ಹೆಣ್ಣಿನ ಮೇಲೆ 169 ಬಾರಿ ಅತ್ಯಾಚಾರ ಆಗಲು ಸಾಧ್ಯವೇ?
'ಸ್ವಸ್ಥ ಸಮಾಜಕ್ಕಾಗಿ ಜಾಗೃತಿ ಮಹಿಳಾ ಸಮಾವೇಶ' ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಮಹಿಳಾ ಹೋರಾಟಗಾರ್ತಿಯಾದ ಈಶ್ವರಿ ಶ್ಯಾಮಭಟ್ ಬೆರ್ಕಡವು, ಯಾವುದೇ ಹೆಣ್ಣಿನ ಮೇಲೆ 169 ಬಾರಿ ಅತ್ಯಾಚಾರ ಆಗಲು ಸಾಧ್ಯವೇ? ಯಾರಾದರೂ ನಮ್ಮನ್ನು ಒಮ್ಮೆ ಕೆಟ್ಟ ದೃಷ್ಟಿಯಿಂದ ನೋಡಿದರೂ ಸಹ ನಾವು ಯಾವತ್ತೂ ಸಹ ಅ ಸ್ಥಳಕ್ಕೆ ಹೋಗುವುದಿಲ್ಲ.
ಅಂತಹುದರಲ್ಲಿ ಅತ್ಯಾಚಾರ ನಡೆಯುತ್ತದೆ ಎನ್ನುವ ಸ್ಥಳಕ್ಕೆ ಪದೇ ಪದೇ ಹೋಗಲು ಸಾಧ್ಯವೇ? ನಾನು 20 ವರ್ಷದಿಂದ ಶ್ರೀ ಮಠದ ಸಂಪರ್ಕದಲ್ಲಿದ್ದೇನೆ. ನನಗೆ ಆ ಮಠದ ವಿಚಾರ ಚೆನ್ನಾಗಿ ಗೊತ್ತು, ಶ್ರೀಗಳು ಒಂದು ಲೋಟ ನೀರು ಕುಡಿಯಲೂ ಸ್ವತಂತ್ರರಲ್ಲ. ಅಲ್ಲಿ ಸುಮಾರು 6 ಜನ ಪರಿವಾರದವರು ದಿನದ 24 ಗಂಟೆಯೂ ಪಾಳಿಯ ಮೇಲೆ ಗುರುಗಳ ಜೊತೆ ಇರುತ್ತಾರೆ.
ಗುರುಗಳು ಮಲಗಿದ್ದಾಗಲೂ ಸಹ ಅವರ ಪರಿವಾರದವರು ಅವರೊಂದಿಗಿರುತ್ತಾರೆ. ಇಂತಹ ಗುರುಗಳಿಗೆ ಏಕಾಂತವೆಲ್ಲಿರುತ್ತದೆ? ಇನ್ನು ಅತ್ಯಾಚಾರ ದೂರದ ಮಾತು. ನಿಜವಾದ ಸಂತ್ರಸ್ತೆಯರಿಗೆ ನಾವು ಯಾವಾಗಲೂ ಜೊತೆಯಾಗೋಣ, ಹೋರಾಡೋಣ ಆದರೆ ಹುಸಿ ಸಂತ್ರಸ್ಥೆಯರನ್ನು ನಾವೆಲ್ಲಾ ಒಟ್ಟಾಗಿ ಖಂಡಿಸೋಣ, ಕಾನೂನಿನಲ್ಲಿ ಕೊಡಲ್ಪಟ್ಟಿರುವ ಕಲಂ 376 ನೇ ವಿಧಿಯ ದುರ್ಬಳಕೆಯನ್ನು ತಡೆಯಲು ಸಂಘಟಿತರಾಗೋಣ ಎಂದು ಈಶ್ವರಿ ಶ್ಯಾಮಭಟ್ ಹೇಳಿದ್ದಾರೆ. (ರಾಘವೇಶ್ವರ ಶ್ರೀಗಳು ದೇಹ ತ್ಯಾಗಕ್ಕೂ ಸಿದ್ಧ)
ಕಾರ್ಯಕ್ರಮದಲ್ಲಿ ಹಾಜರಿದ್ದ ತುಮಕೂರಿನ ಹಿರೇಮಠದ ಅಧ್ಯಕ್ಷರಾದ ಶಿವಾನಂದ ಶಿವಾಚಾರ್ಯ ಸ್ವಾಮೀಜಿಗಳು ಮಾತನಾಡುತ್ತಾ, ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಸ್ವಾಮೀಜಿಗಳ ಮೇಲೆ ನಮಗೆ ಮೃದುಭಾವನೆ ಇದೆ. ಅವರಿಂದ ಅತ್ಯಾಚಾರದಂತ ಕೃತ್ಯ ನಡೆಯಲು ಸಾಧ್ಯವಿಲ್ಲ. ನಮಗೆ ಆ ನಂಬಿಕೆ ಇದೆ. ಅವರನ್ನು ನಾವು ಹತ್ತಿರದಿಂದ ಬಲ್ಲೆವು, ಅವರ ರಾಮಾಯಣ ಮಹಾಸತ್ರ ಕಾರ್ಯಕ್ರಮ ಹಾಗೂ ವಿಶ್ವಗೋ ಸಮ್ಮೇಳನದಲ್ಲಿಯೂ ಸಹ ನಾವೂ ಭಾಗವಹಿಸಿದ್ದೆವು ಎಂದಿದ್ದಾರೆ.
ದೇವತೆಗಳಾದ ರಾಮ ಕೃಷ್ಣರಿಗೂ ಅಪವಾದ ತಪ್ಪಲಿಲ್ಲ, ಸಾಧು ಸಂತರು ಹಾಗೂ ಸಜ್ಜನರ ಮೇಲೇ ಯುಗಯುಗಾಂತರಗಳಿಂದಲೂ ಅಪವಾದಗಳು ಬಂದಿವೆ. ಆದರೆ ಟಿವಿ ಮಾಧ್ಯಮಗಳಲ್ಲಿ ಬರುವುದೆಲ್ಲಾ 100ಕ್ಕೆ 100 ಸತ್ಯವಲ್ಲ. ಪ್ರಜ್ಞಾವಂತರು ಟಿವಿ ಹಾಗೂ ಪತ್ರಿಕೆಗಳಲ್ಲಿ ಬರುವುದನ್ನು ನಂಬುವುದಿಲ್ಲ ಎಂದು ಶಿವಾನಂದ ಶಿವಾಚಾರ್ಯ ಸ್ವಾಮೀಜಿಗಳು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ನಂಬಿದವರು ಪ್ರಜ್ಞಾವಂತರಲ್ಲ. ಪ್ರಜಾಪ್ರಭುತ್ವದ 4ನೇ ಅಂಗ ಪತ್ರಿಕಾ ರಂಗ ಆದ್ದರಿಂದ ಪತ್ರಿಕೆಗಳು ಹಾಗೂ ಟಿವಿ ಮಾಧ್ಯಮಗಳು ತಮ್ಮ ಜವಾಬ್ದಾರಿಯನ್ನು ಅರಿತು ವರದಿ ನೀಡಬೇಕು. ನಾರಿ ಸುರಕ್ಷಾ ಅಲ್ಲ ನಾರಿ ಸ್ವರಕ್ಷಾ ಆಗಬೇಕು, ಮಹಿಳೆ ಈಗ ತಾನೇ ತನ್ನ ರಕ್ಷಣೆ ಮಾಡಿಕೊಳ್ಳಬೇಕು. ನಾರೀ ಸರ್ವಶಕ್ತಳು, ಅವಳು ತನ್ನನ್ನು ತಾನು ರಕ್ಷಿಸಿಕೊಳ್ಳುವುದಕ್ಕೆ ಸಮರ್ಥಳು ಎಂದು ಶಿವಾನಂದ ಶಿವಾಚಾರ್ಯ ಸ್ವಾಮೀಜಿಗಳು ಹೇಳಿದ್ದಾರೆ.
ಹೆಣ್ಣು ಅಬಲೆಯಲ್ಲ ಅಹೋಬಲೆ, ಅವಳು ಶಾಂತಳಾಗಿದ್ದರೆ ಮಹಾಗೌರಿ ಕೆರಳಿದರೆ ಮಹಾಕಾಳಿ, ಹೆಣ್ಣುಮಕ್ಕಳು ಸಂಘಟಿತರಾಗಬೇಕು. ಪ್ರತಿಯೊಂದು ಮಗುವೂ ತನ್ನ ಅಮ್ಮ ದುರ್ಗಾದೇವಿಯಂತೆ ಸರ್ವಶಕ್ತಳು ಎಂದು ಭಾವಿಸಿರುತ್ತದೆ. (ಶ್ರೀಮಠದಲ್ಲಿ ಗುರುಗಳು ಹೇಗಿರುತ್ತಾರೆ)
ಹಾಗೇಯೇ ಪ್ರತಿಯೊಬ್ಬ ಮಹಿಳೆಯೂ ತನ್ನನ್ನು ತಾನು ದುರ್ಗಿಯಂತೆ ಭಾವಿಸಿ, ಶಕ್ತರಾಗಿ ತಮ್ಮನ್ನು ತಾವೇ ರಕ್ಷಿಸಿಕೊಳ್ಳಬೇಕು. ಈಗ ಮಹಿಳೆಗೆ ವಸ್ತ್ರ ಸಂಹಿತೆ ಇರಬೇಕು, ಸುಸಂಸ್ಕೃತ ಮನಸ್ಸಿನವರು ಯಾರ ಮೇಲೂ ಕೆಟ್ಟ ದೃಷ್ಠಿ ಬೀರುವುದಿಲ್ಲ, ಆದರೆ ವಿಕೃತ ಮನಸ್ಸಿನವರು ಎಲ್ಲರ ಮೇಲೂ ಕೆಟ್ಟ ದೃಷ್ಠಿ ಬೀರುತ್ತಾರೆ. ಆದ್ದರಿಂದ ಮಹಿಳೆಗೆ ಈ ಕಾಲಘಟ್ಟದಲ್ಲಿ ವಸ್ತ್ರ ಸಂಹಿತೆ ತುಂಬಾ ಅಗತ್ಯ ಇದೆ ಎಂದು ಶಿವಾನಂದ ಶಿವಾಚಾರ್ಯ ಸ್ವಾಮೀಜಿಗಳು ಒತ್ತಿ ಹೇದ್ದಾರೆ.
ಜ್ಯೋತಿ ಬೆಳಗಿಸುವುದರೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಪ್ರಾರ್ಥನೆಯನ್ನು ಕುಮಾರಿ ಸಮನ್ವಿತಾರವರು ಮಾಡಿದರು, ಶ್ರೀಮತಿ ವನಿತಾ ಶ್ಯಾಮ್ ಪ್ರಸಾದ್ ರವರು ಕಾರ್ಯಕ್ರಮದಲ್ಲಿ ಸ್ವಾಗತ ಭಾಷಣ ಹಾಗೂ ನಿರೂಪಣೆ ಮಾಡಿದರು. ಖಂಡನಾ ನಿರ್ಣಯವನ್ನು ಶ್ರೀಮತಿ ಮುಕ್ತಾಹೆಗಡೆ ಮಂಡಿಸಿದರು, ಶ್ರೀಮತಿ ಶೈಲಜಾ ಹೆಗಡೆ. ವಂದನಾರ್ಪಣೆ ಮಾಡಿದರು.