Karnataka weather:ದಕ್ಷಿಣ ಒಳನಾಡಿಗೆ 5 ದಿನ ಭಾರೀ ಮಳೆ, ರಾಜ್ಯದ ಉಷ್ಣಾಂಶ ಹೇಗಿದೆ?
ಬೆಂಗಳೂರು, ಸೆಪ್ಟಂಬರ್ 04: ಕರ್ನಾಟಕದಲ್ಲಿ ಕೊಂಚಮಟ್ಟಿಗೆ ಮುಂಗಾರಿನ ಅಬ್ಬರ ತಗ್ಗುವ ಮುನ್ಸೂಚನೆ ಲಭಿಸಿದೆ. ಮುಂದಿನ ಐದು ದಿನವು (ಸೆಪ್ಟೆಂಬರ್ 9ರ ತನಕ) ದಕ್ಷಿಣ ಒಳನಾಡಿನಲ್ಲಿ ಸಾಧಾರಣದಿಂದ ಭಾರೀ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಹೌದು, ಕರ್ನಾಟಕದಾದ್ಯಂತ ಗುಡುಗು ಸಹಿತ್ಯ ಅತ್ಯಧಿಕ ಭಾರೀ ಪ್ರಮಾಣದಲ್ಲಿ ಸುರಿದದ್ದ ವರುಣ ತುಸು ತಣ್ಣಗಾಗಲಿದ್ದಾರೆ. ಭಾನುವಾರದ ಹವಾಮಾನ ಇಲಾಖೆ ಮುನ್ಸೂಚನೆ ವರದಿ ಪ್ರಕಾರ, ಮುಂದಿನ ಐದು ಪೈಕಿ ಮೊದಲ ಎರಡು ದಿನ ಕರಾವಳಿ ಹಾಗೂ ಉತ್ತರ ಒಳನಾಡಿನ ಭಾಗದಲ್ಲಿ ಯಾವುದೇ ಮಳೆ ಮುನ್ಸೂಚನೆ ಇಲ್ಲ. ಕೆಲವು ಪ್ರದೇಶಗಳಲ್ಲಿ ಮಾತ್ರ ಆಗಾಗ ತುಂತುರು ಮಳೆ ಆಗಬಹುದು. ಇದರ ಹೊರತು ಯಾವುದೇ ಗಂಭೀರ ಬದಲಾವಣೆಗಳು ಇಲ್ಲ ಎಂದು ವರದಿ ತಿಳಿಸಿದೆ.
ವಿದ್ಯಾರ್ಥಿಗಳ ನೆರವಿಗೆ ಹೈಕೋರ್ಟ್, ಹೊಸ ಸಿಇಟಿ Ranking ಪ್ರಕಟಿಸಲು ಆದೇಶ
ನಂತರದ ಮೂರು ದಿನಗಳು ಅಂದರೆ ಸೆಪ್ಟಂಬರ್ 7ರಿಂದ 9ರವರೆಗೆ ಕರಾವಳಿಯ ಮೂರು ಜಿಲ್ಲೆಗಳು ಹಾಗೂ ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಕೋಲಾರ, ಗದಗ, ವಿಜಯಪುರ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ದಿನ ಬಿಟ್ಟು ದಿನ ಭಾರೀ ಮಳೆ ಸುರಿಯಲಿದೆ. ಹೀಗಾಗಿ ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಎಚ್ಚರಿಕೆ ನೀಡಲಾಗಿದೆ.
ದ.ಒಳನಾಡಿನಲ್ಲಿ ಮುಂದುವರಿದ ಭಾರೀ ಮಳೆ; ಇನ್ನೂ ದಕ್ಷಿಣ ಒಳನಾಡಿನ ಭಾಗದಲ್ಲಿ ಮಳೆ ಐದು ದಿನವು ಚುರುಕಾಗಿರಲಿದೆ. ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆ, ಚಾಮರಾಜ ನಗರ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಕೊಡಗು, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು ಜಿಲ್ಲೆಗಳ ಹಲವೆಡೆ ಆಗಾಗ ಭಾರೀ ಮಳೆ ಅಬ್ಬರಿಸಲಿದೆ. ಇಷ್ಟು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಸೆ.8 ಮತ್ತು 9ರಂದು ಇದೇ ಭಾಗದ ಕೆಲವು ಜಿಲ್ಲೆಗಳಲ್ಲಿ ಮಳೆಯಬ್ಬರ ತುಸು ಕ್ಷೀಣಿಸಲಿದೆ ಎಂದು ಹವಾಮಾನ ಇಲಾಖೆ ತಜ್ಞರು ಮಾಹಿತಿ ನೀಡಿದ್ದಾರೆ.
ಮಲೆನಾಡು ಸೇರಿದಂತೆ ರಾಜ್ಯದ ಕೆಲವು ಜಿಲ್ಲೆಗಳ ಆರೆಂಜ್ ಅಲರ್ಟ್ನಿಂದ ಯೆಲ್ಲೋ ಅಲರ್ಟ್ಗೆ ಮರಳಿವೆ. ಉತ್ತರ ಒಳನಾಡಿನ ಭಾಗದಲ್ಲಿ ಮಳೆ ಬಹುತೇಕವಾಗಿ ಕ್ಷೀಣಿಸಿದೆ. ಬೆಳಗಾವಿ, ಗದಗ, ವಿಜಯಪುರಗಳಲ್ಲಿ ಮಾತ್ರ ತುಂತುರು ಮಳೆ ಆಗಿದೆ. ಕರಾವಳಿಯಲ್ಲೂ ಇದೇ ಪರಿಸ್ಥಿತಿ ಮುಂದುವರಿದಿದೆ ಎಂದು ತಿಳಿದು ಬಂದಿದೆ.
34.9 ಡಿ.ಸೆ. ಗರಿಷ್ಠ ಉಷ್ಣಾಂಶ ದಾಖಲು; ರಾಜ್ಯದಲ್ಲಿ ಮಳೆ ಕಡಿಮೆಯಾದ ಬೆನ್ನಲ್ಲೆ ಹಲವು ಜಿಲ್ಲೆಗಳಲ್ಲಿ ತಾಪಮಾನ ಅಧಿಕಗೊಂಡಿದೆ. ಈ ಪೈಕಿ ಕಲಬುರಗಿಯಲ್ಲಿ ಅತ್ಯಧಿಕ ತಾಪಮಾನ 34.9ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಅದೇ ರೀತಿ ರಾಯಚೂರು ಮತ್ತು ವಿಜಯಪುರ ಜಿಲ್ಲೆಯಲ್ಲಿ ತಲಾ 33ಡಿಗ್ರಿ ಸೆಲ್ಸಿಯಸ್ ತಾಪಮಾನ, ಬಳ್ಳಾರಿ ಮತ್ತು ಹಾಸನ ತಲಾ 32 ಡಗ್ರಿ ಸೆಲ್ಸಿಯಸ್, ಮಂಡ್ಯ, ಗದಗ, ಚಿತ್ರದುರ್ಗ ಜಿಲ್ಲೆಗಳಲ್ಲಿ ಸಹ 31ಡಿಗ್ರಿ ಸೆಲ್ಸಿಯಸ್ ಅಧಿಕ ಉಷ್ಣಾಂಶ ದಾಖಲಾಗಿದೆ. ಇನ್ನು ರಾಜ್ಯದ ಕನಿಷ್ಠ ಉಷ್ಣಾಂಶ ಮಡಿಕೇರಿಯಲ್ಲಿ 17.9ಡಿಗ್ರಿ ಸೆಲ್ಸಿಯಸ್ ಇದೆ ಎಂದು ವರಿಯಾಗಿದೆ.