ಹಿಜಾಬ್ ಅರ್ಜಿ; ಹಿಜಾಬ್ ಧರಿಸುವುದು ಕಡ್ಡಾಯ, ಆಯ್ಕೆ ಸುಧೀರ್ಘ ವಾದ
ಬೆಂಗಳೂರು, ಫೆಬ್ರವರಿ 22; ಹಿಜಾಬ್ ಧರಿಸಲು ಅನುಮತಿ ಕೋರಿದ್ದ ಉಡುಪಿಯ ವಿದ್ಯಾರ್ಥಿಗಳ ಅರ್ಜಿ ಮತ್ತು ಇದೇ ವಿಚಾರದಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳ 9ನೇ ದಿನದ ವಿಚಾರಣೆ ಕರ್ನಾಟಕ ಹೈಕೋರ್ಟ್ನಲ್ಲಿ ಮಂಗಳವಾರ ಮುಂದುವರೆದಿದೆ.
ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ ನೇತೃತ್ವದ ಪೀಠದಲ್ಲಿ ಒಂದು ವಾರದಿಂದ ಅರ್ಜಿಗಳ ವಿಚಾರಣೆ ನಡೆಯುತ್ತಿದೆ. ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್, ನ್ಯಾಯಮೂರ್ತಿ ಖಾಜಿ ಜೈಬುನ್ನಿಸಾ ಮೊಹಿದ್ದೀನ್ ಅವರು ಸಹ ತ್ರಿ ಸದಸ್ಯ ಪೀಠದಲ್ಲಿದ್ದಾರೆ.
ಸೋಮವಾರ ಕರ್ನಾಟಕ ಸರ್ಕಾರದ ಪರವಾಗಿ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಸುಧೀರ್ಘವಾದ ಮಂಡನೆ ಮಾಡಿದರು. ಹಿಜಾಬ್ ಆಯ್ಕೆಯೇ ಹೊರತು ಕಡ್ಡಾಯವಲ್ಲ ಎಂದು ವಿವಿಧ ಕೋರ್ಟ್ ತೀರ್ಪುಗಳನ್ನು ಉಲ್ಲೇಖಿಸಿ ವಾದ ಮಂಡಿಸಿದರು.

ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ ನೇತೃತ್ವದ ಪೀಠದಲ್ಲಿ ವಾದ ಆಲಿಸಿ ಮಂಗಳವಾರಕ್ಕೆ ವಿಚಾರಣೆ ಮುಂದೂಡಿತ್ತು.
* ಅರ್ಜಿ ವಿಚಾರಣೆಯನ್ನು ಬುಧವಾರ ಮಧ್ಯಾಹ್ನ 2.30ಕ್ಕೆ ಮುಂದೂಡಿದ ಹೈಕೋರ್ಟ್
* ವಕೀಲ ಎಸ್. ಎಸ್. ನಾಗಾನಂದ ವಾದ ಮಂಡನೆ ಆರಂಭಿಸಿದರು.
* ಕುರಾನ್ನಲ್ಲಿನ ಅಂಶಗಳ ಬಗ್ಗೆ ನನ್ನ ತಕರಾರು ಇಲ್ಲ. ಕುರಾನ್ ಅಂಶಗಳನ್ನು ಅನುಸರಿಸಲು ಅವರು ಸ್ವತಂತ್ರರು. ಆದರೆ ಶಾಲೆಯಲ್ಲಿ ಧರ್ಮದ ಆಚರಣೆ ಬೇಡ ಎಂದು ಆರ್. ವೆಂಕಟರಮಣಿ ವಾದ ಮಂಡಿಸಿದರು.
* ಆಡಳಿತ ಎಂಬುದು ಬಹಳ ದೊಡ್ಡ ವಿಚಾರ. ಆಡಳಿತ ಹೇಗೆ ನಡೆಸಬೇಕು? ಎಂದು ಕೋರ್ಟ್ ಹೇಳಲಾಗುವುದಿಲ್ಲ. ಯಾವುದೇ ಹಕ್ಕುಗಳು ಉಲ್ಲಂಘನೆಯಾದರೆ ಆಡಳಿತ ಮಧ್ಯಪ್ರವೇಶ ಮಾಡಲಿದೆ.
* ಸಾರ್ವಜನಿಕ ಸ್ಥಳಕ್ಕಿಂತ ತರಗತಿ ಪ್ರಮುಖವಾದದ್ದು. ತರಗತಿಯಲ್ಲಿ ಎಲ್ಲಾ ವಿದ್ಯಾರ್ಥಿಗಳ ಮನಸ್ಸು ಒಂದಾಗಿರಬೇಕು. ಯಾವುದೇ ಧರ್ಮ ದೊಡ್ಡದು, ಚಿಕ್ಕದು ಎಂಬ ಭಾವನೆ ಇರಬಾರದು. ಮಕ್ಕಳಿಗೆ ಸ್ವತಂತ್ರ್ಯ ಭಾವನೆ ಇರಬೇಕು ಎಂದು ಬಯಸುತ್ತೇನೆ ಎಂದು ಆರ್. ವೆಂಕಟರಮಣಿ ವಾದ ಮಂಡಿಸಿದರು.
* ಉಡುಪಿ ಪಿಯು ಕಾಲೇಜು ಶಿಕ್ಷಕರ ಪರವಾಗಿ ಆರ್. ವೆಂಕಟರಮಣಿ ವಾದ ಮಂಡನೆ ಆರಂಭಿಸಿದ್ದಾರೆ.
* ಕರ್ನಾಟಕ ಸರ್ಕಾರದ ಪರವಾದ ವಾದವನ್ನು ಎಜಿ ಪೂರ್ಣಗೊಳಿಸಿದರು. ಉಳಿದ ಅರ್ಜಿದಾರರ ವಾದವನ್ನು ನ್ಯಾಯಪೀಠ ಆಲಿಸುತ್ತಿದೆ.
*ಎಲ್ಲಾ ಅರ್ಜಿದಾರರು 10 ನಿಮಿಷದಲ್ಲಿ ವಾದ ಮಂಡನೆ ಮುಗಿಸಬೇಕು. ಹೆಚ್ಚು ಸಮಯ ತೆಗೆದುಕೊಳ್ಳಬಾರದು ಎಂದು ಮುಖ್ಯ ನ್ಯಾಯಮೂರ್ತಿಗಳು ಮೌಖಿಕ ಸೂಚನೆ ನೀಡಿದರು.
Recommended Video
* ನಾವು ಹಿಜಾಬ್ ನಿರ್ಬಂಧಿಸಿಲ್ಲ. ಧರ್ಮದ ಆಧಾರದಲ್ಲಿ ಸರ್ಕಾರ ತಾರತಮ್ಯ ಮಾಡಿಲ್ಲ. ಅಲ್ಪ ಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ಯಾವುದೇ ಆದೇಶ ನೀಡಿಲ್ಲ ಎಂದು ಎಜಿ ವಾದ ಮಂಡಿಸಿದರು.
* ಹಿಜಾಬ್ ಧರಿಸುವುದು ಕಡ್ಡಾಯಗೊಳಿಸಬಾರದು. ಅದನ್ನು ಮಹಿಳೆಯರ ವಿವೇಚನೆಗೆ ಬಿಡಬೇಕು. ಇಚ್ಛೆ ಬಂದ ಉಡುಪು ಧರಿಸುವ ಅವಕಾಶ ಅವರಿಗೆ ಇದೆ ಎಂದು ಎಜಿ ವಾದ ಮಂಡಿಸಿದರು. ಆದರೆ ಅರ್ಜಿದಾರರು ಕಡ್ಡಾಯಗೊಳಿಸಬೇಕು ಎಂದು ಮನವಿ ಮಾಡುತ್ತಿದ್ದಾರೆ ಎಂದರು.
* ಶಬರಿಮಲೆ ತೀರ್ಪಿನ ಬಳಿಕ ಹಿಜಾಬ್ ಕಡ್ಡಾಯ ಎಂದು ಒಪ್ಪಲು ಸಾಧ್ಯವಿಲ್ಲ. ಆದರೆ ಅರ್ಜಿದಾರರು ಕೋರ್ಟ್ನಿಂದಲೇ ಕಡ್ಡಾಯದ ಆದೇಶ ಕೇಳುತ್ತಿದ್ದಾರೆ. ಸ್ವ ಇಚ್ಛೆಯಿಂದ ಹಾಕುವುದು ಅಭಿವ್ಯಕ್ತಿ ಸ್ವಾತಂತ್ರ್ಯವಾಗಬಹುದು. ಕಡ್ಡಾಯ ಎಂದು ಕೋರ್ಟ್ ಹೇಳಿದರೆ ಹಿಬಾಜ್ ಧರಿಸಲು ಬಯಸದ ಮಹಿಳೆಯರಿಗೆ ಸಮಸ್ಯೆ ಆಗಬಹುದು ಎಂದು ಎಜಿ ವಾದಿಸಿದರು.
* ಮಹಿಳೆಯರು ಪರ ಪುರುಷರಿಗೆ ಅಂಗಾಂಗ ತೋರಿಸುವಂತಿಲ್ಲ ಎಂಬ ಉಲ್ಲೇಖವಿದೆ. ಅದಕ್ಕಾಗಿ ಉದ್ದನೆಯ ಗೌನ್ ಉಲ್ಲೇಖ ಮಾಡಲಾಗಿದೆ. ಹಿಜಾಬ್ ಅನ್ನು ಸೂಚಿಸಿಲ್ಲ ಎಂದು ಎಜಿ ವಾದ ಮಂಡಿಸಿದರು.
* ಅಬ್ದುಲ್ಲಾ ಯೂಸೂಫ್ ಅಲಿ ಪುಸ್ತಕದಲ್ಲಿ ಹಿಜಾಬ್ ಉಲ್ಲೇಖವಿಲ್ಲ. ಸುರಾ 24 ವಚನ 31 ಅನ್ನು ಅರ್ಜಿದಾರರು ಉಲ್ಲೇಖಿಸಿದ್ದಾರೆ. ಸುರಾ 33 ವಚನ 59 ಪರಿಶೀಲಿಸಬೇಕು ಎಂದು ಎಜಿ ವಾದ ಮಂಡಿಸಿದರು.
* ನ್ಯಾಯಮೂರ್ತಿ ಚಂದ್ರಚೂಡ್ ಷಾ ಬಾನು ಪ್ರಕರಣದಲ್ಲಿ ಉಲ್ಲೇಖವಾದ ಪುಸ್ತಕಗಳನ್ನು ಉಲ್ಲೇಖಿಸಿ ವಾದ ಮಾಡುತ್ತಿದ್ದೇನೆ. ಸುಪ್ರೀಂಕೋರ್ಟ್ ಎರಡು ಪುಸ್ತಕಗಳನ್ನು ಪರಿಗಣಿಸಿದೆ ಎಂದು ಎಜಿ ವಾದ ಮಂಡಿಸಿದರು.
* ಸುರಾ 17 ವಚನ 2, 17 ಉಲ್ಲೇಖಿಸಿ ವಾದ ಮಾಡುವಾಗ ನಾನು ಕುರಾನ್ ತಜ್ಞನಲ್ಲ ಇಂಗ್ಲಿಶ್ ಭಾಷಾಂತರದ ಆಧಾರದ ಮೇಲೆ ವಾದ ಮಂಡಿಸುತ್ತೇನೆ ಎಂದು ಎಜಿ ಹೇಳಿದರು. ಪಾಕಿಸ್ತಾನದ ವಕೀಲ ಅಬ್ದುಲ್ಲಾ ಯೂಸೂಫ್ ಅಲಿ ಭಾಷಾಂತರ ಮಾಡಿದ ಪುಸ್ತಕ ಉಲ್ಲೇಖ ಎಂದು ಕೋರ್ಟ್ಗೆ ಮಾಹಿತಿ ನೀಡಿದರು.
* ಫ್ರಾನ್ಸ್ನಲ್ಲಿ ಹಿಜಾಬ್ ಸಂಪೂರ್ಣ ನಿಷೇಧವಿದೆ. ಫ್ರಾನ್ಸ್ ಆಗಲಿ, ಭಾರತವಾಗಲಿ ಇಸ್ಲಾಂ ಎಲ್ಲಾ ಕಡೆ ಒಂದೇ. ಹಿಜಾಬ್ ಇಲ್ಲದೆಯೂ ಇಸ್ಲಾಂಗೆ ಅಸ್ತಿತ್ವವಿದೆ. ಆದ್ದರಿಂದ ಫ್ರಾನ್ಸ್ ಉದಾಹರಣೆ ನೀಡಿದ್ದೇನೆ ಎಂದು ಎಜಿ ವಾದ ಮಂಡಿಸಿದರು.
* ಸಮವಸ್ತ್ರ ಹೊರತುಪಡಿಸಿ ಇತರೆ ಧಾರ್ಮಿಕ ಗುರುತು ಧರಿಸಬಾರದು. ಎಲ್ಲಾ ಧರ್ಮದವರಿಗೂ ನ್ಯಾಯಬದ್ಧ ನಿರ್ಬಂಧ ವಿಧಿಸಲಾಗಿದೆ. ತರಗತಿ ನಂತರ ಹಿಜಾಬ್ ಧರಿಸಲು ಅವಕಾಶವಿದೆ ಎಂದು ಎಜಿ ವಾದ ಮಂಡನೆ ಮಾಡಿದರು.
* ಹಿಜಾಬ್ ಧರಿಸಲು ಅವಕಾಶ ಕೇಳಿದರೆ 19 (1) ಅನುಮತಿ ನೀಡುತ್ತೀರಾ? ಎಂದು ಮುಖ್ಯ ನ್ಯಾಯಮೂರ್ತಿಗಳು ಪ್ರಶ್ನೆ ಮಾಡಿದರು. ಸಂವಿಧಾನದ 19 (2) ನಿಯಮಗಳ ಅನ್ವಯ ಇದಕ್ಕೆ ಅವಕಾಶವಿದೆ ಎಂದು ಎಜಿ ವಾದ ಮಂಡಿಸಿದರು.
* ಗೋ ಹತ್ಯೆಗೆ ಅನುಮತಿ ಕೋರಿ ಸುಪ್ರೀಂಕೋರ್ಟ್ಗೆ ಅರ್ಜಿಯೊಂದು ಸಲ್ಲಿಕೆಯಾಗಿತ್ತು. ಧಾರ್ಮಿಕ ಅಗತ್ಯವೆಂದು, ಇಸ್ಲಾಂನಲ್ಲಿ ಅಗತ್ಯ ಎಂದು ಹೇಳಲಾಗಿದೆ ಎಂದು ವಾದ ಮಂಡನೆ ಮಾಡಲಾಗಿತ್ತು. ಆದರೆ ಆಚರಣೆ ಕಡ್ಡಾಯ ಎಂದ ಪೂರಕ ದಾಖಲೆ ಸಲ್ಲಿಕೆ ಮಾಡಿರಲಿಲ್ಲ. ಆದ್ದರಿಂದ ಕೋರ್ಟ್ ಅನುಮತಿ ನೀಡಿರಲಿಲ್ಲ ಎಂದು ಎಜಿ ವಾದ ಮಂಡಿಸಿದರು.
* ಧರ್ಮದ ಮೂಲ ಅಂಶವಾಗಿದ್ದರೆ ಆಚರಣೆ ಕಡ್ಡಾಯ. ಸಂವಿಧಾನದ ಅಭಿವ್ಯಕ್ತಿ ಸ್ವಾತಂತ್ರ್ಯದ ಅಡಿಯೂ ವಾದಿಸಲಾಗಿದೆ. ಅವರ ವಾದ ಒಪ್ಪಿದರೆ ಹಿಜಾಬ್ ಹಾಕದಿರುವುದು ಕಡ್ಡಾಯವಲ್ಲ ಎಂದಾಗಲಿದೆ.
* ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಇಂದು ವಾದ ಮಂಡನೆ ಮುಗಿಸುತ್ತೇನೆ ಎಂದು ವಾದ ಮಂಡನೆ ಆರಂಭಿಸಿದರು.
* ಅರ್ಜಿ ವಿಚಾರಣೆ ಆರಂಭಗೊಂಡಾಗ ಮುಖ್ಯ ನ್ಯಾಯಮೂರ್ತಿಗಳು ಈ ವಾರ ವಾದ ಮಂಡನೆ ಪೂರ್ಣಗೊಳ್ಳಬೇಕು ಎಂದು ಸೂಚನೆ ನೀಡಿದರು.
* ಮಂಗಳವಾರದ ವಿಚಾರಣೆ ಆರಂಭಗೊಂಡಾಗ ಕೆಲ ಖಾಸಗಿ ಕಾಲೇಜುಗಳು, ವಿದ್ಯಾರ್ಥಿಗಳು ಮಧ್ಯಂತರ ಆದೇಶದ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಅರ್ಜಿ ಸಲ್ಲಿಸಿದರು.
* ಕೋರ್ಟ್ ಹಾಲ್ ನಂಬರ್ 1ರಲ್ಲಿ ವಿಚಾರಣೆ ಆರಂಭವಾಗಿದೆ. ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಆಗಮಿಸಿದ್ದಾರೆ.












Click it and Unblock the Notifications