ಕಾರ್ತಿಕ್ ಗೌಡ ಪ್ರಕರಣ, ತೀರ್ಪು ಕಾಯ್ದಿರಿಸಿದ ಹೈಕೋರ್ಟ್
ಬೆಂಗಳೂರು, ಜ.8 : ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದ ಗೌಡರ ಪುತ್ರ ಕಾರ್ತಿಕ್ ಗೌಡ ಅವರು ನಟಿ ಮೈತ್ರಿಯಾ ಗೌಡ ತಮ್ಮ ವಿರುದ್ಧ ನೀಡಿರುವ ಅತ್ಯಾಚಾರದ ದೂರು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಪೂರ್ಣಗೊಳಿಸಿದ್ದು, ತೀರ್ಪು ಕಾಯ್ದಿರಿಸಿದೆ.
ಬುಧವಾರ ನ್ಯಾಯಮೂರ್ತಿ ಆರ್.ಬಿ.ಬೂದಿಹಾಳ್ ಅವರಿದ್ದ ನ್ಯಾಯಪೀಠ ಕಾರ್ತಿಕ್ ಗೌಡ ಅವರು ಸಲ್ಲಿಸಿರುವ ಅರ್ಜಿಯ ಅಂತಿಮ ವಿಚಾರಣೆಯನ್ನು ನಡೆಸಿತು ಮತ್ತು ತೀರ್ಪನ್ನು ಕಾಯ್ದಿರಿಸಿತು. ಕಾರ್ತಿಕ್ ಗೌಡ ಪರವಾಗಿ ವಾದ ಮಂಡನೆ ಮಾಡಿದ ಕೆ.ಎಂ.ನಟರಾಜ್ ಅವರು ದೂರಿನಲ್ಲಿ ಯಾವುದೇ ಹುರುಳಿಲ್ಲ. ಅವರು ನೀಡಿರುವ ದೂರಿನಲ್ಲೇ ದ್ವಂದ್ವ ನಿಲುವಿದೆ. ಇದು ಸುಳ್ಳು ದೂರು ಆಗಿದ್ದು, ರದ್ದುಗೊಳಿಸಬೇಕೆಂದು ಮನವಿ ಮಾಡಿದರು.

ಕಾರ್ತಿಕ್ ಗೌಡ ಅವರ ತಂದೆ ಪ್ರಭಾವಿ ರಾಜಕಾರಣಿ ಹಾಗೂ ಕೇಂದ್ರ ಸಚಿವರಾಗಿರುವುದರಿಂದ ಅವರ ಹೆಸರಿಗೆ ಮಸಿ ಬಳಿಯುವ ಉದ್ದೇಶದಿಂದ ಈ ರೀತಿಯ ದೂರು ನೀಡಲಾಗಿದೆ. ದೂರಿನಲ್ಲಿ ಆರೋಪಿಸಿದಂತೆ ಅತ್ಯಾಚಾರ ನಡೆದಿಲ್ಲ ದೂರನ್ನು ರದ್ದುಗೊಳಿಸಿ ಎಂದು ವಾದ ಮಂಡಿಸಿದರು. [ಗೌಡರ ಪದಚ್ಯುತಿಗೊಳಿಸಲು ರಾಷ್ಟ್ರಪತಿಗೆ ಮೈತ್ರಿಯಾ ಪತ್ರ]
ನಟಿ ಮೈತ್ರಿಯಾ ಗೌಡ ಮತ್ತು ಅರ್ಜಿದಾರ ಕಾರ್ತಿಕ್ ಗೌಡ ಪರಸ್ಪರ ಪ್ರೀತಿಸುತ್ತಿದ್ದರು. ಅರ್ಜಿದಾರರು ತಮ್ಮ ಕಕ್ಷಿದಾರರನ್ನು ಪ್ರೀತಿಸುತ್ತಿದ್ದರು, ಅವರು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದಾರೆ ಎಂದು ವಾದ ಮಂಡಿಸಿದ ಮೈತ್ರಿಯಾ ಗೌಡ ಪರ ವಕೀಲರು, ಅರ್ಜಿದಾರರೊಂದಿಗೆ ಗಂಟೆಗಟ್ಟಲೆ ದೂರವಾಣಿಯಲ್ಲಿ ಮಾತನಾಡಿರುವುದಕ್ಕೆ ದಾಖಲೆ ಇದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು. [ಮೈತ್ರಿಯಾ ಗೌಡ- ಕಾರ್ತಿಕ್ ಮದುವೆ ಆಗಿಲ್ಲ: ಕೋರ್ಟ್]
ಅಂದಹಾಗೆ ಕಾರ್ತಿಕ್ ಗೌಡ ಅವರಿಗೆ ಕೌಟುಂಬಿಕ ಕೋರ್ಟ್ನಿಂದ ಸಿಹಿ ಸುದ್ದಿ ಸಿಕ್ಕಿದ್ದು, ಕಾರ್ತಿಕ್ ಗೌಡ ನನ್ನ ಗಂಡ ಎಂದು ಹೇಳಿ ಮೈತ್ರಿಯಾ ಗೌಡ ಸಲ್ಲಿಸಿದ್ದ ಅರ್ಜಿಯನ್ನು ಕೆಲವು ದಿನಗಳ ಹಿಂದೆ ಕೋರ್ಟ್ ತಿರಸ್ಕರಿಸಿತ್ತು. 'ಕಾರ್ತಿಕ್ ಕಾನೂನುಬದ್ಧವಾಗಿ ನನ್ನ ಪತಿಯಾಗಿದ್ದಾರೆ. ಹಿಂದೂ ಧರ್ಮದ ಪ್ರಕಾರ ನಮ್ಮಿಬ್ಬರ ಮದುವೆಯಾಗಿದೆ. ಕಾರ್ತಿಕ್ ಅವರು ಬೇರೆ ಯಾವುದೇ ಯುವತಿ ಜೊತೆ ಮದುವೆಯಾಗುವುದು ಕಾನೂನು ಉಲ್ಲಂಘನೆಯಾಗುತ್ತದೆ ಎಂದು ಮೈತ್ರಿಯಾ ಗೌಡ ಹಾಕಿದ್ದ ಅರ್ಜಿ ವಜಾಗೊಂಡಿದೆ.












Click it and Unblock the Notifications