಲಾ 36 ಡಿಗ್ರಿ ಸೆಲ್ಸಿಯಸ್, ಕೊಪ್ಪಳ, ಧಾರವಾಡ, ವಿಜಯಪುರ, ಚಿತ್ರದುರ್ಗ, ಶಿವಮೊಗ್ಗ ಮತ್ತು ಮೈಸೂರಲ್ಲಿ ತಲಾ 35 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಮುಂದಿನ ದಿನಗಳಲ್ಲಿ ಇದಕ್ಕಿಂತಲೂ ಹೆಚ್ಚಿನ ಬಿಸಿಲು ರಾಜ್ಯಾದ್ಯಂತ ಕಂಡು ಬರಲಿದೆ.
ಬೆಂಗಳೂರಿಗೆ ಮಳೆ ಬರುತ್ತಾ?
ಬೆಂಗಳೂರಿನಲ್ಲಿ ಕಳೆದ ವಾರ ಎರಡು ದಿನ ಉತ್ತಮ ಮಳೆ ಆಗಿತ್ತು. ಕೆಲವೇ ನಿಮಿಷ ಸುರಿದ ಮಳೆಗೆ ಬೆಂಗಳೂರು ರಸ್ತೆಗಳು ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತಗೊಂಡಿತ್ತು. ಇಲ್ಲಿ ಸಹ ಗರಿಷ್ಠ ತಾಪಮಾನ 35 ಡಿಗ್ರಿ ಸೆಲ್ಸಿಯಸ್ನಿಂದ 32ಕ್ಕೆ ಇಳಿಕೆ ಆಗಿದೆ. ನಗರದಲ್ಲಿ ಕೊಂಚ ಮಟ್ಟಿಗೆ ಬಿಸಿಲಿನ ಪ್ರಮಾಣ ಇಳಿಕೆ ಆಗಿದೆ. ಸದ್ಯಕ್ಕೆ ನಗರಕ್ಕೆ ಮಳೆ ಮುನ್ಸೂಚನೆ ಇಲ್ಲ. ನಗರವಾಸಿಗಳು ಬಿಸಿಲಿಗೆ ತತ್ತರಿಸುತ್ತಿದ್ದಾರೆ..












Click it and Unblock the Notifications