Video Viral: ಉರಿ ಬಿಸಿಲಿಗೆ ರೈಲ್ವೆಯ ಕೂಲ್ ಐಡಿಯಾ; ಪ್ಲಾಟ್ಫಾರ್ಮ್ನಲ್ಲಿ ಮಳೆ ಮಂಜಿನ ಅನುಭವ
Video Viral: ಒಂದೆಡೆ ಮುಂಗಾರು ಮಳೆ (Monsoon Rain) ಆಗಮಿಸುವ ದಿನಗಳು ಹತ್ತಿರವಾದರೆ ಮತ್ತೊಂದೆಡೆ ತೀವ್ರ ಬಿಸಿಲು ಜನರನ್ನು ಬಾಧಿಸುತ್ತಿದೆ. ಉತ್ತರ ಭಾರತದ ಅನೇಕ ರಾಜ್ಯಗಳಲ್ಲಿ ಶಾಖ ಅಲೆಗೆ ಜನರು ಹೈರಾಣಾಗಿದ್ದಾರೆ. ಮನೆಯಿಂದ ಹೊರ ಬರುವುದು ಕಷ್ಟಕರವಾಗಿದೆ. ಇದರ ನಡುವೆ ರೈಲ್ವೆ ಅಧಿಕಾರಿಗಳು ತನ್ನ ಪ್ರಯಾಣಿಕರಿಗಾಗಿ ಉತ್ತಮ ಮಾರ್ಗವೊಂದನ್ನು ಕಂಡು ಕೊಂಡಿದ್ದಾರೆ. ರೈಲು ನಿಲ್ದಾಣದಲ್ಲಿ ಮಂಜಿನ ಅನುಭವ ಕಲ್ಪಿಸಿದ್ದು, ಅದರ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.
ಬೇಸಿಗೆಯ ತೀವ್ರ ಶಾಖವನ್ನು ಎದುರಿಸಲು ಒಂದು ಚಿಂತನಶೀಲ ಉಪಕ್ರಮವನ್ನು ರೈಲ್ವೆಯು ಜಾರಿಗೊಳಿಸಿದೆ. ಛತ್ತೀಸ್ಗಢದ ಬಿಲಾಸ್ಪುರ ರೈಲ್ವೆ ಜಂಕ್ಷನ್ ಪ್ಲಾಟ್ಫಾರ್ಮ್ 1ರಲ್ಲಿ ಜನರಿಗೆ ಬಿಸಿಲಿನಿಂದ ತಾತ್ಕಾಲಿಕ ರಿಲೀಫ್ ಸಿಗುವಂತೆ ಮಾಡಿದೆ. ಬಿಸಿಲಿಗೆ ಹೈರಾಣಾಗಿ ರೈಲು ನಿಲ್ದಾಣದ ದಟ್ಟಣೆಯಲ್ಲಿ ನಿಲ್ಲಲು ಜನ ಪರದಾಡುವ ಸ್ಥಿತಿ ಇದೆ. ಇದನ್ನು ಕಂಡು ರೈಲ್ವೆ ಅಧಿಕಾರಿಗಳು ನಿಲ್ದಾಣದಲ್ಲಿ ನಿಂತ ಜನರ ಮೇಲೆ ಮಂಜಿನ ನೀರಿನ ಹನಿ (ಸ್ಪ್ರೇ) ರೀತಿಯಲ್ಲಿ ಉಲ್ಲಾಸಕರ ವಾತಾವರಣ ನಿರ್ಮಿಸಿದೆ. ಇದರಿಂದ ಉಷ್ಣ ಅಲೆಗೆ ಬೇಸತ್ತ ಜನರಿಗೆ ತ್ವರಿತ ಪರಿಹಾರ ಸಿಕ್ಕಂತಾಗಿದೆ. ಈ ಬಿಸಿಲು ಸಾಕಪ್ಪ...ಸಾಕು..ಎಂದವರು ಇಲ್ಲಿ ಬರುತ್ತಿದ್ದಂತೆ ಸ್ಪ್ರೇನೀರಿಗೆ ಮೈ ಒಡ್ಡಿ ಖುಷಿ ಪಟ್ಟು ಪ್ರಯಾಣ ಮುಂದುವರಿಸುತ್ತಿದ್ದಾರೆ.

ಸೆಖೆಯಿಂದ ಪ್ರಯಾಣಿಕರಿಗೆ ರಿಲೀಫ್: ವಿಡಿಯೋ ವೈರಲ್
ಬಿಲಾಸ್ಪುರ ರೈಲು ನಿಲ್ದಾಣಕ್ಕೆ ಬರುವ ಪ್ರಯಾಣಿಕರು ಇಲ್ಲಿಗೆ ಬರುತ್ತಿದ್ದಂತೆ ಹೊರಗಿನ ಶಾಖದ ಅಲೆಯನ್ನು ಮರೆಯುವಂತೆ ಮಾಡಿದೆ. ನಿಲ್ದಾಣದಲ್ಲಿ ಪ್ಲಾಟ್ಫಾರ್ಮ್ ಮೇಲಿನ ಛಾವಣಿ ಕೆಳಭಾಗದಲ್ಲಿ ನೀರಿನ ಪೈಪ್ ಸಹಾಯದಿಂದ ಸ್ಪ್ರೇ ರೀತಿಯಲ್ಲಿ ನೀರು ಪ್ರಯಾಣಿಕರ ಮೇಲೆ ಜಿನುಗುವಂತೆ ಮಾಡಲಾಗಿದೆ. ಜನಸಂದಣಿ ಹೆಚ್ಚಿರುವಾಗ ಸೆಖೆ ಇನ್ನಷ್ಟು ಕಿರಿ ಕಿರಿ ಉಂಟು ಮಾಡುತ್ತದೆ. ಅದರಿಂದ ಮುಕ್ತಿ ಪಡೆಯಲು, ಪ್ರಯಾಣಿಕರಿಗೆ ಕೊಂಚ ರಿಲೀಫ್ ನೀಡುವ ಉದ್ದೇಶದಿಂದ ನವೀನ ತಂಪಾಗಿಸುವ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ವಿಡಿಯೋ ನೋಡಿದ ನೆಟ್ಟಿಗರಿಂದ ಬುದ್ಧಿಮಾತು
'ತಾಪಮಾನ ಹೆಚ್ಚಿರುವ ಇಂದಿನ ದಿನಗಳಲ್ಲಿ ದೇಶದ ಎಲ್ಲ ರೈಲು ನಿಲ್ದಾಣಗಳು ಈ ರೀತಿಯ ತಂಪಾಗಿಸುವ ವ್ಯವಸ್ಥೆಯನ್ನು ಅಳವಡಿಸಿದರೆ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ' ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು 'ನಾವು ಮರಗಳನ್ನು ನೆಡುವುದನ್ನು ಬಿಟ್ಟು ಉಳಿದೆಲ್ಲವನ್ನೂ ಮಾಡುತ್ತಿದ್ದೇವೆ. ಅದಕ್ಕೆ ಬೇಸಿಗೆಯಲ್ಲಿ ಈ ರೀತಿಯ ಅನುಭವ ಅನಭವಿಸುವಂತಾಗಿದೆ' ಎಂದಿದ್ದಾರೆ.
ಮೂರನೇಯವರು "ದೇಶದಲ್ಲಿ ಮರಗಳಿಗೆ ಕತ್ತರಿ ಹಾಕುವ ಕೆಲಸ ಹೆಚ್ಚಾಗುತ್ತಿದೆ. ಇದು ಜಾಗತಿಕ ತಾಪಮಾನ ಏರಿಕೆಗೆ ಕಾರಣವಾಗುತ್ತಿದೆ. ಅದರಲ್ಲೂ ಸಾರ್ವಜನಿಕ ಸಾರಿಗೆಯ ನಿಲ್ದಾಣ, ಜಂಕ್ಷನ್ ಬಳಿ ಸಾರಿಗೆ ಮೂಲಸೌಕರ್ಯಕ್ಕಾಗಿ ಮರಗಳನ್ನು ಕಡಿದು ಹಾಕುತ್ತಿದ್ದೇವೆ. ಇದೀಗ ಇಂತಹ ಜಿನುಗುವ ಉಪಕ್ರಮದ ಹೆಸರಿನಲ್ಲಿ ಸಂತೋಷ ಪಡುವಂತಾಗಿದೆ' ಎಂದು ಪರಿಸರ, ಮರಗಳ ಮಹತ್ವ ತಿಳಿಸಿದ್ದಾರೆ.
"ಬಹುತೇಕ ರೈಲ್ವೆ ನಿಲ್ದಾಣಗಳು ದೊಡ್ಡ ಪ್ರದೇಶವನ್ನು ಹೊಂದಿರುತ್ತವೆ. ಅದರ ಸುತ್ತಮುತ್ತ ಎಲ್ಲಿ ನೋಡಿದರೂ ಹೆಚ್ಚಿನ ಮರಗಳು ಕಾಣುವುದಿಲ್ಲ. ಸರ್ಕಾರದಿಂದ ಹೆಚ್ಚು ಹೆಚ್ಚು ಗಿಡ ನೆಡಬೇಕು. ಅಲಂಕಾರಿಕ ದುಬಾರಿ ಸಸ್ಯಗಳ ಬದಲಾಗಿ ಮಾವು, ಹಲಸು ಇನ್ನಿತರ ನಿಜವಾದ ಗಿಡ/ಮರಗಳನ್ನು ನೆಟ್ಟು ಬೆಳೆಸಬೇಕೆಂದು' ಸಲಹೆ ನೀಡಿದ್ದಾರೆ.
🚨 Bilaspur railway station sprays water from its roof to cool passengers amid extreme heat. pic.twitter.com/9CbTmiA0H0
— Indian Tech & Infra (@IndianTechGuide) May 23, 2026
ಇನ್ನೊಂದು ವಾರದಲ್ಲಿ ಶಾಖದ ಅಲೆ ಇಳಿಕೆ
ಸದ್ಯ ದಕ್ಷಿಣ ಭಾರತದ ವಿವಿಧ ರಾಜ್ಯಗಳಲ್ಲಿ ಗರಿಷ್ಠ ತಾಪಮಾನ ಕೊಂಚ ಇಳಿಕೆ ಆಗಿದೆ. ಏಕೆಂದರೆ ಸಮುದ್ರ ಭಾಗದಲ್ಲಿ ತೀವ್ರ ಸ್ವರೂಪದ ಬದಲಾವಣೆ ಆಗಿವೆ. ಇದು ಮುಂಗಾರು ಮಳೆ ಆಗಮನಕ್ಕೆ ಪೂರಕ ಎಂದು ಐಎಂಡಿ ತಿಳಿಸಿದೆ. ಮೇ 26ಕ್ಕೆ ಮುಂಗಾರು ಆಗಮಿಸಿ, ಉತ್ತರ ಭಾರತದ ವಿವಿಧ ರಾಜ್ಯಗಳಿಗೆ ಒಂದು ವಾರದಲ್ಲಿ ವಿಸ್ತರಣೆ ಆದರೆ ಭಾಗದಲ್ಲೂ ಸಹ ಒಣಹವೆ ಇಳಿಕೆ ಆಗಲಿದೆ.














Click it and Unblock the Notifications