Heavy Rain: ಶನಿವಾರ ರಾಜ್ಯದ ಹಲವು ಜಿಲ್ಲೆಗಳಲ್ಲಿ ವರ್ಷಧಾರೆ: ಜಿಲ್ಲಾವಾರು ಮಳೆ ಮಾಹಿತಿ
ಯುಗಾದಿ ಹಬ್ಬದ ದಿನದಿಂದ ರಾಜ್ಯದ ಹಲವು ಜಿಲ್ಲೆಗಳಿಗೆ ವರುಣನ ಕೃಪೆ ಸಿಕ್ಕಿದೆ. ಶನಿವಾರ (ಏಪ್ರಿಲ್ 20) ರಂದು ರಾಜ್ಯದ ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದೆ. 28 ಜಿಲ್ಲೆಗಳಲ್ಲಿ ಮಳೆಯಾಗಿದ್ದು, ಭಾನುವಾರ ಕೂಡ ಹಲವು ಜಿಲ್ಲೆಗಳಲ್ಲಿ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಶನಿವಾರ ರಾಜ್ಯದ 28 ಜಿಲ್ಲೆಗಳಲ್ಲಿ ಮಳೆಯಾಗಿದ್ದು, ಧಾರವಾಡ ಜಿಲ್ಲೆಯಲ್ಲಿ ಹೆಚ್ಚು ಮಳೆ ದಾಖಲಾಗಿದೆ. ಧಾರವಾಡ ಜಿಲ್ಲೆಯಲ್ಲಿ 83.5 ಮಿ.ಮೀ ಮಳೆಯಾಗಿದೆ. ಜಿಲ್ಲೆಯ ಯೆಳಿವಾಲ, ಗುರುವಿನಹಳ್ಳಿ, ಎರೆಬೂದಿಹಾಳ್, ಮುಕ್ಕಲ್, ನೂಲ್ವಿ, ಉಗ್ಗಿನಕೇರಿ, ಮಿಶ್ರಿಕೋಟಿ, ದಸ್ತಿಕೊಪ್ಪ, ಬಸವನಕೊಪ್ಪದಲ್ಲಿ ಉತ್ತಮ ಮಳೆಯಾಗಿದೆ.

ಕಲಬುರಗಿ ಜಿಲ್ಲೆಯಲ್ಲಿ 65 ಮಿ.ಮೀ ಮಳೆಯಾಗಿದ್ದು, ಜಿಲ್ಲೆಯ ಬುಸನೂರು, ಖಣದಾಳ್, ಸರಸಂಬ, ಕುಂಸಿ, ಖಜೂರಿ, ದರ್ಗಸಿರೂರು, ಆನೂರಿನಲ್ಲಿ ಉತ್ತಮ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.
ಹಾವೇರಿ ಜಿಲ್ಲೆಯಲ್ಲಿ ಶಿಗ್ಗಾಂವಿಯ ತಡಾಸ್ನಲ್ಲಿ 63.5 ಮಿ.ಮೀ ಮಳೆಯಾಗಿದೆ. ಶಿಗ್ಗಾಂವಿ, ಸವಣೂರು, ತೆಗ್ಗಿಹಳ್ಳಿ, ಜಲ್ಲಾಪುರ, ಬನ್ನೂರು, ಶಿರದಬಾಗಿ, ಕಡಕೋಳ, ಹಿರೇಬೆಂಡಿಗೇರಿಯಲ್ಲಿ ಉತ್ತಮ ಮಳೆಯಾಗಿದೆ.
ಯಾವ ಯಾವ ಜಿಲ್ಲೆಗಳಲ್ಲಿ ಮಳೆ?
ಗದಗ ಜಿಲ್ಲೆಯಲ್ಲಿ 55 ಮಿ.ಮೀ ಮಳೆಯಾಗಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ 40.5 ಮಿಮೀ ಮಳೆಯಾಗಿದೆ. ರಾಯಚೂರು ಜಿಲ್ಲೆಯಲ್ಲಿ 38 ಮಿ.ಮೀ ಮಳೆಯಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ 33.5 ಮಿಮೀ ಮಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 25.5 ಮಿ.ಮೀ ಮಳೆಯಾಗಿದೆ. ವಿಜಯಪುರ ಜಿಲ್ಲೆಯಲ್ಲಿ 24.5 ಮಿ.ಮೀ ಮಳೆಯಾಗಿದೆ. ಬಾಗಲಕೋಟೆ ಜಿಲ್ಲೆಯಲ್ಲಿ 23.5 ಮಿ.ಮೀ ಮಳೆಯಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 23 ಮಿ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ವರದಿಯಲ್ಲಿ ತಿಳಿಸಿದೆ.
ಉಳಿದಂತೆ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ತುಮಕೂರು, ಚಿತ್ರದುರ್ಗ, ಕೊಡಗು, ವಿಜಯನಗರ, ಮೈಸೂರು, ಕೊಪ್ಪಳ, ಬಳ್ಳಾರಿ, ಚಾಮರಾಜನಗರ, ಉಡುಪು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದೆ. ಹಾಸನ, ದಾವಣಗೆರೆ, ಕೋಲಾರ ಜಿಲ್ಲೆಯಲ್ಲಿ ಮಾತ್ರ ಶನಿವಾರ ಮಳೆ ವರದಿಯಾಗಿಲ್ಲ.
ಭಾನುವಾರ ಕೂಡ ರಾಜ್ಯದಲ್ಲಿ ಮಳೆ
ಭಾನುವಾರ ಕೂಡ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಬೆಂಗಳೂರು ನಗರದಲ್ಲಿ ಭಾನುವಾರ ಮಳೆಯಾಗುವ ಮುನ್ಸೂಚನೆ ಇದ್ದು, ಸೋಮವಾರದಿಂದ ಮಳೆ ಬಿಡುವು ಕೊಡಲಿದೆ.
ಭಾನುವಾರ ಬೆಂಗಳೂರಿಗೆ ಮಳೆ ಬಾರದೇ ಇದ್ದರೆ, ಮತ್ತೆ ಮೇ ಮೊದಲ ವಾರದವರೆಗೂ ಬೆಂಗಳೂರು ಜನತೆ ಮಳೆಗೆ ಕಾಯಬೇಕಿದೆ.












Click it and Unblock the Notifications