ಹೈಕಮಾಂಡ್ ನೊಟೀಸ್ ಕೊಡುವಂಥ ಅಪರಾಧವನ್ನು ನಾನೇನೂ ಮಾಡಿಲ್ಲ: ಯತ್ನಾಳ್
ವಿಜಯಪುರ,ಜನವರಿ 17: ಹೈಕಮಾಂಡ್ ನೊಟೀಸ್ ಕೊಡುವಂಥ ಅಪರಾಧವನ್ನು ನಾನೇನೂ ಮಾಡಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಸ್ವಪಕ್ಷ ನಾಯಕರ ವಿರುದ್ದ ಬಸನಗೌಡ ಪಾಟೀಲ್ ಯತ್ನಾಳ್ ಟೀಕೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಹೈಕಮಾಂಡ್ ನೋಟೀಸ್ ನೀಡಿರುವ ವದಂತಿಯ ಬಗ್ಗೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ತಮಗೆ ಬಿಜೆಪಿ ಹೈಕಮಾಂಡ್ ನೋಟಿಸ್ ನೀಡಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.
ಈ ರೀತಿ ಸುಳ್ಳು ಸುದ್ಧಿಗಳನ್ನು ಹರಡಿಸಲಾಗುತ್ತಿದೆ. ನನ್ನ ವಿರೋಧಿಗಳಿಗೆ ಭಯವಿದೆ. ಯಾವುದೇ ರೀತಿಯ ಕ್ರಮ ಆಗುತ್ತಿಲ್ಲ ಹೀಗಾಗಿ ಏನಾದರೂ ಮಾಡಿ ಭಯ ಹುಟ್ಟಿಸಬೇಕು ಎಂಬುದು ವಿರೋಧಿಗಳ ತಂತ್ರವಾಗಿದೆ. ಯಾವ ಭಯಕ್ಕೂ ಅಂಜುವ ಮಗ ನಾನಲ್ಲ.
ಕೆಲವರು ಉಹಾಪೋಹಳನ್ನು ಮಾಡುತ್ತಾರೆ. ಜನರಲ್ಲಿ ಭಯ ಹುಟ್ಟಿಸಲು ಪ್ರಯತ್ನಿಸುತ್ತಾರೆ. ಯಾವುದಕ್ಕೂ ನಾನು ಭಯ ಪಡುವುದಿಲ್ಲ, ಅಂಜುವುದಿಲ್ಲ. ನಾನು ಏನು ಮಾತನಾಡಿದ್ದೇನೆ ಸತ್ಯವನ್ನು ಮಾತನಾಡಿದ್ದೇನೆ. ಪಕ್ಷದ ಹಿತದೃಷ್ಠಿಯಿಂದ ಮಾತನಾಡಿದ್ದೇನೆ. ಕರ್ನಾಟಕದಲ್ಲಿ ಭವಿಷ್ಯದಲ್ಲಿ ಬಿಜೆಪಿಗೆ 150 ಸೀಟುಗಳು ಬರಬೇಕು ಎಂಬ ಉದ್ದೇಶದಿಂದ ಮಾತನಾಡಿದ್ದೇನೆ ಎಂದು ಯತ್ನಾಳ್ ಹೇಳಿದರು.
ಇನ್ನೂ ಪಂಚಮಸಾಲಿ ಮೀಸಲಾತಿ ಹೋರಾಟ ವಿಚಾರ ಹಾಗೂ ನಾನು ಆಡಿರುವ ಮಾತುಗಳಿಗೆ ಸಂಬಂಧಿಸಂತೆ ನಿನ್ನೆ ಹೈಕಮಾಂಡಿನ ವರಿಷ್ಠರು ನನ್ನ ಜೊತೆ ಮಾತನಾಡಿದ್ದಾರೆ. ಮೀಸಲಾತಿ, ಸಂಘಟನೆ ಸೇರಿದಂತೆ ಎಲ್ಲ ವಿಚಾರಗಳನ್ನು ಮಾತನಾಡಿದ್ದಾರೆ.
ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ನಡೆಯುತ್ತಿದೆ. ನನಗೆ ಅನಿಸುವಂತೆ ಬಹಳ ದೊಡ್ಡ ನಿರ್ಣಯಗಳು ಹೊರ ಬರಬಹುದು. ಮುಂದಿನ ಮಾರ್ಚ್, ಏಪ್ರಿಲ್, ಮೇ ನಲ್ಲಿ ದೇಶದ ನಾನಾ ರಾಜ್ಯಗಳಲ್ಲಿ ಚುನಾವಣೆಗಳು ನಡೆಯಲಿವೆ.
ಈ ಹಿನ್ನೆಲೆಯಲ್ಲಿ ಸರಕಾರದಲ್ಲಿ ಮತ್ತು ಸಂಘಟನೆಯಲ್ಲಿ ಸಾಕಷ್ಟು ಬದಲಾವಣೆ ಮಾಡಬೇಕು ಎಂದು ನಿರ್ಣಯ ತೆಗೆದುಕೊಳ್ಳಲಾಗುತ್ತದೆ. ನನ್ನ ಪರವಾಗಿ ಒಳ್ಳೆಯ ನಿರ್ಣಯ ಬರಬಹುದು ಎಂಬ ವಿಶ್ವಾಸ ನನಗೆ ಇದೆ ವಿದೆ ಎಂದು ಹೇಳಿದರು.
ಬಿಜೆಪಿ ಹೈಕಮಾಂಡ್ ತಮ್ಮ ಪರ ಮೃದು ಧೋರಣೆ ಅನುಸರಿಸುತ್ತಿದೆ ಎಂಬ ವಿಚಾರವಾಗಿ ಮಾತನಾಡಿ, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ ಸಿಂಗ್ ನನ್ನ ಜೊತೆ ಮಾತನಾಡಿಲ್ಲ. ನನ್ನ ಪರವಾಗಿ ಹೈಕಮಾಂಡ್ ಯಾವುದೇ ಸಾಫ್ಟ್ ಕಾರ್ನರ್ ತೋರಿಸುತ್ತಿಲ್ಲ.
ಏಕೆಂದರೆ ಯತ್ನಾಳ ಮಾತನಾಡಿದ್ದು ಪಕ್ಷ ವಿರೋಧಿಯಲ್ಲ, ವ್ಯಕ್ತಿಯ ವಿರುದ್ಧ. ಭ್ರಷ್ಟಾಚಾರದ ವಿರುದ್ಧ. ವಂಶಾಡಳಿತ, ಪಾರಂಪರಿಕ ಕೆಟ್ಟ ಸಂಸ್ಕೃತಿಯ ವಿರುದ್ಧ ಮಾತನಾಡಿದ್ದಾರೆ ಎಂಬ ಹೈಕಮಾಂಡಿಗಿದೆ. ನಾನು ನೀಡುತ್ತಿರುವ ಹೇಳಿಕೆಗಳಿಂದ ಪಕ್ಷಕ್ಕೆ ದೊಡ್ಡ ಲಾಭವಾಗಲಿದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ಒಂದು ಮನೆಗೆ ಒಂದೆ ಟಿಕೆಟ್ ವಂಶವಾದ ಇರಬಾರದು. ಬಿಜೆಪಿಯಲ್ಲಿ ಅಪ್ಪ, ಮಗ, ಅಣ್ಣ, ತಮ್ಮ, ಎಲ್ಲರೂ ಎಂಎಲ್ಎ, ಎಂ ಎಲ್ ಸಿ, ಆ ಪಕ್ಷದಲ್ಲಿಯೂ ಶಾಸಕ, ಈ ಪಕ್ಷದಲ್ಲಿಯೂ ಎಂಎಲ್ಎ ಆಗಬಾರದು.
ಗುಜರಾತಿನಲ್ಲಿ ಹೇಗೆ ಇತ್ತೀಚಿನ ಚುನಾವಣೆಯಲ್ಲಿ ಕ್ಲೀನ್ ಮಾಡಿದರೋ ಅದೇ ರೀತಿ ಇಲ್ಲಿಯೂ ವಂಶಾಡಳಿತವನ್ನು ಕ್ಲೀನ್ ಆಗಲಿದೆ. ಕರ್ನಾಟಕದಲ್ಲಿ ಕ್ಲೀನ್ ಮಾಡಿದ ಮೇಲೆ ಬಿಜೆಪಿ ಕ್ಲೀನ್ ಸ್ವೀಪ್ ಮಾಡಲಿದೆ ಎಂದರು.
ನಾನು ಕರ್ನಾಟಕದಲ್ಲಿ ಮಂತ್ರಿಗಿಂತ ಫವರ್ ಪುಲ್
ಇನ್ನೂ ಸಚಿವ ಸ್ಥಾನದ ವಿಚಾರವಾಗಿ ಮಾಧ್ಯಮಗಳ ಜೊತೆಗೆ ಮಾತನಾಡಿ, ನಾನು ಯಾವುದೇ ಆಕಾಂಕ್ಷಿಯಲ್ಲ. ನಾನು ಮಂತ್ರಿಗಿರಿ ಕೇಳಿಲ್ಲ, ಮುಖ್ಯಮಂತ್ರಿ ಸೀಟು ಕೇಳಿಲ್ಲ. ನಾನು ಕರ್ನಾಟಕದಲ್ಲಿ ಮಂತ್ರಿಗಿಂತ ಫವರ್ ಪುಲ್ ಆಗಿದ್ದೀನಿ.
ಎಲ್ಲ ಮಂತ್ರಿಗಳು ನನ್ನ ಮಾತು ಕೇಳುತ್ತಾರೆ. ನಾನು ಯಾವುದನ್ನು ನಿರೀಕ್ಷೆ ಮಾಡಲ್ಲ. ಓರ್ವ ಮುಖ್ಯಮಂತ್ರಿಯಂತೆ ನಾನು ಶಾಸಕನಾಗಿಯೇ ಎಲ್ಲ ಸಚಿವರ ಮೇಲಿದ್ದೇನೆ ಎಂದು ಬಸನಗೌಡ ಪಾಟೀಲ ಯತ್ನಾಳ ಹೇಳಿದರು.