ಇಸ್ಲಾಂಗೂ ಮೊದಲೇ ಇದ್ದ ಹಿಜಾಬ್, ಕುರಾನ್ ಪ್ರಕಾರ ಅದರ ಧಾರಣೆ ಕಡ್ಡಾಯ: ವಕೀಲ ಧರ್
ಬೆಂಗಳೂರು, ಫೆಬ್ರವರಿ 24: ''ಇಸ್ಲಾಂ ಧರ್ಮ ಉದಯಕ್ಕೂ ಮುನ್ನವೇ ಹಿಜಾಬ್ ಇತ್ತು, ಕುರಾನ್ ಪ್ರಕಾರ ಹಿಜಾಬ್ ಧಾರಣೆ ಅತ್ಯಂತ ಪವಿತ್ರ ಮತ್ತು ಕಡ್ಡಾಯವಾಗಿದೆ,'' ಎಂದು ಅರ್ಜಿದಾರರ ಪರ ವಕೀಲ ಎ.ಎಂ.ಧರ್ ವಾದ ಮಂಡಿಸಿದರು.
ಸಮವಸ್ತ್ರದ ಜತೆ ಹಿಜಾಬ್ಗೆ ಅನುಮತಿ ಕೋರಿ ಸಲ್ಲಿಸಿರುವ ಅರ್ಜಿಗಳ ಕುರಿತು ಸಿಜೆ ರಿತುರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್, ನ್ಯಾ.ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ರ ಅವರಿದ್ದ ಪೂರ್ಣಪೀಠ ಗುರುವಾರ ವಿಚಾರಣೆಯನ್ನು ನಡೆಸಿತು.
ಗುರುವಾರ ಅರ್ಜಿದಾರರು, ಪ್ರತಿವಾದಿಗಳ ಒಂದು ಸುತ್ತಿನ ವಾದ ಆಲಿಕೆ ಪೂರ್ಣಗೊಳಿಸಿದ ನ್ಯಾಯಪೀಠ, ಬಳಿಕ ವಿಚಾರಣೆಯನ್ನು ಶುಕ್ರವಾರ ಮಧ್ಯಾಹ್ನ 2.30ಕ್ಕೆ ಮುಂದೂಡಿತು.
ಹಿಜಾಬ್ ಧಾರಣೆ ಕಡ್ಡಾಯಗೊಳಿಸುವ ವಾದ ಪುರಸ್ಕರಿಸಬಾರದು: ಎಜಿ
ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಎ.ಎಂ.ಧರ್, ಹಿಜಾಬ್ ಎನ್ನುವುದು ಇಸ್ಲಾಂಗಿಂತ ಮೊದಲೇ ಜಾರಿಯಲ್ಲಿತ್ತು. ಕ್ರೈಸ್ತರೂ ಕೂಡಾ ತಲೆಯ ಮೇಲೆ ವಸ್ತ್ರ ಧರಿಸುತ್ತಿದ್ದರು. ತಲೆ, ಕೂದಲು, ಎದೆ ಭಾಗವನ್ನು ಕಡ್ಡಾಯವಾಗಿ ಮುಚ್ಚಬೇಕೆಂದು ಖುರಾನ್ನಲ್ಲಿ ಹೇಳಲಾಗಿದೆ. ಹೀಗಾಗಿ ಹಿಜಾಬ್ಗಾಗಿ ಅರ್ಜಿ ಸಲ್ಲಿಸಿದ್ದಾರೆ. ವಿದ್ಯಾರ್ಥಿನಿಯರು ಬುರ್ಖಾ ತೊಡಲು ಅವಕಾಶ ಕೋರುತ್ತಿಲ್ಲ ಎಂದರು.
ಖುರಾನ್ನ ಎರಡು ಸುರಾಗಳನ್ನು ಪರಿಶೀಲಿಸಬೇಕು. ನಾಲ್ಕು ರೀತಿಯ ವಸ್ತ್ರಗಳನ್ನು ಉಲ್ಲೇಖಿಸಲಾಗಿದೆ. ಬುರ್ಖಾ, ಅಭೇಯ್, ಹೆರಾಮ್, ಹಿಜ್ರಿಗಳನ್ನು ಉಲ್ಲೇಖಿಸಲಾಗಿದೆ. ಖುರಾನ್ ಬಗ್ಗೆ ಯಾರೂ ಸರಿಯಾಗಿ ವಾದಿಸಿಲ್ಲ. ನಾನು ಓದಿರುವುದರಿಂದ ತಪ್ಪು ದಾರಿಗೆಳೆಯದೇ ವಾದ ಮಂಡಿಸುತ್ತೇನೆ. ಹದೀತ್ ಮತ್ತು ಸುನ್ನಾದಲ್ಲಿರುವ ಅಂಶಗಳನ್ನು ಪಾಲಿಸಲೇಬೇಕು. ಇಷ್ಟು ದೊಡ್ಡ ರಾಷ್ಟ್ರಕ್ಕೆ ಹಿಜಾಬ್ ಸಣ್ಣ ವಿಚಾರ. ಹಿಜಾಬ್ ಧರಿಸಲು ಅನುಮತಿ ನೀಡಬೇಕು. ಮಹಿಳೆಯರಿಗೆ ತಲೆ, ಮುಖ, ಎದೆ ಮುಚ್ಚುವುದು ಅತ್ಯಗತ್ಯ. ನೈತಿಕತೆ ಕಾಪಾಡಲು ಇದು ಅತ್ಯಗತ್ಯ ಎಂದು ಹೇಳಿದರು.
"ಭಾರತದಲ್ಲಿ ಇಸ್ಲಾಂ ಎರಡನೇ ದೊಡ್ಡ ಧರ್ಮವಾಗಿದೆ. ಇಂಡೋನೇಷ್ಯಾದಲ್ಲಿ ಮೊದಲು ಹಿಂದೂ ಧರ್ಮವಿತ್ತು. ಇಂಡೋನೇಷಿಯಾ ನಂತರ ಮುಸ್ಲಿಂ ರಾಷ್ಟ್ರವಾಯಿತು. ಆದರೂ ಪ್ರವಾದಿಗಳು ಹಿಂದೂ ಸಂಪ್ರದಾಯ ಆಚರಿಸಲು ಅನುಮತಿ ನೀಡಿದ್ದರು. ಪ್ರವಾದಿಗಳು ಅಷ್ಟು ವಿಶಾಲ ಹೃದಯದವರಾಗಿದ್ದರು. ಕೂದಲು, ಮುಖ, ಎದೆ ಭಾಗ ಮುಚ್ಚುವುದು ನಮ್ಮ ಧರ್ಮದ ಅತ್ಯಗತ್ಯ ಭಾಗವಾಗಿವೆ. ಹಜ್ ಯಾತ್ರೆಯ ವೇಳೆಯೂ ಇವುಗಳನ್ನು ಮುಚ್ಚುವುದು ಅತ್ಯಗತ್ಯ'' ಎಂದು ವಾದಿಸಿದರು.
ವಾದ ಮಂಡನೆಗೂ ಮುಗಿಸುವ ಮುನ್ನ ಧರ್, ''ಭಾರತ ಹಿಂದೂ ರಾಷ್ಟ್ರವಲ್ಲ, ಮುಸ್ಲಿಂ ರಿಪಬ್ಲಿಕ್ ಕೂಡಾ ಅಲ್ಲ. ಇದು ಜಾತ್ಯಾತೀತ ರಾಷ್ಟ್ರ. ಇದು ನಮ್ಮ ಜೀವನ, ಮರಣದ ಪ್ರಶ್ನೆ. ನಾವು ಹಿಜಾಬ್ ಬಿಡಲು ಸಾಧ್ಯವಿಲ್ಲ. ಇದು ಮುಸ್ಲಿಂ ವಿದ್ಯಾರ್ಥಿನಿಯರ ಶಿಕ್ಷಣದ ಪ್ರಶ್ನೆ, ಹಾಗಾಗಿ ನ್ಯಾಯಾಲಯ ಎಲ್ಲ ಅಂಶಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಬೇಕು,'' ಎಂದು ಹೇಳಿದರು.
ಹಿಜಾಬ್ ಧಾರಣೆ ಮೂಲಭೂತ ಹಕ್ಕು:
ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲೆ ಕೀರ್ತಿ ಸಿಂಗ್, ಹಿಜಾಬ್ ಧರಿಸುವುದು ಮೂಲಭೂತ ಹಕ್ಕಾಗಿದೆ. ವಿದ್ಯಾರ್ಥಿನಿಯರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಡ್ಡಿಯಾಗಬಾರದು ಎಂದರು.
ಹಿಜಾಬ್ ಅರ್ಜಿ; ಹೈಕೋರ್ಟ್ನಲ್ಲಿ 11ನೇ ದಿನದ ವಿಚಾರಣೆ
ಆಗ ನ್ಯಾಯಾಲಯ, ಈಗಾಗಲೇ ವಿದ್ಯಾರ್ಥಿನಿಯರ ಪರ ವಾದಮಂಡನೆ ಆಗಿದೆ. ದೇಶ, ವಿದೇಶಗಳ ತೀರ್ಪುಗಳನ್ನು ಕೋರ್ಟ್ ಗೆ ನೀಡಿದ್ದಾರೆ. ಈಗ ಮತ್ತೆ ಇತರರ ವಾದಮಂಡನೆ ಕೇಳುವ ಅಗತ್ಯವಿಲ್ಲ ಎಂದರು.
ಉಪನ್ಯಾಸಕರ ಪರ ವಕೀಲ ಗುರು ಕೃಷ್ಣಕುಮಾರ್ ವಾದ ಮಂಡಿಸಿ, ವಿದ್ಯಾರ್ಥಿಗಳಿಗೆ ತಾರತಮ್ಯರಹಿತ ಶಿಕ್ಷಣಕ್ಕಾಗಿ ಸಮವಸ್ತ್ರ ಮಾಡಲಾಗಿದೆ. ಸಮವಸ್ತ್ರ ನಿಯಮವನ್ನು ಸಂವಿಧಾನದ 25(1) ಆಧರಿಸಿ ಪ್ರಶ್ನಿಸಬಾರದು. ಜಾತಿ, ಧರ್ಮ, ಅಂತಸ್ತುಗಳ ತಾರತಮ್ಯ ಇರಬಾರದು ಎಂದರು.
ದಾಖಲೆ ಸಲ್ಲಿಸುವೆ: ಎಜಿ
ವಿಚಾರಣೆ ಆರಂಭವಾಗುತ್ತಿದ್ದಂತೆಯೇ ಸರ್ಕಾರದ ಪರ ಎಜಿ ಪ್ರಭುಲಿಂಗ್ ನಾವದಗಿ ವಾದ ಮಂಡಿಸಿ, ಶಿಕ್ಷಕರ ದೂರಿನ ಮೇರೆಗೆ ಒಂದು ಎಫ್ಐಆರ್ ದಾಖಲಾಗಿದೆ. ಆ ದಾಖಲೆ ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
ದಿನದ ವಿಚಾರಣೆ ಕೊನೆಯಲ್ಲಿ ಹಿರಿಯ ನ್ಯಾಯವಾದಿ ದೇವದತ್ ಕಾಮತ್, ಹಿಜಾಬ್ ಇಸ್ಲಾಂನ ಅತ್ಯಗತ್ಯ ಪದ್ದತಿ. ಅದನ್ನು ಧರಿಸಲು ಅವಕಾಶ ನೀಡಬೇಕು. ಇಲ್ಲವಾದರೆ ವಿದ್ಯಾರ್ಥಿನಿಯರ ಶೈಕ್ಷಣಿಕ ಹಕ್ಕು ಕಸಿದುಕೊಂಡಂತಾಗುತ್ತದೆ ಎಂದರು.
ನಾಳೆ ವಿಚಾರಣೆ ಮುಕ್ತಾಯ: ಶುಕ್ರವಾರ ವಿಚಾರಣೆ ಮುಕ್ತಾಯಗೊಳಿಸಲಾಗುವುದು ಎಂದು ಸಿಜೆ ಹೇಳಿದರು. ಆನಂತರ ಎಲ್ಲ ವಾದಿಗಳು, ಪ್ರತಿವಾದಿಗಳು ಲಿಖಿತ ವಾದಾಂಶವನ್ನು ಮಂಡಿಸಬೇಕು ಎಂದು ಸೂಚಿಸಿದರು.