ಎಚ್.ವೈ.ಮೇಟಿ ರಾಸಲೀಲೆ ಪ್ರಕರಣಕ್ಕೆ ವಿಶಿಷ್ಟ ತಿರುವು!
ಬೆಂಗಳೂರು, ಆ.12 : ಅಬಕಾರಿ ಸಚಿವರಾಗಿದ್ದ ಎಚ್.ವೈ.ಮೇಟಿ ರಾಸಲೀಲೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಈ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪಿಎ ಸಂತೋಷ್ಗೆ ಸಿಐಡಿ ನೋಟಿಸ್ ಜಾರಿ ಮಾಡಿದೆ.
ಕೆ.ಎಸ್.ಈಶ್ವರಪ್ಪ ಆಪ್ತ ಸಹಾಯಕ ವಿನಯ್ ಮೇಲೆ ಹಲ್ಲೆ ನಡೆಸಿದ, ಅಪಹರಣಕ್ಕೆ ಯತ್ನಿಸಿದ ಪ್ರಕರಣದಲ್ಲಿ ಸಂತೋಷ್ ತನಿಖೆ ನಡೆಯುತ್ತಿದೆ. ಇದರ ನಡುವೆಯೇ ಸಿಐಡಿ ಎಚ್.ವೈ.ಮೇಟಿ ಪ್ರಕರಣದಲ್ಲಿ ವಿಚಾರಣೆಗೆ ಬರುವಂತೆ ನೋಟಿಸ್ ನೀಡಿದೆ.

ಆಗಸ್ಟ್ 17ರಂದು ಬೆಳಗ್ಗೆ ವಿಚಾರಣೆಗೆ ಬರಬೇಕು ಎಂದು ಸಂತೋಷ್ ಅವರಿಗೆ ಸಿಐಡಿ ನೋಟಿಸ್ ಜಾರಿ ಮಾಡಿದೆ. ಇದರಿಂದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದಂತಾಗಿದೆ. ಎಚ್.ವೈ.ಮೇಟಿ ಪ್ರಕರಣದಲ್ಲಿ ಸಿಐಡಿ ಮಾಜಿ ಸಚಿವರಿಗೆ ಕ್ಲೀನ್ ಚಿಟ್ ನೀಡಿದೆ. ಆದರೆ, ಸಂತ್ರಸ್ತ ಮಹಿಳೆ ನೀಡಿದ ದೂರಿನ ತನಿಖೆ ನಡೆಯುತ್ತಿದೆ.
ರಾಸಲೀಲೆ ವಿಡಿಯೋ ಬಹಿರಂಗದ ಹಿಂದೆ ಸಂಚು ನಡೆದಿದೆ ಎಂಬುದು ಆರೋಪ. ವಿಡಿಯೋ ಬಹಿರಂಗಕ್ಕೂ ಮುನ್ನ ರಾಜಶೇಖರ್ ಮುಲಾಲಿ ಜೊತೆ ಸಂತೋಷ್ ಸಂಪರ್ಕದಲ್ಲಿದ್ದರು. ಮುಲಾಲಿ ಅವರ ಮೊಬೈಲ್ ಕರೆಗಳ ಪರಿಶೀಲನೆ ವೇಳೆ ಸಂತೋಷ್ ಕರೆ ಮಾಡಿರುವುದು ತಿಳಿದುಬಂದಿದೆ.
ಸಂತೋಷ್ ಮೇ.ಟಿ.ರಾಸಲೀಲೆ ವಿಡಿಯೋವನ್ನು ತಮ್ಮ ಮೊಬೈಲ್ನಿಂದ ಹಲವರಿಗೆ ಕಳುಹಿಸಿರುವ ಮಾಹಿತಿ ಸಿಐಡಿಗೆ ಲಭ್ಯವಾಗಿದೆ. ಆದ್ದರಿಂದ, ರಾಜಶೇಖರ್ ಮುಲಾಲಿ ಜೊತೆಗಿನ ಸಂಪರ್ಕದ ಬಗ್ಗೆ ತನಿಖೆ ನಡೆಸಲು ಸಿಐಡಿ ನೋಟಿಸ್ ನೀಡಿದೆ.
ಸಂತೋಷ್ ವಿಚಾರಣೆ : ಈಶ್ವರಪ್ಪ ಆಪ್ತ ಸಹಾಯಕನ ಮೇಲಿನ ಹಲ್ಲೆ, ಅಪಹರಣ ಯತ್ನ ಪ್ರಕರಣದಲ್ಲಿ ಮಹಾಲಕ್ಷ್ಮೀ ಲೇಔಟ್ ಪೊಲೀಸರು ಶುಕ್ರವಾರ ಸಂತೋಷ್ ವಿಚಾರಣೆ ನಡೆಸಿದ್ದಾರೆ. ಶನಿವಾರವೂ ವಿಚಾರಣೆ ಮುಂದುವರೆಯಲಿದೆ.












Click it and Unblock the Notifications