ಅಕಾಲಿಕ ಮಳೆ; ಕರ್ನಾಟಕದಲ್ಲಿ ಕಾಳಿಂಗ ಸರ್ಪದ ಸಂತಾನವೃದ್ಧಿಗೆ ತೊಂದರೆ
ಬೆಂಗಳೂರು ಜೂನ್ 2: ಕಾಳಿಂಗ ಸರ್ಪ ಸಂತಾನವೃದ್ಧಿ ಸಮಯದಲ್ಲಿ ರಾಜ್ಯದ ತೀರ್ಥಹಳ್ಳಿ, ಶೃಂಗೇರಿ ಮತ್ತು ಹೆಬ್ರಿ ತಾಲೂಕುಗಳಲ್ಲಿ ಸುರಿದ ಮುಂಗಾರು ಪೂರ್ವ ಮಳೆಯು ಪಶ್ಚಿಮ ಘಟ್ಟಗಳ ಸರ್ಪ ಪ್ರಭೇದಗಳ ಜೀವನ ಕ್ರಮದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಮಾರ್ಚ್ 1 ರಿಂದ ಮೇ 31 ರವರೆಗೆ ಈ ಮೂರು ತಾಲೂಕುಗಳಲ್ಲಿ ವಾಡಿಕೆಗಿಂತ ಮೂರು ಪಟ್ಟು ಹೆಚ್ಚು ಮಳೆ ಸುರಿದಿದೆ.
ಕೇರಳ, ಮಹಾರಾಷ್ಟ್ರ ಒಳಗೊಂಡ ಪಶ್ಚಿಮ ಘಟ್ಟಗಳಲ್ಲಿ ವಿಶ್ವದ ಅತಿ ವಿಷಪೂರಿತ ಹಾವುಗಳು ಇವೆ. ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಉಡುಪಿ ಜಿಲ್ಲೆಗಳ ಈ ಮೂರು ತಾಲೂಕುಗಳಲ್ಲೂ ಕಾಳಂಗ ಸರ್ಪಗಳು ಹೆಚ್ಚಿವೆ. ಹಾಗಾಗಿ ಇಲ್ಲಿ ಆಗುಂಬೆ ಮಳೆಕಾಡು ಸಂಶೋಧನಾ ಕೇಂದ್ರ ಮತ್ತು ಕಾಳಿಂಗ ಪ್ರತಿಷ್ಠಾನದಂತಹ ಸಂಶೋಧನಾ ಕೇಂದ್ರಗಳು ನಿಯಮಿತವಾಗಿ ಅಧ್ಯಯನ ನಡೆಸುತ್ತಿವೆ. ಇವು ಕಾಳಂಗ ಸರ್ಪಗಳ ಅಧ್ಯಯನಕ್ಕೆ ಮೀಸಲಾದ ಪ್ರಮುಖ ಕೇಂದ್ರಗಳಾಗಿವೆ.

ವಾಡಿಕೆಗಿಂತ ಹೆಚ್ಚು ಮಳೆ
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರದ ಪ್ರಕಾರ ಮಾರ್ಚ್ 1 ರಿಂದ ಮೇ 31ರ ನಡುವೆ ತೀರ್ಥಹಳ್ಳಿಯಲ್ಲಿ ಸರಾಸರಿ 359 ಮಿ. ಮೀ. ಮಳೆಯಾಗಿದೆ. ಇಲ್ಲಿ ವಾಡಿಕೆಯಂತೆ ಈ ಸಮಯದಲ್ಲಿ 118 ಮಿ. ಮೀ. ಮಳೆಯಾಗಬೇಕಿತ್ತು. ಅದೇ ರೀತಿ ಶೃಂಗೇರಿಯಲ್ಲಿ 321 ಮಿ.ಮೀ. ಮಳೆಯಾಗಿದೆ. ಇಲ್ಲಿ ವಾಡಿಕೆಯಂತೆ ಈ ಸಮಯದಲ್ಲಿ 196 ಮಿ. ಮೀ. ಮಳೆಯಾಗಬೇಕಿತ್ತು. ಅಲ್ಲದೇ ಹೆಬ್ರಿಯಲ್ಲಿ 422 ಮಿ. ಮೀ. ಮಳೆಯಾಗಿದೆ. ಇಲ್ಲಿ ವಾಡಿಕೆಯಂತೆ ಈ ಸಮಯದಲ್ಲಿ 200 ಮಿ. ಮೀ. ಮಳೆಯಾಗಬೇಕಿತ್ತು.

ಗೂಡು ಕಟ್ಟುವ ಪ್ರಕ್ರಿಯೆ ಮೇಲೆ ಪರಿಣಾಮ
ಕಾಳಿಂಗ ಪ್ರತಿಷ್ಠಾನದ ಸರೀಸೃಪ ವಿಜ್ಞಾನಿ ಪಿ. ಗೌರಿ ಶಂಕರ್ ಮಾತನಾಡಿ, "ಅತಿವೃಷ್ಟಿ ಮತ್ತು ನಾಗರಹಾವು ಸಂತಾನೋತ್ಪತ್ತಿಗೆ ಒಂದೊಕ್ಕೊಂದು ಸಂಬಂಧದ ಬಗ್ಗೆ ಸಾಕಷ್ಟು ವೈಜ್ಞಾನಿಕ ಪುರಾವೆಗಳಿಲ್ಲದಿದ್ದರೂ, ಭಾರೀ ಮಳೆಯ ಕಾರಣ ಹೆಣ್ಣು ಕಾಳಿಂಗ ಸರ್ಪಗಳಿಗೆ ಒಣ ಎಲೆಗಳು ಸಿಗದೇ ಗೂಡು ಕಟ್ಟುವ ಪ್ರಕ್ರಿಯೆ ಮೇಲೆ ಪರಿಣಾಮ ಬೀರುತ್ತದೆ" ಎಂದರು.
"2005-06 ರಲ್ಲಿ ನಾನು ಮೊದಲ ಬಾರಿಗೆ ಈ ಕಾಳಿಂಗ ಸರ್ಪಗಳ ಬಗ್ಗೆ ಅಧ್ಯಯನ ಆರಂಭಿಸಿದಾಗ ಏಪ್ರಿಲ್ನಿಂದ ಜುಲೈವರೆಗೆ ನಾಲ್ಕರಿಂದ ಆರು ಗೂಡುಗಳ ಬಗ್ಗೆ ಮಾಹಿತಿ ಸಿಗುತ್ತಿತ್ತು. ಆದರೆ ಈಗ ಆ ಸಂಖ್ಯೆ ತಗ್ಗಿದ್ದು, ಒಂದು ಅಥವಾ ಎರಡು ಗೂಡು ಸಿಗುವುದು ಕಷ್ಟವಾಗಿದೆ. ಇದು ಆತಂಕಕಾರಿ ವಿಷಯವಾಗಿದೆ,'' ಎಂದು ಬೇಸರ ವ್ಯಕ್ತಪಡಿಸಿದರು.

ಮೊಟ್ಟೆ ಮರಿಯಾಗಲು 90 ದಿನಗಳು ಬೇಕು
ಕಾಳಿಂಗ ಸರ್ಪಕ್ಕೆ ಮಾತ್ರ ಗೂಡು ಕಟ್ಟಲು ತಿಳಿದಿರುವುದು. ಬೇರೆ ಸರ್ಪಗಳಿಗೆ ಗೂಡು ಕಟ್ಟಲು ಬರುವುದಿಲ್ಲ. ಒಂದು ಗೂಡಿನಲ್ಲಿ 25-30 ಮೊಟ್ಟೆಗಳನ್ನು ಇಡಲಾಗುತ್ತದೆ. ಕಾವು ಕೊಟ್ಟು ಮರಿ ಮಾಡಲು ಅವುಗಳಿಗೆ 75 ರಿಂದ 90 ದಿನಗಳು ಬೇಕಾಗುತ್ತದೆ. ಅಲ್ಲದೇ 26-28 ಡಿಗ್ರಿ ಸೆಲ್ಸಿಯಸ್ ತಾಪಾಮಾನ ಇರಬೇಕಾಗುತ್ತದೆ. ಭಾರೀ ಮಳೆಯಿಂದ ಒದ್ದೆಯಾದ ಎಲೆಗಳು ಇದ್ದರೆ ಈ ಪ್ರಕ್ರಿಯೆಗೆ ಕಷ್ಟವಾಗುತ್ತದೆ.

ಮೊಟ್ಟೆಗಳ ಮೇಲೆ ಫಂಗಸ್ ಬೆಳವಣಿಗೆ
"ಒದ್ದೆಯಾದ ಎಲೆಗಳು ಮೊಟ್ಟೆಗಳ ಮೇಲೆ ಫಂಗಸ್ ಬೆಳೆಯಲು ಕಾರಣವಾಗುತ್ತದೆ. ಇದು ಮೊಟ್ಟೆಗಳನ್ನು ನಾಶಪಡಿಸುತ್ತದೆ. ಸಾಮಾನ್ಯವಾಗಿ 30 ಮೊಟ್ಟೆಗಳಲ್ಲಿ ಕೇವಲ ಒಂದು ಅಥವಾ ಎರಡು ಮೊಟ್ಟೆಗಳು ಮರಿಯಾಗಿ ಪ್ರೌಢಾವಸ್ಥೆಯವರೆಗೆ ಬದುಕುತ್ತವೆ,'' ಎಂದು ಆಗುಂಬೆ ಮಳೆಕಾಡು ಸಂಶೋಧನಾ ಕೇಂದ್ರದ ಅಜಯ್ ಗಿರಿ ಹೇಳಿದರು.
"ಹದಿನೈದು ದಿನಗಳ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಮನೆಯೊಂದರ ಬಳಿ ಕಾಳಿಂಗ ಸರ್ಪದ ಗೂಡೊಂದು ಪತ್ತೆಯಾಗಿದೆ. ಅದರಲ್ಲಿ ಒಟ್ಟು 26 ಮೊಟ್ಟೆಗಳಿತ್ತು. ಆ ಪೈಕಿ 22 ಮೊಟ್ಟೆಗಳಿಗೆ ಫಂಗಸ್ ತಾಗಿತ್ತು. ಉಳಿದ ಮೊಟ್ಟೆಗಳು ಸಹ ಉಳಿಯುವುದು ಕಷ್ಟವಾಗಿದೆ. ಭಾರೀ ಮಳೆಯಿಂದ ಗೂಡಿನ ಒಳಭಾಗವೂ ಸಹ ಒದ್ದೆಯಾಗಿತ್ತು,'' ಎಂದು ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ಕಾಳಿಂಗ ಸರ್ಪಗಳ ಸಂಖ್ಯೆಯಲ್ಲಿ ಕುಸಿತ
"ಮುಂಗಾರು ಪೂರ್ವ ಮಳೆಗೆ ಕಾಳಿಂಗ ಸರ್ಪಗಳು ಒಗ್ಗಿಕೊಂಡಿವೆ. ಆದರೆ ಕೆಲವು ವರ್ಷಗಳಿಂದ ಹವಾಮಾನ ಬದಲಾವಣೆಯಿಂದಾಗಿ ಅನಿಯಮಿತ ಮತ್ತು ಅಧಿಕ ಮಳೆಯಾಗುತ್ತಿದೆ. ಪಶ್ಚಿಮ ಘಟ್ಟಗಳಲ್ಲಿ ಅತಿ ಹೆಚ್ಚು ಇರುವ ಕಾಳಿಂಗ ಸರ್ಪಗಳ ಸಂಖ್ಯೆಯಲ್ಲಿ ಹಠಾತ್ತನೆ ಬದಲಾವಣೆ ಕಾಣುವುದಿಲ್ಲ. ಆದರೆ ಅನಿಯಮಿತ ಮಳೆ ಹೀಗೆ ಮುಂದುವರಿದರೆ, ಕಾಳಿಂಗ ಸರ್ಪಗಳ ಭವಿಷ್ಯವು ಅನಿಶ್ಚಿತವಾಗಲಿದೆ,'' ಎಂದು ಗೌರಿಶಂಕರ್ ಆತಂಕ ವ್ಯಕ್ತಪಡಿಸಿದರು.












Click it and Unblock the Notifications