ಕರ್ನಾಟಕದಲ್ಲಿ ಇನ್ನೂ ಎರಡು ದಿನ ಮಳೆ ಸುರಿಯಲಿದೆ
ಬೆಂಗಳೂರು, ಮೇ 9 : ಕರ್ನಾಟಕದ ವಿವಿಧ ಜಿಲ್ಲೆಯಗಳಲ್ಲಿ ಬಿಸಿಲಿನ ಬೇಗೆಯಿಂದ ಕಂಗೆಟ್ಟಿದ್ದ ಜನರ ಮೇಲೆ ವರುಣದೇವ ಕೃಪೆ ತೋರಿದ್ದಾನೆ. ಬೆಂಗಳೂರು, ಮೈಸೂರು, ಶಿವಮೊಗ್ಗ, ಬಳ್ಳಾರಿಯಲ್ಲಿ ಗುರುವಾರ ಉತ್ತಮ ಮಳೆಯಾಗಿದೆ. ಮುಂದಿನ ಎರಡು ದಿನ ರಾಜ್ಯದಲ್ಲಿ ಮಳೆ ಮುಂದುವರೆಯಲಿದೆ ಎಂದು ಹಮಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನಲೆಯಲ್ಲಿ ರಾಜ್ಯದಲ್ಲಿ ಮಳೆಯಾಗುತ್ತಿದೆ. ವಾಯುಭಾರ ಕುಸಿತವು ಸಮುದ್ರದಿಂದ 5.8 ಕಿ.ಮೀ ಎತ್ತರ ಹಾಗೂ 300 ಕಿ.ಮೀ ವ್ಯಾಪ್ತಿಯಲ್ಲಿ ಸುತ್ತುತ್ತಿದೆ. ಆದ್ದರಿಂದ ತೇವಾಂಶ ಹೆಚ್ಚಾಗಿದ್ದು, ವಾತಾವರಣದಲ್ಲಿ ದಟ್ಟಮೋಡಗಳು ಆವರಿಸಿವೆ ಎಂದು ಹವಾಮಾನ ಇಲಾಖೆ ಹೇಳಿದೆ.

ಮುಂದಿನ ಎರಡು ದಿನಗಳಲ್ಲಿ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಉತ್ತಮ ಮಳೆಯಾಗಲಿದ್ದು, ಉತ್ತರ ಒಳನಾಡು ಹಾಗೂ ಮಲೆನಾಡು ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಬಿ.ಪುಟ್ಟಣ್ಣ ಹೇಳಿದ್ದಾರೆ. ಶುಕ್ರವಾರವೂ ಬೆಂಗಳೂರು ಸೇರಿದಂತೆ ವಿವೀಧ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಮುಂದುವರೆದಿದೆ. [ರಾಜ್ಯದಲ್ಲಿ ವರುಣನ ಆರ್ಭಟ]
ಗುರುವಾರ ಮೈಸೂರು, ಶಿವಮೊಗ್ಗ, ಬಳ್ಳಾರಿ, ಮಂಗಳೂರು, ಹುಬ್ಬಳ್ಳಿ ಮುಂತಾದ ಕಡೆ ಭಾರೀ ಮಳೆಯಾಗಿದೆ. ಹುಬ್ಬಳ್ಳಿಯಲ್ಲಿ ಮಳೆಯ ರಭಸಕ್ಕೆ 4 ಮನೆಗಳು ಕುಸಿದುಬಿದ್ದಿವೆ. ಗೋಕರ್ಣದಲ್ಲಿ 13 ಸೆಂ.ಮೀ. ಮತ್ತು ಮಲೆಮಹದೇಶ್ವರ ಬೆಟ್ಟದಲ್ಲಿ 11 ಸೆಂ.ಮೀ.ನಷ್ಟ ಮಳೆಯಾಗಿದೆ.
ಬಳ್ಳಾರಿ ರೈತರಿಗೆ ಹರ್ಷ : ಬಳ್ಳಾರಿಯಲ್ಲಿ ಗುರುವಾರ ಸುರಿದ ಮಳೆಯಿಂದಾಗಿ ರೈತರು ಸಂತಸಗೊಂಡಿದ್ದಾರೆ. ಹತ್ತಿ, ಟೋಮೆಟೋ, ಮೆಣಸಿನಕಾಯಿ ಸೇರಿದಂತೆ ಇತರ ಬೆಳೆಯನ್ನು ಬಿತ್ತನೆ ಮಾಡುವುದಕ್ಕೆ ಭೂಮಿ ಸಿದ್ಧತೆಗೆ ಗುರುವಾರ ಸುರಿದ ಮಳೆ ಸಹಕಾರಿಯಾಗಿದೆ.
ಚಿಕ್ಕಮಗಳೂರಿನಲ್ಲಿ ಮಳೆ : ಚಿಕ್ಕಮಳೂರು ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಉತ್ತಮ ಮಳೆಯಾಗಿದೆ. ಚಿಕ್ಕಮಗಳೂರಿನಲ್ಲಿ 11 ಸೆಂ.ಮೀ, ವಸ್ತಾರೆಯಲ್ಲಿ 21.4, ಆಲ್ದೂರಿನಲ್ಲಿ 18, ಕಡೂರಿನಲ್ಲಿ 6, ಕೊಪ್ಪದಲ್ಲಿ 21 ಮತ್ತು ಮೂಡಿಗೆರೆಯಲ್ಲಿ 33.6 ಸೆಂ.ಮೀ ಮಳೆಯಾಗಿದೆ. ಮುಂಗಾರು ಬಂದಂತೆ ಮಳೆ ಸುರಿಯುತ್ತಿದ್ದು, ಜನರ ದೈನಿಂದ ಕೆಲಸ ಕಾರ್ಯಗಳಿಗೆ ಅಡ್ಡಿ ಉಂಟಾಗಿದೆ.












Click it and Unblock the Notifications