ಮೊದಲೇ ಇದ್ದ ಕಾಯಿಲೆಗಳ ಬಗ್ಗೆ ಮಾಹಿತಿ ಮುಚ್ಚಿಟ್ಟರೆ ವಿಮೆ ಹಣ ಸಿಗದು: ಹೈಕೋರ್ಟ್
ಬೆಂಗಳೂರು.ಅ.30 ಆರೋಗ್ಯ ವಿಮೆ ಮಾಡಿಸುವವರಿಗೆ ಇಲ್ಲಿದೆ ಇದು ಒಂದು ಪಾಠ. ಅದೇನೆಂದರೆ, ಆರೋಗ್ಯ ವಿಮೆ ಮಾಡಿಸುವವರು ತಮಗೆ ಮೊದಲೇ ಇದ್ದ ಕಾಯಿಲೆಗಳ ಬಗ್ಗೆ ಮಾಹಿತಿಯನ್ನು ಮುಚ್ಚಿಟ್ಟು ನಂತರ ಆ ವಿಷಯ ತಿಳಿದಾಗ ವಿಮಾ ಕಂಪನಿ ಮೆಡಿಕ್ಲೈಮ್ ಪಾಲಿಸಿಯನ್ನು ನಿರಾಕರಿಸಬಹುದು ಎಂದು ಹೈಕೋರ್ಟ್ ಆದೇಶ ನೀಡಿದೆ.
ಅಲ್ಲದೆ, ಬೆಂಗಳೂರಿನ ದಂಪತಿ ಸಲ್ಲಿಸಿದ್ದ ಪ್ರಕರಣದಲ್ಲಿ ವಿಮೆ ಹಣ ನೀಡಲು ನಿರಾಕರಿಸಿದ್ದ ವಿಮಾ ಕಂಪನಿ ಕ್ರಮವನ್ನು ನ್ಯಾಯಾಲಯ ಎತ್ತಿಹಿಡಿದಿದೆ.
ಬೆಂಗಳೂರಿನ ಜಯಾ ಎಲಿಜಬೆತ್ ಮ್ಯಾಥ್ಯೂ ದಂಪತಿ ವಿಮಾ ಒಂಬೂಡ್ಸ್ ಮನ್ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾ. ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ.

ಹೈಕೋರ್ಟ್ ಏನು ಹೇಳಿದೆ?
ವಿಮಾ ಕಂಪನಿ ಒಳ್ಳೆಯ ಉದ್ದೇಶದಿಂದ ಮೆಡಿಕ್ಲೈಮ್ ಪಾಲಿಸಿಯನ್ನು ನೀಡುತ್ತದೆ. ಆ ವೇಳೆ ವಿಮಾದಾರರು ತಮಗೆ ಮೊದಲೇ ಆನಾರೋಗ್ಯವಿದ್ದರೆ ಅದರ ಮಾಹಿತಿಯನ್ನು ನೀಡಬೇಕಾದ್ದು ಅವರ ಕರ್ತವ್ಯ. ಹಾಗೆ ಮಾಹಿತಿಯನ್ನು ನೀಡದೇ ಇದ್ದಾಗ ವಮಾ ಕಂಪನಿ ಪಾಲಿಸಿಯನ್ನು ನಿರಾಕರಿಸಬಹುದು ಎಂದು ನ್ಯಾಯಾಲಯ ಹೇಳಿದೆ.
ಮೆಡಿಕ್ಲೈಮ್ ಪಾಲಿಸಿ ಎನ್ನುವುದು ಒಂದು ಬಗೆಯ ಒಪ್ಪಂದವಾಗಿದ್ದು, ಆ ಒಪ್ಪಂದ ವಿಶ್ವಾಸದ ಮೇಲೆ ಒಳ್ಳೆಯ ಭಾವನೆಯೂ ಇರುತ್ತದೆ. ಆದರೆ ವಿಮಾದಾರರು ತಮಗೆ ಪಾಲಿಸಿ ಮಾಡಿಸುವ ಮುನ್ನ ಇದ್ದ ಅನಾರೋಗ್ಯದ ಬಗ್ಗೆ ಮಾಹಿತಿ ನೀಡಬೇಕು. ಒಂದು ವೇಳೆ ಪಾಲಿಸಿ ಪಡೆದ ನಂತರ ಮಾಹಿತಿ ಲಭ್ಯವಾದರೆ ಆಗ ಕಂಪನಿ ಪಾಲಿಸಿಯನ್ನು ನಿರಾಕರಿಸಿದರೆ ಅದರಲ್ಲಿ ದೋಷ ಹುಡುಕಲಾಗದು ಎಂದು ಆದೇಶದಲ್ಲಿ ತಿಳಿಸಿದೆ.
ಪ್ರಕರಣದ ವಿವರ:
ಅರ್ಜಿದಾರರು 2017ರ ಏ.29ರಂದು ಪ್ರಮುಖ ಆನಾರೋಗ್ಯಗಳಿಗೆ ವಿಮಾ ಸೌಲಭ್ಯ ಒದಗಿಸುವ ಹೋಮ್ ಸುರಕ್ಷಾ ಪ್ಲಸ್ ಪಾಲಿಸಿ ಮಾಡಿಸಿದ್ದರು. 2020ರ ಆ.10ರಂದು ವಿಕ್ರಮ್ ಆಸ್ಪತ್ರೆಯ ವೈದ್ಯರು ಮೊದಲನೇ ಅರ್ಜಿದಾರರು ಮಲ್ಟಿಪಲ್ ಸ್ಕ್ಲೇರೊಸಿಸ್ ನಿಂದ ಬಳಲುತ್ತಿದ್ದಾರೆಂದು ಚಿಕಿತ್ಸೆ ಪಡೆದಿದ್ದರು. ಆನಂತರ ಚಿಕಿತ್ಸೆ ವೆಚ್ಚ ಮರು ಪಾವತಿಗೆ ಹಕ್ಕು ಮಂಡಿಸಿದ್ದರು.
ಆದರೆ ವಿಮಾ ಕಂಪನಿ ಪರಿಶೀಲಿಸಿದಾಗ ಅವರಿಗೆ ಮೊದಲೇ ರೋಗ ಇದ್ದಿದ್ದು ಕಂಡು ಬಂದಿತು, ಹಾಗಾಗಿ ಕಂಪನಿ ಚಿಕಿತ್ಸಾ ವೆಚ್ಚ ನೀಡಲು ನಿರಾಕರಿಸಿತ್ತು. ದಂಪತಿ ವಿಮಾ ಒಂಬುಡ್ಸಮನ್ಗೆ ದೂರು ನೀಡಿ, ವಿಮಾ ಕಂಪನಿಯಿಂದ 28 ಲಕ್ಷ ರೂ. ಕೊಡಿಸುವಂತೆ ದೂರು ನೀಡಿದ್ದರು. ದಾಖಲೆ ಪರಿಶೀಲಿಸಿದ ಒಂಬುಡ್ಸಮನ್ ದಂಪತಿಯ ಮನವಿ ತಿರಸ್ಕರಿಸಿದ್ದರು. ಅದನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಮೊರೆ ಹೋಗಿದ್ದರು.












Click it and Unblock the Notifications