ಶಾಸ್ತ್ರೋಕ್ತವಾಗಿ ನಡೆದ ಶಾಸ್ತ್ರ ನಂಬದ ಮುಖ್ಯಮಂತ್ರಿ ಗೃಹಪ್ರವೇಶ
ಮೈಸೂರು, ನ 16: ರಾಹುಕಾಲ, ಯಮಗಂಡಕಾಲ ಇದನ್ನೆಲ್ಲಾ ನಂಬುವುದಿಲ್ಲ ಎಂದು ಈ ಹಿಂದೆ ಹೇಳಿದ್ದ ರಾಜ್ಯದ ದೊರೆ, ಗೌಪ್ಯವಾಗಿ ಅದಕ್ಕಿಂತ ಹೆಚ್ಚಾಗಿ ಶಾಸ್ತ್ರೋಕ್ತವಾಗಿ ತನ್ನ ನೂತನ ಗೃಹಪ್ರವೇಶದ ಕೆಲಸವನ್ನು ಮುಗಿಸಿದ್ದಾರೆ.
ಮೈಸೂರಿನ ಎಚ್ ಡಿ ಕೋಟೆ ರಸ್ತೆಯಲ್ಲಿರುವ, ಟಿ ಕಾಟೂರಿನ ಎಂಟು ಎಕರೆ ವಿಸ್ತೀರ್ಣದ ತೋಟದ ಆವರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೂತನ ಗೃಹಪ್ರವೇಶದ ಕಾರ್ಯಕ್ರಮ ಕೆಲವೇ ಕೆಲವು ಆಪ್ತರ ಸಮ್ಮುಖದಲ್ಲಿ ಭಾನುವಾರ (ನ 15) ಕಾರ್ತಿಕ ಚತುರ್ಥಿಯ ದಿನದಂದು ನಡೆದಿದೆ.
ಎಂಟು ಜನ ಪುರೋಹಿತರಿಂದ ನೂತನ ಮನೆಯಲ್ಲಿ ನಡೆದ ಹೋಮ ಹವನ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಪತ್ನಿ ಪಾರ್ವತಮ್ಮ, ಕಿರಿಯ ಪುತ್ರ ಯತೀಂದ್ರ ಸಹಿತ ಕುಟುಂಬದ ಪ್ರಮುಖರು ಹಾಜರಿದ್ದರು. (ರಾಹುಕಾಲ ಗುಳಿಕಕಾಲ ಯಾಕೆ ನೋಡಬೇಕು)
ಮೈಸೂರಿನಲ್ಲಿ ಸರಕಾರೀ ಕಾರ್ಯಕ್ರಮ ಮುಗಿಸಿ. ಅಧಿಕೃತ ಸರಕಾರೀ, ಭದ್ರತಾ ಪಡೆಯ ಕಾರನ್ನು ಬಿಟ್ಟು ಖಾಸಗಿ ಕಾರಿನಲ್ಲಿ ತನ್ನ ನೂತನ ಗೃಹಪ್ರವೇಶಕ್ಕೆ ತೆರಳಿದ ಸಿದ್ದು, ರೇಷ್ಮೆ ಪಂಚೆ ಧರಿಸಿ ಹೋಮ ಹವನದಲ್ಲಿ ಪಾಲ್ಗೊಂಡಿದ್ದು ವಿಶೇಷ.
ಇದು ನನ್ನ ಖಾಸಗಿ ಕಾರ್ಯಕ್ರಮ ಹಾಗಾಗಿ ಯಾರೂ ಬರುವುದು ಬೇಡ ಎಂದು ಮಾಧ್ಯಮದವರಿಗೆ ಹೇಳಿದ ಸಿಎಂ, ಬೆಂಬಲಿಗರು ಮತ್ತು ಆಪ್ತರಿಗೂ ಪೂಜಾ ಕಾರ್ಯಕ್ಕೆ ಆಹ್ವಾನ ನೀಡಿರಲಿಲ್ಲ.
ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಸಿದ್ದರಾಮಯ್ಯ, ಮಡಿಕೇರಿಯಲ್ಲಿ ನಡೆದ ಘಟನೆಗೆ ಬಿಜೆಪಿ ಸಂಪೂರ್ಣ ಹೊಣೆ. ಬಿಜೆಪಿ ಸಮಾಜದಲ್ಲಿ ಅಶಾಂತಿ ಮೂಡಿಸುವುದನ್ನು ನಿಲ್ಲಿಸಬೇಕು ಎಂದಿದ್ದಾರೆ.
ರಾಹುಕಾಲ, ಯಮಗಂಡಕಾಲ ಯಾಕ್ರೀ ನೋಡ್ಬೇಕು, ಸಿದ್ದು. ಮುಂದೆ ಓದಿ..

ವಿಧಾನಮಂಡಲದ ಅಧಿವೇಶನ
ಇನ್ನೇನು ಆರಂಭವಾಗಲಿರುವ ವಿಧಾನಮಂಡಲದ ಅಧಿವೇಶನದಲ್ಲಿ ಯಾವ ವಿಷಯ ಪ್ರಸ್ತಾವಿಸಬೇಕು, ಯಾವ ವಿಷಯಕ್ಕೆ ಪ್ರಾಮುಖ್ಯತೆ ನೀಡಬೇಕು ಎನ್ನುವುದು ಸ್ಪೀಕರ್ ವಿವೇಚನೆಗೆ ಬಿಟ್ಟ ವಿಚಾರ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ನನಗೆ ನಂಬಿಕೆಯಿಲ್ಲ
ಕಾಲದಲ್ಲಿ ಎಲ್ಲಾ ಕಾಲವೂ ಒಂದೇ, ರಾಹುಕಾಲ ಅಥವಾ ಯಮಗಂಡಕಾಲದಲ್ಲಿ ನನಗೆ ನಂಬಿಕೆಯಿಲ್ಲ. ಮೈಸೂರು ಜಂಬೂಸವಾರಿ ಮೆರವಣಿಗೆಗೆ ಯಮಗಂಡ ಕಾಲದಲ್ಲಿ ಚಾಲನೆ ನೀಡಲಾಗಿದೆ ಎಂಬ ವಿಷಯಕ್ಕೆ ನಾನು ಹೆಚ್ಚಿನ ಮಹತ್ವ ನೀಡಲಾರೆ ಎಂದು ಸಿದ್ದರಾಮಯ್ಯ ಮೈಸೂರಿನಲ್ಲಿ ಹೇಳಿದ್ದರು.

ಮನುಷ್ಯನಿಗೆ ಒಳ್ಳೆಯ ಮನಸ್ಥಿತಿ ಇದ್ದರೆ ಸಾಕು
ಈ ಕಾಲಗಳನ್ನು ನಂಬುವವನು ನಾನಲ್ಲ, ಒಳ್ಳೆಯ ಮನಸ್ಸು ಉಳ್ಳ ವ್ಯಕ್ತಿ ಯಾವುದೇ ಕೆಲಸ ಮಾಡಿದರೂ ಶ್ರೇಯಸ್ಸು ಆಗುತ್ತದೆ. ರಾಹುಕಾಲ, ಗುಳಿಗಕಾಲ, ಯಮಗಂಡ ಕಾಲ, ಶಾಸ್ತ್ರ ಎಲ್ಲಾ ನಮ್ಮ ನಮ್ಮ ನಂಬಿಕೆಗೆ ಬಿಟ್ಟ ವಿಚಾರ ಎಂದು ಸಿದ್ದರಾಮಯ್ಯ ಹೇಳಿದ್ದರು.

ಬಜೆಟ್ ಮಂಡಣೆ
2015-16ನೇ ಸಾಲಿನ ಮುಂಗಡಪತ್ರ ಮಂಡನೆಯನ್ನು ಸಿದ್ದರಾಮಯ್ಯ 12.30ಕ್ಕೆ ಆರಂಭಿಸಿದ್ದರು. ಶುಕ್ರವಾರ ಬೆಳಗ್ಗೆ 10.30ರಿಂದ 12 ಗಂಟೆಯವರೆಗೂ ರಾಹುಕಾಲವಿದ್ದು, ಸರಿಯಾಗಿ 12.05ಕ್ಕೆ ಸಂಪುಟ ಸಭೆ ಆರಂಭಿಸಿ, ಮಧ್ಯಾಹ್ನ 12.30ಕ್ಕೆ ಆಯವ್ಯಯ ಮಂಡನೆ ಆರಂಭಿಸಿದ್ದರು.

ರಾಹುಕಾಲ, ಯಮಗಂಡಕಾಲ
ಮಕ್ಕಳು ಹುಟ್ಟುವುದಕ್ಕೂ ಕಾಲದ ಲೆಕ್ಕಾಚಾರ ಹಾಕುವುದು ತಪ್ಪು. ಗುಳಿಕ ಕಾಲದಲ್ಲಿ ಹುಟ್ಟಿದ ಮಕ್ಕಳು ಒಳ್ಳೆಯವರಾಗುತ್ತಾರೆ. ಯಮಗಂಡ, ರಾಹುಕಾಲದಲ್ಲಿ ಹುಟ್ಟಿದ ಮಕ್ಕಳು ಕೆಟ್ಟವರಾಗುತ್ತಾರೆ ಎನ್ನುವುದೆಲ್ಲಾ ಸುಳ್ಳು ಎಂದು ಸಿದ್ದರಾಮಯ್ಯ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದೂ ಉಂಟು.












Click it and Unblock the Notifications