ಜಾತಿ ಲೆಕ್ಕಾಚಾರದಲ್ಲಿ ಈ ಬಾರಿಯ ಕರ್ನಾಟಕ ಚುನಾವಣೆ ಏಕೆ ಭಿನ್ನ?
Recommended Video
ಬೆಂಗಳೂರು, ಮಾರ್ಚ್ 30: ಈ ರಾಜಕೀಯ ಅನ್ನೋದು ನಿಂತಿರೋದೆ ಜಾತಿಯ ಮೇಲೆ ಅನ್ನೋದು ಎಲ್ಲರಿಗೂ ಗೊತ್ತಿರುವ ಸಂಗತಿ. ಕೆಲವೊಮ್ಮೆ 'ಛಿ ಎಂಥ ಜಾತಿ ರಾಜಕೀಯವೋ, ಮನುಷ್ಯತ್ವಕ್ಕೆ ಬೆಲೆಯೇ ಇಲ್ಲ' ಎಂದು ಬೈದುಕೊಳ್ಳುವ ಮಟ್ಟಿಗೆ ಈ ಜಾತಿ ಮತ್ತು ರಾಜಕೀಯ ರೇಜಿಗೆ ಹುಟ್ಟಿಸಿವೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಕರ್ನಾಟಕದಲ್ಲಿ ಚುನಾವಣೆ ನಡೆದುಕೊಂಡು ಬಂದಾಗಿನಿಂದಲೂ ಅಭಿವೃದ್ಧಿ ಕಾರ್ಯಗಳಿಗಿಂತ ಮೇಲುಗೈ ಸಾಧಿಸಿದ್ದು ಜಾತಿ ರಾಜಕೀಯವೇ. ಅದಕ್ಕೆ ಈ ಬಾರಿಯ ಚುನಾವಣೆಯೂ ಹೊರತಲ್ಲ. ಆದರೆ ಇಷ್ಟು ದಿನ ನಡೆದ ಚುನಾವಣೆಗೆ ಗಿಂತ ಈ ಬಾರಿಯ ಚುನಾವಣೆ ಕೊಂಚ ಭಿನ್ನ! ಯಾಕೆ?
ಸಿದ್ದು ಪ್ರತ್ಯೇಕ ಲಿಂಗಾಯತ ತಂತ್ರಕ್ಕೆ ಅಮಿತ್ ಶಾ ವೀರಶೈವ ಪ್ರತಿತಂತ್ರ?
ಕರ್ನಾಟಕದಲ್ಲಿ ಜಾತಿ ಒಡೆಯುವ, ಆ ಮೂಲಕ ಮತಗಳಿಸುವ ಹುನ್ನಾರದಿಂದಲೇ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು ಪ್ರತಿಧ್ವನಿಸಿ, ಈಗ ಪ್ರತ್ಯೇಕ ಧರ್ಮದ ಶಿಫಾರಸ್ಸು ಕೇಂದ್ರದ ಅಂಗಳದಲ್ಲಿದೆ. ಬಿಜೆಪಿಯ ಭದ್ರಕೋಟೆ ಎನ್ನಿಸಿದ್ದ ಲಿಂಗಾಯತ ಮತಗಳು ಬಿಜೆಪಿ ಕೈತಪ್ಪಿ ಹೋದರೆ ಆಶ್ಚರ್ಯವಿಲ್ಲ. ಆದ್ದರಿಂದಲೇ ಈ ಬಾರಿಯ ಚುನಾವಣೆಯಲ್ಲಿ ಜಾತಿ ಲೆಕ್ಕಾಚಾರಗಳು ತಲೆಕೆಳಗಾಗುವ ಸಾಧ್ಯತೆಗಳು ನಿಚ್ಛಳವಾಗಿವೆ.
ಕೆಜೆಪಿ-ಬಿಜೆಪಿ ಒಂದಾಗಿವೆ...
2013 ರಲ್ಲಿ ಬಿಜೆಪಿ ಹಿನ್ನಡೆಗೆ ಮುಖ್ಯ ಕಾರಣವಾಗಿದ್ದು ಕೆಜೆಪಿ. ಬಿಜೆಪಿಯಿಂದ ಬಂಡಾಯವೆದ್ದು, ಕರ್ನಾಟಕ ಜನತಾ ಪಕ್ಷ ಎಂಬ ಹೆಸರಿನಲ್ಲಿ ಸ್ವತಂತ್ರ ಪಕ್ಷ ಕಟ್ಟಿದ್ದ ಯಡಿಯೂರಪ್ಪ ಅವರಿಗೆ ತಮ್ಮ ತಪ್ಪಿನ ಅರಿವಾಗಿದೆ. ಅಷ್ಟೇ ಅಲ್ಲ, ಬಿಜೆಪಿಗೆ ಯಡಿಯೂರಪ್ಪ ಅವರನ್ನು ಬಿಟ್ಟರೆ ಸಮಸರ್ಥ ನಾಯಕರಿಲ್ಲ. ಆದ್ದರಿಂದ ಕಳೆದ ಚುನಾವಣೆಯಲ್ಲಿ ಬಿಜೆಪಿಗೆ, ಕೆಜೆಪಿಗೆ ಹಂಚಿಹೋಗಿದ್ದ ಲಿಂಗಾಯತ ಮತಗಳು ಈ ಬಾರಿ ಬಿಜೆಪಿಗೆ ಮಾತ್ರ ಬೀಳುವ ಸಾಧ್ಯತೆಗಳು ಹೆಚ್ಚಿದ್ದವು. 2013 ರರಲ್ಲಿ ಶೇ.70 ರಷ್ಟು ಲಿಂಗಾಯತ ಮತಗಳು ಬಿಜೆಪಿ-ಕೆಜೆಪಿ ಪಾಲಾಗಿದ್ದವು. 2008 ರಲ್ಲಿ ಶೇ.51 ರಷ್ಟು ಲಿಂಗಾಯತ ಮತಗಳು ಬಿಜೆಪಿ ಪಾಲಾಗಿದ್ದರೆ, ಕಾಂಗ್ರೆಸ್ ಕೇವಲ ಶೇ.25 ರಷ್ಟು ಲಿಂಗಾಯತ ಮತ ಪಡೆದಿತ್ತು.
ಒಕ್ಕಲಿಗ ಮತಗಳು ಜೆಡಿಎಸ್ ಗೆ
ಇನ್ನು ಒಕ್ಕಲಿಗ ಮತ ಹಂಚಿಕೆಯ ಬಗ್ಗೆ ಯೋಚಿಸುವುದಾದರೆ, 2008ರ ಚುನಾವಣೆಯಲ್ಲಿ ಶೇ.40 ರಷ್ಟು ಒಕ್ಕಲಿಗ ಮತಗಳು ಜೆಡಿಎಸ್ ಪಾಲಾಗಿದ್ದವು. ಕಾಂಗ್ರೆಸ್ ಮತ್ತು ಬಿಜೆಪಿ ಕ್ರಮವಾಗಿ 25 ಮತ್ತು 18 ಪ್ರತಿಶತ ಮತ ಪಡೆದಿದ್ದವು. ಕಾಂಗ್ರೆಸ್ಸಿಗೆ ಮುಸ್ಲಿಂ ಮತ ಬಹಳ ಮುಖ್ಯ. ಅಷ್ಟೇ ಅಲ್ಲ, ದಲಿತ ಸಮುದಾಯದ ಶೇ.50 ಮತ್ತು ಆದಿವಾಸಿ ಸಮುದಾಯದ ಶೇ. 44 ಮತಗಳು ಕಾಂಗ್ರೆಸ್ ಪಾಲಾಗಿವೆ. ಬಿಜೆಪಿ, ದಲಿತ, ಆದಿವಾಸಿ ಮತ್ತು ಮುಸ್ಲಿಮರಿಂದ ಕ್ರಮವಾಗಿ ಶೇ.20, 25, 11 ಪ್ರತಿಶತ ಮತ ಗಳಿಸಿತ್ತು.
2018 ರ ಚುನಾವಣೆಯ ಕತೆಯೇನು?
ರಾಜಕೀಯ ತಜ್ಞ ಡಾ.ಸಂದೀಪ್ ಶಾಸ್ತ್ರಿ ಎಂಬುವವರ ಪ್ರಕಾರ, "2013 ರ ಚುನಾವಣೆಯಲ್ಲಿ ಬಿಜೆಪಿ-ಕೆಜೆಪಿ ಶೇ. 70ರಷ್ಟು ಲಿಂಗಾಯತ ಮತ ಪಡೆದಿದ್ದವು. ಈ ವರ್ಷ ಶೇ.81 ಕ್ಕೂ ಹೆಚ್ಚು ಲಿಂಗಾಯತ ಮತ ಪಡೆವ ವಿಶ್ವಾಸದಲ್ಲಿ ಬಿಜೆಪಿ ಇತ್ತು. ಬಿಜೆಪಿಗೆ ಅದು ಸಾಧ್ಯವೂ ಇತ್ತು. ಆದರೆ ಕೊನೆಯ ಕ್ಷಣದಲ್ಲಿ ಪಡೆದುಕೊಂಡ ಅನಿರೀಕ್ಷಿತ ತಿರುವು ಕರ್ನಾಟಕದ ರಾಜಕೀಯ ಚಿತ್ರಣ ಬದಲಿಸಿದೆ. ಇದೀಗ ಲಿಂಗಾಯತ ಪ್ರತ್ಯೇಕ ಧರ್ಮದ ಕುರಿತು ಕೇಂದ್ರದ ಮುಂದೆ ಒತ್ತಡ ಹೇರುತ್ತಿರುವ ಕಾಂಗ್ರೆಸ್ ನಡೆ ಲಿಂಗಾಯತರನ್ನು 'ಇಂಪ್ರೆಸ್' ಮಾಡುವುದು ಖಂಡಿತ. ಪ್ರತ್ಯೇಕ ಧರ್ಮದ ಸ್ಥಾನಮಾನ ಮತ್ತು ಅಲ್ಪಸಂಖ್ಯಾತ ಧರ್ಮಕ್ಕೆ ನೀಡುವ ಎಲ್ಲ ಸೌಲಭ್ಯಗಳನ್ನು ನೀಡುವ ಭರವಸೆಯಿಂದಾಗಿ ಲಿಂಗಾಯತ ಮತಗಳು ಕಾಂಗ್ರೆಸ್ ನತ್ತ ಮುಖಮಾಡಿದರೆ ಅದು ಅಚ್ಚರಿಯ ಸಂಗತಿಯಾಗಲಾರದು. ಇದು ಬಿಜೆಪಿಗೆ ಬಹುದೊಡ್ಡ ಹಿನ್ನಡೆಯಾದೀತು."
ಮೋದಿ ಅಲೆ ಕೆಲಸ ಮಾಡೀತಾ?
ಉತ್ತರ ಪ್ರದೇಶ, ಗುಜರಾತ್ ಚುನಾವಣೆಗಳಂತೆ ತೀರಾ ಇತ್ತೀಚಿನ ಈಶಾನ್ಯ ರಾಜ್ಯಗಳ ಚುನಾವಣೆಯಲ್ಲಿ ಮೋದಿ ಅಲೆಯ ಯಶಸ್ಸನ್ನು ಅಲ್ಲಗಳೆಯುವಂತಿಲ್ಲ. ಆದರೆ ಅದು ಕರ್ನಾಟಕದಲ್ಲೂ ಕೆಲಸ ಮಾಡೀತಾ ಎಂಬುದು ಈಗಿರುವ ಪ್ರಶ್ನೆ. ಸದ್ಯಕ್ಕೆ ಕರ್ನಾಟಕದ ಬಿಜೆಪಿ ನಾಯಕರಿಗಿರುವ ಭರವಸೆಯೂ ಅದೇ! ಮೇ.12 ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಮೇ.15 ರಂದು ಹೊರಬೀಳಲಿದೆ. ಚುನಾವಣೆಗೂ ಮುನ್ನ ಕರ್ನಾಟಕದಲ್ಲಿ ಸುಮಾರು 25ಕ್ಕೂ ಹೆಚ್ಚು rallyಗಳಲ್ಲಿ ಭಾಗವಹಿಸಲಿರುವ ಪ್ರಧಾನಿ ಮೋದಿ ಮ್ಯಾಜಿಕ್ ಮಾಡುತ್ತಾರಾ? ಕೇಂದ್ರ ಸರ್ಕಾರ ದಕ್ಷಿಣ ಭಾರತದ ರಾಜ್ಯಗಳನ್ನು ಕಡೆಗಣಿಸುತ್ತಿದೆ ಎಂಬ ಕೂಗೂ ಎದ್ದಿದೆ. ಮೋದಿ ಅಲೆಯೂ ಕೆಲಸ ಮಾಡದಂತೆ ಮಾಡುವುದಕ್ಕಾಗಿಯೇ ಸಿದ್ದರಾಮಯ್ಯ ಈಗಾಗಲೇ 'ಕೇಂದ್ರದ ಮಲತಾಯಿ ಧೋರಣೆಯ ಆರೋಪ'ವನ್ನು ಹಚ್ಚ ಹಸಿರಾಗಿರಿಸಿದ್ದಾರೆ. ಸಿದ್ದರಾಮಯ್ಯನವರ ಈ ಎಲ್ಲ ಜಾಣನಡೆಗಳು ಬಿಜೆಪಿ ಮೇಲೆ ಯಾವ ರೀತಿ ಪರಿಣಾಮ ಬೀರೀತು ಎಂಬುದನ್ನು ಕಾದುನೋಡಬೇಕು.