ಹೈಕೋರ್ಟ್ ಜಡ್ಜ್ ಚಳಿ ಬಿಡಿಸಿದ ಬಳಿಕ ಎಚ್ಚೆತ್ತ ಎಸಿಬಿ ಮಾಡಿದ್ದೇನು?
ಬೆಂಗಳೂರು, ಜು. 05: ಸರ್ಕಾರದ ಮರ್ಜಿನಲ್ಲಿ ಕೆಲಸ ಮಾಡುತ್ತಿರುವ ಆರೋಪಕ್ಕೆ ಗುರಿಯಾಗಿರುವ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಮಾತಲ್ಲೇ ಚುರುಕು ಮುಟ್ಟಿಸಿದ್ದಾರೆ. ನ್ಯಾ. ಎಚ್.ಪಿ. ಸಂದೇಶ್ ಅವರ ಭ್ರಷ್ಟಾಚಾರ ಕುರಿತ ಮಾತುಗಳು ಸಮುದಾಯದಲ್ಲಿ ತಲ್ಲಣ ಸೃಷ್ಟಿಸಿದೆ. ಮಾತ್ರವಲ್ಲ ಎಸಿಬಿ ಕೂಡ ಎಚ್ಚೆತ್ತು 24 ತಾಸಿನಲ್ಲಿ ಎರಡು ಮಹತ್ವದ ಕೇಸು ದಾಖಲಿಸಿದೆ.
ಲಂಚ ಪ್ರಕರಣದಲ್ಲಿ ಬೆಂಗಳೂರು ನಗರ ಮಾಜಿ ಜಿಲ್ಲಾಧಿಕಾರಿ ಜೆ. ಮಂಜುನಾಥ್ರನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಇದರ ಬೆನ್ನಲ್ಲೇ ಚಾಮರಾಜಪೇಟೆ ಶಾಸಕ ಬಿ.ಝಡ್ ಜಮೀರ್ ಅಹಮದ್ ಖಾನ್ ಅವರ ಅಕ್ರಮ ಆಸ್ತಿ ಗಳಿಕೆ ಸಂಬಂಧ ಎಸಿಬಿ ಕೇಸು ದಾಖಲಿಸಿಕೊಂಡು ದಾಳಿ ಮಾಡಿದೆ. ಎಸಿಬಿ ರಚನೆಯಾಗಿ ಆರು ವರ್ಷವಾದ್ರೂ ಒಂದೇ ಒಂದು ಗಂಭೀರ ಪ್ರಕರಣ ಎಸಿಬಿ ದಾಖಲಿಸಿರಲಿಲ್ಲ. ಇದೀಗ ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ ಸಂದೇಶ್ ಚಾಟಿ ಬೀಸಿದ ಬಳಿಕ ಎಸಿಬಿ ಅಧಿಕಾರಿಗಳಿಗೆ ನಡುಕ ಹುಟ್ಟಿದೆ.
ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಕಚೇರಿಯ ಲಂಚ ಪ್ರಕರಣ ಸಂಬಂಧ ಆರೋಪಿಯ ಜಾಮೀನು ಅರ್ಜಿ ವಿಚಾರಣೆ ಸಂಬಂಧ ನ್ಯಾ. ಎಚ್.ವಿ. ಸಂದೇಶ್, ಭ್ರಷ್ಟಾಚಾರ ನಿಗ್ರಹ ದಳದ ಕಾರ್ಯವೈಖರಿಯ ಬಗ್ಗೆ ಎತ್ತಿರುವ ಪ್ರಶ್ನೆಗಳು ಸಂಚಲನ ಮೂಡಿಸಿವೆ.

ಎಡಿಜಿಪಿ ತುಂಬಾ ಪವರ್ ಪುಲ್
ನಿಮ್ಮ ಎಡಿಜಿಪಿ ತುಂಬಾ ಪವರ್ ಪುಲ್ ಅಂತೆ. ಒಬ್ಬ ನ್ಯಾಯಾಧೀಶರು ಬಂದು ನನಗೆ ಹೇಳ್ತಾರೆ. ನಿಮ್ಮ ಎಡಿಜಿಪಿ ಜಡ್ಜ್ ಅನ್ನೇ ವರ್ಗಾವಣೆ ಮಾಡಿಸುವಷ್ಟು ಪ್ರಭಾವಿ ಅಂತೆ. ನಾನು ಆ ನ್ಯಾಯಾಧೀಶರ ಹೆಸರು ಉಲ್ಲೇಖ ಮಾಡುವುದಕ್ಕೂ ಮುಜುಗರ ಪಡುವುದಿಲ್ಲ. ಸ್ವತಂತ್ರ್ಯ ನ್ಯಾಯ ವ್ಯವಸ್ಥೆ, ನ್ಯಾಯಧೀಶ ಹುದ್ದೆ ಘನತೆ ಕಾಪಾಡುವ ವಿಚಾರದಲ್ಲಿ ನಾನು ಯಾರಿಗೂ ಕ್ಯಾರೆ ಮಾಡುವುದಿಲ್ಲ. ನನ್ನ ಕೆಲಸ ನಾನು ಮಾಡುತ್ತೇವೆ. ಇದು ಮರುಕುಳಿಸಬಾರದು. ನಾನು ಆದೇಶದಲ್ಲಿ ಉಲ್ಲೇಖಿಸುತ್ತೇನೆ. ಸಂಸ್ಥೆಯನ್ನು ನೀವು ರಕ್ಷಣೆ ಮಾಡಬೇಕು. ಈ ತರ ಮಾಡೋದು ಅಲ್ಲ ಎಂದು ನ್ಯಾ. ಎಚ್.ವಿ. ಸಂದೇಶ್ ಎಚ್ಚರಿಸಿದ್ದರು.

ನೀವು ತಿನ್ನೋದು ಸಂಸ್ಥೆಯ ಹಣ
ನೀವು ತಿನ್ನೋದು ಸಂಸ್ಥೆಯ ಹಣ. ಸರ್ಕಾರಿ ಹಣ. ಯಾರ ಮೇಲೆ ವೈಯಕ್ತಿಕ ಪ್ರೀತಿ ಇಲ್ಲ. ನನಗೆ ಹೆದರಿಕೆ ಇಲ್ಲ. ನಾನು ಜಡ್ಜ್ ಆದ ಮೇಲೆ ನಮ್ಮ ಅಪ್ಪನ ಆಸ್ತಿ ನಾಲ್ಕು ಎಕರೆ ಆಸ್ತಿ ಮಾರಿದ್ದೇನೆ. ನಾನು ಒಂದಿಂಚು ಜಾಗ ಮಾಡಿಲ್ಲ. ಭ್ರಷ್ಟಾಚಾರ ರೋಗ. ಇದು ಕ್ಯಾನ್ಸರ್. ನಾಲ್ಕನೇ ಹಂತಕ್ಕೆ ಹೋದ ಮೇಲೆ ತಡೆಯೋಕೆ ಆಗಲ್ಲ. ಐದು ಕೋಟಿ- ಹತ್ತು ಕೋಟಿ ಡೀಲ್ ಮಾಡೋರನ್ನು ಆಗೇ ಬಿಟ್ಟು ಕಳಿಸೋದು. ನಾನು ಸಮನ್ಸ್ ಜಾರಿಗೊಳಿಸುತ್ತೇನೆ ಎಂದು ನೇರವಾಗಿ ಖಡಕ್ ಸಂದೇಶ ರವಾನಿಸಿದ್ದಾರೆ. ನ್ಯಾಯಾಧೀಶರ ಈ ಮಾತು ಇದೀಗ ರಾಜ್ಯದಲ್ಲಿ ದೊಡ್ಡ ಸಂಚಲನ ಹುಟ್ಟು ಹಾಕಿದೆ. ಅಧಿಕಾರಿ ವಲಯದಲ್ಲಿ ಭಾರೀ ಚರ್ಚೆ ಹುಟ್ಟು ಹಾಕಿದೆ.

ಭ್ರಷ್ಟರ ವಿರುದ್ಧ ಸಮರ ಆರಂಭ
ನ್ಯಾಯಮೂರ್ತಿಗಳ ನಿಷ್ಠುರ ಮಾತುಗಳು ಇದೀಗ ಸತ್ತಂತಾಗಿದ್ದ ಎಸಿಬಿಯನ್ನು ಬಡಿದೆಬ್ಬಿಸಿದೆ. ನ್ಯಾಯಮೂರ್ತಿಗಳ ಚಾರ್ಜ್ ಬೆನ್ನಲ್ಲೇ ಎಸಿಬಿ ಅಧಿಕಾರಿಗಳು ಭ್ರಷ್ಟರ ವಿರುದ್ಧ ಸಮರ ಆರಂಭಿಸಿದ್ದಾರೆ. ಐದು ಲಕ್ಷ ರೂ. ಲಂಚ ಪ್ರಕರಣದಲ್ಲಿ ಬೆಂಗಳೂರಿನ ಮಾಜಿ ಜಿಲ್ಲಾಧಿಕಾರಿ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ ನಿರ್ದೇಶಕ ಜೆ. ಮಂಜುನಾಥ್ ಅವರನ್ನು ಬಂಧಿಸಿದ ಬೆನ್ನಲ್ಲೇ ಇದೀಗ ಅಕ್ರಮ ಆಸ್ತಿ ಗಳಿಕೆ ಆರೋಪದಡಿ ಶಾಸಕ ಜಮೀರ್ ಅಹಮದ್ ಮನೆ ಮೇಲೆ ಎಸಿಬಿ ತಂಡಗಳು ದಾಳಿ ಮಾಡಿವೆ.
ಎಸಿಬಿ ಎಸ್ಪಿ ಯತೀಶ್ ಚಂದ್ರ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಆರಕ್ಕೂ ಹೆಚ್ಚು ತಂಡಗಳು ಜಮೀರ್ ಅವರ ಐಶರಾಮಿ ಬಂಗಲೆ, ನ್ಯಾಷನಲ್ ಟ್ರಾವೆಲ್ಸ್ ಕಚೇರಿ, ಗೆಸ್ಟ್ ಹೌಸ್ ಮೇಲೆ ದಾಳಿ ಮಾಡಿವೆ. ಇಡಿ ದಾಳಿಗೆ ಒಳಗಾದ ಮೂರು ತಿಂಗಳಲ್ಲಿಯೇ ಶಾಸಕ ಜಮೀರ್ ಅವರ ಮೇಲೆ ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ ಕೇಸು ದಾಖಲಾಗಲಿದೆ ಎಂದೇ ಹೇಳಲಾಗಿತ್ತು. ಆದ್ರೆ ಎಸಿಬಿ ಅಧಿಕಾರಿಗಳು ಜಮೀರ್ ಮಾತ್ರವಲ್ಲ ಯಾವ ಶಾಸಕನ ಮೇಲೂ ಕೇಸು ದಾಖಲಿಸುವ ಧೈರ್ಯ ತೋರಿರಲಿಲ್ಲ.

ಇತಿಹಾಸದ ಪುಟಕ್ಕೆ ಮಂಜುನಾಥ್ ಮತ್ತು ಜಮೀರ್ ಕೇಸ್
ಲೋಕಾಯುಕ್ತ ಸಂಸ್ಥೆಯ ಭಾಗವಾಗಿದ್ದ ಭ್ರಷ್ಟಾಚಾರ ನಿಗ್ರಹದಳವನ್ನು ರದ್ದು ಮಾಡಿದ್ದ ಸಿದ್ದ ರಾಮಯ್ಯ ಸರ್ಕಾರ 2016 ರಲ್ಲಿ ಪ್ರತ್ಯೇಕ ಭ್ರಷ್ಟಾಚಾರ ನಿಗ್ರಹ ದಳವನ್ನು ರಚಿಸಿದ್ದರು. ಎಸಿಬಿ ರಚನೆಯಾಗಿ ಆರು ವರ್ಷ ಕಳೆದ ಬಳಿಕ ಯಾವ ಐಎಎಸ್, ಐಪಿಎಸ್, ಹಾಗೂ ಶಾಸಕ, ಮಂತ್ರಿಯ ವಿರುದ್ಧ ಒಂದು ಕೇಸು ಕೂಡ ದಾಖಲಾಗಿರಲಿಲ್ಲ. ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಗಳಲ್ಲಿ ಸಲ್ಲಿಕೆಯಾದ ಕೆಲವು ಖಾಸಗಿ ದೂರುಗಳ ತನಿಖೆ ಎಸಿಬಿ ಬಯಲು ಮಾಡಲಿಲ್ಲ. ಸರ್ಕಾರದ ಅಣತಿಯಂತೆ ಆರು ವರ್ಷ ಸೇವೆ ಮಾಡಿದ ಎಸಿಬಿ ಇದೀಗ ಜನಪರ ಕೆಲಸ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಹೈಕೋರ್ಟ್ ನ್ಯಾಯಮೂರ್ತಿ ಅವರು ಚಳಿ ಬಿಡಿಸಿದ ಎರಡೇ ದಿನದಲ್ಲಿ ಒಬ್ಬ ಐಎಎಸ್ ಅಧಿಕಾರಿ ಜೈಲು ಸೇರಿದ್ದಾನೆ. ಶಾಸಕ ಜಮೀರ್ ಅಹಮದ್ ಮನೆ ಮೇಲೆ ದಾಳಿ ನಡೆದಿದೆ.
ಎಸಿಬಿ ರಚನೆಯಾದ ಬಳಿಕ ಇದೇ ಮೊದಲ ಬಾರಿಗೆ ಲಂಚ ಪ್ರಕರಣದಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದ ಜೆ. ಮಂಜುನಾಥ್ ರನ್ನು ಎಸಿಬಿ ಅಧಿಕಾರಿಗಳು ಸೋಮವಾರ ಮಧ್ಯಾಹ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇದೀಗ ಶಾಸಕ ಜಮೀರ್ ಅಹಮದ್ ಮೇಲೆ ಅಕ್ರಮ ಆಸ್ತಿ ಆರೋಪಕ್ಕೆ ಸಂಬಂಧಿಸಿದಂತೆ ದಾಳಿ ನಡೆದಿದೆ. ಇದೇ ವೇಳೆ ಎಸಿಬಿಗೆ ಪ್ರಾಮಾಣಿಕ ಹಾಗೂ ದಕ್ಷ ಅಧಿಕಾರಿಗಳನ್ನು ನಿಯೋಜಿಸಬೇಕೆಂಬ ಮಾತು ಕೇಳಿ ಬರುತ್ತಿವೆ.












Click it and Unblock the Notifications