Karnataka Rains: ಭರ್ಜರಿ ಮಳೆಗೆ ವಿವಿಧ ಜಿಲ್ಲೆಗಳಲ್ಲಿ ಪ್ರವಾಹ: ಮುಂದಿನ 5 ದಿನ ಭಾರೀ ಮಳೆ- ರೆಡ್ ಅಲರ್ಟ್
ಬೆಂಗಳೂರು: ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಮುಂಗಾರು ಮಳೆ ಅಬ್ಬರಿಸುತ್ತಿದೆ. ಆರಂಭದಲ್ಲಿ ದುರ್ಬಲ ಎನ್ನಲಾಗಿದ್ದ ಮುಂಗಾರು ಮಳೆ ಇದೀಗ ತನ್ನ ನಿಜಸ್ವರೂಪ ಪ್ರದರ್ಶಿಸುತ್ತಿದ್ದು, ಮೊದಲ ಬಿರುಗಾಳಿ ಮಳೆಗೆ ವಿವಿಧ ಜಿಲ್ಲೆಗಳ ಅನೇಕ ಪ್ರದೇಶಗಳು ಜಲಾವೃತವಾಗಿವೆ. ಜನ ಸಂಚಾರ ಅಸ್ತವ್ಯಸ್ತವಾಗಿದೆ. ಇಂದು ಭಾನುವಾರ ಸಹ ಕರಾವಳಿ ಭಾಗದಲ್ಲಿ ಗಂಟೆಗಳ ಕಾಲ ಮಳೆ ಸುರಿದಿದೆ. ಉತ್ತರ ಕರ್ನಾಟಕದಲ್ಲೂ ಧಾರಾಕಾರ ಮಳೆ ದಾಖಲಾಗಿದೆ. ಮುಂದಿನ 5ದಿನ ಭಾರೀ ಮಳೆ ಮುಂದುವರಿಯಲಿದ್ದು, ಹಲವು ಜಿಲ್ಲೆಗಳಿಗೆ 'ರೆಡ್ ಅಲರ್ಟ್' ಘೋಷಿಸಲಾಗಿದೆ.
ವ್ಯಾಪಕ ಮಳೆ, ಅನ್ನದಾತರ ಮೊಗದಲ್ಲಿ ಹರ್ಷದ ಹೊಳೆ
ಇಂದು ಸಂಜೆ 4ಗಂಟೆ ಹೊತ್ತಿಗೆ ಬೀದರ್, ವಿಜಯಪುರ, ಬೆಳಗಾವಿ, ಉತ್ತರ ಕನ್ನಡ, ಧಾರವಾಡ ಹಾಗೂ ಬಾಗಲಕೋಟೆ ವ್ಯಾಪ್ತಿಯ ಹಲವೆಡೆ ಸಾಧಾರಣದಿಂದ ಭಾರೀ ಮಳೆ ಬಿದ್ದಿದೆ. ಈ ಮಳೆಯು ಬಿತ್ತನೆ ಮಾಡಿ ಮಳೆಗಾಗಿ ಕಾಯುತ್ತಿದ್ದ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಪೂರ್ವ ಮುಂಗಾರು ಮಳೆ ಉತ್ತಮವಾಗಿ ಸುರಿದು ಮರೆ ಆಗಿತ್ತು. ಜಮೀನು ಹದಕ್ಕೆ ಬಂದ ಹಿನ್ನೆಲೆ ರೈತರು ಸೋಯಾಬಿನ್, ಶೇಂಗಾ, ಮೆಕ್ಕೆಜೋಳ ಇನ್ನಿತರ ಖಾರಿಫ್ ಬೆಳೆ ಬಿತ್ತಿದ್ದರು. ಅದರೆ ಮುಂಗಾರು ಆಗಮನ ವಿಳಂಬ ಹಿನ್ನೆಲೆ ಹತ್ತು ದಿನಕ್ಕೂ ಹೆಚ್ಚು ಕಾಲ ಮಳೆ ಇಲ್ಲದೇ ರೈತರು ಚಿಂತೆಗೀಡಾಗಿದ್ದರು. ಇದೀಗ ಸಕಾಲಕ್ಕೆ ವ್ಯಾಪಕ ಮಳೆ ಆಗಿದ್ದು, ಅನ್ನದಾತರಲ್ಲಿ ಉತ್ತಮ ಇಳುವರಿಯ ನಿರೀಕ್ಷೆ ಹುಟ್ಟಿಸಿದೆ.

ಉತ್ತರ ಕನ್ನಡದಲ್ಲಿ ಭಾರೀ ಮಳೆ, ಪ್ರವಾಹ ಸ್ಥಿತಿ
ಶಿರಸಿ, ಉತ್ತರ ಕನ್ನಡ ಭಾಗದಲ್ಲಿ ಇಂದು ಬೆಳಗ್ಗೆಯಿಂದ ಜಿಟಿ ಜಿಟಿ ಮಳೆ ಆಗುತ್ತಿತ್ತು. ಮಧ್ಯಾಹ್ನ ಹೊತ್ತಿಗೆ ಸುಮಾರು 2.30 ಗಂಟೆಯ ಕಾಲ ನಿರಂತರವಾಗಿ ಭಾರೀ ಮಳೆ ಸುರಿದ ಪರಿಣಾಮ ನಗರದ ರಸ್ತೆಗಳು, ಒಳಚರಂಡಿಗಳ ಮೇಲೆ ನೀರು ನಿಂತದ್ದು ಕಂಡು ಬಂತು. ಕೆಲವು ಪ್ರದೇಶಗಳಲ್ಲಿ ನಿಲ್ಲಿಸಿದ್ದ ಕಾರುಗಳ ಚಕ್ರಗಳು ಕಾಣದಷ್ಟು ನೀರು ನಿಂತು ಸಮಸ್ಯೆ ಸೃಷ್ಟಿಸಿತು.
ಬಳ್ಳಾರಿ: 126 ಮಿಮೀ ಭರ್ಜರಿ ಮಳೆ, ಬ್ರಿಡ್ಜ್ನಲ್ಲಿ ಸಿಲುಕಿದ ಲಾರಿ
ಇನ್ನೂ ಬಳ್ಳಾರಿಯ ಕೊಪ್ಪಗಲ್ ಪ್ರದೇಶದ ಸುತ್ತಮುತ್ತ ಭರ್ಜರಿ ಮಳೆ ಆಗಿದೆ. ಇಂದು ಬೆಳಗ್ಗೆಯಿಂದ ಈವರೆಗೆ 126 ಮಿಲಿ ಮೀಟರ್ಗೂ ಅಧಿಕ ಮಳೆ ದಾಖಲಾಗಿದೆ. ಬೇಸಿಗೆಗೆ ತುತ್ತಾಗಿ ಯಾವಾಗ ಮಳೆ ಆಗುತ್ತೋ ಎಂದು ಕಾಯುತ್ತಿದ್ದ ಜನರಿಗೆ ಮೊದಲ ಮಳೆಯೇ ಸಾಕು ಸಾಕು ಎನ್ನುವಂತೆ ಮಾಡಿದೆ. ಅಷ್ಟರ ಮಟ್ಟಿಗಿನ ಮಳೆ ಇಲ್ಲಿ ಕಳೆದ 24 ಗಂಟೆಗಳಲ್ಲಿ ಆಗಿದೆ ಎಂದು ಹವಾಮಾನ ಇಲಾಖೆ ಮೂಲಗಳು ತಿಳಿಸಿವೆ.
ಬಳ್ಳಾರಿ ನಗರದಲ್ಲಿ ನಿನ್ನೆ ಶನಿವಾರ ಸಹ ಉತ್ತಮ ಮಳೆ ಆಗಿದ್ದು, ಒಟ್ಟು 110 ಮಿಲಿ ಮೀಟರ್ ಮಳೆ ದಾಖಲಾಗಿದೆ. ಮಳೆಗೆ ಇಲ್ಲಿನ ದುರ್ಗಮ್ಮ ದೇವಸ್ಥಾನದ ಕೆಳ ಸೇತುವೆಯಲ್ಲಿ 3-4 ಅಡಿಗಳಷ್ಟು ನೀರು ನಿಂತಿದ್ದು, ಅದೇ ಮಾರ್ಗವಾಗಿ ಬರುತ್ತಿದ್ದ ಲಾರಿಯ ಅರ್ಧ ಭಾಗ ಮುಳುಗಿತ್ತು. ಲಾರಿ ಮುಂದೆ ಚಲಿಸಲಾಗದೇ ನೀರಿನಲ್ಲೇ ನಿಂತ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಳ್ಳಾರಿ ನಗರದ ಜನತೆ ಹಿಂದೆಂದೂ ನೋಡಿರದ ಅಭೂತಪೂರ್ವ ದೃಶ್ಯವನ್ನು ಈ ವರ್ಷದ ಮುಂಗಾರು ಮೊದಲ ಮಳೆಯಲ್ಲಿ ಕಂಡಿರುವುದಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ 11 ಜಿಲ್ಲೆಗಳಲ್ಲಿ ಶನಿವಾರ ಸುರಿದ ಮಳೆ ಭಾನುವಾರವು ಮುಂದುವರಿಯಿತು. ಹಾವೇರಿ, ಹುಬ್ಬಳ್ಳಿ ಭಾಗದಲ್ಲಿ ಗಂಟೆಗಳ ಕಾಲ ಜೋರು ಮಳೆ ಆಗಿದ್ದು, ಜನರು ಮನೆಯಿಂದ ಹೊರ ಬಾರದ ಸ್ಥಿತಿ ನಿರ್ಮಾಣವಾಗಿತ್ತು. ಇಂದು ತಲಕಾವೇರಿಯಲ್ಲಿ 39 ಮಿಲಿ ಮೀಟರ್, ಭಾಗಮಂಡಲದಲ್ಲಿ 14.5 ಮಿಲಿ ಮೀಟರ್ ಮಳೆ ಆಗಿದೆ. ಕೊಡಗು, ಮೈಸೂರು, ಶಿವಮೊಗ್ಗ, ದಕ್ಷಿಣ ಕನ್ನಡ ಭಾಗದಲ್ಲಿ ಮಳೆ ಆರ್ಭಟ ಮುಂದುವರಿದಿದೆ.
5 ದಿನ ಭಾರೀ ಮಳೆ: ರೆಡ್, ಆರೆಂಜ್ ಅಲರ್ಟ್
ರಾಜ್ಯವ್ಯಾಪಿ ಬಹುಬೇಗನೆ ವಿಸ್ತರಿಸಿದ ಮುಂಗಾರು ಮಳೆ ಮುಂದಿನ 5 ದಿನ ಕರಾವಳಿ, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಧಾರಾಕಾರವಾಗಿ ಸುರಿಯಲಿದೆ. ಜೂನ್ 9 ರಿಂದ 11ರವರೆಗೆ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಜೂನ್ 9, 10 ರಂದು ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಜೂನ್ 11ರಂದು ಮಾತ್ರ ಬೆಳಗಾವಿ, ಧಾರವಾಡ, ಹಾವೇರಿ ಜಿಲ್ಲೆಗಳಲ್ಲಿ ಸುಮಾರು 200 ಮಿಲಿ ಮೀಟರ್ಗಿಂತಲೂ ಅತ್ಯಧಿಕ ಮಳೆ ಆಗುವ ಸಾಧ್ಯತೆ ಇದ್ದು, ಐಎಂಡಿ 'ರೆಡ್ ಅಲರ್ಟ್' ಘೋಷಿಸಿದೆ.
Sirsi ,Uttarakannada Heavy Rain for 2.5 hours....flooding
— Namma Karnataka Weather (@namma_vjy) June 7, 2026
VC Pavan#KarnatakaRains pic.twitter.com/eFRrGHnFXx
ನಾಳೆ ಸೋಮವಾರ ಜೂನ್ 8ರಿಂದ ಕರಾವಳಿ, ಉತ್ತರ ಒಳನಾಡಿನಲ್ಲಿ ಅತ್ಯಧಿಕ ಮಳೆ ನಿರೀಕ್ಷೆ ಇದೆ. ದಕ್ಷಿಣ ಒಳನಾಡಿನ ಹಾಸನ, ಬಳ್ಳಾರಿ, ಕೊಡಗು, ಶಿವಮೊಗ್ಗ, ತುಮಕೂರು, ಚಿಕ್ಕಮಗಳೂರು ವ್ಯಾಪ್ತಿಯಲ್ಲಿ ಪ್ರತ್ಯೇಕ ದಿನಗಳಲ್ಲಿ ಸಾಧಾರಣದಿಂದ ಭಾರೀ ಮಳೆ ಆಗಲಿದೆ. ಮೂರು ದಿನಗಳ ನಂತರ ಈ ಭಾಗದಲ್ಲೂ ಮುಂಗಾರು ಚುರುಕು ಪಡೆಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
Ballari City after the heavy rains last evening.#KarnatakaRains https://t.co/kBjGQRAj0e
— Namma Karnataka Weather (@namma_vjy) June 7, 2026














Click it and Unblock the Notifications