ಕೊಡಗಿನಲ್ಲಿ ಕುಂಭದ್ರೋಣ ಮಳೆ, ಭಾಗಮಂಡಲ ಜಲಾವೃತ
ಮಡಿಕೇರಿ, ಜೂನ್ 29 : ಕೊಡಗಿನಲ್ಲಿ ಮುಂಗಾರು ಬಿರುಸುಗೊಂಡಿದೆ. ಕಳೆದ ಎರಡು ದಿನಗಳಿಂದ ಕುಂಭದ್ರೋಣ ಮಳೆ ಸುರಿಯುತ್ತಿರುವುದರಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಭಾಗಮಂಡಲದಲ್ಲಿ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಿದ ಪರಿಣಾಮ ತ್ರಿವೇಣಿ ಸಂಗಮ ಜಲಾವೃತಗೊಂಡಿದೆ.
ಮಂಗಳವಾರ ಒಂದೇ ದಿನ ಸುಮಾರು 41 ಮಿ.ಮೀ ಮಳೆಯಾಗಿದ್ದು, ರಾತ್ರಿಯೆಲ್ಲ ಮಳೆ ಸುರಿದ ಪರಿಣಾಮ, ಸಣ್ಣಪುಟ್ಟ ಹೊಳೆಗಳು ಉಕ್ಕಿ ಹರಿಯುತ್ತಿವೆ. ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ಮಳೆಯ ನಡುವೆ ಚಳಿಯೂ ಹೆಚ್ಚಾಗಿದ್ದು, ಚಳಿಯ ಹೊಡೆತಕ್ಕೆ ಜನ ತತ್ತರಿಸುವಂತಾಗಿದೆ. [ಬೆಂಗಳೂರಿಗರಿಗೆ ಗುಡ್ ಮಾರ್ನಿಂಗ್ ಹೇಳಿದ ತುಂತುರು ಮಳೆ!]
ಕೆಲವೆಡೆ ಭೂಕುಸಿತ, ಮರಗಳು ಉರುಳಿ ಬಿದ್ದ ವರದಿಗಳಾಗಿವೆ. ವಿದ್ಯುತ್ ಸಮಸ್ಯೆ ಉದ್ಭವಿಸಿದೆ. ವಿದ್ಯಾರ್ಥಿಗಳು ಶಾಲೆಗೆ ತೆರಳಲು ಪರದಾಡುವಂತಾಗಿದೆ. ಬಟ್ಟೆ, ಬ್ಯಾಗ್ಗಳು ಒದ್ದೆಯಾಗುತ್ತಿವೆ. ಸಾಮಾನ್ಯವಾಗಿ ಜಿಟಿ ಜಿಟಿ ಮಳೆಯಿಂದ ಆರಂಭವಾಗುತ್ತಿದ್ದ ಮಳೆಗಾಲ ಬಳಿಕ ಬಿರುಸುಗೊಳ್ಳುತ್ತಿತ್ತು. ಆದರೆ ಈ ಬಾರಿ ಹಾಗೆ ಆಗಲಿಲ್ಲ. ಬೇಸಿಗೆಯಲ್ಲಿ ಒಂದು ಹನಿಯೂ ಬೀಳದೆ ಏಪ್ರಿಲ್ ತನಕ ಕಾಫಿ ಬೆಳೆಗಾರರನ್ನು ತಲ್ಲಣಗೊಳಿಸಿದ ಮಳೆ, ಇದೀಗ ಸುರಿಯತೊಡಗಿದ್ದು, ಯಾವುದೇ ಕೃಷಿ ಚಟುವಟಿಕೆಗಳು ಸಮರ್ಪಕವಾಗಿ ನಡೆದಿಲ್ಲ.
ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಭತ್ತದ ಕೃಷಿ ಚಟುವಟಿಕೆಗಳು ಗರಿಗೆದರುತ್ತಿದ್ದವು. ಆದರೆ ಇತ್ತೀಚೆಗೆ ಭತ್ತದ ಕೃಷಿಯತ್ತ ಒಲವು ಕಡಿಮೆಯಾಗುತ್ತಿದೆ. ಕೂಲಿ ಕಾರ್ಮಿಕರ ಕೊರತೆಯಿಂದಾಗಿ ಕೃಷಿ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಈ ವೇಳೆಗೆಲ್ಲ ಭತ್ತದ ಮಡಿಗಳನ್ನು ತಯಾರಿಸಿ ನಾಟಿಗೆ ಸಜ್ಜು ಮಾಡಲಾಗುತ್ತಿತ್ತು. ಆದರೆ ಇದೀಗ ನಿಧಾನವಾಗಿ ಭತ್ತದ ಕೃಷಿ ಚಟುವಟಿಕೆ ಆರಂಭಿಸಿರುವುದು ಕಂಡು ಬರುತ್ತಿದೆ.
ಮಳೆ ಬಿರುಸಿನಿಂದ ಸುರಿದರೆ ಯಾವುದೇ ಕೃಷಿ ಕೆಲಸ ಮಾಡುವುದು ಅಸಾಧ್ಯವಾದ ಕಾರಣ ಕಾರ್ಮಿಕರು ಮನೆಯಲ್ಲೇ ಉಳಿಯುವಂತಾಗಿದೆ. ಇನ್ನೂ ವಾಡಿಕೆಯ ಮಳೆಯಾಗಿಲ್ಲ. ಹೀಗೇ ಮುಂದುವರೆದರೆ ಕಾವೇರಿ ಕಣಿವೆಯಲ್ಲಿ ನೀರಿನ ಪ್ರಮಾಣ ಜಾಸ್ತಿಯಾಗಿ ಕೃಷ್ಣ ರಾಜ ಸಾಗರ ಅಣೆಕಟ್ಟೆ(ಕೆಆರ್ಎಸ್)ಯಲ್ಲಿ ನೀರಿನ ಪ್ರಮಾಣ ಜಾಸ್ತಿಯಾಗಬಹುದೇನೋ? ಕೆಆರ್ಎಸ್ನ ಸದ್ಯದ ನೀರಿನ ಮಟ್ಟ 69.48 ಅಡಿಯಷ್ಟಿದೆ. ['ಮಡಿಕೇರಿಯಲ್ಲಿ ಇದೇನ್ ಮಹಾ ಮಳೆ? ಈ ಬಾರಿ ತಡವಾಯ್ತು']
ಕೊಡಗಿನಲ್ಲಿ ಕಾವೇರಿ ನದಿ ಹರಿಯುವ ಕೆಲವು ಸ್ಥಳಗಳಲ್ಲಿ ಪ್ರವಾಹ ಭೀತಿ ಎದುರಾಗಿದ್ದು, ಅಲ್ಲಿ ಎಚ್ಚರಿಕೆ ವಹಿಸಲಾಗಿದೆ. ನದಿ ತಟದಲ್ಲಿ ವಾಸವಿರುವ ನಿವಾಸಿಗಳಿಗೆ ಸೂಕ್ತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ.
ಮಡಿಕೇರಿ ತಾಲೂಕಿನ ತಲಕಾವೇರಿ, ಭಾಗಮಂಡಲ, ಮಡಿಕೇರಿ, ಮೂರ್ನಾಡು ವ್ಯಾಪ್ತಿಯಲ್ಲಿ ಭಾರೀ ಮಳೆಯಾಗಿದೆ. ಇನ್ನೂ ವೀರಾಜಪೇಟೆ ವ್ಯಾಪ್ತಿಯಲ್ಲಿ ಮಳೆಯಾಗುತ್ತಿರುವುದರಿಂದ ಇರ್ಪು ಜಲಪಾತ ವೈಭವತೆ ಹೆಚ್ಚಿಸಿಕೊಂಡಿದ್ದರೆ, ಲಕ್ಷ್ಮಣ ತೀರ್ಥ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ಒಟ್ಟಾರೆ ಮಳೆ ತನ್ನ ಬಿರುಸು ಹೆಚ್ಚಿಸಿದ್ದು ಉತ್ತಮ ಮಳೆಯಾಗುವ ಲಕ್ಷಣ ಕಂಡು ಬರುತ್ತಿದ್ದು ರೈತರು ಖುಷಿ ಪಡುವಂತಾಗಿದೆ. [ಮೈದುಂಬಿ ಧುಮ್ಮಿಕ್ಕುತಿಹ ಅಬ್ಬಿ ಫಾಲ್ಸ್ನತ್ತ ಪ್ರವಾಸಿಗರ ದೌಡು]
ಈ ನಡುವೆ ಪ್ರವಾಹವನ್ನು ಎದುರಿಸುವ ಸಲುವಾಗಿ ತಾಲೂಕುವಾರು ತಂಡವನ್ನು ರಚನೆ ಮಾಡಲಾಗಿದ್ದು ಸನ್ನದ್ಧವಾಗಿರುವಂತೆ ಆದೇಶ ಮಾಡಲಾಗಿದೆ. ಮಳೆಯ ರಭಸ ಹೆಚ್ಚಾಗುತ್ತಿದ್ದಂತೆಯೇ ಪ್ರವಾಹ, ಭೂಕುಸಿತ, ಸಂಚಾರಕ್ಕೆ ಅಡ್ಡಿ ಉಂಟಾಗುವ ಪರಿಸ್ಥಿತಿ ತಲೆದೋರುವ ಕಾರಣ ಅವುಗಳನ್ನು ಸಮರ್ಪಕವಾಗಿ ನಿಭಾಯಿಸಲು ಜಿಲ್ಲಾಡಳಿತ ಮುಂದಾಗಿದೆ.
ಈ ಸಂಬಂಧ ಸಂತ್ರಸ್ಥರಿಗೆ ಗಂಜಿ ಕೇಂದ್ರ ವ್ಯವಸ್ಥೆ ಕಲ್ಪಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಸಂಬಂಧಿಸಿದ ಅಧಿಕಾರಿಗಳು ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಸಾರ್ವಜನಿಕರಿಗೆ ಯಾವುದೇ ಅಡಚಣೆಯಾಗದಂತೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ. [ಧೋಧೋ ಸುರಿವ ಮಳೆಯಲ್ಲಿ ಕುಡಿದ ಯುವಕನ ರಂಪಾಟ]
ಪ್ರವಾಹ ಉಂಟಾಗುವ ಪ್ರದೇಶಗಳಲ್ಲಿ ಅಗತ್ಯ ಮುನ್ನೆಚ್ಚರಿಕೆ ವಹಿಸಲು ಆಯಾಯ ಪ್ರದೇಶದ ವ್ಯಾಪ್ತಿಯಲ್ಲಿ ಅಧಿಕಾರಿಗಳ ತಂಡವನ್ನು ನಿಯೋಜಿಸಲಾಗಿದ್ದು ಈ ತಂಡದ ಮುಖ್ಯಸ್ಥರುಗಳು ಅಧಿಕಾರಿಗಳು ಪ್ರಕೃತಿ ವಿಕೋಪದ ಸಂದರ್ಭ ಸಾರ್ವಜನಿಕರಿಗೆ ಹಾಗೂ ವಾಹನ ಸಂಚಾರಕ್ಕೆ ಯಾವುದೇ ಅಡಚಣೆಯಾಗದಂತೆ ಕ್ರಮ ಕೈಗೊಳ್ಳಲಿದ್ದಾರೆ.