Karnataka Rains: ವೀಕೆಂಡ್ ಜಾಲಿ ರೈಡ್ ಹೋಗೋರಿಗೆ ಗುಡ್ ನ್ಯೂಸ್: ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಇಂದು ಧಾರಾಕಾರ ಮಳೆ
ಬೆಂಗಳೂರು ಏಪ್ರಿಲ್ 19: ಬೆಂಗಳೂರಿನಲ್ಲಿ ಕಳೆದ ದಿನವೂ ಮಳೆಯಾಗಿದೆ. ಆದರೆ ಹೇಳಿಕೊಳ್ಳುವ ಮಟ್ಟಿಗೆ ಮಳೆ ಬಂದಿಲ್ಲ. ಸಂಜೆ ಆವರಿಸಿದ್ದ ಕಪ್ಪು ಕಾರ್ಮೋಡ ಧಾರಾಕಾರ ಮಳೆ ತರಿಸಲಿದೆ ಅಂದುಕೊಳ್ಳಲಾಗಿತ್ತು. ಆದರೆ ಸಂಜೆ ಅಲ್ಲಲ್ಲಿ ಜಿಟಿ ಜಿಟಿ ಮಳೆಯಾಗಿದ್ದು ಬಿಟ್ಟರೆ ಹೆಚ್ಚೇನು ಮಳೆಯಾಗಿಲ್ಲ. ಆದರೆ ಇಂದು (ಏಪ್ರಿಲ್ 19) ನಗರದಲ್ಲಿ ಜೋರು ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಹೀಗಾಗಿ ವೀಕೆಂಡ್ ಅಂತ ಜಾಲಿಯಾಗಿ ಸುತ್ತಾಡೋ ಜನರಿಗೆ ಈ ವಾರಾಂತ್ಯ ಸಖತ್ ಥ್ರಿಲ್ ನೀಡೋದು ಗ್ಯಾರಂಟಿ.
ಹೌದು ಬೆಂಗಳೂರಿನಲ್ಲಿ ಕಳೆದ ಮೂರು ದಿನಗಳಿಂದ ಸಂಜೆ ಮಳೆಯಾಗುತ್ತಿದೆ. ಹೀಗಾಗಿ ಬೆಂಗಳೂರಿನ ವಾತಾವರಣ ತಂಪಾಗಿದ್ದು ಬಿಸಿಲಿನ ತಾಪಮಾನ ಕಡಿಮೆ ಆಗಿದೆ. ಇನ್ನೂ ಮುಂದಿನ ಮೂರು ದಿನ (ಏಪ್ರಿಲ್19 ರಿಂದ 21) ಬೆಂಗಳೂರಿನಲ್ಲಿ ಮಳೆಯಾಗಲಿದೆ ಎಂದು ಐಎಂಡಿ ಭವಿಷ್ಯ ನುಡಿದಿದೆ. ಹಾಗಾದರೆ ರಾಜ್ಯದಲ್ಲಿ ಇಂದು ಹವಾಮಾನ ಹೇಗಿರಲಿದೆ? ಎಲ್ಲಿ ಮಳೆ ಬೀಳುವುದು? ಇದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.

ಕರ್ನಾಟಕದಾದ್ಯಂತ ಎಲ್ಲಲ್ಲಿ ಮಳೆ?
ಕರ್ನಾಟಕದ ಹಲವೆಡೆ ಕಳೆದ ಕೆಲ ದಿನಗಳಿಂದ ಮುಂಗಾರು ಪೂರ್ವ ಮಳೆ ಶುರುವಾಗಿದೆ. ಬಿಸಿಲಿನ ಬೇಗೆಗೆ ಹೈರಾಣಾಗಿದ್ದ ರಾಯಚೂರಿನಲ್ಲಿ ಕಳೆದ ದಿನ ರಾತ್ರಿ (ಏಪ್ರಿಲ್ 18) ಧಾರಾಕಾರವಾಗಿ ಮಳೆಯಾಗಿದೆ. ಮಳೆಗೂ ಮುನ್ನ ಶುರುವಾದ ಗುಡುಗು ಮಿಂಚಿ ತೀವ್ರ ಗಾಳಿಗೆ ಜನ ಆತಂಕಗೊಂಡಿದ್ದಾರೆ.
ರಾಯಚೂರಿನ ಮಸ್ಕಿ, ಹಟ್ಟಿ ಚಿನ್ನದ ಗಣಿ, ಲಿಂಗಸುಗೂರು ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಜಿಟಿ ಜಿಟಿ ಮಳೆಯಾಗಿದ್ದು, ರಾತ್ರಿ ಸಿಡಿಲು ಬಡಿದು ಇಬ್ಬರು ಸಾವನ್ನಪ್ಪಿದ ಘಟನೆ ವರದಿಯಾಗಿದೆ. ಇನ್ನೂ ಹುಬ್ಬಳ್ಳಿಯಲ್ಲಿ ಕಳೆದ ದಿನ ಆಲಿಕಲ್ಲಿ ಮಳೆಯಾಗಿದ್ದು 40ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿವೆ. ಅಲ್ಲದೆ ಕೊಪ್ಪಳ ಜಿಲ್ಲೆಯ ಗಾಣಧಾಳ ಗ್ರಾಮದಲ್ಲಿ 35 ಕುರಿಗಳು ಮೃತಪಟ್ಟಿವೆ. ಇನ್ನೂ ಯಾದಗಿರಿ, ಕಲಬುರಗಿ, ಗದಗ, ಬಳ್ಳಾರಿ, ಧಾರವಾಡದ ಹಲವೆಡೆ ಗುಡುಗು ಮಿಂಚಿ ಗಾಳಿ ಸಹಿತ ಮಳೆಯಾಗಿದೆ.

ಇನ್ನೂ ಹೊಸಪೇಟೆಯ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಕೋಗಳಿ ತಾಂಡಾ, ಚಿಮ್ಮನಹಳ್ಳಿಯಲ್ಲಿ ಶುಕ್ರವಾರ ಸಂಜೆ (ಏಪ್ರಿಲ್ 18) ಆಲಿಕಲ್ಲು ಮಳೆ ಬಿದ್ದಿದೆ. ಇಂದು (ಏಪ್ರಿಲ್ 19) ರಾಜ್ಯದ ಕೆಲ ಭಾಗದಲ್ಲಿ ಗಂಟೆಗೆ 60ಕಿಮಿ ವೇಗದಲ್ಲಿ ಗಾಳಿ ಬೀಸಲಿದ್ದು ಜಾಗರೂಕರಾಗಿರುವಂತೆ ಸೂಚನೆ ನೀಡಲಾಗಿದೆ. ಹಾಗಾದರೆ ಇಂದು ರಾಜ್ಯದ ಯಾವ ಭಾಗದಲ್ಲಿ ಮಳೆಯಾಗಲಿದೆ ಎಂದು ಈಗ ತಿಳಿಯೋಣ.
ಬೆಂಗಳೂರು ಸೇರಿದಂತೆ ರಾಜ್ಯದ 18 ಜಿಲ್ಲೆಗಳಲ್ಲಿ ಇಂದು ಧಾರಾಕಾರ ಮಳೆಯಾಗಿಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಧಾರವಾಡ, ಗದಗ, ಉಡುಪಿ, ದಕ್ಷಿಣ ಕನ್ನಡ, ಕೋಲಾರ, ಚಿಕ್ಕಮಗಳೂರು, ಕೊಡಗು, ಮಂಡ್ಯ, ಮೈಸೂರು, ರಾಮನಗರ, ಹಾವೇರಿ, ತುಮಕೂರು, ಚಿತ್ರದುರ್ಗ, ಹಾಸನ ಸೇರಿದಂತೆ ಹಲವೆಡೆ ಗುಡುಗು ಮಿಂಚು ಗಾಳಿಯೊಂದಿಗೆ ಮಳೆಯಾಗಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.
ಇದರೊಂದಿಗೆ ಯಾದಗಿರಿ, ವಿಜಯಪುರ, ಬೀದರ್, ಬೆಳಗಾವಿ, ಬಾಗಲಕೋಟೆ, ಬಳ್ಳಾರಿ, ರಾಯಚೂರು, ದಾವಣಗೆರೆ, ವಿಜಯನಗರ, ಉತ್ತರ ಕನ್ನಡ, ಶಿವಮೊಗ್ಗ, ಕೊಪ್ಪಳ, ಕಲಬುರಗಿಯಲ್ಲಿ ತಾಪಮಾನ ಹೆಚ್ಚಾಗಲಿದ್ದು ಒಣಹವೆ ಮುಂದುವರೆಯಲಿದೆ. ಒಟ್ಟಿನಲ್ಲಿ ರಾಜ್ಯದಲ್ಲಿ ವಾರಾಂತ್ಯಕ್ಕೆ ಮಳೆ ಅಧಿಕವಾಗಲಿದ್ದು ವಾತಾವರಣ ಹಿತ ನೀಡಲಿದೆ.












Click it and Unblock the Notifications