ಹೆಡ್ಬುಷ್ ವಿವಾದಕ್ಕೆ ರಾಜಕೀಯ ಬಣ್ಣ: ಸಚಿವ ಸುನೀಲ್ ಕುಮಾರ್ ವಿರುದ್ಧ ಕಾಂಗ್ರೆಸ್ ವಾಗ್ದಾಳಿ
ಬೆಂಗಳೂರು, ಅಕ್ಟೋಬರ್ 28: ಭೂಗತ ಲೋಕದ ಘಟನೆಗಳನ್ನು ಹೊಂದಿರುವ, ಡಾಲಿ ಧನಂಜಯ್ ನಟನೆಯ ಹೆಡ್ಬುಷ್ ಚಿತ್ರದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಲಾಗಿದೆ ಎಂದು ಆರೋಪಿಸಿಲಾಗಿದೆ. ಹಿಂದೂ ಸಂಘಟನೆಗಳು ಧನಂಜಯ ವಿರುದ್ಧ ಸಂಘರ್ಷಕ್ಕೆ ಮುಂದಾಗಿದ್ದವು. ಧನಂಜಯ್ ವಿರುದ್ಧ ಪ್ರಕರಣವನ್ನೂ ದಾಖಲಿಸಲಾಗಿತ್ತು.
ಈ ವಿಚಾರವಾಗಿ ಗುರುವಾರ ಟ್ವೀಟ್ ಮಾಡಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್, 'ಹೆಡ್ಬುಷ್ ಚಿತ್ರದಲ್ಲಿ ವೀರಗಾಸೆ ಕುಣಿತಕ್ಕೆ ಅಪಮಾನವಾಗಿದೆ ಎಂಬ ಚರ್ಚೆ ಮಾಧ್ಯಮ ಹಾಗೂ ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ವೀರಗಾಸೆ ಕನ್ನಡದ ಹೆಮ್ಮೆಯ ಜಾನಪದ ಪರಂಪರೆ. ಚಲನಚಿತ್ರವೂ ಸೇರಿದಂತೆ ಯಾವುದೇ ಮನೋರಂಜನಾ ಮಾಧ್ಯಮದಿಂದ ಜಾನಪದ ಸಂಸ್ಕೃತಿಗೆ ಅವಮಾನವಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ' ಎಂದು ತಿಳಿಸಿದ್ದಾರೆ.
'ಒಂದೊಮ್ಮೆ ಹೆಡ್ಬುಷ್ ಚಿತ್ರದಲ್ಲಿ ವೀರಗಾಸೆಗೆ ಅಪಮಾನವಾದರೆ ನಿರ್ಮಾಪಕರು ಹಾಗೂ ನಿರ್ದೇಶಕರು ಮರು ಚಿಂತನೆ ನಡೆಸುವುದು ಸೂಕ್ತ' ಎಂದು ಟ್ವೀಟ್ ಮಾಡಿದ್ದಾರೆ.
ಸಚಿವರ ವಿರುದ್ಧ ಕಾಂಗ್ರೆಸ್ ಆಕ್ರೋಶ
ಹೆಡ್ಬುಷ್ ಕುರಿತು ಟ್ವೀಟ್ ಮಾಡಿರುವ ಸಚಿವ ಸುನೀಲ್ ಕುಮಾರ್ ವಿರುದ್ಧ ಕಾಂಗ್ರೆಸ್ ಹರಿಹಾಯ್ದಿದೆ.
ಈ ವಿಚಾರವಾಗಿ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, 'ಹೆಡ್ಬುಷ್ ಚಿತ್ರದಲ್ಲಿ ಇಲ್ಲದ ವಿವಾದ ಕಣ್ಣಿಗೆ ಬೀಳುತ್ತಲೇ ಹೆಡೆ ಎತ್ತಿ ಬುಸ್ ಬುಸ್ ಎನ್ನಲು ಹೊರಟಿರುವ ಸುನೀಲ್ ಕುಮಾರ್ ಅವರೇ, ಪಠ್ಯಪುಸ್ತಕದಲ್ಲಿ, ಗಣರಾಜ್ಯೋತ್ಸವ ಪರೇಡ್ನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಅವಮಾನವಾದಾಗ ನಿಮ್ಮೊಳಗಿನ ಸಂಸ್ಕೃತಿ ವೀರ ಹೆಡೆ ಎತ್ತಲಿಲ್ಲವೇಕೆ' ಎಂದು ಪ್ರಶ್ನಿಸಿದೆ.
'ಕೆಲಸವಿಲ್ಲದವ ಮಂಗನ ಜೊತೆ ಆಡಲು ಹೊರಟಂತೆ ಸಚಿವ ಸುನೀಲ್ ಕುಮಾರ್ ಅವರು ಇಲ್ಲದ ವಿವಾದ ಸೃಷ್ಟಿಸಿ ಮೈಲೇಜ್ ಪಡೆಯಲು ಹೊರಟಿದ್ದಾರೆ. ಪಠ್ಯದಲ್ಲಿ ಸುರಪುರದ ವೀರರಿಗೆ ಅವಮಾನವಾದಾಗ ಎಲ್ಲಿ ಹೋಗಿದ್ದರು? ತಮ್ಮ ಇಂಧನ ಇಲಾಖೆಯ ಅಕ್ರಮಗಳನ್ನು ತಡೆಯಲು, ಅವ್ಯವಸ್ಥೆ ನಿವಾರಿಸಲು ಆಸಕ್ತಿ ಇಲ್ಲವೇಕೆ? ವಿವಾದಗಳಿಗೆ ಮಾತ್ರ ಇವರ ಆಸಕ್ತಿಯೇ' ಎಂದು ಕೆಪಿಸಿಸಿ ಕೇಳಿದೆ.