ನಾನು ತಪ್ಪು ಮಾಡಿಲ್ಲ, ಹೆದರಲ್ಲ, ಹೇಡಿಯಲ್ಲ: ಡಿ.ಕೆ.ಶಿವಕುಮಾರ್
Recommended Video
ಬೆಂಗಳೂರು, ಸೆಪ್ಟೆಂಬರ್ 19 : "ನಾನು ತಪ್ಪು ಮಾಡಿಲ್ಲ, ಬಿಜೆಪಿಯ ಕುತಂತ್ರಗಳಿಗೆ ಹೆದರಲ್ಲ, ಹೇಡಿಯೂ ಅಲ್ಲ, ತಪ್ಪು ಮಾಡಿದ್ದರೆ ನನ್ನ ನೇಣಿಗೆ ಏರಿಸಲಿ" ಎಂದು ಸಚಿವ ಡಿ.ಕೆ.ಶಿವಕುಮಾರ್ ಅಬ್ಬರಿಸಿದ್ದಾರೆ.
ನವದೆಹಲಿಯಲ್ಲಿ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಅವರು ಬುಧವಾರ ಸುದ್ದಿಗೋಷ್ಠಿ ನಡೆಸಿ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಹವಾಲಾ ದಂಧೆಯ ಆರೋಪ ಹೊರಿಸಿದ ಹಿನ್ನೆಲೆಯಲ್ಲಿ, ತಮ್ಮ ನಿವಾಸದಲ್ಲಿ ಡಿ.ಕೆ.ಶಿವಕುಮಾರ್ ಅವರು ಕೂಡ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದರು.
ಬಿಜೆಪಿಯ ಸ್ನೇಹಿತರು, ಆಡಳಿತ ಸಂಸ್ಥೆಗಳನ್ನು ಬಳಸಿಕೊಂಡು ನನ್ನನ್ನು ಹಾಗೂ ನನ್ನ ಪಕ್ಷಕ್ಕೆ ಮಸಿ ಬಳಿಸುವ ಯತ್ನ ಮಾಡುತ್ತಿದ್ದಾರೆ ಎಂದ ಶಿವಕುಮಾರ್, ಐಟಿ ಸಂಸ್ಥೆಯ ಸಹ ತನ್ನ ಅಧಿಕಾರ ದುರುಪಯೋಗಪಡಿಸಿಕೊಂಡಿದೆ ಎಂದು ಅವರು ಆರೋಪಿಸಿದರು.
ಡಿ.ಕೆ. ಶಿವಕುಮಾರ್ ಕಾಂಗ್ರೆಸ್ನ ಎಟಿಎಂ: ಸಂಬಿತ್ ಪಾತ್ರಾ ಆರೋಪ
ನನ್ನ ಮನೆಯಲ್ಲಿ ಸಿಕ್ಕಿರುವುದು 41 ಲಕ್ಷ ಅಷ್ಟೆ. ಐಟಿ ಅಧಿಕಾರಿಗಳು ನನ್ನ ಕೆಲವು ಗೆಳೆಯರ ಮೇಲೆ ಒತ್ತಡ ಹೇರಿ, ಭಯಪಡಿಸಿ ಹೇಳಿಕೆಗಳನ್ನು ತೆಗೆದುಕೊಂಡಿದೆ. ಅಲ್ಲಿ ಸಿಕ್ಕಿರುವ ಹಣಕ್ಕೂ ನನಗೂ ಸಂಬಂಧವಿಲ್ಲ ಎಂದು ಅವರು ಹೇಳಿದರು. ಕೆಲವರ ಮನೆಯಲ್ಲಿ ಸಿಕ್ಕಿರುವ ಹಣಕ್ಕೆ ಅವರೇ ಲೆಕ್ಕ ಕೊಟ್ಟಿದ್ದಾರೆ ಕೂಡಾ ಎಂದು ಅವರು ಮಾಹಿತಿ ನೀಡಿದರು.
ಈ ವರೆಗೆ ಇಡಿ ಅಧಿಕಾರಿಗಳು ಕರೆ ಮಾಡಿಲ್ಲ
ನನಗೆ ಈ ವರೆಗೆ ಇಡಿ ಅಧಿಕಾರಿಗಳು ಕರೆ ಮಾಡಿಲ್ಲ, ನೊಟೀಸ್ ನೀಡಿಲ್ಲ. ಅವರು ನೊಟೀಸ್ ನೀಡಿದರೂ ನಾನು ಅವರಿಗೆ ಸಹಕರಿಸುತ್ತೇನೆ, ಅವರು ಬಂಧಿಸಿದರೆ ಸ್ವಾಗತ ನನಗೆ ಕಾನೂನು ಗೊತ್ತಿದೆ, ಕಾನೂನು ಪ್ರಕಾರ ಮುಂದುವರೆಯುತ್ತೇನೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
'ಕೇಜಿ ಲೆಕ್ಕದಲ್ಲಿ ಹಣ ತೂಕ ಹಾಕಿ ಕೈ ಹೈ ಕಮಾಂಡ್ ಗೆ ತಲುಪಿಸಿದ್ದಾರೆ'
ನನಗೆ ಸಂಬಂಧಿಸಿದ 82 ಸ್ಥಳಗಳ ಮೇಲೆ ದಾಳಿ
ಕಳೆದ ವರ್ಷ ಆಗಸ್ಟ್ 02ರಂದು ಗುಜರಾತ್ ಚುನಾವಣೆ ಸಮಯದಲ್ಲಿ ಗುಜರಾತ್ ಶಾಸಕರನ್ನು ನನ್ನ ಜಿಲ್ಲೆಯ ರೆಸರ್ಟ್ ಒಂದರಲ್ಲಿ ನಾನು ಇರಿಸಿಕೊಂಡಿದ್ದಂದು ನನ್ನ ಮೇಲೆ ಐಟಿ ದಾಳಿ ನಡೆಯಿತು. ಬರೋಬ್ಬರಿ 82 ಸ್ಥಳಗಳ ಮೇಲೆ ದಾಳಿ ಮಾಡಿದರು. ಇದು ಸಂಪೂರ್ಣ ರಾಜಕೀಯ ಪ್ರೇರಿತ ಎಂದು ಅವರು ಹೇಳಿದರು.
ಹೈಕಮಾಂಡ್ ಗೆ ನಯಾಪೈಸೆ ಯಾರೂ ಕೊಟ್ಟಿಲ್ಲ: ಸಿದ್ದರಾಮಯ್ಯ
ಬಿಜೆಪಿಗೆ ನನ್ನ ರಕ್ತ ಬೇಕಿದೆ
ಬಿಜೆಪಿಗೆ ನನ್ನ ರಕ್ತ ಬೇಕಿದೆ ಅಥವಾ ನಾನು ಅವರ ಪಕ್ಷಕ್ಕೆ ಸೇರಿಕೊಳ್ಳಬೇಕಿದೆ. ಯಡಿಯೂರಪ್ಪ ಅವರು ಇಂದಿನ ಶಾಸಕಾಂಗ ಸಭೆಯಲ್ಲಿ 'ಡಿಕೆ ಶಿವಕುಮಾರ್ ಅವರನ್ನು ಎರಡು ದಿನದಲ್ಲಿ ಜೈಲಿಗೆ ಕಳಿಸುತ್ತೇವೆ, ಆ ಮೇಲೆ ಸರ್ಕಾರ ರಚಿಸುವ' ಎಂದು ಹೇಳಿದ್ದಾರಂತೆ. ಆದರೆ ಅವರು ಹಗಲು ಕನಸು ಕಾಣುತ್ತಿದ್ದಾರೆ, ಅವರು ಸರ್ಕಾರ ರಚಿಸುವುದು ಸಾಧ್ಯವಿಲ್ಲ, ನನ್ನನ್ನು ಜೈಲಿಗೆ ಕಳುಹಿಸಲೂ ಸಾಧ್ಯವೂ ಇಲ್ಲ ಎಂದು ಅವರು ಹೇಳಿದರು.
ತನಿಖಾ ಸಂಸ್ಥೆಗೆ ನೀಡಿದ ಹೇಳಿಕೆ ಅವರಿಗೆ ಸಿಕ್ಕಿದ್ದು ಹೇಗೆ?
ಸಂಬೀತ್ ಪಾತ್ರಾ ಇಂದು ಬೆಳಿಗ್ಗೆ ಮಾಡಿದ ಆರೋಪದ ಬಗ್ಗೆ ಮಾತನಾಡಿದ ಅವರು, 'ತನಿಖಾ ಸಂಸ್ಥೆಗೆ ನೀಡಿದ ಹೇಳಿಕೆಗಳು ಬಿಜೆಪಿ ವಕ್ತಾರರಿಗೆ ಸಿಗುತ್ತದೆ ಎಂದರೆ ಬಿಜೆಪಿಯು ಆಡಳಿತ ಸಂಸ್ಥೆಗಳನ್ನು ಹೇಗೆ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಗೊತ್ತಾಗುತ್ತದೆ' ಎಂದು ಅವರು ಹೇಳಿದರು. ಅವರು ಹೇಳಿದಂತೆ ನನ್ನ ಮನೆಯಲ್ಲಿ ಯಾವುದೇ ಡೈರಿ ಪತ್ತೆ ಆಗಿಲ್ಲ, ಅವರು ಹೇಳಿದಂತೆ ಎಸ್ಜಿ, ಆರ್ಜಿ ಹೆಸರೂಗಳೂ ಇಲ್ಲ ಎಂದು ಹೇಳಿದರು.
ಎಲ್ಲ ಹಣಕ್ಕೆ ಲೆಕ್ಕ ಇದೆ
ನಾನು ಸಂಪಾದಿಸಿದ ಎಲ್ಲ ಹಣಕ್ಕೆ ನನ್ನ ಬಳಿ ಲೆಕ್ಕ ಇದೆ. ಈಗಾಗಲೇ ಐಟಿ ಅಧಿಕಾರಿಗಳಿಗೆ ನಾವು ಹೇಳಿಕೆ ಹಾಗೂ ದಾಖಲೆಗಳನ್ನು ಒದಗಿಸಿದ್ದೇನೆ. ಇಡಿ ಇಂದ ಇನ್ನೂ ನೊಟೀಸ್ ಬಂದಿಲ್ಲ. ಅವರಿಗೆ ನನ್ನ ಮೇಲೆ ಎಫ್ಐಆರ್ ದಾಖಲಿಸಲು ಒಂದು ವರ್ಷ ಬೇಕಾಯಿತು ಎಂದು ಅವರು ಹೇಳಿದರು.
ಯಡಿಯೂರಪ್ಪರ ಹಗರಣ ಹೊರ ಹಾಕುತ್ತೇನೆ
ಯಡಿಯೂರಪ್ಪ ಅವರು ನಮ್ಮ ಯಾವ ಯಾವ ಶಾಸಕರಿಗೆ ಎಷ್ಟು ಕೋಟಿ ಆಫರ್ ಮಾಡಿದರು, ಯಾವ ಹುದ್ದೆಗಳನ್ನು ಕೊಡುವುದಾಗಿ ಹೇಳಿದರು ಎಂಬುದೆಲ್ಲಾ ನನಗೆ ಗೊತ್ತಿದೆ. ಅದನ್ನೆಲ್ಲಾ ಮುಂದಿನ ದಿನಗಳಲ್ಲಿ ಹೇಳುತ್ತೇನೆ ಎಂದ ಅವರು, ಯಡಿಯೂರಪ್ಪ ಅವರ ಚೆಕ್ ಹಗರಣವನ್ನು ಮತ್ತೆ ಹೊರತೆಗೆದು ಅದರ ತೀರ್ಪಿನ ಪ್ರತಿಯನ್ನು ಮಾಧ್ಯಮಗಳಿಗೆ ಓದಿ ಹೇಳಿದರು.
ಮನೆಯಲ್ಲಿ ಸಿಕ್ಕ ದಾಖಲೆ ಸಂಸತ್ತಿನಲ್ಲಿ ತೋರಿಸಿದ್ದರು
ನನ್ನ ಮನೆಯಲ್ಲಿ ಸಿಕ್ಕ ಯಾವುದೇ ಸಣ್ಣ ದಾಖಲೆ ಕೆಲವೇ ಹೊತ್ತಿನಲ್ಲಿ ಸಂಸತ್ತಿನಲ್ಲಿ ತೋರಿಸುತ್ತಾರೆ, ನನ್ನ ಗೆಳೆಯರಿಗೆ ಕೊಲೆ ಬೆದರಿಕೆ ಹಾಕುತ್ತಾರೆ. ವಿನಾ ಕಾರಣ ನನ್ನ ಕುಟುಂಬದ ಹೆಸರನ್ನು ಎಳೆಯುತ್ತಾರೆ. ಬಿಜೆಪಿಯವರು ಎಷ್ಟು ಕೆಟ್ಟ ರಾಜಕಾರಣ ಮಾಡುತ್ತಾರೆ ಎಂಬುದಕ್ಕೆ ನನ್ನ ಪ್ರಕರಣಕ್ಕಿಂತ ಉತ್ತಮ ಉದಾಹರಣೆ ಇಲ್ಲ ಎಂದ ಅವರು, ರಾಜಕೀಯ ಹೀಗೆಯೇ ಇರುವುದಿಲ್ಲ. ಬದಲಾವಣೆ ಆಗುತ್ತಿರುತ್ತದೆ ಎಂದು ಮಾರ್ಮಿಕವಾಗಿ ಅವರು ನುಡಿದರು.
ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಇದೆ
ನನಗೆ ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಇದೆ. ಕಾನೂನನ್ನು ಮೀರಿ ನಾನು ನಡೆಯುವುದಿಲ್ಲ ಎಂದ ಅವರು, ನನ್ನ ಗೆಳೆಯರ ಮೇಲೆ ಒತ್ತಡ ಹೇರಿ, ಬೆದರಿಸಿದ ಐಟಿ ಇಲಾಖೆ ಮೇಲೆ ದೂರು ದಾಖಲಿಸುತ್ತೇನೆ. ಅಧಿಕಾರಿಗಳನ್ನು ಬಳಸಿಕೊಂಡವರ ವಿರುದ್ಧವೂ ದೂರು ದಾಖಲಿಸುತ್ತೇನೆ ಎಂದು ಅವರು ಹೇಳಿದರು.