'ನಾನು ಕೆಪಿಸಿಸಿ ಅಧ್ಯಕ್ಷ ಹುದ್ದೆಯ ಆಕಾಂಕ್ಷಿಯಲ್ಲ'
ಬೆಂಗಳೂರು, ಮಾರ್ಚ್ 11 : ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ನಾಯಕರ ಆಯ್ಕೆ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ, 'ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ' ಎಂದು ಇಂಧನ ಸಚಿ ಡಿ.ಕೆ.ಶಿವಕುಮಾರ್ ಅವರು ಸ್ಟಷ್ಟಪಡಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಪಕ್ಷದ ಕಾರ್ಯಕರ್ತರನ್ನು ಭೇಟಿ ಮಾಡಿ ಅಹವಾಲು ಆಲಿಸಿದ ನಂತರ ಮಾತನಾಡಿದ ಅವರು, 'ಪಕ್ಷ ಸಚಿವ ಸ್ಥಾನ ನೀಡಿದೆ ಅದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ. ಅಧ್ಯಕ್ಷ ಸ್ಥಾನದ ಆಕಾಂಕ್ಷಿ ನಾನಲ್ಲ' ಎಂದರು.[ಕೆಪಿಸಿಸಿಗೆ ನೂತನ ಸಾರಥಿ ಯಾರು?]
ಕೆಪಿಸಿಸಿ ಅಧ್ಯಕ್ಷರಾದ ಡಾ.ಜಿ.ಪರಮೇಶ್ವರ ಅವರ 5 ವರ್ಷಗಳ ಅವಧಿ ಪೂರ್ಣಗೊಂಡಿದೆ. ಒಕ್ಕಲಿಗ ಅಥವ ಲಿಂಗಾಯತ ಜನಾಂಗಕ್ಕೆ ಸೇರಿದ ನಾಯಕರನ್ನು ಅಧ್ಯಕ್ಷರನ್ನಾಗಿ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಡಿ.ಕೆ. ಶಿವಕುಮಾರ್ ಅಥವ ತುಮಕೂರು ಸಂಸದ ಮುದ್ದ ಹನುಮೇಗೌಡ ಅವರನ್ನು ಕೆಪಿಸಿಸಿ ಅಧ್ಯಕ್ಷರಾಗಿ ನೇಮಕ ಮಾಡಬಹುದು ಎಂಬ ಸುದ್ದಿಗಳು ಹಬ್ಬಿವೆ. [ಕೆಪಿಸಿಸಿ ಅಧ್ಯಕ್ಷ ಗಾದಿ: ಜಾತಿ ಲೆಕ್ಕಾಚಾರದಲ್ಲಿ ಲಿಂಗಾಯತರು ಮುಂದೆ]
ಡಿ.ಕೆ.ಶಿವಕುಮಾರ್ ಅವರ ಹೆಸರು ಹೊರತುಪಡಿಸಿದರೆ ದೆಹಲಿಯಲ್ಲಿ ರಾಜ್ಯದ ಪ್ರತಿನಿಧಿಯಾಗಿರುವ ಅಪ್ಪಾಜಿ ನಾಡಗೌಡ, ಸಚಿವ ಎಸ್.ಆರ್.ಪಾಟೀಲ್ ಹೆಸರು ಅಧ್ಯಕ್ಷ ಹುದ್ದೆಗೆ ಮುಂಚೂಣಿಯಲ್ಲಿದೆ. ಡಿ.ಕೆ.ಶಿವಕುಮಾರ್ ಅವರು ಇನ್ನೂ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ ವಿವರ ಚಿತ್ರಗಳಲ್ಲಿದೆ....

'ಬೇಸಿಗೆಯಲ್ಲಿ ವಿದ್ಯುತ್ ಸಮಸ್ಯೆ ಇಲ್ಲ'
'ಈ ಬಾರಿ ಬೇಸಿಗೆಯಲ್ಲಿ ವಿದ್ಯುತ್ ಸಮಸ್ಯೆ ಇಲ್ಲದಂತೆ ಅಗತ್ಯ ಕ್ರಮ ಕೈಗೊಂಡಿದ್ದು, ಲೋಡ್ ಶೆಡ್ಡಿಂಗ್ ಹೇರುವುದಿಲ್ಲ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಅಗತ್ಯಕ್ಕೆ ತಕ್ಕಂತೆ ವಿದ್ಯುತ್ ಪೂರೈಸಲು ವ್ಯವಸ್ಥೆ ಮಾಡಲಾಗಿದೆ, ಲೋಡ್ ಶೆಡ್ಡಿಂಗ್ ಜಾರಿ ಮಾಡುವುದಿಲ್ಲ, ವಿದ್ಯಾರ್ಥಿಗಳ ಪರೀಕ್ಷೆಗೆ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು' ಎಂದರು.

'ಸರ್ಕಾರ ಒಳ್ಳೆಯ ಕೆಲಸ ಮಾಡಿದೆ'
'ಡಾ.ಜಿ.ಪರಮೇಶ್ವರ ಅವರು ದೆಹಲಿಯಲ್ಲಿ ನಿನ್ನೆ ಪಕ್ಷದ ವರಿಷ್ಠರಿಗೆ ಸರ್ಕಾರದ ಆಡಳಿತದ ವಿರುದ್ಧ ವರದಿ ನೀಡಿದ್ದಾರೆ ಎಂಬ ವರದಿಗಳನ್ನು ತಳ್ಳಿಹಾಕಿದ ಶಿವಕುಮಾರ್ ಅವರು, ಸರ್ಕಾರ ಉತ್ತಮವಾಗಿ ಆಡಳಿತ ಮಾಡುತ್ತಿದೆ. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಹೊರತುಪಡಿಸಿ, ಕಳೆದ 3 ವರ್ಷಗಳಲ್ಲಿ ಒಳ್ಳೆ ಕೆಲಸ ಮಾಡಿದೆ. ಈ ರೀತಿಯ ವರದಿಗಳಿಂದ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗುತ್ತದೆ' ಎಂದು ಹೇಳಿದರು.

'ಕುಮಾರಸ್ವಾಮಿ ಅವರ ಹೇಳಿಕೆ ಆಶ್ಚರ್ಯ ತರಿಸಿದೆ'
'ರಾಜಕಾರಣ ಎಂದರೆ ಸೋಲು ಗೆಲುವು ಸಹಜ. ಆದರೆ, ಜನರ ಜತೆ ಇದ್ದು ರಾಜಕೀಯ ಮಾಡುವವರಿಗೆ ನಿವೃತ್ತಿ ಎನ್ನುವುದು ಇರುವುದಿಲ್ಲ. ಕುಮಾರಸ್ವಾಮಿ ಅವರ ಹೇಳಿಕೆ ಆಶ್ಚರ್ಯ ತರಿಸಿದೆ. ಅವರನ್ನು ನಂಬಿರುವ ಕಾರ್ಯಕರ್ತರ ಗತಿ ಏನು?, ಅಧಿಕಾರ ಇರಲಿ ಇಲ್ಲದಿರಲಿ ರಾಜಕೀಯದಲ್ಲಿ ಕುಮಾರಸ್ವಾಮಿಯವರು ಮುಂದುವರೆಯಬೇಕು' ಎನ್ನುವುದು ತಮ್ಮ ಆಶಯವಾಗಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

'ರಾಜಕಾರಣ ಎಂದರೆ ಸೋಲು ಗೆಲುವು ಸಹಜ'
'ಎಚ್.ಡಿ. ಕುಮಾರಸ್ವಾಮಿ ಅವರು ರಾಜಕೀಯದಿಂದ ನಿವೃತ್ತಿಯಾಗುವುದಾಗಿ ಹೇಳಿಕೆ ನೀಡಿದ ನಂತರ ಹಲವಾರು ಮಂದಿ ಅವರ ಬೆಂಬಲಿಗರು ತಮ್ಮ ಪಾಳಯ ಸೇರಲು ಮುಂದಾಗಿದ್ದಾರೆ' ಎಂದು ಡಿ.ಕೆ. ಶಿವಕುಮಾರ್ ಹೇಳಿದರು. 'ಕುಮಾರಸ್ವಾಮಿ ಅವರು ಕೊನೆಯ ಉಸಿರು ಇರುವವರೆಗೂ ರಾಜಕೀಯದಲ್ಲಿ ಮುಂದುವರೆಯಲಿ. ನಿವೃತ್ತಿ ನಿರ್ಧಾರವನ್ನು ಅವರು ಬದಲಿಸಲಿ. ಇದು ಜನತಾದಳ ಕಾರ್ಯಕರ್ತರ ಪರವಾಗಿ ನನ್ನ ಮನವಿ' ಎಂದು ವ್ಯಂಗ್ಯವಾಡಿದರು.

ಮಸಿ ಬೆಳೆಯುವ ಪ್ರಯತ್ನ ಮಾಡಿದೆ
'ವಕ್ಫ್ ಆಸ್ತಿ ಕಬಳಿಕೆಯಲ್ಲಿ ಯಾವುದೇ ಕಾಂಗ್ರೆಸ್ ನಾಯಕರು ಭಾಗಿಯಾಗಿಲ್ಲ. ಬಿಜೆಪಿ ಅನ್ವರ್ ಮಾಣಿಪ್ಪಾಡಿ ವರದಿಯನ್ನು ರಾಜಕೀಯವಾಗಿ ಬಳಸಿಕೊಂಡು ಕಾಂಗ್ರೆಸ್ ನಾಯಕರ ಹೆಸರಿಗೆ ಮಸಿ ಬೆಳೆಯುವ ಪ್ರಯತ್ನ ನಡೆಸಿದೆ. ವಕ್ಫ್ ಆಸ್ತಿ ಒಂದು ಗುಂಟೆಯೂ ಕಬಳಿಕೆಯಾಗಿಲ್ಲ' ಎಂದು ಶಿವಕುಮಾರ್ ಹೇಳಿದರು.












Click it and Unblock the Notifications