ಹುಬ್ಬಳ್ಳಿಯಲ್ಲಿ ಪೊಲೀಸರ ಬಲೆಗೆ ಬಿದ್ದ ಎಟಿಎಂ ಕಳ್ಳರ ಗ್ಯಾಂಗ್
ಹುಬ್ಬಳ್ಳಿ, ಜೂನ್ 07 : ಹುಬ್ಬಳ್ಳಿಯ ಪೊಲೀಸರು ಎಟಿಎಂ, ಚಿನ್ನಾಭರಣ ಮತ್ತು ಮದ್ಯದ ಅಂಗಡಿಗಳನ್ನು ದೋಚುತ್ತಿದ್ದ 7 ಜನ ಅಂತರ್ ರಾಜ್ಯ ಕಳ್ಳರನ್ನು ಸೋಮವಾರ ಬಂಧಿಸಿದ್ದಾರೆ. ಬಂಧಿತರಿಂದ 6.74 ಲಕ್ಷ ರೂ. ಮೌಲ್ಯದ ನಗದು ವಶಪಡಿಸಿಕೊಳ್ಳಲಾಗಿದೆ.
ಸೋಮವಾರ ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಪಾಂಡುರಂಗ ರಾಣೆ ಅವರು ಈ ಕುರಿತು ಮಾಹಿತಿ ನೀಡಿದರು. ರಾಯಚೂರಿನ ತುರವಿಹಾಳ ಗ್ರಾಮದ ರಮೇಶ ಮೋಡಕೇರ (35), ಆಂಧ್ರಪ್ರದೇಶದ ಅಮರೇಶ ಮೋಡಕೇರ ( 22) ಮತ್ತು ಪರಶುರಾಮ ಗೊಲ್ಲರ (18), ದೊಡ್ಡಹನುಮಂತ ಮೋಡಕೇರ (22), ಸಣ್ಣಹನುಮಂತ ಮೋಡಕೇರ (19), ಹುನಗುಂದದ ಲಕ್ಷ್ಮಣ ಗೊಲ್ಲರ (25), ಧಾರವಾಡದ ಮರಿಯಪ್ಪ ಮೋಡಕೇರ (22) ಬಂಧಿತ ಆರೋಪಿಗಳು. [ಟ್ರಾಫಿಕ್ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಬೈಕ್ ಕಳ್ಳರು]

ಲಿಂಗಸೂಗೂರು ತಾಲೂಕಿನ ಮಸ್ಕಿಯ ಸುರೇಶ ಶಾಸ್ತ್ರಿ, ಹುನಗುಂದದ ಕೆಂಪಹನುಮಂತ ಅಮ್ಮಿನಗಡ ಎಂಬುವವರು ತಲೆಮರೆಸಿಕೊಂಡಿದ್ದು, ಅವರಿಗಾಗಿ ಹುಡುಕಾಟ ನಡೆಯುತ್ತಿದೆ. ಉಳಿದ ಎಲ್ಲಾ ಆರೋಪಿಗಳು ಪೊಲೀಸರು ವಶದಲ್ಲಿದ್ದಾರೆ. [ನೈಸ್ ರಸ್ತೆಯಲ್ಲಿ ಸುಲಿಗೆ ಮಾಡುತ್ತಿದ್ದ ನಕಲಿ ಪೊಲೀಸರು!]
ಆರೋಪಿಗಳು ನಗರದ ತಾರಿಹಾಳ ಬ್ರಿಡ್ಜ್ ಹತ್ತಿರ ರಸ್ತೆ ಮಧ್ಯೆ ಕಲ್ಲುಗಳನ್ನು ಇಟ್ಟು ದರೋಡೆಗೆ ಹೊಂಚು ಹಾಕಿದ್ದರು. ಈ ಕುರಿತು ಮಾಹಿತಿ ಪಡೆದಿದ್ದ ಪೊಲೀಸರು ದಾಳಿ ನಡೆಸಿ, ಮಾರಕಾಸ್ತ್ರಗಳ ಸಮೇತ ಆರೋಪಿಗಳನ್ನು ಬಂಧಿಸಿದ್ದಾರೆ. [ಸ್ವಂತ ಮನೆಗೆ ಕನ್ನ ಹಾಕಲು ಗೆಳೆಯನಿಗೆ ಕೀ ಕೊಟ್ಟಳು!]
ಬಂಧಿತ ಆರೋಪಿಗಳು ಮೊದಲು ಊರುಗಳಲ್ಲಿ ಕೂದಲು ತೆಗೆದುಕೊಳ್ಳುವುದು, ಬಂಬೈ ಮಿಠಾಯಿ ಮಾರುವುದು ಮುಂತಾದ ಚಿಕ್ಕಪುಟ್ಟ ಕೆಲಸಗಳನ್ನು ಮಾಡುತ್ತ ಜೀವನ ಸಾಗಿಸುತ್ತ ಹಂದಿಗಳನ್ನು ಕಳವು ಮಾಡುವ ಕಾಯಕ ಮಾಡುತ್ತಿದ್ದರು. ನಂತರ ಆಂಧ್ರಪ್ರದೇಶದ ಆದೋನಿ, ಗೊನೆಗುಂಡ್ಲಾ, ರೋಣ, ಹಂಪಸಾಗರ, ಹೊಸರಿತ್ತಿ, ಅರಕೇರಾ, ರೋಣ, ಕಲ್ಲೂರು, ಮರ್ಲಾನಹಳ್ಳಿಯಲ್ಲಿ ಎಟಿಎಂ ದರೋಡೆ ಮಾಡಿದ್ದರು.
ಕುಷ್ಟಗಿಯ ರೇಣುಕಾ ಜ್ಯುವೆಲರ್ಸ್ ನಲ್ಲಿ 1.50 ಲಕ್ಷ ರೂ. ಮೌಲ್ಯದ ಬಂಗಾರ ದೋಚಿದ್ದರು. ಬಂಧಿತರಿಂದ 5 ಲಕ್ಷ ರೂ. ನಗದು, 50 ಸಾವಿರ ರೂ. ಮೌಲ್ಯದ 1 ಕೆಜಿ ಬೆಳ್ಳಿ, .1.24 ಲಕ್ಷ ರೂ. ಮೌಲ್ಯದ 45 ಗ್ರಾಂ. ಬಂಗಾರ ಮತ್ತು 4 ಲಕ್ಷ ರೂ. ಮೌಲ್ಯದ ಬೊಲೇರೋ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
ಹಂದಿ ಹಿಡಿಯುವುದಾಗಿ ಕಳ್ಳತನ ಮಾಡುತ್ತಿದ್ದರು : ನಾವು ಹಂದಿ ಹಿಡಿಯುವವರು ಎಂದು ಹೇಳಿಕೊಂಡು ಬೊಲೇರೋ ಜೀಪ್ ನಲ್ಲಿ ಓಡಾಡುತ್ತಿದ್ದ ಇವರು ಭದ್ರತಾ ಸಿಬ್ಬಂದಿ ಇಲ್ಲದ ಎಟಿಎಂಗಳನ್ನು ಗುರುತು ಮಾಡಿಕೊಳ್ಳುತ್ತಿದ್ದರು. ರಾತ್ರಿ ಎಟಿಎಂಗಳಿಗೆ ಹೋಗಿ ಸಿಸಿ ಕ್ಯಾಮರಾ ವೈರ ಕಟ್ ಮಾಡಿ, ಹಾರೆ ಗುದ್ದಲಿಗಳಿಂದ ಎಟಿಎಂ ಮಶೀನ್ ಕಿತ್ತುಕೊಂಡು ವಾಹನದಲ್ಲಿ ಹಾಕಿಕೊಂಡು ಹೋಗುತ್ತಿದ್ದರು.












Click it and Unblock the Notifications