15 ವರ್ಷಗಳಿಂದ ಕನ್ನಡ ಭಾಷೆ ಮಾತನಾಡುತ್ತಿದ್ದೇನೆ: ಜಿಲ್ಲಾಧಿಕಾರಿ ಹೇಳಿಕೆ ವೈರಲ್!
ಭಾಷೆ ಕಲಿಕೆಯ ವಿಚಾರವಾಗಿ ಸಾಕಷ್ಟು ಚರ್ಚೆಗಳು ನಡೆಯುತ್ತಿರುವಾಗಲೇ ಭಾಷೆ ಕಲಿಕೆ ಎನ್ನುವುದು ಕಷ್ಟದ ವಿಷಯವೇನು ಅಲ್ಲ. ನಾನು ಕಳೆದ 15 ವರ್ಷಗಳಿಂದ ಕನ್ನಡ ಮಾತನಾಡುತ್ತಿದ್ದೇನೆ ಎಂದು ರಾಜ್ಯದ ಪ್ರಮುಖ ಜಿಲ್ಲಾಧಿಕಾರಿಯೊಬ್ಬರು ಹೇಳಿದ್ದಾರೆ. ಈ ವಿಷಯ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಭಾಷೆ ಕಲಿಯುವುದು ತುಂಬಾ ಸರಳ ಯಾವುದೇ ಒಂದು ಭಾಷೆ ಕಲಿಯಬೇಕಾದರೆ ಆ ಭಾಷೆಯ ಮೇಲೆ ನಾವು ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು. ಆ ಭಾಷೆಯ ಮೇಲೆ ಅಸಹ್ಯ ಹುಟ್ಟುವ ರೀತಿಯಲ್ಲಿ ನಡೆದುಕೊಳ್ಳಬಾರದು. ಬೇರೆ ಭಾಷೆ ಕಲಿಯಲು ನಾವು ಆತ್ಮವಿಶ್ವಾಸವನ್ನು ಹೊಂದಿರಬೇಕಾಗುತ್ತದೆ. ನಾವು ದಿನನಿತ್ಯ ಭಾಷೆಯನ್ನು ಕಲಿಯಬೇಕು. ಕಳೆದ 15 ವರ್ಷಗಳಿಂದ ಕನ್ನಡ ಭಾಷೆಯನ್ನು ಮಾತನಾಡುತ್ತಿದ್ದೇನೆ ಎಂದು ಧಾರವಾಡ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ. ಆರ್.ಜೆ ಅವರು ಹೇಳಿದ್ದಾರೆ.

ಮನುಷ್ಯ ಮನಸ್ಸು ಮಾಡಿದರೆ ಯಾವ ವಿಷಯ ಬೇಕಾದರೂ ಕಲಿಯಬಹುದು. ಇಂಗ್ಲಿಷ್ ಭಾಷೆಯನ್ನು ಕಲಿಯುವುದು ತುಂಬಾ ಸರಳವಾಗಿದೆ. ಇಂಗ್ಲಿಷ್ ಭಾಷೆಯಲ್ಲಿ ಕೇವಲ 26 ಅಕ್ಷರಗಳಿವೆ. ಹೀಗಾಗಿ ಬಹುಬೇಗನೆ ಇಂಗ್ಲೀಷ್ ಭಾಷೆಯನ್ನು ಕಲಿಯಬಹುದಾಗಿದೆ. ಆದರೆ ಕೆಲವು ಜನರು ಇಂಗ್ಲೀಷ್ ಭಾಷೆ ಕಷ್ಟಕರ ಎಂಬ ಕಲ್ಪನೆಯನ್ನು ನಮ್ಮಲ್ಲಿ ಮೂಡಿಸುತ್ತಾರೆ. ವಾಸ್ತವವನ್ನು ಅರಿತು ನಾವು ಭಾಷೆಯನ್ನು ಕಲಿಯಬೇಕು. ಬೇರೆ ಭಾಷೆ ಕಲಿಯುವಾಗ ಯಾವುದೇ ರೀತಿಯ ಸಂಕೋಚವಿರಬಾರದು. ಬ್ರಿಟಿಷರು ಬಿಟ್ಟು ಹೋದ ಇಂಗ್ಲಿಷ್ ಭಾಷೆಯನ್ನು ತಪ್ಪಾಗಿ ಮಾತನಾಡಲು ನಾವು ಏಕೆ ನಾಚಿಕೆ ಪಡಬೇಕು ಎಂದೂ ಅವರು ಕೇಳಿದ್ದಾರೆ.
ವಿಶೇಷ ತರಗತಿ ಹಾಗೂ ಸ್ಪೋಕನ್ ಇಂಗ್ಲೀಷ್ ಕ್ಲಾಸ್ ಮೂಲಕ ಇಂಗ್ಲಿಷ್ ಭಾಷೆಯನ್ನು ಕಲಿಯಬಹುದಾಗಿದೆ. ಭಾಷೆಯನ್ನು ಕಲಿಯಲು ಆಗುವುದಿಲ್ಲ ಎಂಬ ಭಾವನೆಯನ್ನು ಮೊದಲು ತೆಗೆದು ಹಾಕಬೇಕು. ಬೇರೆ ಬೇರೆ ಭಾಷೆಯನ್ನು ಕಲಿಯಲು ಮಕ್ಕಳನ್ನು ಪ್ರೋತ್ಸಾಹಿಸಬೇಕು. ಮಾತೃಭಾಷೆ ಕಲಿಯುವುದು ನಮಗೆ ಇಷ್ಟವಾಗುತ್ತದೆ. ಮಾತೃಭಾಷೆಯೊಂದಿಗೆ ನಾವು ಭಾವನಾತ್ಮಕ ಸಂಬಂಧವನ್ನು ಹೊಂದಿರುತ್ತೇವೆ. ಬೇರೆ ಭಾಷೆ ನಮಗೆ ಹೊರಗಡೆ ಹೋದಾಗ ಛತ್ರಿ ಹಾಗೂ ಟೋಪಿ ರೀತಿಯಲ್ಲಿ ಬಳಸಬೇಕಾಗುತ್ತದೆ. ಮಾತೃಭಾಷೆ ಎಂಬುದು ನಮ್ಮ ಚರ್ಮದ ರೀತಿಯಲ್ಲಿ ಇರುತ್ತದೆ. ಹೀಗಾಗಿ ಅದರ ರಕ್ಷಣೆ, ಗೌರವ ಮುಖ್ಯ. ನಮಗೆ ಸಂತೋಷ ಮತ್ತು ದುಃಖವಾದಾಗ ಮಾತೃಭಾಷೆಯಲ್ಲಿ ಮಾತ್ರ ನಾವು ಯೋಚಿಸುತ್ತೇವೆ. ಭಾಷೆಗಳನ್ನು ಸಮನಾದ ರೀತಿಯಲ್ಲಿ ಅಧ್ಯಯನ ಮಾಡಬೇಕು ಎಂದರು.
ಜಿಲ್ಲೆಯಲ್ಲಿ ಉತ್ತಮ ಫಲಿತಾಂಶ ದಾಖಲಿಸುವ ಗುರಿಯನ್ನು ಹೊಂದಲಾಗಿದೆ. ಆ ನಿಟ್ಟಿನಲ್ಲಿ ಗುಣಮಟ್ಟದ ಶಿಕ್ಷಣವನ್ನು ಮಕ್ಕಳಿಗೆ ನೀಡುವುದು ಶಿಕ್ಷಕರ ಜವಾಬ್ದಾರಿಯಾಗಿದೆ. ಶಿಕ್ಷಕರೊಂದಿಗೆ ಪಾಲಕರು ಮತ್ತು ಪೋಷಕರು ಮಕ್ಕಳಿಗೆ ಅಧ್ಯಯನದಲ್ಲಿ ಪ್ರೋತ್ಸಾಹ ನೀಡುವುದು ಅವಶ್ಯವಿದೆ. ಮಕ್ಕಳನ್ನು ಶಿಕ್ಷಣದ ಮೂಲಕ ಸಮಾಜದಲ್ಲಿ ಮುಂದೆ ತರಬಹುದು. ಪಾಲಕರು ಜವಾಬ್ದಾರಿಯನ್ನು ಅರಿತು ಜಿಲ್ಲಾಡಳಿತದೊಂದಿಗೆ ಕೈ ಜೋಡಿಸಿ, ಎಸ್ಎಸ್ಎಲ್ಸಿ ಫಲಿತಾಂಶ ಸುಧಾರಣೆಗೆ ಪಣ ತೊಡಬೇಕು. ಕಳೆದ ಆರು ತಿಂಗಳಿನಿಂದ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ. ಜಿಲ್ಲಾಡಳಿತಕ್ಕೆ ವಿವಿಧ ಸಂಘ-ಸಂಸ್ಥೆಗಳು ಸಹಾಯ ಹಸ್ತವನ್ನು ನೀಡುತ್ತಿವೆ ಎಂದಿದ್ದಾರೆ.
ಅಲ್ಲದೇ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ.50 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಿದ್ದಾರೆ. ಉಳಿದ ಶೇಕಡ 50ರಷ್ಟು ವಿದ್ಯಾರ್ಥಿಗಳು ಅನುತ್ತೀರ್ಣ ಆಗುತ್ತಿರುವುದು ತುಂಬಾ ದುಃಖಕರ ಸಂಗತಿಯಾಗಿದೆ. ವಿದ್ಯಾರ್ಥಿಗಳು ಉತ್ತಮ ಅಂಕ ಪಡೆದು ಉತ್ತೀರ್ಣರಾಗಬೇಕೆಂಬುವುದು ನಮ್ಮ ಉದ್ದೇಶವಾಗಿದೆ. ಪಾಲಕರು ತಮ್ಮ ಮಕ್ಕಳ ಸಮಸ್ಯೆಗಳನ್ನು ಜಿಲ್ಲಾಡಳಿತಕ್ಕೆ ತಿಳಿಸಿದರೆ ಕೂಡಲೇ ಪರಿಹರಿಸಲು ಕ್ರಮ ವಹಿಸಲಾಗುವುದು ಎಂದೂ ಅವರು ಹೇಳಿದ್ದಾರೆ.
ಜಿಲ್ಲಾಧಿಕಾರಿ ಹೇಳಿಕೆಗೆ ಮೆಚ್ಚುಗೆ: ಇನ್ನು ಜಿಲ್ಲಾಧಿಕಾರಿ ಹೇಳಿಕೆಗೆ ಸೋಷಿಯಲ್ ಮೀಡಿಯಾದಲ್ಲಿ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಕನ್ನಡ ಕಲಿತು, ಕನ್ನಡಿರೊಂದಿಗೆ ಬೆರೆತಿರುವ ಎಲ್ಲಾ ಅಧಿಕಾರಿಗಳೂ ಸಹ ಅಭಿನಂದನೆಗೆ ಅರ್ಹರು ಎಂದು ನೆಟ್ಟಿಗರು ಹೇಳಿದ್ದಾರೆ.
ಕನ್ನಡ ಭಾಷೆಯನ್ನು ಕಲಿತು ಕನ್ನಡಿಗರೊಂದಿಗೆ ಬೆರೆತರೆ ಕನ್ನಡಿಗರು ಹೇಗೆ ಗೌರವಿಸುತ್ತಾರೆ ಎನ್ನುವುದಕ್ಕೆ ಇದು ಸಾಕ್ಷಿ ಎಂದು ಕನ್ನಡಿಗರು ಸೋಷಿಯಲ್ ಮೀಡಿಯಾದಲ್ಲಿ ಹೇಳಿದ್ದಾರೆ.












Click it and Unblock the Notifications