ಹಿಜಾಬ್ ಅರ್ಜಿ ವಿಚಾರಣೆ ಫೆ.18ಕ್ಕೆ ಮುಂದೂಡಿದ ಹೈಕೋರ್ಟ್
ಬೆಂಗಳೂರು, ಫೆಬ್ರವರಿ 17: ಹಿಜಾಬ್ ಧರಿಸಲು ಅವಕಾಶ ನೀಡುವಂತೆ ಕೋರಿ ವಿದ್ಯಾರ್ಥಿನಿಯರು ರಾಜ್ಯ ಹೈಕೋರ್ಟ್ನಲ್ಲಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ತ್ರಿಸದಸ್ಯ ಪೀಠದಲ್ಲಿ ಇಂದು ಆರಂಭಗೊಂಡಿದೆ. ಇದೇ ವೇಳೆ ಅರ್ಜಿ ಪರ ಮತ್ತು ವಿರುದ್ದವಾಗಿ ವಕೀಲರ ವಾದ ಪ್ರತಿವಾದ ಮುಂದುವರೆದಿದೆ. ಇದೇ ವೇಳೆ ನ್ಯಾಯಪೀಠದತ್ತ ಎರಡು ಕಡೆಗಳ ವಕೀಲರು ಕೆಲವು ಮಹತ್ವದ ಮಾಹಿತಿಗಳನ್ನು ತಿಳಿಸಿದರು. ಹಿಜಾಬ್ ವಿಚಾರಣೆ ಮಾಹಿತಿ, ಅಪ್ಡೇಟ್ಸ್ ಇಲ್ಲಿದೆ..
ಸಮವಸ್ತ್ರದ ಜತೆ ಹಿಜಾಬ್ಗೆ ಅನುಮತಿ ವಿಚಾರವಾಗಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಹೈಕೋರ್ಟ್ ತ್ರಿಸದಸ್ಯ ಪೀಠದಲ್ಲಿ ಸತತ ಆರನೇ ದಿನವಾದ ಇಂದು ಮತ್ತೆ ಆರಂಭವಾಗಿದೆ.
ಅಪ್ಡೇಟ್ಸ್:
*
ವಕೀಲ
ಶಾದಾದ್
ಮಾತನಾಡಿ:
ಭಾರತವು
ಸಹಿ
ಮಾಡಿರುವ
ವಿಶ್ವಸಂಸ್ಥೆಯ
ಮಕ್ಕಳ
ಸಮಾವೇಶವು
ಕೆಲವು
ಹಕ್ಕುಗಳನ್ನು
ಗುರುತಿಸುತ್ತದೆ
ಎಂದರು
* ವಕೀಲ ಆದಿತ್ಯ ಚಟರ್ಜಿ ಅವರು ಸಲ್ಲಿಸಿದ ಹೊಸ ಅರ್ಜಿಯನ್ನು ಉಲ್ಲೇಖಿಸಿದ್ದಾರೆ. ಎಜಿ: ಈಗ ಎರಡು ಅರ್ಜಿಗಳನ್ನು ಸಲ್ಲಿಸಲಾಗಿದೆ, ಅರ್ಜಿಯನ್ನು ಖಾಸಗಿ ವಿದ್ಯಾಸಂಸ್ಥೆಯವರು ಸಲ್ಲಿಸಿದ್ದು, ಸರ್ಕಾರದ ಆದೇಶವನ್ನು ಪ್ರಶ್ನಿಸಿದ್ದಾರೆ ಎಂದರು.
ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಹಾಗೂ ನ್ಯಾ. ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ರ ವಿಸ್ತೃತ ಪೀಠ ವಿಚಾರಣೆ ಆರಂಭಿಸಿದ್ದು, ಇಂದೇ ಅಂತಿಮ ತೀರ್ಪು ಪ್ರಕಟವಾಗುತ್ತಾ ಎನ್ನುವ ಕುತೂಹಲ ಎಲ್ಲರಲ್ಲೂ ಮೂಡಿದೆ.
ಒಂದು ಅರ್ಜಿಗೆ ಒಬ್ಬರೇ ವಾದಿಸಬೇಕು. ಒಂದೇ ವಾದವನ್ನು ಪುನರಾವರ್ತನೆ ಮಾಡಬಾರದು. ಎಲ್ಲಾ ಮಧ್ಯಂತರ ಅರ್ಜಿ ವಿಚಾರಣೆ ಅಗತ್ಯವಿಲ್ಲ. ಈ ಅರ್ಜಿಗಳಿಂದ ಕೋರ್ಟ್ ಸಮಯ ವ್ಯರ್ಥವಾಗುತ್ತಿದೆ ಎಂದು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ ತಿಳಿಸಿದ್ದಾರೆ.
ಕಾಲೇಜು ಅಭಿವೃದ್ಧಿ ಸಮಿತಿಗೆ ಸರ್ಕಾರದ ಅಧಿಕಾರ ಹಸ್ತಾಂತರವೇ ಕಾನೂನುಬಾಹಿರವಾಗಿದ್ದು, ವಸತಿ ಯೋಜನೆಯ ಫಲಾನುಭವಿ ಗುರುತಿಸಲು ಶಾಸಕರಿಗೆ ಅಧಿಕಾರ ನೀಡಲಾಗಿತ್ತು. ಈ ಬಗ್ಗೆ ಹೈಕೋರ್ಟ್ನಲ್ಲಿ ಪ್ರಶ್ನಿಸಿದಾಗ ಸರ್ಕಾರದ ಆದೇಶಕ್ಕೆ ತಡೆ ಸಿಕ್ಕಿದೆ. ಶಾಸಕರಾದವರಿಗೆ ಆಡಳಿತಾಧಿಕಾರ ನೀಡಬಾರದು. ನೀಡಿದರೆ ಅದು ಪ್ರಜಾಪ್ರಭುತ್ವದ ಮರಣಶಾಸನ ಆಗಲಿದೆ. ಯಾರೇ ಶಾಸಕರಾದರೂ ಅವರು ಪಕ್ಷದ ಪ್ರತಿನಿಧಿಯಾಗಿರುತ್ತಾರೆ. ಪಕ್ಷಕ್ಕೆ ಶಾಲೆಯ ಉಸ್ತುವಾರಿ ನೀಡುವುದು ಸರಿಯಲ್ಲ. ವಿದ್ಯಾರ್ಥಿಗಳ ಯೋಗ ಕ್ಷೇಮವನ್ನು ಶಾಸಕರು ನೋಡಿಕೊಳ್ಳಬಾರದು ಎಂದು ಹಿಜಾಬ್ ಅರ್ಜಿದಾರರ ಪರ ವಕೀಲ ರವಿವರ್ಮಕುಮಾರ್ ವಾದ ಮಂಡಿಸಿದ್ದರು.
* ಅಂತಾರಾಷ್ಟ್ರೀಯ ಒಪ್ಪಂದಗಳನ್ನು ತಪ್ಪಾಗಿ ಉಲ್ಲೇಖಿಸಿರುವ ವಕೀಲ ರಹಮತ್ ಉಲ್ಲಾಗೆ ಕೋರ್ಟ್ನ ಸಮಯ ವ್ಯರ್ಥ ಮಾಡುತ್ತಿದ್ದೀರಾ ಎಂದು ನ್ಯಾ. ಕೃಷ್ಣ ದೀಕ್ಷಿತ್ ಪ್ರಶ್ನೆ ಮಾಡಿದ್ದಾರೆ.
* ಸಾಮಾಜಿಕ ಕಾರ್ಯಕರ್ತ ಕೂಡಾ ಆಗಿರುವ ವಕೀಲ ರಹಮತ್ ಉಲ್ಲಾ ಸಲ್ಲಿಸಿದ್ದ ಪಿಐಎಲ್ ಅನ್ನು ನಿಯಮದಂತೆ ಅರ್ಜಿ ಸಲ್ಲಿಸದ ಕಾರಣ ವಜಾಗೊಳಿಸಿದ ಹೈಕೋರ್ಟ್ ವಿಸ್ತೃತ ಪೀಠ.
* ಮತ್ತೊಂದು ಪಿಐಎಲ್ ಸಲ್ಲಿಸಿರುವ ವಿನೋದ್ ಜಿ ಕುಲಕರ್ಣಿ ವಾದ ಮಂಡಿಸಿ, ಕನಿಷ್ಠ ಪಕ್ಷ ಶುಕ್ರವಾರದಂದು ಹಿಜಾಬ್ ಧರಿಸಲು ಅನುಮತಿ ಕೊಡಿ ಎಂದು ಮನವಿ ಮಾಡಿದರು.
* ಒಂದನೇ ಮನವಿಯಲ್ಲಿ ಸಮವಸ್ತ್ರ ಕೇಳಿದ್ದೀರಾ, ಎರಡನೇ ಮನವಿಯಲ್ಲಿ ಹಿಜಾಬ್ಗೆ ಅನುಮತಿ ಕೇಳಿದ್ದೀರಾ. ಒಂದಕ್ಕೊಂದು ವಿರುದ್ಧವಾಗಿದೆ ಎಂದು ಪಿಐಎಲ್ ಸಲ್ಲಿಸಿರುವ ವಿನೋದ್ ಕುಲಕಣಿಗೆ ಸಿಜೆ ತಿಳಿಸಿದರು.
* ಹಿಜಾಬ್ ಬಗ್ಗೆ ಖುರಾನ್ನಲ್ಲಿ ಎಲ್ಲಿ ಹೇಳಿದೆ? ಓದಿ ಹೇಳುತ್ತೀರಾ ಎಂದು ವಿನೋದ್ ಕುಲಕರ್ಣಿಗೆ ಸಿಜೆ ಕೇಳಿದರು. ಅದಕ್ಕೆ ಉತ್ತರಿಸಿದ ವಿನೋದ್ ಕುಲಕರ್ಣಿ ನನ್ನ ಬಳಿ ಈಗ ಖುರಾನ್ ಇಲ್ಲ, ಹಾಗಾಗಿ ಓದಲಾಗುವುದಿಲ್ಲ ಎಂದರು. ಆಗ ಸಿಜೆ ಮತ್ತೆ ಯಾಕೆ ಅರ್ಜಿಯಲ್ಲಿ ಉಲ್ಲೇಖಿಸುತ್ತೀರಾ ಎಂದು ಪ್ರಶ್ನಿಸಿದರು.
* ಹಿಜಾಬ್ ನಿರ್ಬಂಧಿಸಿದರೆ ಖುರಾನ್ ನಿರ್ಬಂಧಿಸಿದಂತೆ ಎಂದು ವಕೀಲ ವಿನೋದ್ ಕುಲಕರ್ಣಿ ವಾದಿಸಿದರು.
* ಈಗ ವಾದ ಮಂಡಿಸುತ್ತಿರುವ ಎ.ಎಂ. ಧರ್ ವಾದ ಮಂಡನೆ ಆರಂಭಿಸಿ, ಹಿಜಾಬ್ ಇಲ್ಲದೆ ಕಾಲೇಜಿಗೆ ಹೋಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು. ಆಗ ಸಿಜೆ, ನೀವು ಯಾವ ಕಾಲೇಜಿನಲ್ಲಿ ಓದುತ್ತಿದ್ದೀರಾ? ಎಂದು ಪ್ರಶ್ನಿಸಿದರು. ಈ ಅಂಶದ ಬಗ್ಗೆ ಅರ್ಜಿಯಲ್ಲಿ ಉಲ್ಲೇಖಿಸಿದ್ದೀರಾ ಎಂದು ಕೇಳಿದರು.
* ವಕೀಲ ಎ.ಎಂ. ಧರ್ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸಿಜೆ, ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅನುಮತಿ ನೀಡಿದರು.
* ಈಗ ಸರ್ಕಾರದ ಪರವಾಗಿ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವದಗಿ ಪ್ರತಿವಾದ ಮಂಡಿಸುತ್ತಿದ್ದಾರೆ.
* ನಾಳೆ ಸರ್ಕಾರದ ಪರವಾಗಿ ವಾದಿಸುತ್ತೇವೆ ಎಂದು ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವದಗಿ ತಿಳಿಸಿದರು. ಆಗ ತ್ರಿಸದಸ್ಯ ಪೀಠ, ಸರ್ಕಾರ ಆದೇಶ ಬದಲಿಸಬೇಕಿದ್ದರೆ ನೀವು ಸಮಯ ಕೇಳಿ ಎಂದು ತಿಳಿಸಿದರು.
* ಸರ್ಕಾರದ ಪರವಾಗಿ ವಾದ ಮಂಡಿಸಿದ ನಂತರ ನಾನು ವಾದ ಮಂಡಿಸುತ್ತೇನೆ ಎಂದು ಕಾಲೇಜು ಅಭಿವೃದ್ಧಿ ಸಮಿತಿ ಪರ ವಕೀಲ ಸಜನ್ ಪೂವಯ್ಯ ತಿಳಿಸಿದರು.
* ಮಧ್ಯಂತರ ಅರ್ಜಿದಾರರ ಪರ ಸುಭಾಷ್ ಝಾ ವಾದ ಮಂಡಿಸುತ್ತಿದ್ದು, ಒಂದು ಕಡೆಯ ವಾದ ಮಾತ್ರ ಕೇಳಲಾಗಿದೆ. ನನಗೆ ಅರ್ಧ ಗಂಟೆ ಸಮಯ ಕೊಡಿ ಎಂದು ವಿನಂತಿಸಿದರು.
* ಮಧ್ಯಂತರ ಅರ್ಜಿದಾರರ ವಾದ ಕೇಳಬೇಕೇ ನಿರ್ಧರಿಸಿಲ್ಲ. ಮೊದಲಿಗೆ ಅರ್ಜಿದಾರ, ಪ್ರತಿವಾದಿಗಳ ನಂತರ ವಾದ ಕೇಳುತ್ತೇವೆ ಎಂದು ಸಿಜೆ ಹೇಳಿದರು.
* ಈಗ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಪರವಾಗಿ ಜಿ.ಆರ್. ಮೋಹನ್ ವಾದ ಮಂಡನೆ. ಸರ್ಕಾರದ ಹಿಜಾಬ್ ನಿರ್ದೇಶನ ನಮಗೆ ಅನ್ವಯವಾಗುವುದಿಲ್ಲ ಎಂದು ವಾದಿಸಿದರು. ಈ ಬಗ್ಗೆ ರಿಟ್ ಅರ್ಜಿ ಸಲ್ಲಿಕೆ ಮಾಡಲಾಗಿದೆ ಎಂದು ತಿಳಿಸಿದರು.
* ಹಿಜಾಬ್ ಅರ್ಜಿ ವಿಚಾರಣೆ ನಾಳೆ ಮಧ್ಯಾಹ್ನ 2.30ಕ್ಕೆ ಮುಂದೂಡಿಕೆಯಾಗಿದೆ.