ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ : ಸಿ. ಪಿ. ಯೋಗೇಶ್ವರ
ಬೆಂಗಳೂರು, ಜುಲೈ 26 : "ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡುತ್ತಿದ್ದಾರೆ. ಜನರ ಆಶೋತ್ತರಗಳಿಗೆ ತಕ್ಕಂತೆ ಬಿಜೆಪಿ ಕೆಲಸ ಮಾಡುತ್ತದೆ. ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ" ಎಂದು ಮಾಜಿ ಸಚಿವ ಸಿ. ಪಿ. ಯೋಗೇಶ್ವರ ಹೇಳಿದರು.
ಶುಕ್ರವಾರ ಬಿ. ಎಸ್. ಯಡಿಯೂರಪ್ಪರ ಡಾಲರ್ಸ್ ಕಾಲೋನಿ ನಿವಾಸ 'ಧವಳಗಿರಿ' ಬಳಿ ಮಾತನಾಡಿದ ಚನ್ನಪಟ್ಟಣ ಕ್ಷೇತ್ರದ ಮಾಜಿ ಶಾಸಕ ಸಿ. ಪಿ. ಯೋಗೇಶ್ವರ, "ಮೈತ್ರಿ ಸರ್ಕಾರ ಮುಂದುವರಿಕೆ ವಿಫಲ ಆಗಿದೆ. ನಮ್ಮ ನಾಯಕ ಯಡಿಯೂರಪ್ಪಗೆ ಸರ್ಕಾರ ರಚನೆಯ ಅವಕಾಶ ಸಿಕ್ಕಿದೆ" ಎಂದರು.
"4ನೇ ಬಾರಿಗೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿಯಾಗಿ ಅಧಿಕಾರ ಸ್ವೀಕಾರ ಮಾಡುತ್ತಾರೆ.
ಜನರ ಆಶೋತ್ತರಗಳಿಗೆ ತಕ್ಕಂತೆ ಬಿಜೆಪಿ ಕೆಲಸ ಮಾಡುತ್ತೆ. ಕಾಂಗ್ರೆಸ್-ಜೆಡಿಎಸ್ ಆಂತರಿಕ ಜಂಜಾಟದಿಂದ ಸರ್ಕಾರ ಬಿತ್ತು. ಅವರ ಸರ್ಕಾರವನ್ನು ನಾವು ಅಸ್ಥಿರಗೊಳಿಸಿಲ್ಲ" ಎಂದು ಸ್ಪಷ್ಟಪಡಿಸಿದರು.

"ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ವಿಶ್ವಾಸಮತದಲ್ಲಿ ಸೋಲು ಕಂಡಿತ್ತು.
ನಾಲ್ಕು ದಿನಗಳ ನಂತರ ನಮ್ಮ ರಾಷ್ಟ್ರೀಯ ಅಧ್ಯಕ್ಷರ ಸೂಚನೆಯಂತೆ ಬಿ. ಎಸ್. ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ. ಇದು ನಾಡಿನ ಜನತೆಗೆ ಸಿಹಿ ಸುದ್ದಿಯಾಗಿದೆ" ಎಂದು ಹೇಳಿದರು.
"ಬಹುಮತ ಸಾಬೀತು ಮಾಡಲು ರಾಜ್ಯಪಾಲರು ಸಮಯ ನಿಗದಿ ಮಾಡಲಿದ್ದಾರೆ.
ನಮ್ಮ ಸಂಖ್ಯಾಬಲ ಹೆಚ್ಚಿದೆ. ಕಾನೂನಿನಡಿಯಲ್ಲಿ ಅತೃಪ್ತರ ರಾಜೀನಾಮೆ ಬಗೆಹರಿಯಲಿದೆ" ಎಂದು ಯೋಗೇಶ್ವರ ವಿಶ್ವಾಸ ವ್ಯಕ್ತಪಡಿಸಿದರು.
ಆಪರೇಷನ್ ಕಮಲದ ವಿಚಾರದಲ್ಲಿ ಸಿ. ಪಿ. ಯೋಗೇಶ್ವರ ಪಾತ್ರ ದೊಡ್ಡದು. ಹಲವು ಶಾಸಕರ ಜೊತೆ ಅವರು ನಿರಂತರ ಸಂಪರ್ಕದಲ್ಲಿದ್ದರು. 2018ರ ಚುನಾವಣೆಯಲ್ಲಿ ಸೋಲು ಕಂಡಿರುವ ಯೋಗೇಶ್ವರ ಸಚಿವ ಸ್ಥಾನದ ಆಕಾಂಕ್ಷಿಯಲ್ಲ ಎಂದು ಹೇಳಿದ್ದಾರೆ.












Click it and Unblock the Notifications