ರಾಜ್ಯದ ಮೂರು ಜಿಲ್ಲೆಗಳಲ್ಲಿ ಇಂದು ಭಾರಿ ಮಳೆ ಸಾಧ್ಯತೆ
ಬೆಂಗಳೂರು, ಜುಲೈ 11: ರಾಜ್ಯದ 3 ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜುಲೈ 15ರವರೆಗೆ ಹವಾಮಾನ ಇಲಾಖೆ ಎಲ್ಲೋ ಅಲರ್ಟ್ ಘೋಷಿಸಿದ್ದು, ಇಂದು ಮಳೆಯಾಗುವ ಸಾಧ್ಯತೆ ಇದೆ.
ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡದಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಕರಾವಳಿಯಲ್ಲಿ ಸಾಧಾರಣ ಮಳೆಯಾಗುತ್ತಿದೆ. ಭಾರತೀಯ ಹವಾಮಾನ ಇಲಾಖೆ ನೀಡಿದ ಮಾಹಿತಿಯಂತೆ ಆರೆಂಜ್ ಅಲರ್ಟ್ ಮುಂದುವರಿಯಲಿದೆ.
ಮಳೆ ಕಡಿಮೆಯಾದರೂ ನಿರಂತರ ಸುರಿಯುವ ಸಾಧ್ಯತೆ ಇದೆ ಎನ್ನುವುದನ್ನು ಹವಾಮಾನ ಇಲಾಖೆ ತಿಳಿಸಿದೆ. ಜಿಲ್ಲೆಯ ಪುತ್ತೂರು, ಸುಳ್ಯದಲ್ಲಿ ಸಾಧಾರಣ ಮಳೆಯಾಗಿದ್ದು, ಬಂಟ್ವಾಳ, ಬೆಳ್ತಂಗಡಿಯಲ್ಲಿ ಕೊಂಚ ಜಾಸ್ತಿ ಮಳೆಯಾಗಿದೆ.
ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆ: 3 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ಕಳೆದ 15 ದಿನಗಳಿಂದ ಕೊಡಗು ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ತ್ರಿವೇಣಿ ಸಂಗಮ ಭರ್ತಿಯಾಗಿ ನೀರು ರಸ್ತೆಗೆ ಬಂದಿದೆ. ಕಾವೇರಿ ನದಿಯಲ್ಲಿ ಗಣನೀಯ ಪ್ರಮಾಣದಲ್ಲಿ ನೀರು ಏರಿಕೆ ಕಂಡಿರುವುದರಿಂದ ನದಿ ಪಾತ್ರದ ನಿವಾಸಿಗಳಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಅಲ್ಲಲ್ಲಿ ಗುಡ್ಡ, ಮಣ್ಣು ಕುಸಿತ, ರಸ್ತೆ ಸಂಚಾರ ಕಡಿತಗೊಳ್ಳುತ್ತಿರುವುದರಿಂದ ಅಪಾಯದ ಮುನ್ಸೂಚನೆ ನೀಡುತ್ತಿದೆ.
ಶಿರಸಿ ತಾಲೂಕಿನಲ್ಲಿ ಕಳೆದ ವಾರದಿಂದ ಮಳೆಯಲ್ಲಿ ಚೇತರಿಕೆಯಾಗಿದ್ದು ಗುರುವಾರ ಹದ ಮಳೆ ಸುರಿದಿದೆ. ಕಳೆದೊಂದು ದಿನದಲ್ಲಿ 32ಮಿಮೀ ಮಳೆ ಬಿದ್ದ ವರದಿಯಾಗಿದೆ. ತಾಲೂಕಿನ ನಾಲ್ಕು ಹೋಬಳಿಗಳಲ್ಲಿ ಸಮಾಧಾನಕರ ಮಳೆಯಾಗಿದೆ. ಶುಕ್ರವಾರ ಮಳೆ ಕಡಿಮೆ ಇತ್ತು. ಶಿರಸಿ ಹೋಬಳಿಯಲ್ಲಿ 32ಮಿಮೀ, ಬನವಾಸಿ 31ಮಿಮೀ, ಹುಲೆಕಲ್ 31ಮಿಮೀ ಹಾಗೂ ಸಂಪಖಂಡ 45ಮೀಮಿ ಮಳೆ ಬಿದ್ದ ಮಾಹಿತಿ ಲಭ್ಯವಾಗಿದೆ.
ಬೆಂಗಳೂರಿನಲ್ಲಿ ಮುಂದಿನ ಒಂದು ವಾರಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರನಲ್ಲಿ ಗುರುವಾರ ರಾತ್ರಿ ಆರಂಭವಾದ ಮಳೆ ಮುಂಜಾನೆಯವರೆಗೂ ಮುಂದುವರಿದಿತ್ತು. ಸದ್ಯ, ಮೋಡ ಕವಿದ ವಾತಾವರಣ ಇದ್ದು, ಶನಿವಾರ ಕೂಡ ಭಾರಿ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಗುರುವಾರ ರಾತ್ರಿ 10 ಗಂಟೆ ಸುಮಾರಿಗೆ ಬೆಂಗಳೂರಿನಲ್ಲಿ ದೊಡ್ಡ ಪ್ರಮಾಣದಲ್ಲಿ ಮಳೆ ಕಾಣಿಸಿಕೊಂಡಿತ್ತು. ಈ ಮಳೆ ಮುಂಜಾನೆ 7 ಗಂಟೆಯವರೆಗೂ ಸುರಿಯತ್ತಲೇ ಇತ್ತು. 7 ಗಂಟೆ ನಂತರ ತುಂತುರು ಮಳೆ ಆಗಿದೆ. ಸದ್ಯ, ಮೋಡಕವಿದ ವಾರಾವರಣ ಇದೆ.
ಮೆಜೆಸ್ಟಿಕ್, ಶಾಂತಿನಗರ, ವಿಲ್ಸನ್ ಗಾರ್ಡನ್,ಲಕ್ಕಸಂದ್ರ, ಗಿರಿನಗರ, ನಾಗೇಂದ್ರ ಬ್ಲಾಕ್, ಹೊಸಕೆರೆ ಹಳ್ಳಿ, ಇಂದಿರಾ ನಗರ, ಚಾಮರಾಜ ಪೇಟೆ, ಶ್ರೀರಾಂಪುರ, ರಾಜಾಜಿ ನಗರ, ಆರ್ ಆರ್ ನಗರ ಸೇರಿದಂತೆ ಬೆಂಗಳೂರಿನ ಬಹುತೇಕ ಭಾಗಗಳಲ್ಲಿ ಭಾರಿ ಮಳೆ ಆಗಿದೆ.