ಕೋರ್ಟ್ನಲ್ಲಿ ಗದ್ದಲ: ವಕೀಲ ಕೆ.ಎನ್.ಜಗದೀಶ್ಗೆ 2ಲಕ್ಷ ರೂ ದಂಡ ವಿಧಿಸಿದ ಹೈಕೋರ್ಟ್
ಬೆಂಗಳೂರು ನವೆಂಬರ್ 29: ನಗರದ ಸಿಟಿ ಸಿವಿಲ್ ಕೋರ್ಟ್ನಲ್ಲಿ ಗದ್ದಲ ಉಂಟು ಮಾಡಿದ ಮತ್ತು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ಹೇಳಿಕೆ ನೀಡಿದ್ದ ವಕೀಲ ಕೆ.ಎನ್. ಜಗದೀಶ್ಗೆ ಹೈಕೋರ್ಟ್ ದಂಡ ವಿಧಿಸಿದೆ. ಅಲ್ಲದೇ, ಅವರು ಕ್ಷಮೆಯಾಚಿಸಿದ ಹಿನ್ನೆಲೆಯಲ್ಲಿ ಅವರ ಮೇಲಿನ ನ್ಯಾಯಾಂಗ ನಿಂದನೆ ಪ್ರಕರಣವನ್ನು ಕೈಬಿಟ್ಟಿದೆ.
ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಳೆ ಅವರ ನೇತೃತ್ವದ ವಿಭಾಗೀಯಪೀಠ ಮಂಗಳವಾರ ಆದೇಶ ಮಾಡಿದೆ. ಆರೋಪಿ ವಕೀಲ ಜಗದೀಶ್ಗೆ ವಿಧಿಸಿದ ಎರಡು ಲಕ್ಷ ಪೈಕಿ ಒಂದು ಲಕ್ಷ ಹಣವನ್ನು ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ, ಬೆಂಗಳೂರು ವಕೀಲರ ಸಂಘದ ಗ್ರಂಥಾಲಯ ಅಭಿವೃದ್ಧಿಗೆ ಮತ್ತು ಹೈಕೋರ್ಟ್ ಗುಮಾಸ್ಥರ ಕ್ಷೇಮಾಭಿವೃದ್ಧಿ ಸಂಘಕ್ಕೆ ತಲಾ 50 ಸಾವಿರ ರೂಪಾಯಿ ಪಾವತಿಸಬೇಕು. ಈ ಆದೇಶದ ಅನುಪಾಲನಾ ವರದಿಯನ್ನು ಎರಡು ವಾರಗಳಲ್ಲಿ ಸಲ್ಲಿಸಬೇಕು ಎಂದು ಹೈಕೋರ್ಟ್ ಆದೇಶದಲ್ಲಿ ನಿರ್ದೇಶಿಸಿ ವಿಚಾರಣೆಯನ್ನು ಮುಂದೂಡಲಾಗಿದೆ.
ಹೈಕೋರ್ಟ್ಗೆ ಪ್ರಮಾಣ ಪತ್ರ ಸಲ್ಲಿಸಿದ ಆರೋಪಿ ವಕೀಲ ಕೆ.ಎನ್. ಜಗದೀಶ್, 'ಫೆಬ್ರವರಿ 10,11 ಮತ್ತು 12ರಂದು ನಾನು ತೋರಿದ ಅನುಚಿತ ವರ್ತನೆಗೆ ನ್ಯಾಯಾಲಯಕ್ಕೆ ಬೇಷರತ್ ಕ್ಷಮೆಯಾಚಿಸುತ್ತೇನೆ. ಮುಂದೆ ನ್ಯಾಯಾಲಯದ ಒಳಗೆ ಹಾಗೂ ಹೊರಗೆ ಸಭ್ಯವಾಗಿ ವರ್ತಿಸುತ್ತೇನೆ. ಆದ್ದರಿಂದ ನನ್ನ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಕೈಬಿಡಬೇಕು' ಎಂದು ಕೋರಿದ್ದರು. ಈ ಪ್ರಮಾಣಪತ್ರ ದಾಖಲಿಸಿಕೊಂಡ ಹೈಕೋರ್ಟ್, ನ್ಯಾಯಾಂಗ ನಿಂದನೆ ಪ್ರಕ್ರಿಯೆ ಕೈಬಿಟ್ಟು ಎಚ್ಚರಿಕೆ ನೀಡಿದೆ.
ಜಾಮಿಯಾ ಮಸೀದಿ ವಿವಾದ: ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ ಬಜರಂಗದಳ
ಪ್ರಕರಣದ ವಿವರ: 2022ರ ಫೆಬ್ರವರಿ 11ರಂದು ಪ್ರಕರಣವೊಂದರ ಸಂಬಂಧ ನಗರದ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ಗೆ ವಕೀಲ ಜಗದೀಶ್ ಹಾಜರಾಗಿದ್ದರು. ಈ ವೇಳೆ ಕೆಲ ವಕೀಲರೊಂದಿಗೆ ಮಾತಿನ ಚಕಮಕಿ ನಡೆದಿತ್ತು. ಈ ವೇಳೆ ಕೋರ್ಟ್ ಆವರಣದಲ್ಲಿ ಗದ್ದಲ ಉಂಟಾಗಿತ್ತು ಎಂದು ತಿಳಿಸಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ರಿಜಿಸ್ಟ್ರಾರ್ ಮತ್ತು ಪ್ರಧಾನ ನ್ಯಾಯಧೀಶರು ಕ್ರಮವಾಗಿ ಫೆಬ್ರವರಿ 10 ಮತ್ತು 11ರಂದು ಹೈಕೋರ್ಟ್ಗೆ ವರದಿ ಸಲ್ಲಿಸಿದ್ದರು.
ನಂತರ 2022ರ ಫೆಬ್ರವರಿ 12ರಂದು ಫೇಸ್ಬುಕ್ ಹಾಗೂ ಯೂಟ್ಯೂಬ್ ಲೈವ್ಗೆ ಬಂದ ವಕೀಲ ಕೆ.ಎನ್. ಜಗದೀಶ್, 'ಕರ್ನಾಟಕ ಹೈಕೊರ್ಟ್ ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ಹೇಳಿಕೆ ನೀಡಿದ್ದರು. ಅಲ್ಲದೇ ಸುಪ್ರೀಂ ಕೊರ್ಟ್ ಮುಖ್ಯ ನ್ಯಾಯಮೂರ್ತಿ ಮತ್ತು ರಾಷ್ಟ್ರಪತಿಗೆ ದೂರು ಬರೆಯುತ್ತೇನೆ' ಎಂದು ತಿಳಿಸಿದ್ದರು. ಅದನ್ನು ಆಧರಿಸಿ ಹೈಕೋರ್ಟ್ ರಿಜಿಸ್ಟ್ರಾರ ಜನರಲ್, ಸ್ವಯಂ ಪ್ರೇರಿತ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು.