ಯಕ್ಷರಂಗಕ್ಕೆ ರಂಗುತಂದಿತ್ತ ಚಿಟ್ಟಾಣಿ: ಟ್ವಿಟ್ಟಿಗರ ಅಂತಿಮ ನಮನ
ಹೊನ್ನಾವರ, ಅಕ್ಟೋಬರ್ 4: "ಪ್ರೇಕ್ಷಕರು ನಾಲ್ಕೇ ಜನರಿರಲಿ, ನಾನೂರು ಜನರಿರಲಿ, ನಾಲ್ಕು ಸಾವಿರ ಜನರೇ ಇರಲಿ. ನಮಗೆ ಎಲ್ಲರೂ ಒಂದೇ. ಯಾಕಂದ್ರೆ ರಂಗಕ್ಕೆ ಯಾವತ್ತಿಗೂ ಮೋಸ ಮಾಡಬಾರದು, ಪ್ರೇಕ್ಷಕರ ಸಂಖ್ಯೆಯ ಮೇಲೆ ನನ್ನ ಪ್ರದರ್ಶನದ ಗುಣಮಟ್ಟ ನಿಂತಿರಬಾರದು..." ಚಿಟ್ಟಾಣಿ ರಾಮಚಂದ್ರ ಹೆಗಡೆಯವರು ಸಂದರ್ಶನವೊಂದರಲ್ಲಿ ಹೇಳಿದ ಈ ಮಾತು ಕಲಾವಿದನೊಬ್ಬನ ನೈಜ ಹೊಣೆ ಮತ್ತು ಕಲೆಯ ಕುರಿತು ಆತನಿಗಿರಬೇಕಾದ ಗೌರವಕ್ಕೆ ಸಾಕ್ಷಿಯಾಗುತ್ತದೆ.
ಮಂಕಾಗಿದ್ದ ಸಭಾಭವನವನ್ನೂ ಒಂದರೆಕ್ಷಣದಲ್ಲಿ ಉಲ್ಲಾಸದಲ್ಲಿ ತೇಲಿಸುವ ತಾಕತ್ತಿದ್ದ ಕಲಾವಿದ ಎಂದರೆ ಚಿಟ್ಟಾಣಿ ಹೆಗಡೆಯವರು. "ನನ್ನ ಯಕ್ಷಗಾನ ಬದುಕು ಒಂದು ಅದ್ಭುತ ದೃಶ್ಯ" ಎಂಬ ಚಿಟ್ಟಾಣಿಯವರ ಮಾತಿಗೆ ಅರ್ಥವಿತ್ತು. ಯಾಕಂದ್ರೆ ಅವರ ಕುಟುಂಬದಲ್ಲಿ ಯಾರೊಬ್ಬರೂ ಯಕ್ಷಗಾನ ಕಲಾವಿದರಿರಲಿಲ್ಲ. ವಿರೋಧ, ಬಡತನಗಳ ನಡುವಲ್ಲೂ ಯಕ್ಷಗಾನವನ್ನು ಮತ್ತು ಯಕ್ಷಗಾನವನ್ನಷ್ಟೇ ಪ್ರೀತಿಸಿ, ಅದರನ್ನೇ ಉಸಿರಾಡುವ ನಿರ್ಧಾರಕ್ಕೆ ಬಂದ ಚಿಟ್ಟಾಣಿಯವರ ಯಕ್ಷಗಾನ ಬದುಕು ಅವರೇ ಹೇಳಿದಂತೆ ಒಂದು ಅದ್ಭುತ ದೃಶ್ಯ ಕಾವ್ಯವೇ ಸರಿ.
ಅಕ್ಟೋಬರ್ 3 ರಂದು ಅನಾರೋಗ್ಯದ ಕಾರಣ ನಿಧನರಾದ ಚಿಟ್ಟಾಣಿಯವರಿಗೆ 84 ವರ್ಷವಾಗಿತ್ತು. ಈ ಇಳಿ ವಯಸ್ಸಿನಲ್ಲೂ ವೇದಿಕೆಯ ಮೇಲೇರಿದರೆ ಯಾವುದೋ ಶಕ್ತಿಯನ್ನು ಆವಾಹಿಸಿಕೊಂಡಂತೆ ಕುಣಿಯುತ್ತಿದ್ದ, ನಟಿಸುತ್ತಿದ್ದ, ನಗಿಸುತ್ತಿದ್ದ ಚಿಟ್ಟಾಣಿ ಹೆಗಡೆಯವರು ಯಕ್ಷಗಾನ ಕ್ಷೇತ್ರಕ್ಕೆ ಪ್ರಪ್ರಥಮ ಪದ್ಮಶ್ರೀ ಪ್ರಶಸ್ತಿ ತಂದುಕೊಟ್ಟವರು.
ಯಕ್ಷರಂಗವನ್ನು ಒಂದು ಕಾಲದಲ್ಲಿ ಅನಭಿಷಿಕ್ತ ದೊರೆಯಾಗಿ ಆಳಿದ, ಯಕ್ಷಗಾನ ಎಂದರೆ ಚಿಟ್ಟಾಣಿ ಎಂಬಷ್ಟರ ಮಟ್ಟಿಗೆ ಯಕ್ಷಕಲೆಯೊಳಗೆ ಬೆರೆತುಹೋಗಿದ್ದ ಚಿಟ್ಟಾಣಿ ರಾಮಚಂದ್ರ ಹೆಗಡೆ ಇನ್ನಿಲ್ಲ ಎಂಬ ಸುದ್ದಿಯನ್ನು ನಂಬುವುದಕ್ಕೆ ಯಕ್ಷಗಾನ ಪ್ರೇಮಿಗಳ್ಯಾರೂ ಸಿದ್ಧರಿಲ್ಲ.
ವಯಸ್ಸಿನ ಹಂಗಿಲ್ಲದೆ, ದೇಹಕ್ಕಾಗುವ ಆಯಾಸ ಲೆಕ್ಕಿಸದೆ ಬಡಗುತಿಟ್ಟು ಶೈಲಿಯ ಯಕ್ಷಗಾನ ರಂಗಕ್ಕೆ ಮನ್ನಣೆ ತಂದಿತ್ತ ಚಿಟ್ಟಾಣಿಯವರು ಕೌರವ, ದುಷ್ಟಬುದ್ಧಿ, ಭಸ್ಮಾಸುರ ಪಾತ್ರಗಳಿಂದ ಸಾವಿರಾರು ಅಭಿಮಾನಿಗಳನ್ನು ಪಡೆದವರು. ಪದ್ಮಶ್ರೀ, ರಾಜ್ಯೋತ್ಸವದಂಥ ಮಹೋನ್ನತ ಪ್ರಶಸ್ತಿಗಳು ಬಂದರೂ ಎಂದಿಗೂ ಸಾಮಾನ್ಯರಲ್ಲಿ ಸಾಮಾನ್ಯರಂತೆಯೇ ಉಳಿದವರು. ಜನಪ್ರಿಯತೆ, ಪ್ರಶಸ್ತಿ, ಸನ್ಮಾನಗಳು ಎಂದಿಗೂ ತಮ್ಮಲ್ಲಿ ಅಹಂಕಾರವನ್ನು ಮೂಡಿಸದಂತೆ ಆದರ್ಶ ಬದುಕು ಕಂಡವರು. ನೂರಾರು ಜನರಿಗೆ ಆದರ್ಶರಾದವರು.
ಅವರ ಅಗಲಿಕೆಗೆ ಅವರ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಚಿಟ್ಟಾಣಿಯವರ ನಿಧನದ ಸುದ್ದಿ ಟ್ವಿಟ್ಟರ್ ನಲ್ಲಿಯೂ ಟ್ರೆಂಡಿಂಗ್ ಆಗಿತ್ತು. ಅವರ ನೂರಾರು ಅಭಿಮಾನಿಗಳು ಟ್ವೀಟ್ ಮಾಡಿ ತಮ್ಮ ನೆಚ್ಚಿನ ಕಲಾವಿದರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹಾರೈಸಿದ್ದಾರೆ.
|
ಸಹೃದಯರ ಅಂತರಂಗದ ರಂದಲ್ಲಿ ನೆಲೆಸಿದರು!
ಮಗುವಿನ ಹೃದಯದ ಮೇರು ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ, ಜೀವನದ ರಂಗಸ್ಥಳದಿಂದ ಮರೆಯಾಗಿ, ಸಹೃದಯರ ಅಂತರಂಗದ ರಂಗದಲ್ಲಿ ನೆಲೆಸಿದರು! ಎಂದು ಶ್ರೀ ರಾಘವೇಶ್ವರ ಭಾರತಿ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ.
|
ಯಕ್ಷಗಾನದ ಮೇರು ಪರ್ವತ ಕಣ್ಮರೆ
ಯಕ್ಷಗಾನದ ಮೇರು ಪರ್ವತ ಕಣ್ಮರೆಯಾದರೂ ಜನರ ಹೃದಯದಲ್ಲಿ ಚಿರಸ್ಥಾಯಿಯಾಗಿ ಉಳಿದಿರುವರು ಎಂದು ಗೀತಾ ಭಟ್ ಎನ್ನುವವರು ಟ್ವೀಟ್ ಮಾಡಿದ್ದಾರೆ.
|
ಹೇಗಿರಬಾರದೆಂದೂ, ಹೇಗಿರಬೇಕೆಂದೂ ತೋರಿಸಿಕೊಟ್ಟರು!
ಯಕ್ಷರಂಗದಲ್ಲಿ ಕಂಸರಾಗಿ, ದುರ್ಯೋಧನರಾಗಿ ಬಾಳಿದಾಗ ಹೇಗಿರಬಾರದೆಂದು ತೋರಿಸಿದರು, ವಾಸ್ತವದಲ್ಲಿ ರಾಮಚಂದ್ರರಾಗಿ ಬಾಳಿದಾಗ ಹೇಗಿರಬೇಕೆಂದು ತೋರಿಸಿಕೊಟ್ಟರು ಎಂದು ಮಹೇಶ್ ಕೋರಿಕ್ಕರ್ ಎನ್ನುವವರು ಟ್ವೀಟ್ ಮಾಡಿದ್ದಾರೆ.
|
ಧ್ರುವತಾರೆ
ಯಕ್ಷಲೋಕದ ಭೀಷ್ಮ ಚಿಟ್ಟಾಣಿ ಧ್ರುವತಾರೆಯಾದರು ಎಂದು ಲಲಿತಾಲಕ್ಷ್ಮಿ ಭಟ್ ಎನ್ನುವವರು ಟ್ವೀಟ್ ಮಾಡಿದ್ದಾರೆ.
|
ರಂಗಕ್ಕೆ ರಂಗನ್ನಿತ್ತವರು!
ದೇಹ ಮರೆಯಾದರೂ 'ಕಲೆ' ಮೆರೆಯುತ್ತಿದೆ, 'ಕಲಾರಾಧಕ'ರವರು, ಕಲಾಪ್ರೇಮಿಗಳಿಗೆ, 'ರಂಗ'ಕ್ಕೆ 'ರಂಗ'ನ್ನೆ ಇತ್ತವರು ಎಂದು ಸ್ಮಿತಾ ಹೆಗಡೆ ಎನ್ನುವವರು ಟ್ವೀಟ್ ಮಾಡಿದ್ದಾರೆ.
|
ಮರಣಾನಂತರವೂ ಜನಮನದಲ್ಲಿ ನೆಲೆಸುವವರು
ಜೀವನ ಸಮಯದಲ್ಲೂ, ಮರಣಾನಂತರವೂ ಜನಮನದಲ್ಲಿ ಶಾಶ್ವತವಾಗಿ ನೆಲೆಸುವಂತಹವರು ಕೆಲವೇ ಕೆಲವರು! ಚಿಟ್ಟಾಣಿಯವರಂತಹವರು! ಎಂದು ಅಕ್ಷತಾ ಭಟ್ ಎನ್ನುವವರು ಟ್ವೀಟ್ ಮಾಡಿದ್ದಾರೆ.
|
ಭಾವಪೂರ್ಣ ಶೃದ್ಧಾಂಜಲಿ
ಮರೆಯಲಾಗದ ಪಾತ್ರಗಳಿಂದ ಎಲ್ಲ ವಯೋಮಾನದವರ ಮನಗೆದ್ದು, ಬಾರದ ಲೋಕಕ್ಕೆ ತೆರಳಿದ ಯಕ್ಷಲೋಕದ ದಿಗ್ಗಜ ಶ್ರೀ ಚಿಟ್ಟಾಣಿಯವರಿಗೆ ಭಾವಪೂರ್ಣ ಶೃದ್ಧಾಂಜಲಿ. ಓಂ ಶಾಂತಿ ಎಂದು ಗುರುಪ್ರಸಾದ್ ಹೆಗಡೆ ಎನ್ನುವವರು ಟ್ವೀಟ್ ಮಾಡಿದ್ದಾರೆ.












Click it and Unblock the Notifications