Breaking; ಜೆಡಿಎಸ್ಗೆ ವಾಪಸ್ ಹೋಗಲ್ಲ, ಹಾಲಿ ಶಾಸಕನ ಘೋಷಣೆ!
ಬೆಂಗಳೂರು, ನವೆಂಬರ್ 10; "ನನ್ನನ್ನು ಪಕ್ಷದಿಂದ ಉಚ್ಛಾಟನೆ ಮಾಡಿರುವುದು ಮುಗಿದ ಅಧ್ಯಾಯ. ಜೆಡಿಎಸ್ಗೆ ಮರಳಲು ನಾನು ಜಿ. ಟಿ. ದೇವೇಗೌಡ ಅಲ್ಲ, ವಾಸಣ್ಣ" ಎಂದು ಗುಬ್ಬಿ ಕ್ಷೇತ್ರದ ಶಾಸಕ ಎಸ್. ಆರ್. ಶ್ರೀನಿವಾಸ್ ಹೇಳಿದರು.
ಗುರುವಾರ ಗುಬ್ಬಿಯಲ್ಲಿ ಮಾತನಾಡಿದ ಅವರು, "ನಾನು ಜೆಡಿಎಸ್ ಪಕ್ಷಕ್ಕೆ ಮರಳುವ ಪ್ರಶ್ನೆಯೇ ಇಲ್ಲ. ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿಗೆ ನನ್ನನ್ನು ಎದುರಿಸು ಧೈರ್ಯ ಇಲ್ಲ" ಎಂದು ವಾಗ್ದಾಳಿ ನಡೆಸಿದರು.
ಭಾರತ್ ಜೋಡೋ ಯಾತ್ರೆಯಲ್ಲಿ ಹೆಜ್ಜೆ ಹಾಕಿದ ಜೆಡಿಎಸ್ ಶಾಸಕ!
ಮಂಗಳವಾರ ಜೆಡಿಎಸ್ ಶಾಸಕ ಸಾ. ರಾ. ಮಹೇಶ್ ಎಸ್. ಆರ್. ಶ್ರೀನಿವಾಸ್ ಮನೆಗೆ ಭೇಟಿ ಕೊಟ್ಟಿದ್ದರು. ಆ ಸಮಯದಲ್ಲಿ ಶಾಸಕರು ಮನೆಯಲ್ಲಿ ಇರಲಿಲ್ಲ. ಎಸ್. ಆರ್. ಶ್ರೀನಿವಾಸ್ ಪುತ್ರ ದುಷ್ಯಂತ್ ಮತ್ತು ಪತ್ನಿ ಜೊತೆ ಅವರು ಮಾತುಕತೆ ನಡೆಸಿ ವಾಪಸ್ ಆಗಿದ್ದರು.
ಮೋಸಕ್ಕೆ ಬೇಸತ್ತು ಜೆಡಿಎಸ್ ಗೂಡು ಬಿಡುವರೇ ಗುಬ್ಬಿ ವಾಸಣ್ಣ !
ಸಾ. ರಾ. ಮಹೇಶ್ ಭೇಟಿ ಬಳಿಕ ಎಸ್. ಆರ್. ಶ್ರೀನಿವಾಸ್ ಜೆಡಿಎಸ್ಗೆ ವಾಪಸ್ ಆಗಲಿದ್ದಾರೆ ಎಂಬ ಸುದ್ದಿಗಳು ಹಬ್ಬಿತ್ತು. ಆದರೆ ಗುರುವಾರ ಶಾಸಕ ಎಸ್. ಆರ್. ಶ್ರೀನಿವಾಸ್ ಈ ಕುರಿತು ಸ್ಪಷ್ಟನೆಯನ್ನು ನೀಡಿದ್ದಾರೆ.
ಮೂರೂವರೆ ವರ್ಷದ ಬಳಿಕ ಪಕ್ಷದ ಕಚೇರಿಗೆ ಬಂದ ಜೆಡಿಎಸ್ ಶಾಸಕ!
"ಸಾ. ರಾ. ಮಹೇಶ್ ಸ್ನೇಹಯುತವಾಗಿ ಭೇಟಿ ನೀಡಿದ್ದಾರೆ. ನಾನು ಜೆಡಿಎಸ್ ಪಕ್ಷಕ್ಕೆ ವಾಪಸ್ ಹೋಗುವುದಿಲ್ಲ. ಜೆಡಿಎಸ್ಗೆ ವಾಪಸ್ ಆಗಲು ನಾನು ಜಿ. ಟಿ. ದೇವೇಗೌಡ ಅಲ್ಲ, ವಾಸಣ್ಣ" ಎಂದು ಎಸ್. ಆರ್. ಶ್ರೀನಿವಾಸ್ ಹೇಳಿದರು.
"ನಾನು ನನ್ನ ಅಪ್ಪನ ಮಾತನ್ನೇ ಕೇಳಿಲ್ಲ, ಇನ್ನು ದುಷ್ಯಂತ್ ಮಾತು ಕೇಳುತ್ತೇನೆಯೇ?" ಎನ್ನುವ ಮೂಲಕ ಎಸ್. ಆರ್. ಶ್ರೀನಿವಾಸ್ ಪುತ್ರ ಮನವೊಲಿಕೆ ಮಾಡಿದರೂ ಸಹ ಜೆಡಿಎಸ್ಗೆ ಮರಳುವುದಿಲ್ಲ ಎಂದು ಕಡ್ಡಿಮುರಿದಂತೆ ಹೇಳಿದರು.
ಪಕ್ಷದಿಂದ ಉಚ್ಛಾಟನೆ; ಎಸ್. ಆರ್. ಶ್ರೀನಿವಾಸ್ 2018ರ ಚುನಾವಣೆಯಲ್ಲಿ ಗುಬ್ಬಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. 55,572 ಮತಗಳನ್ನು ಪಡೆದು ಜಯಗಳಿಸಿದ್ದರು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಎಚ್. ಡಿ. ಕುಮಾರಸ್ವಾಮಿ ಸಂಪುಟದಲ್ಲಿ ಸಚಿವರೂ ಆಗಿದ್ದರು.
ಆದರೆ ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿದ ಕಾರಣಕ್ಕೆ ಎಸ್. ಆರ್. ಶ್ರೀನಿವಾಸ್ರನ್ನು ಪಕ್ಷ ಉಚ್ಛಾಟನೆ ಮಾಡಿದೆ. ಅಲ್ಲದೇ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಸ್ಪೀಕರ್ಗೆ ದೂರು ಸಹ ನೀಡಿದೆ.
ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ತುಮಕೂರಿಗೆ ಆಗಮಿಸಿದಾಗ ಎಸ್. ಆರ್. ಶ್ರೀನಿವಾಸ್ ಯಾತ್ರೆ ಸ್ವಾಗತಿಸಿದ್ದರು. ಅಲ್ಲದೇ ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕಿದ್ದರು.