ಗರ್ಲ್ಫ್ರೆಂಡ್ನ ಕಳಿಸಬೇಕು, ಪತ್ನಿಯ ಬೆತ್ತಲೆ ಫೋಟೋ ಕೇಳ್ತಾರೆ: ಕ್ರಿಕೆಟ್ ಆಯ್ಕೆ ನಡೆಯೋದು ಹೀಗೆ ಎಂದ ಮಾಜಿ ಆಟಗಾರ
ಕ್ರಿಕೆಟ್ ಎಂದರೆ ಅದು ಕೋಟ್ಯಂತರ ಜನರ ಭಾವನೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಒಂದು ಪಾಡ್ಕಾಸ್ಟ್ ವಿಡಿಯೋದಲ್ಲಿ ಮಾಜಿ ಕ್ರಿಕೆಟರೊಬ್ಬರು ಬಿಚ್ಚಿಟ್ಟ ಕರಾಳ ಸತ್ಯಗಳು ಈಗ ಕ್ರೀಡಾ ಪ್ರೇಮಿಗಳನ್ನು ಬೆಚ್ಚಿಬೀಳಿಸಿವೆ. ಇದರಲ್ಲಿ ಕ್ರಿಕೆಟ್ ಲೋಕದ ತೆರೆಯ ಹಿಂದಿನ ಅನಿಷ್ಟ ಪದ್ಧತಿಗಳು ಹಾಗೂ ಒಳರಾಜಕೀಯವನ್ನು ಬಹಿರಂಗಪಡಿಸಿದ್ದಾರೆ.
ncupodcast ಎಂಬ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ಪಾಡ್ಕಾಸ್ಟ್ನಲ್ಲಿ ಭಾಗವಹಿಸಿರುವ ಮಾಜಿ ಕ್ರಿಕೆಟರ್ ಮಾಡಿರುವ ಆರೋಪಗಳು ಆಘಾತಕಾರಿಯಾಗಿವೆ. ಕ್ರಿಕೆಟ್ ಆಯ್ಕೆ ಪ್ರಕ್ರಿಯೆಯಲ್ಲಿ ಪ್ರತಿಭೆಗಿಂತ ಹೆಚ್ಚಾಗಿ ಲೈಂಗಿಕ ಆಮಿಷಗಳು ಮತ್ತು ದುಬಾರಿ ಉಡುಗೊರೆಗಳೇ ಪ್ರಮುಖ ಪಾತ್ರ ವಹಿಸುತ್ತಿವೆ ಎಂಬ ಗಂಭೀರ ಆರೋಪ ಮಾಡಲಾಗಿದೆ.

'ಕೇವಲ ತಂಡದಲ್ಲಿ ಸ್ಥಾನ ಪಡೆಯುವ ಉದ್ದೇಶದಿಂದ ಹಿರಿಯ ಆಟಗಾರರು ಅಥವಾ ಪ್ರಭಾವಿಗಳ ಇಚ್ಛೆಯಂತೆ ತಮ್ಮ ಗೆಳತಿಯರನ್ನೇ ಲೈಂಗಿಕ ಆಮಿಷಕ್ಕೆ ಒಡ್ಡುತ್ತಿರುವ ಘಟನೆಗಳು ನಡೆಯುತ್ತಿವೆ. ಈ ಮೂಲಕ ಯುವ ಆಟಗಾರರ ಅಸಹಾಯಕತೆಯನ್ನೇ ಇಲ್ಲಿ ಬಂಡವಾಳ ಮಾಡಿಕೊಳ್ಳಲಾಗುತ್ತಿದೆ,' ಎಂಬ ಅಚ್ಚರಿ ಹೇಳಿಕೆ ನೀಡಿದ್ದಾರೆ.
ಅಚ್ಚರಿ ವಿಚಾರಗಳ ಬಹಿರಂಗ
ಈ ವಿಡಿಯೋದಲ್ಲಿ ಮಾತನಾಡಿರುವ ಮಾಜಿ ಕ್ರಿಕೆಟರ್ ಕ್ರಿಕೆಟ್ನ ಒಳರಾಜಕೀಯದ ಬಗ್ಗೆ ಭಯಾನಕ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ. 'ಕೆಲವು ಹಿರಿಯ ಆಟಗಾರರು ತಮ್ಮ ಜೂನಿಯರ್ ಆಟಗಾರರಿಗೆ ತಮ್ಮ ಗರ್ಲ್ಫ್ರೆಂಡ್ಸ್ ಕಳುಹಿಸುವಂತೆ ಒತ್ತಾಯಿಸುತ್ತಾರೆ. ನನಗೆ ತಿಳಿದಿರುವ ಕೆಲವು ಆಟಗಾರರು ಅವಕಾಶಕ್ಕಾಗಿ ತಮ್ಮ ಗೆಳತಿಯರನ್ನೇ ಕಳುಹಿಸಿದ ಉದಾಹರಣೆಗಳಿವೆ. ಇದು ಕೇವಲ ರಾಷ್ಟ್ರೀಯ ಮಟ್ಟದಲ್ಲಿ ಮಾತ್ರವಲ್ಲದೆ, ಸ್ಥಳೀಯ ಮಟ್ಟದ ಕ್ರಿಕೆಟ್ನಲ್ಲಿಯೂ ನಡೆಯುತ್ತಿದೆ,' ಎಂದು ಅವರು ಆರೋಪಿಸಿದ್ದಾರೆ.
ಮತ್ತೊಂದು ಆಘಾತಕಾರಿ ವಿಷಯವೆಂದರೆ 'ಒಬ್ಬ ಆಟಗಾರನು ಮತ್ತೊಬ್ಬ ಆಟಗಾರನ ಪತ್ನಿಗೆ ಇನ್ಸ್ಟಾಗ್ರಾಮ್ನಲ್ಲಿ ಅಶ್ಲೀಲ ಚಿತ್ರಗಳನ್ನು ಕಳುಹಿಸಿ ಕಿರುಕುಳ ನೀಡುತ್ತಾನೆ. ಆ ಸಂತ್ರಸ್ತ ಆಟಗಾರನಿಗೆ ಈ ವಿಷಯ ತಿಳಿದಿದ್ದರೂ, ತಂಡದಲ್ಲಿ ಸ್ಥಾನ ಕಳೆದುಕೊಳ್ಳುವ ಭೀತಿಯಿಂದ ಸುಮ್ಮನೆ ಇರುತ್ತಾನೆ. ಅಷ್ಟೇ ಅಲ್ಲದೆ ಆ ಕಿರುಕುಳ ನೀಡುವ ಆಟಗಾರನ ಜೊತೆಗೇ ಸಮಯ ಕಳೆಯುವ ಅನಿವಾರ್ಯತೆ ಅವನಿಗೆ ಇರುತ್ತದೆ,' ಎಂದು ಹೇಳಿದ್ದಾರೆ. ಇದು ಕ್ರಿಕೆಟ್ ಲೋಕದ ಅಮಾನವೀಯ ಮುಖವನ್ನು ತೋರಿಸುತ್ತದೆ.
ರಣಜಿ ಮತ್ತು ಐಪಿಎಲ್ ಆಯ್ಕೆಗೆ ದುಬಾರಿ ಕಾರುಗಳಿಗೆ ಬೇಡಿಕೆ
ಕೇವಲ ಲೈಂಗಿಕ ಆಮಿಷಗಳಷ್ಟೇ ಅಲ್ಲದೆ ಹಣಕಾಸಿನ ವ್ಯವಹಾರವೂ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ ಎಂದು ವಿಡಿಯೋದಲ್ಲಿ ಉಲ್ಲೇಖಿಸಲಾಗಿದೆ. 'ರಣಜಿ ಟ್ರೋಫಿ ಅಥವಾ ಐಪಿಎಲ್ನಂತಹ ದೊಡ್ಡ ಲೀಗ್ಗಳಲ್ಲಿ ಸ್ಥಾನ ಪಡೆಯಲು ಆಟಗಾರರು ಆಯ್ಕೆಗಾರರಿಗೆ ಐಷಾರಾಮಿ ಕಾರುಗಳು ಮತ್ತು ಮನೆಗಳನ್ನು ಉಡುಗೊರೆಯಾಗಿ ನೀಡುತ್ತಾರೆ,' ಎಂದು ಆರೋಪಿಸಲಾಗಿದೆ. ಇದರಿಂದ ಪ್ರತಿಭೆಯ ಆಧಾರದ ಮೇಲೆ ಸಿಗಬೇಕಾದ ರಣಜಿ ಟ್ರೋಫಿ ಅಥವಾ ಐಪಿಎಲ್ನಂತಹ ದೊಡ್ಡ ವೇದಿಕೆಗಳು ಈಗ ಹಣದ ಹೊಳೆ ಹರಿಸುವವರಿಗೆ ಮೀಸಲಾಗುತ್ತಿವೆಯೇ ಎಂಬ ಸಂಶಯಗಳು ವ್ಯಕ್ತವಾಗಿವೆ.
ಕ್ರೀಡಾ ಭವಿಷ್ಯಕ್ಕೆ ಎದುರಾಗಿರುವ ಅಪಾಯ
ಈ ಆರೋಪಗಳು ನಿಜವಾಗಿದ್ದರೆ ಕಠಿಣ ಪರಿಶ್ರಮ ಪಡುವ ಬಡ ಮತ್ತು ಮಧ್ಯಮ ವರ್ಗದ ಪ್ರತಿಭಾವಂತ ಆಟಗಾರರು ಕ್ರಿಕೆಟ್ನಿಂದ ದೂರ ಸರಿಯುವಂತಾಗುತ್ತದೆ. ಪ್ರತಿಭೆಯ ಬದಲು ಪ್ರಭಾವ ಮತ್ತು ಲಂಚದ ಆಧಾರದ ಮೇಲೆ ತಂಡ ಕಟ್ಟಿದರೆ, ಭಾರತೀಯ ಕ್ರಿಕೆಟ್ನ ಗುಣಮಟ್ಟ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕುಸಿಯುವುದು ಖಚಿತ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಒಟ್ಟಿನಲ್ಲಿ ಇದೀಗ ಈ ವಿಡಿಯೋ ಭಾರಿ ಸಂಚಲನ ಮೂಡಿಸಿದ್ದು, ಬಿಬಿಸಿಐ ಮತ್ತು ಸಂಬಂಧಪಟ್ಟ ರಾಜ್ಯ ಕ್ರಿಕೆಟ್ ಸಂಸ್ಥೆಗಳು ಈ ಬಗ್ಗೆ ತನಿಖೆ ನಡೆಸಿ ಪಾರದರ್ಶಕತೆಯನ್ನು ಕಾಪಾಡಬೇಕು ಎಂಬ ಒತ್ತಾಯಗಳು ಕೇಳಿಬರುತ್ತಿದೆ. ಗ್ಲಾಮರ್ ಮತ್ತು ಹಣದ ಅಮಲಿನಲ್ಲಿ ಕ್ರಿಕೆಟ್ನ ಪವಿತ್ರತೆ ಹದಗೆಡಬಾರದು ಎಂಬುದು ಅಭಿಮಾನಿಗಳ ಆಶಯವಾಗಿದೆ.












Click it and Unblock the Notifications