ಜನರು ಅಧಿಕಾರ ನೀಡಿದರೂ ಕೆಲಸ ಮಾಡದ ಕುಮಾರಸ್ವಾಮಿ: ಅಶ್ವಥ್ ನಾರಾಯಣ್
ರಾಮನಗರ, ಜನವರಿ 02: ಈ ಹಿಂದಿನ ವಿಧಾನಸಭೆ ಚುನಾವಣೆಗಳಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಅಧಿಕಾರ ನೀಡಿದರು ಅವರು ಕೆಲಸ ಮಾಡುತ್ತಿರಲಿಲ್ಲ. ಜನರ ಕೈಗೂ ಸಿಕ್ಕುತ್ತಿರಲಿಲ್ಲ. ಈ ಬಾರಿ ಯಾರನ್ನು ಕುಂದಿಸಬೇಕು, ಯಾರನ್ನು ಅಧಿಕಾರದಲ್ಲಿ ಕೂರಿಸಬೇಕು ಎನ್ನುವುದು ಮತದಾರರಿಗೆ ಗೊತ್ತಿದೆ ಎಂದು ಕುಮಾರಸ್ವಾಮಿ ವಿರುದ್ಧ ರಾಮನಗರ ಜಿಲ್ಲಾ ಉಸ್ತುವಾರಿ ಡಾ.ಸಿ.ಎನ್. ಅಶ್ವಥ್ ನಾರಾಯಣ್ ವ್ಯಂಗ್ಯವಾಡಿದರು.
ಮಾಗಡಿ ತಾಲೂಕಿನ ಸಂಕೀಘಟ್ಟದಲ್ಲಿ 'ಬೂತ್ ವಿಜಯ ಅಭಿಯಾನ'ಕ್ಕೆ ಅವರು ತಾಲ್ಲೂಕಿನ ಚಾಲನೆ ನೀಡಿ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದರು. ಅಧಿಕಾರವಿದ್ದಾಗ ಕುಮಾರಸ್ವಾಮಿಯವರು ಬರೀ ಕೆಂಪೇಗೌಡರ ಜಪ ಮಾಡುತ್ತಿದ್ದರು. ಅವರ ಸಮಾಧಿ ಇರುವ ಕೆಂಪಾಪುರದಲ್ಲಿ ಪೂಜೆ ಮಾಡಿ ಹೋದವರು, ಆಮೇಲೆ ನಾಪತ್ತೆಯಾದರು. ಸಮಾಧಿ ಅಭಿವೃದ್ಧಿಗೆ ಒಂದು ಗುಂಟೆ ಜಮೀನನ್ನು ಸಹ ಸ್ವಾಧೀನ ಪಡಿಸಿಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ. ಆದರೆ ಬಿಜೆಪಿ ಸರ್ಕಾ ಕೆಂಪೇಗೌಡರ ನೆನಪನ್ನು ಚಿರಸ್ಥಾಯಿಯಾಗಿ ಮಾಡಿದೆ ಎಂದರು.
ಶ್ರೀರಂಗ ನೀರಾವರಿ ಯೋಜನೆಗೆ ಬಿಜೆಪಿ 175 ಕೋಟಿ ರೂಪಾಯಿ ನೀಡಿದೆ. ಕುಮಾರಸ್ವಾಮಿ ಕೈಯಲ್ಲಿ 20 ವರ್ಷವಾದರೂ ಈ ಕೆಲಸ ಆಗುತ್ತಿರಲಿಲ್ಲ. ಮಂಚನಬೆಲೆ ಯೋಜನೆಯ ನೆನೆಗುದಿಗೆ ಬಿದ್ದಿದೆ. 65 ಕೋಟಿ ರೂಪಾಯಿ ವೆಚ್ಚದಲ್ಲಿ ಜಿಟಿಟಿಸಿ, ಸಂಸ್ಕೃತ ವಿಶ್ವವಿದ್ಯಾಲಯ ಕ್ಯಾಂಪಸ್, ಕುದೂರಿನಲ್ಲಿ ಕೈಗಾರಿಕಾ ಪ್ರದೇಶ ರಚನೆ, ಮಾಗಡಿ ಸೋಮವಾರಪೇಟೆ ಚತುಷ್ಪಥ ರಸ್ತೆ ಇವೆಲ್ಲವೂ ಬಿಜೆಪಿ ಸರ್ಕಾರವು ಜಿಲ್ಲೆಗೆ ಕೊಟ್ಟಿರುವ ಯೋಜನೆಗಳಾಗಿವೆ. ಕುಮಾರಸ್ವಾಮಿ ಇದನ್ನು ನೆನಪಿಸಿಕೊಳ್ಳಬೇಕು ಎಂದು ಕುಟುಕಿದರು.

ನಂದಿನಿ- ಅಮೂಲ್ ವಿಲೀನ ಚಿಂತನೆ ಇಲ್ಲ
ಕರ್ನಾಟಕ ಹಾಲು ಮಹಾಮಂಡಲಿಗಳ ಒಕ್ಕೂಟವಾದ 'ನಂದಿನಿ' ಮತ್ತು ಗುಜರಾತಿನ ಅಮೂಲ್ ಬ್ರ್ಯಾಂಡ್ ಎರಡನ್ನೂ ವಿಲೀನ ಮಾಡುವ ಯಾವ ಚಿಂತನೆಯೂ ಇಲ್ಲ. ತಮ್ಮ ಸಹೋದರ ಎಚ್.ಡಿ.ರೇವಣ್ಣನವರೇ ಕೆಎಂಎಫ್ ಅಧ್ಯಕ್ಷರಾಗಿದ್ದರು. ಸಹಕಾರ ಕ್ಷೇತ್ರದ ನಿಯಮಗಳಡಿ ವಿಲೀನಕ್ಕೆ ಅವಕಾಶವೇ ಇಲ್ಲ ಎನ್ನುವುದನ್ನು ಕುಮಾರಸ್ವಾಮಿ ಮೊದಲು ತಿಳಿದುಕೊಳ್ಳಬೇಕು.
ಹಿಂದೆ ರೇವಣ್ಣನವರು ಕೆಎಂಎಫ್ ನಲ್ಲಿ ಇದ್ದಾಗಲೂ ಅಮೂಲ್ ನವರಿಗೆ ನಂದಿನಿ ವತಿಯಿಂದ ಐಸ್ ಕ್ರೀಂ ತಯಾರಿಸಿ ಕೊಡಲಾಗುತ್ತಿತ್ತು. ಸಹಕಾರ ಕ್ಷೇತ್ರದಲ್ಲಿ ಬೇಡಿಕೆ ಮತ್ತು ಉತ್ಪಾದನೆ ಆಧರಿಸಿ ಪರಸ್ಪರ ಕೊಡುಕೊಳ್ಳುವಿಕೆ ನಡೆಯುತ್ತದೆ. ನಂದಿನಿ ಬ್ರ್ಯಾಂಡ್ ಕರ್ನಾಟಕದ ಹೆಮ್ಮೆ. ಈ ವಿಚಾರದಲ್ಲಿ ಜನರ ದಾರಿ ತಪ್ಪಿಸುವ ಕೆಲಸ ಮಾಡುವುದು ಬೇಡ ಎಂದು ಅವರು ಹೇಳಿದರು.
ಹಳ್ಳಿ ಹಳ್ಳಿಯಲ್ಲಿ ಮೋದಿ, ಅಮಿತ್ ಶಾ
ರಾಜ್ಯದ ಪ್ರತಿಯೊಂದು ಹಳ್ಳಿಯಲ್ಲೂ ಒಬ್ಬೊಬ್ಬ ಮೋದಿ, ಅಮಿತ್ ಶಾ, ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರಂತಹ ನಾಯಕರನ್ನು ಸೃಷ್ಟಿಸಬೇಕು ಎನ್ನುವುದೇ ಬಿಜೆಪಿಯ ಗುರಿಯಾಗಿದೆ. ಬಿಜೆಪಿಯನ್ನು ಸಂಘಟನಾತ್ಮಕವಾಗಿ ಬಲಪಡಿಸುವ ಉದ್ದೇಶದಿಂದ 'ಬೂತ್ ವಿಜಯ ಅಭಿಯಾನ' ಹಮ್ಮಿಕೊಳ್ಳಲಾಗಿದೆ ಎಂದು ಸರ್ಕಾರದ ಸಾಧನೆಗಳ ಬಗ್ಗೆ ಅಶ್ವಥ್ ನಾರಾಯಣ್ ವಿವರಿಸಿದರು.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಸ್ಪಷ್ಟ ಬಹುಮತ ಪಡೆಯಬೇಕೆಂಬ ಸಂಕಲ್ಪ ಮಾಡಲಾಗಿದೆ. ಹೀಗಾಗಿ, ಹಳೆ ಮೈಸೂರು ಭಾಗದಲ್ಲಿ ಪಕ್ಷದ ಸಂಘಟನೆಗೆ ವಿಶೇಷ ಒತ್ತು ಕೊಡಲಾಗುತ್ತಿದೆ. ಬಿಜೆಪಿಯಲ್ಲಿ ಪ್ರತಿಯೊಬ್ಬ ಕಾರ್ಯಕರ್ತರೂ ಚುನಾವಣೆ ಅಭ್ಯರ್ಥಿಗಳೇ ಆಗಿದ್ದಾರೆ. ಬಿಜೆಪಿ ಸರಕಾರವು ಶಿಕ್ಷಣ, ಕೃಷಿ, ನೀರಾವರಿ, ಮೀಸಲಾತಿ ಕೌಶಲ್ಯಾಭಿವೃದ್ಧಿ, ಉದ್ಯಮ, ಸಾಮಾಜಿಕ ನ್ಯಾಯ, ನೈರ್ಮಲ್ಯ ಮುಂತಾದ ಕ್ಷೇತ್ರಗಳಲ್ಲಿ ಮಾಡಿರುವ ರಚನಾತ್ಮಕ ಕೆಲಸಗಳನ್ನು ಪಕ್ಷದ ಬೂತ್ ವತಿಯಿಂದ ಜನರಿಗೆ ತಲುಪಿಸುವ ಕೆಲಸ ಮಾಡಲಿದೆ ಎಂದು ಕಾರ್ಯಕರ್ತರನ್ನು ಉದ್ದೇಶಿಸಿ ಹೇಳಿದರು.
ಬಿಜೆಪಿಗೆ ಬೂತ್ ಬಲವೇ ಆಧಾರವಾಗಿದೆ. ಸ್ಥಳೀಯ ಮತದಾರರು ಮತ್ತು ಜನ ಸಮುದಾಯಗಳ ಜತೆ ಬೂತ್ ಸದಸ್ಯರು ಸಕ್ರಿಯ ಮತ್ತು ನಿರಂತರ ಸಂಪರ್ಕ ಹೊಂದಿರಬೇಕು. ಇದರಿಂದ ಜನರಿಗೆ ಮಾಡಬಹುದಾದ ಕೆಲಸಗಳು ಗೊತ್ತಾಗುತ್ತವೆ ಎಂದರು.












Click it and Unblock the Notifications