ಹೊಸಕೋಟೆಯಲ್ಲಿ ಘರ್ಜಿಸಿದ ಕಾಂಗ್ರೆಸ್ ಶಾಸಕ: ರಾಜ್ಯ ರಾಜಕೀಯ ಅಯೋಮಯ
ಮುಂದಿನ ಸಾರ್ವತ್ರಿಕ ಚುನಾವಣೆಯ ಹೊತ್ತಿಗೆ ರಾಜ್ಯದಲ್ಲಿ ಪಕ್ಷಕ್ಕೆ ಪೂರಕವಾದ ವಾತಾವರಣ ಸೃಷ್ಟಿಯಾಗಲಿ ಎಂದು ಜೆಡಿಎಸ್ ಜೊತೆ ಕೈಜೋಡಿಸಿ ಸಮ್ಮಿಶ್ರ ಸರಕಾರ ರಚಿಸಿದ ಕಾಂಗ್ರೆಸ್ಸಿಗೆ ತಮ್ಮ ಶಾಸಕರನ್ನು ಸಮಾಧಾನ ಪಡಿಸಲು ಹರಸಾಹಸ ಪಡುವಂತಾಗಿದೆ.
ಒಬ್ಬರನ್ನು ಸಮಾಧಾನ ಪಡಿಸಿದರೆ, ಇನ್ನೊಬ್ಬರು ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ. ಈ ನಡುವೆ ಹದಿನೈದು ಶಾಸಕರು ಮಂಗಳವಾರ (ಸೆ 18) ರಾಜೀನಾಮೆ ನೀಡುವ ಸಾಧ್ಯತೆಯಿದೆ ಎನ್ನುವ ವದಂತಿಗಳು ಹರಿದಾಡುತ್ತಿವೆ. ಇವೆಲ್ಲದರ ನಡುವೆ ದೇಶದ ಶ್ರೀಮಂತ ಶಾಸಕ, ಹೊಸಕೋಟೆಯಲ್ಲಿ ತಮ್ಮ ಪಕ್ಷದ ವಿರುದ್ದವೇ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯ ನಿವಾಸಕ್ಕೆ ಅತೃಪ್ತ ಶಾಸಕರು, ಮಹತ್ವದ ಚರ್ಚೆ
ಹೊಸಕೋಟೆಯ ಕಾಂಗ್ರೆಸ್ ಶಾಸಕ ಎಂ ಟಿ ಬಿ ನಾಗರಾಜು, ತುರ್ತು ಪತ್ರಿಕಾಗೋಷ್ಠಿಯನ್ನು ಕರೆದಿದ್ದು, ನಮ್ಮ ಅಸಮಾಧಾನವನ್ನೆಲ್ಲಾ ಹೊರಹಾಕಿ, ಮುಂದಿನ ನಿರ್ಧಾರ ತಿಳಿಸುವುದಾಗಿ ಹೇಳಿರುವುದು, ಪಕ್ಷಕ್ಕೆ ಇನ್ನಷ್ಟು ಮುಜುಗರವನ್ನು ತಂದೊಡ್ಡಿದೆ. ಎಂಟಿಬಿ ಒಬ್ಬರೇ ಇದ್ದಾರಾ ಅಥವಾ ಅವರ ಜೊತೆ ಇನ್ನೆಷ್ಟು ಜನ ಇದ್ದಾರೋ ಎನ್ನುವುದೀಗ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಸಮ್ಮಿಶ್ರ ಸರಕಾರ ಅಧಿಕಾರ ಬಂದಾಗಲೇ, ಸಚಿವ ಸ್ಥಾನ ಸಿಗಲಿಲ್ಲ ಎಂದು ತೀವ್ರ ಆಕ್ರೋಶ ಹೊರಹಾಕಿದ್ದ ಎಂ ಟಿ ಬಿ ನಾಗರಾಜು ಅವರನ್ನು ಹಾಗೋಹೀಗೋ ಭರವಸೆ ನೀಡಿ, ಸಮಾಧಾನ ಪಡಿಸಲಾಗಿತ್ತು. ಕಾಂಗ್ರೆಸ್ಸಿನಲ್ಲಿನ ಬಣದ ವಿಚಾರಕ್ಕೆ ಬಂದಾಗ, ಎಂಟಿಬಿ, ಮಾಜಿ ಸಿಎಂ ಸಿದ್ದರಾಮಯ್ಯನವರ ಜೊತೆ ಗುರುತಿಸಿಕೊಂಡಿರುವವರು.
ಆಗರ್ಭ ಶ್ರೀಮಂತರಾಗಿರುವ ಎಂಟಿಬಿ ನಾಗರಾಜು, ಇಂದೇ (ಸೆ 17) ಪತ್ರಿಕಾಗೋಷ್ಠಿ ಕರೆದು ನನ್ನ ನಿರ್ಧಾರ ಪ್ರಕಟಿಸಬೇಕೆಂದಿದ್ದೆ. ಆದರೆ, ಸ್ನೇಹಿತರು ನಾವೂ ಬರುತ್ತೇವೆ ಎಂದು ಹೇಳಿರುವುದರಿಂದ, ನಾಳೆ ಗೋಷ್ಠಿ ಕರೆಯುತ್ತೇನೆ ಎಂದು ಹೇಳಿರುವುದು, ಎಂಟಿಬಿ ಒಬ್ಬರೇ ಅಲ್ಲ ಎನ್ನುವುದು ಖಾತ್ರಿಯಾಗಿದೆ. ಎಂಟಿಬಿ ಹೇಳಿದ್ದೇನು, ಮುಂದೆ ಓದಿ
ಇನ್ನೂ ಕೆಲವು ಸ್ನೇಹಿತರು ನನ್ನ ಜೊತೆ ಬರಬೇಕು
ಕೆಲ ವಿಚಾರಗಳ ಬಗ್ಗೆ ನಾನು ಇಂದು ಪ್ರೆಸ್ ಮೀಟ್ ಮಾಡಬೇಕೆಂದು ಹೇಳಿರುವುದು ನಿಜ. ಇನ್ನೂ ಕೆಲವು ಸ್ನೇಹಿತರು ನನ್ನ ಜೊತೆ ಬರಬೇಕು. ನಾಳೆ ಮಾಡೋಣ, ನಾವೂ ಬರುತ್ತೇವೆ ಎಂದು ಹೇಳಿದ್ದಾರೆ. ನಮ್ಮ ಮನಸ್ಸಿನಲ್ಲಿ ಏನೇನು ಇದೆ, ನಮ್ಮ ನಿರ್ಧಾರವನ್ನು ನಾಳೆ ತಿಳಿಸುತ್ತೇವೆ. ಅಭಿವೃದ್ದಿ ವಿಚಾರ ಮತ್ತು ನಾವು ಮಂತ್ರಿಯಾಗಲಿಲ್ಲ ಎನ್ನುವ ವಿಚಾರದ ಬಗೆಯೂ ಮಾತನಾಡುವುದಿದೆ - ಎಂಟಿಬಿ ನಾಗರಾಜು
ನಾಳೆ ಪ್ರೆಸ್ ಮೀಟ್ ಮಾಡಿದಾಗ ಎಲ್ಲವನ್ನೂ ಸವಿಸ್ತಾರವಾಗಿ ತಿಳಿಸುತ್ತೇನೆ
ನಮಗೆ ಅತೃಪ್ತಿಯೂ ಇದೆ. ಇದೆಲ್ಲದರ ಬಗ್ಗೆ ನಾಳೆ ಪ್ರೆಸ್ ಮೀಟ್ ಮಾಡಿದಾಗ ಎಲ್ಲವನ್ನೂ ಸವಿಸ್ತಾರವಾಗಿ ತಿಳಿಸುತ್ತೇನೆ. ಬಿಜೆಪಿಯ ಮುಖಂಡರು ನನ್ನನ್ನು ನೇರವಾಗಿ ಸಂಪರ್ಕ ಮಾಡಲಿಲ್ಲ. ಆದರೆ, ನನ್ನ ಸ್ನೇಹಿತರನ್ನು ಬಿಜೆಪಿ ನಾಯಕರು ಸಂಪರ್ಕಿಸಿದ್ದು ನಿಜ. ಬಿಜೆಪಿ ಹೋಗುವ ಬಗ್ಗೆ ನಾನು ಈವರೆಗೂ ಏನೂ ನಿರ್ಧಾರ ಮಾಡಲಿಲ್ಲ - ಎಂಟಿಬಿ ನಾಗರಾಜು.
ರಮೇಶ್ ಜಾರಕಿಹೊಳಿ ಜೊತೆ ಮಾತನಾಡಿದ್ದೇನೆ
ರಮೇಶ್ ಜಾರಕಿಹೊಳಿ ಜೊತೆ ಮಾತನಾಡಿದ್ದೇನೆ, ನೋಡೋಣ ಈ ತಿಂಗಳ ಮೂವತ್ತನೇ ತಾರೀಕಿಗೆ ಸಂಪುಟ ವಿಸ್ತರಣೆಯಾಗುತ್ತದೆ, ನಿಗಮ ಮಂಡಳಿಗೆ ನೇಮಕವಾಗುತ್ತದೆ. ಆಮೇಲೆ ನೋಡೋಣ ಎಂದಿದ್ದಾರೆ. ನಾನು ಮೂರು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದು ನನ್ನ ಸ್ವಂತ ಶಕ್ತಿಯಿಂದನೇ, ಹೊರತು ಕಾಂಗ್ರೆಸ್ ಹೆಸರಿನಿಂದಲ್ಲ ಎಂದು ಎಂಟಿಬಿ ನಾಗರಾಜು ಕಿಡಿಕಾರಿದ್ದಾರೆ.
ಬಿಜೆಪಿಯಿಂದ ಡಿಸಿಎಂ ಆಫರ್, ಜಾರಕಿಹೊಳಿ ಸಿಡಿಸಿದ ಹೊಸ ಬಾಂಬ್!
ಸಿದ್ದರಾಮಯ್ಯನವರನ್ನು ಕುಮಾರಸ್ವಾಮಿ ಕಡೆಗಣಿಸುತ್ತಿದ್ದಾರೆ
ನಾವು ಹೇಳಿದ ಯಾವುದೇ ಕೆಲಸಗಳು ಈ ಸಮ್ಮಿಶ್ರ ಸರ್ಕಾರದಲ್ಲಿ ಆಗುತ್ತಿಲ್ಲ. ಸಿದ್ದರಾಮಯ್ಯನವರನ್ನು ಕುಮಾರಸ್ವಾಮಿ ಕಡೆಗಣಿಸುತ್ತಿದ್ದು ಹೀಗಾಗಿ ಅವರ ಬೆಂಬಲಿಗರಿಗೂ ಸರ್ಕಾರದಲ್ಲಿ ಪ್ರಾಶಸ್ತ್ಯ ಸಿಗುತ್ತಿಲ್ಲ. ಜೆಡಿಎಸ್ ಶಾಸಕರು ಸರ್ಕಾರದ ಎಲ್ಲಾ ಇಲಾಖೆಯಲ್ಲಿ ಕೈ ಆಡಿಸುತ್ತಿದ್ದಾರೆ ಎನ್ನುವುದು ಎಂಟಿಬಿ ನಾಗರಾಜು ಅವರ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ.
'ಸೆ. 30ರೊಳಗೆ ಸಂಪುಟ ವಿಸ್ತರಿಸಿ, ಇಲ್ಲವೇ ನಮ್ಮ ದಾರಿ ನೋಡಿಕೊಳ್ಳುತ್ತೇವೆ'
ರಾಷ್ಟ್ರಪತಿ ಆಡಳಿತ ಬರುತ್ತದೆಯೇ ಹೊರತು, ಬಿಎಸ್ವೈ ಮುಖ್ಯಮಂತ್ರಿಯಾಗುವುದಿಲ್ಲ
ಈ ಎಲ್ಲಾ ವಿದ್ಯಮಾನಗಳ ನಡುವೆ, ಒಂದು ವೇಳೆ ಸರಕಾರ ಪತನಗೊಂಡರೆ, ರಾಷ್ಟ್ರಪತಿ ಆಡಳಿತ ಬರುತ್ತದೆಯೇ ಹೊರತು, ಯಡಿಯೂರಪ್ಪ ಮುಖ್ಯಮಂತ್ರಿಯಾಗುವುದಿಲ್ಲ ಎನ್ನುವ ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣನವರ ಹೇಳಿಕೆ, ಸಮ್ಮಿಶ್ರ ಸರಕಾರದ ದಿನಗಣನೆ ಆರಂಭವಾಗಿದೆಯೇ ಎನ್ನುವ ಪ್ರಶ್ನೆ ಮೂಡುವಂತೆ ಮಾಡಿದೆ.