ನನ್ನ ಸಂಪರ್ಕದಲ್ಲಿರುವ ಬಿಜೆಪಿ ಶಾಸಕರ ಪಟ್ಟಿಯೇ ಬೇರೆ: ಎಚ್ಡಿಕೆ ಹೊಸ ಬಾಂಬ್
Recommended Video

ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ, ನಮ್ಮ ಸರಕಾರ ಐದು ವರ್ಷಸುಭದ್ರವಾಗಿರುತ್ತದೆ. ನಮ್ಮ ಯಾವ ಶಾಸಕರೂ ಆಪರೇಶನ್ ಕಮಲದ ಬಲೆಗೆ ಬೀಳುವುದಿಲ್ಲ, ಇದೆಲ್ಲಾ ಮಾಧ್ಯಮಗಳ ಸೃಷ್ಟಿ ಎನ್ನುವ ನಾಯಕರೇ, ಒಂದೇ ಒಂದು ಪಾನ್ ಅಲ್ಲಾಡಿಸಲಿ ನೋಡೋಣ..ನಮ್ಮ ತಂಟೆಗೆ ಬಂದರೆ ನಿಮ್ಮ ವಿಕೆಟುಗಳು ಬೀಳುತ್ತವೆ ಎನ್ನುವ ಹೇಳಿಕೆಗಳನ್ನು ನೀಡುತ್ತಿದ್ದಾರೆ.
ಸಮ್ಮಿಶ್ರ ಸರಕಾರದ ಸ್ಥಿರತೆಯ ಬಗ್ಗೆ ದಿನಕ್ಕೊಂದು ಬೆಳವಣಿಗೆಗಳು, ಹೇಳಿಕೆಗಳು ಹೊರಬೀಳುತ್ತಿರುವ ಈ ಹೊತ್ತಿನಲ್ಲಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೊಸದೊಂದು ಬಾಂಬ್ ಸಿಡಿಸಿದ್ದಾರೆ. ನನ್ನ ಸಂಪರ್ಕದಲ್ಲಿರುವ ಬಿಜೆಪಿ ಶಾಸಕರ ಪಟ್ಟಿಯೇ ಬೇರೆ ಎನ್ನುವ ಮೂಲಕ, ಬಿಜೆಪಿಗೆ ಬಿಸಿ ಮುಟ್ಟಿಸಿದ್ದಾರೆ.
ಅಧಿಕಾರಿಗಳು ನಮ್ಮ ಮಾತುಗಳನ್ನು ಕೇಳುತ್ತಿಲ್ಲ, ಸಮ್ಮಿಶ್ರ ಸರಕಾರ ಬಿದ್ದು ಹೋಗುತ್ತದೆ ಎನ್ನುವ ಭ್ರಮೆಯಲ್ಲಿದ್ದಾರೆ, ಇನ್ನೆರಡು ದಿನ ಕಾದು ನೋಡಿ, ನಮ್ಮ ಕಾರ್ಯಶೈಲಿಯೇ ಬದಲಾಗಲಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ನಾವೇನು ಕೈಕಟ್ಟಿ ಕೂತಿಲ್ಲ, ನಮಗೂ ರಾಜಕೀಯ ಮಾಡಲು ಬರುತ್ತದೆ, ಬಿಜೆಪಿ ಶಾಸಕರೂ ನಮ್ಮ ಸಂಪರ್ಕದಲ್ಲಿದ್ದಾರೆ, ಎಲ್ಲಿ ಏನು ಗೇಮ್ ಆಡಬೇಕು ಎನ್ನುವುದು ನಮಗೂ ತಿಳಿದಿದೆ ಎಂದು ಗಣೇಶ ಹಬ್ಬದ ದಿನ ಪ್ರವಾಸೋದ್ಯಮ ಖಾತೆಯ ಸಚಿವ ಸಾ.ರಾ.ಮಹೇಶ್ ಹೇಳಿದ್ದರು.
ಸಮ್ಮಿಶ್ರ ಸರಕಾರದಲ್ಲಿ ಇದುವರೆಗೆ ಸಾಧ್ಯವಾದಷ್ಟು ಒಳ್ಲೆಯ ಕೆಲಸವನ್ನು ಮಾಡಿಕೊಂಡು ಬರುತ್ತಿದ್ದೇವೆ. ಆದರೆ, ನಮ್ಮ ವಿರೋಧ ಪಕ್ಷದ ನಾಯಕರಿಗೆ ಇದೆಲ್ಲಾ ಬೇಕಾಗಿಲ್ಲ, ಅವರು ತಮ್ಮದೇ ಆದ ಬೇರೆ ಕಾರ್ಯದಲ್ಲಿದ್ದಾರೆಂದು ಕುಮಾರಸ್ವಾಮಿ, ಯಡಿಯೂರಪ್ಪನವರ ಹೆಸರನ್ನು ಉಲ್ಲೇಖಿಸದೇ ಕಾಲೆಳೆದಿದ್ದಾರೆ.

ಬಿಜೆಪಿಯ ಶಾಸಕರು ಸಮ್ಮಿಶ್ರ ಸರಕಾರದ ಪಾಲುದಾರರಾಗಲು ರೆಡಿಯಾಗಿದ್ದಾರೆ
ಬಿಜೆಪಿಯ 38 ಶಾಸಕರು ಸಮ್ಮಿಶ್ರ ಸರಕಾರದ ಪಾಲುದಾರರಾಗಲು ರೆಡಿಯಾಗಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದ್ದವು, ಈ ಸುದ್ದಿಗೆ ಪೂರಕ ಎನ್ನುವಂತೆ, ಡಿಕೆ ಶಿವಕುಮಾರ್ ಮತ್ತು ಸಾ.ರಾ.ಮಹೇಶ್ ಅವರ ಹೇಳಿಕೆಯೂ ಇದಕ್ಕೆ ಹೋಲಿಕೆಯಾಗುತ್ತಿದ್ದವು. ಈ ಸುದ್ದಿಗೆ ಇನ್ನಷ್ಟು ಬಲಬಂದಿದ್ದು ಮುಖ್ಯಮಂತ್ರಿಗಳು, ಬೆಳಗಾವಿಗೆ ಹೋಗುವ ಮುನ್ನ ಬೆಂಗಳೂರಿನಲ್ಲಿ ನೀಡಿದ ಹೇಳಿಕೆ.

ಮೈಸೂರು ಭಾಗದ ಬಿಜೆಪಿ ಶಾಸಕರಲ್ಲ. ನನ್ನ ಬಳಿ ಬೇರೆಯೇ ಆದ ಪಟ್ಟಿಯಿದೆ
ಬಿಜೆಪಿ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ನಾನು ಹೇಳುತ್ತಿರುವುದು ಮೈಸೂರು ಭಾಗದ ಬಿಜೆಪಿ ಶಾಸಕರನ್ನಲ್ಲ. ನನ್ನ ಬಳಿ ಬೇರೆಯೇ ಆದ ಪಟ್ಟಿಯಿದೆ ಎಂದು ಕುಮಾರಸ್ವಾಮಿ ಹೇಳಿರುವುದು, ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದೆ. ನನ್ನ ಬಳಿಯಿರುವುದು ಮೈಸೂರು ಭಾಗದ ಬಿಜೆಪಿ ಶಾಸಕರು ಎನ್ನುವುದು ತಪ್ಪು ಕಲ್ಪನೆ - ಕುಮಾರಸ್ವಾಮಿ.

ಬಿಜೆಪಿಯವರು ಒಂದೊಂದು ಡೆಡ್ ಲೈನ್ ನೀಡುತ್ತಲೇ ಬರುತ್ತಿದ್ದಾರೆ
ಬಿಜೆಪಿಯವರು ಒಂದೊಂದು ಡೆಡ್ ಲೈನ್ ನೀಡುತ್ತಲೇ ಬರುತ್ತಿದ್ದಾರೆ. ಕೊನೆಯ ಶ್ರಾವಣ ಸೋಮವಾರ ಅಂದರು, ಅದಾದ ಮೇಲೆ ಗಣೇಶ ಹಬ್ಬ ಅಂದರು. ಎರಡೂ ಮುಗಿದಾಯಿತು. ಸಮ್ಮಿಶ್ರ ಸರಕಾರದ ಶಾಸಕರನ್ನು ಸೆಳೆಯಲು ಬಿಜೆಪಿಯವರು ಪ್ರಯತ್ನಿಸುತ್ತಲೇ ಇದ್ದಾರೆ. ಇದ್ಯಾವುದೂ ಕೈಗೂಡುವುದಿಲ್ಲ. ಬದಲಿಗೆ, ಬಿಜೆಪಿ ಶಾಸಕರೇ ನಮ್ಮ ಸಂಪರ್ಕದಲ್ಲಿದ್ದಾರೆಂದು ಕುಮಾರಸ್ವಾಮಿ ಹೇಳಿದ್ದಾರೆ.

ಡತಗಳ ವಿಲೇವಾರಿ ಆಗುತ್ತಿಲ್ಲ ಎನ್ನುವ ದೂರುಗಳು ಬಂದಿವೆ
ಅಧಿಕಾರಿಗಳು ಅಸಡ್ಡೆಯಿಂದ ಕೆಲಸ ಮಾಡುತ್ತಿದ್ದಾರೆ, ಕಡತಗಳ ವಿಲೇವಾರಿ ಆಗುತ್ತಿಲ್ಲ ಎನ್ನುವ ದೂರುಗಳು ಬಂದಿವೆ. ಸೋಮವಾರ (ಸೆ 17) ಅಧಿಕಾರಿಗಳ ಸಭೆ ಕರೆದು ಕ್ಲಾಸ್ ನೀಡುತ್ತೇನೆ. ರಾಜ್ಯದ ಅಭಿವೃದ್ದಿ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಎಲ್ಲಾ ಸಚಿವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರಕಾರವನ್ನು ಮುನ್ನಡೆಸುವ ಕೆಲಸವನ್ನು ಮಾಡುತ್ತಿದ್ದೇನೆಂದು ಕುಮಾರಸ್ವಾಮಿ ಹೇಳಿದ್ದಾರೆ.

ನಮ್ಮ ಶಾಸಕರನ್ನು ಮುಟ್ಟಿನೋಡಲಿ ನೋಡೋಣ
ಮೈಸೂರು ಭಾಗದ ಬಿಜೆಪಿ ಶಾಸಕರನ್ನು ಸೆಳೆಯುವ ಸಂಬಂಧ ಮಾತುಕತೆಗಳು ನಡೆಯುತ್ತಿವೆ ಎಂದು ಸುದ್ದಿಯಾಗಿತ್ತು. ಆದರೆ, ನನ್ನ ಸಂಪರ್ಕದಲ್ಲಿ ಇರುವವರು ಆ ಭಾಗದವರಲ್ಲ ಎನ್ನುವ ಕುಮಾರಸ್ವಾಮಿ ಹೇಳಿಕೆ, ಬಿಜೆಪಿ ನಾಯಕರನ್ನು ಚಿಂತೆಗೀಡುಮಾಡಿದೆ. ನಮ್ಮ ಶಾಸಕರನ್ನು ಮುಟ್ಟಿನೋಡಲಿ ನೋಡೋಣ ಎಂದು ಸಂಸದೆ ಶೋಭಾ ಕರಂದ್ಲಾಜೆ ಈಗಾಗಲೇ ಹೇಳಿಕೆ ನೀಡಿದ್ದನ್ನು ಸ್ಮರಿಸಿಕೊಳ್ಳಬಹುದಾಗಿದೆ.

ಸರ್ಕಾರ ಬೀಳಲಿದೆ ಎಂದು ಮುಹೂರ್ತ ಫಿಕ್ಸ್ ಮಾಡಿರುವವರಿಗೆ ನಿರಾಸೆ ಕಾದಿದೆ
ಸಮ್ಮಿಶ್ರ ಸರ್ಕಾರವನ್ನು ಬೀಳಿಸಲು ಕೆಲವು ಶಕ್ತಿಗಳು ಕಾದು ಕುಳಿತಿವೆ, ಇವರಿಂದ ರಕ್ಷಣೆ ಪಡೆಯಲು ದೇವರ ಮತ್ತು ಗುರುಗಳ ಅನುಗ್ರಹ ಬೇಕೇ ಬೇಕು ಎಂದು ಶಿವಮೊಗ್ಗದಲ್ಲಿ ದೇವೇಗೌಡರು (ಸೆ 14) ಹೇಳಿರುವುದು, ಸಮ್ಮಿಶ್ರ ಸರಕಾರದ ಅಸ್ಥಿರತೆಯ ವರದಿಗೆ ಕನ್ನಡಿ ಹಿಡಿದಂತಿತ್ತು. ಕಳೆದ 3 ತಿಂಗಳನಿಂದ ಸರ್ಕಾರ ಬೀಳಲಿದೆ ಎಂದು ಕೆಲವರು ಕಾಯುತ್ತಿದ್ದಾರೆ, ಸರ್ಕಾರ ಬೀಳಲಿದೆ ಎಂದು ಮುಹೂರ್ತ ಫಿಕ್ಸ್ ಮಾಡಿರುವವರಿಗೆ ನಿರಾಸೆ ಕಾದಿದೆ ಎಂದು ಗೌಡ್ರು ಹೇಳಿದ್ದಾರೆ.












Click it and Unblock the Notifications