Gold Bag: ನಗದು-ಲಕ್ಷಾಂತರ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ಹಿಂತಿರುಗಿಸಿದ ಪ್ರಾಮಾಣಿಕ ಬಸ್ ಚಾಲಕ, NWKRTC
ಹುಬ್ಬಳ್ಳಿ: ಮಕ್ಕಳ ಶಾಲಾ ಖರ್ಚಿಗೆ, ಆಸ್ಪತ್ರೆಗೆ ಅಥವಾ ಕುಟುಂಬ ನಿರ್ವಹಣೆಗೆ ಸೇರಿ ಹಲವು ಕಾರಣಗಳಿಗೆ ಚಿನ್ನ ಮತ್ತು ದುಡ್ಡನ್ನು ಒಯ್ಯುತ್ತಿರುತ್ತೇವೆ. ಕೆಲವೊಮ್ಮೆ ನಗದು, ಚಿನ್ನಾಭರಣಗಳಿದ್ದ ಬ್ಯಾಗ್ ಕಳೆದುಕೊಂಡರೆ ಆಗುವ ಸಂಕಷ್ಟ ಅಷ್ಟಿಷ್ಟಲ್ಲ. ಕಳೆದುಹೋದ ಅದೇ ಬ್ಯಾಗ್ ಮತ್ತೆ ಸಿಕ್ಕರೆ ಆಗುವ ಖುಷಿಗೂ ಮಿತಿ ಇರಲ್ಲ. ಇದೀಗ ಅಂಥದ್ದೆ ಘಟನೆ ವಾಯವ್ಯ ಸಾರಿಗೆಯಲ್ಲಿ ಜರುಗಿದೆ.
ವಾಯವ್ಯ ಸಾರಿಗೆ ಬಸ್ನಲ್ಲಿ ಪ್ರಯಾಣಿಕರೊಬ್ಬರು ಬಿಟ್ಟು ಹೋಗಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ಹಣವನ್ನು NWKRTC ಚಾಲಕರೊಬ್ಬರು ಸುರಕ್ಷಿತವಾಗಿ ವಾರಸುದಾರರಿಗೆ ಹಿಂದಿರುಗಿಸಿದ್ದಾರೆ. ವೃತ್ತಿ ನಿಷ್ಠೆ ಜೊತೆಗೆ ಪ್ರಾಮಾಣಿಕತೆ ಮೆರೆದಿದ್ದು ಅವರ ಕಾರ್ಯಕ್ಕೆ ಸಾರ್ವಜನಿಕರು ಹಾಗೂ ಹಿರಿಯ ಅಧಿಕಾರಿಗಳ ಪ್ರಶಂಸೆ ವ್ಯಕ್ತವಾಗಿದೆ.

ಚಿನ್ನಾಭರಣ ನಗದು ಯಾರದ್ದು?
ಹುಬ್ಬಳ್ಳಿಯ ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ದಾವಣಗೆರೆ ಮೂಲದ ಕಿರಣಕುಮಾರ ಎಂ.ಎಸ್. ಎಂಬುವವರು ರವಿವಾರ ಏಪ್ರಿಲ್ 12ರಂದು ರವಿವಾರ ಬೆಳಗ್ಗೆ ಹುಬ್ಬಳ್ಳಿ ಗ್ರಾಮಾಂತರ 1ನೇ ಘಟಕದ ಕೆ ಎ 63 ಎಫ್ 0088 ಸಂಖ್ಯೆಯ ನಾನ್ ಸ್ಟಾಪ್ ಬಸ್ಸಿನಲ್ಲಿ ಹುಬ್ಬಳ್ಳಿಯಿಂದ ರಾಣೆಬೆನ್ನೂರಿಗೆ ಪ್ರಯಾಣ ಮಾಡಿದ್ದಾರೆ. ರಾಣೆಬೆನ್ನೂರಿನಲ್ಲಿ ಇಳಿಯುವಾಗ ಚಿನ್ನಾಭರಣ ಹಾಗೂ ನಗದು ಇದ್ದ ಸಣ್ಣ ಬ್ಯಾಗನ್ನು ಬಸ್ಸಿನಲ್ಲಿಯೇ ಬಿಟ್ಟು ಮರೆತು ಇಳಿದು ಬಿಟ್ಟಿದ್ದರು.
ನಗದು, ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್
ಇತ್ತ ಪ್ರಯಾಣಿಕರೆಲ್ಲ ಇಳಿದ ನಂತರ ಬಸ್ಸಿನ ಚಾಲಕ ಕಂ ನಿರ್ವಾಹಕ ಇಸ್ಮಾಯಿಲ್ ನಾಯ್ಕರ ಎಂದಿನಂತೆ ಪರಿಶೀಲನೆ ಮಾಡಿದ್ದಾರೆ. ಆಗ ಈ ಉಪನ್ಯಾಸಕರಿದ್ದ ಪ್ರಯಾಣಿಕರ ಸೀಟಿನಲ್ಲಿ ಒಂದು ಸಣ್ಣ ಬ್ಯಾಗನ್ನು ಗಮನಿಸಿದ್ದಾನೆ. ತೆಗೆದು ನೋಡಿದರೆ ಅದರಲ್ಲಿ ಅಂದಾಜು ರೂ. 3.5 ಲಕ್ಷ ಮೌಲ್ಯದ
ಎರಡು ಚಿನ್ನದ ಸರ, ಒಂದು ಚಿನ್ನದ ಉಂಗುರ ಹಾಗೂ 65 ಸಾವಿರ ರೂಪಾಯಿ ನಗದು ಮತ್ತು ಕೆಲವು ದಾಖಲೆಗಳು ಇರುವುದು ಕಂಡು ಬಂದಿದೆ. ಅದರಲ್ಲಿದ್ದ ಮೊಬೈಲ್ ಸಂಖ್ಯೆಯ ಮೂಲಕ ವಾರಸುದಾರರನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ.
ಇಂದು ವಿಭಾಗೀಯ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳ ಸಮಕ್ಷಮದಲ್ಲಿ ಚಿನ್ನಾಭರಣ ಹಾಗೂ ಹಣವನ್ನು ಚಾಲಕ ರಿಂದ ವಾರಸುದಾರರಿಗೆ ಹಿಂದಿರುಗಿಸಲಾಗಿದೆ. ಪ್ರಾಮಾಣಿಕತೆ ಮೆರೆದ ಚಾಲಕ ಕಂ ನಿರ್ವಾಹಕ ಇಸ್ಮಾಯಲ್ ನಾಯ್ಕರ ಅವರನ್ನು ಸಾರಿಗೆ ನಿಗಮದ ಅಧಿಕಾರಿಗಳು ಸನ್ಮಾನಿಸಿ ಗೌರವಿಸಿದ್ದಾರೆ.
ಆತಂಕದಲ್ಲಿ ಪ್ರಯಾಣಿಕ: ಸಾರಿಗೆ ಸಿಬ್ಬಂದಿ ಕರೆ ಬಳಿಕ ನಿರಾಳ
ಬ್ಯಾಗ ಹಿಂದಿರುಗಿ ಪಡೆದ ಪ್ರಯಾಣಿಕ ಕಿರಣ ಕುಮಾರ ಭಾವುಕರಾಗಿದ್ದಾರೆ. ಕಳೆದು ಹೋದ ಬ್ಯಾಗ್ ಮತ್ತೆ ಕೈಗೆ ಬಂದಿದ್ದು ನೋಡಿ ಹರ್ಷ ವ್ಯಕ್ತಪಡಿಸಿದ್ದಾರೆ. ಸಾರಿಗೆ ಸಿಬ್ಬಂದಿಯಿಂದ ಬ್ಯಾಗ್ ಸ್ವೀಕರಿಸಿ ಮಾತನಾಡಿದ ಅವರು, ಕಷ್ಟಪಟ್ಟು ದುಡಿದು ಮಾಡಿಸಿಕೊಂಡಿದ್ದ ಚಿನ್ನಾಭರಣ ಹಾಗೂ ಅಪಾರ ಮೊತ್ತದ ನಗದು ಕಳೆದು ಹೋಗಿದ್ದರಿಂದ ಗಾಬರಿಯಾಗಿದ್ದೆ. ಏನು ಮಾಡಬೇಕೆಂದು ದಿಕ್ಕು ತೋಚದಂತಾಗಿತ್ತು. ಬಸ್ಸಿನ ಚಾಲಕರಾದ ಇಸ್ಮಾಯಲ್ ನಾಯ್ಕರ ಅವರ ರಾತ್ರಿ ದೂರವಾಣಿ ಮಾಡಿ ಚಿನ್ನಾಭರಣ ಹಾಗೂ ಹಣ ದೊಂದಿಗೆ ಬ್ಯಾಗ ಸಿಕ್ಕಿರುವುದಾಗಿ ತಿಳಿಸಿದಾಗ ಅತ್ಯಂತ ಖುಷಿಯಾಯಿತು. ಚಿನ್ನಾಭರಣ ಹಾಗೂ ಹಣವನ್ನು ಸುರಕ್ಷಿತವಾಗಿ ಹಿಂದಿರುಗಿಸಿದ ಚಾಲಕರಿಗೆ ಹಾಗೂ ಸಮನ್ವಯ ಮಾಡಿದ ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ಅವರು ಧನ್ಯವಾದ ಹೇಳಿದರು.
ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಮಾತನಾಡಿ ಚಾಲಕ ಕಂ ನಿರ್ವಾಹಕ ಇಸ್ಮಾಯಿಲ್ ನಾಯ್ಕರ ರವರ ಕರ್ತವ್ಯ ಪರತೆ ಇತರೆ ನೌಕರರಿಗೆ ಮಾದರಿಯಾಗಿದೆ. ಸಾರ್ವಜನಿಕ ವಲಯದಲ್ಲಿ ಸಂಸ್ಥೆಯ ಬಗ್ಗೆ ಸದಭಿಪ್ರಾಯ ಹೆಚ್ಚಾಗಲು ಕಾರಣವಾಗಿದೆ ಎಂದು ಶ್ಲಾಘಿಸಿದ್ದಾರೆ.
ವಿಭಾಗೀಯ ಸಂಚಾರ ಅಧಿಕಾರಿ ವೈ.ಎಮ್ ಶಿವರೆಡ್ಡಿ ವಿಭಾಗೀಯ ತಾಂತ್ರಿಕ ಇಂಜಿನಿಯರ್ ದೀಪಕ್ ಜಾದವ್ ಲೆಕ್ಕಪತ್ರ ಅಧಿಕಾರಿ ಮಹದೇವಸ್ವಾಮಿ ಸಹಾ ಸಹಾಯಕ ಆಡಳಿತಾಧಿಕಾರಿ ರಾಜೇಂದ್ರ ಡಿಪೋ ಮ್ಯಾನೇಜರ ಚೈತನ್ಯ ಅಗಳಗಟ್ಟಿ, ಸಹಾಯಕ ಕಾಮಗಾರಿ ಇಂಜಿನಿಯರ ಶಿವಕುಮಾರ ಮತ್ತಿತರರ ಉಪಸ್ಥಿತಿಯಲ್ಲಿ ಪ್ರಯಾಣಿಕರಿಗೆ ಬ್ಯಾಗ್ ಹಿಂತಿರುಗಿಸಲಾಯಿತೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.














Click it and Unblock the Notifications