ಎತ್ತಿನಹೊಳೆ: ಗುತ್ತಿಗೆದಾರರ ಕಣ್ಣಿಗೆ ಬೆಣ್ಣೆ, ರೈತರ ಕಣ್ಣಿಗೆ ಸುಣ್ಣ
ಹಾಸನ, ಅ 9: ಚಿಕ್ಕಬಳ್ಳಾಪುರ-ಕೋಲಾರಕ್ಕೆ ನೀರು ಹರಿಸಲು ಇನ್ನೆಷ್ಟು ವರ್ಷ ಬೇಕು? ಗುತ್ತಿಗೆದಾರರ ಕಣ್ಣಿಗೆ ಬೆಣ್ಣೆ, ರೈತರ ಕಣ್ಣಿಗೆ ಸುಣ್ಣ ಎಂದು ಸರಕಾರದ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.
"ಸಾವಿರಾರು ಕೋಟಿ ರೂ.ಗಳ ವೆಚ್ಚದ ಎತ್ತಿನಹೊಳೆ ಯೋಜನೆ ತೆವಳುತ್ತಿದ್ದು, ಕಾಮಗಾರಿ ಮುಗಿದು ಬರಪೀಡಿತ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಿಗೆ ನೀರು ಹರಿಸಲು ಇನ್ನೆಷ್ಟು ವರ್ಷ ಬೇಕಾಗುತ್ತದೆ" ಎಂದು ಕುಮಾರಸ್ವಾಮಿ ಅವರು ಸರಕಾರವನ್ನು ಖಾರವಾಗಿ ಪ್ರಶ್ನಿಸಿದರು.
ಎತ್ತಿನಹೊಳೆ ಯೋಜನೆ ಕಾಮಗಾರಿಗಳನ್ನು ವೀಕ್ಷಿಸುವ ಮುನ್ನ ಸಕಲೇಶಪುರದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಎಚ್ಡಿಕೆ, "2014ರಲ್ಲಿ ಆರಂಭವಾದ ಯೋಜನೆಯನ್ನು ಮೂರೇ ವರ್ಷದಲ್ಲಿ ಮುಗಿಸಿ ಎರಡೂ ಜಿಲ್ಲೆಗಳಿಗೆ ನೀರು ಹರಿಸುವುದಾಗಿ ಹೇಳಿದ್ದ ಅಂದಿನ ಮುಖ್ಯಮಂತ್ರಿಗಳು ಈಗ ಎಲ್ಲಿದ್ದಾರೆ" ಎಂದು ಕೇಳಿದರು.
ಇಡೀ ಯೋಜನೆ ಬಗ್ಗೆ ಮಾಧ್ಯಮಗೋಷ್ಠಿಯಲ್ಲಿ ಹಲವಾರು ಮಹತ್ವದ ಅಂಶಗಳನ್ನು ಪ್ರಸ್ತಾಪ ಮಾಡಿದ ಹೆಚ್.ಡಿ.ಕುಮಾರಸ್ವಾಮಿ ಅವರು ವಿವರವಾಗಿ ಹೇಳಿದ್ದಿಷ್ಟು; "ಯೋಜನೆ ಕುಂಟುತ್ತಾ ಸಾಗುತ್ತಿದೆ. ಕಳೆದ ಎರಡು ವರ್ಷಗಳ ಮಳೆಗಾಲದಲ್ಲಿ ಆಗಿರುವ ಉತ್ತಮ ಮಳೆಯನ್ನು ನಿಖರವಾಗಿ ಡಿ.4ನೇ ಪಾಯಂಟ್'ಗೆ ತಂದು ಮಾಪನ ಮಾಡಬೇಕಿತ್ತು. ಎಷ್ಟು ಮಳೆ ಸುರಿಯಿತು? ಎಷ್ಟು ಪ್ರಮಾಣದ ನೀರು ಸಮುದ್ರಕ್ಕೆ ಹರಿದುಹೋಯಿತು ಎಂಬ ಬಗ್ಗೆ ಮಾಹಿತಿ ಕಲೆ ಹಾಕುವಲ್ಲಿ ಸರಕಾರ ಕೈಚೆಲ್ಲಿದೆ" ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತ ಪಡಿಸಿದರು.
"2014ರಲ್ಲಿ ಚಿಕ್ಕಬಳ್ಳಾಪುರದಲ್ಲಿ ಈ ಯೋಜನೆಗೆ ಅಡಿಗಲ್ಲು ಹಾಕಲಾಯಿತು. ಈಗ 2021. ಯೋಜನೆ ಮುಗಿಸಿ ನೀರು ಹರಿಸಲು ಇನ್ನೆಷ್ಟು ವರ್ಷ ಬೇಕು? ಮೊದಲು 8,000 ಕೋಟಿ, ನಂತರ 13,000 ಕೋಟಿಯಿಂದ ಶುರುವಾದ ಈ ಯೋಜನಾ ವೆಚ್ಚ ಈಗ 23,000 ಕೋಟಿಗೆ ಬಂದು ಮುಟ್ಟಿದ್ದು, ಅದಕ್ಕೆ ಸರಕಾರದಿಂದ ಕ್ಲಿಯರೆನ್ಸ್ ಪಡೆದುಕೊಳ್ಳಲು ವಿಶ್ವೇಶ್ವರಯ್ಯ ಜಲ ನಿಗಮದ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ" ಎಂದು ಕುಮಾರಸ್ವಾಮಿ ಹೇಳಿದರು.

ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳ ಜನರ ಹೆಸರಿನಲ್ಲಿ ಯಥೇಚ್ಛವಾಗಿ ಹಣ ಖರ್ಚು
"ಭೂಸ್ವಾಧೀನ ಪ್ರಕಿಯೆ ವಿವಾದದಲ್ಲಿದೆ. ಈಗಾಗಲೇ ಭೂಮಿ ಕಳೆದುಕೊಂಡ ರೈತರಿಗೆ ವರ್ಷಗಳೇ ಉರುಳಿದರೂ ಪರಿಹಾರ ನೀಡಿಲ್ಲ. ಗುತ್ತಿಗೆದಾರರಿಗೆ ಹಣ ನೀಡಲು ಇರುವ ಆತುರ ರೈತರಿಗೆ ನೀಡಲು ಇಲ್ಲ. ಅದಕ್ಕೆ ದುಡ್ಡಿಲ್ಲ ಅನ್ನುತ್ತಿದೆ ಸರಕಾರ. ಆದರೆ, ಗುತ್ತಿಗೆದಾರರಿಗೆ ಪ್ಯಾಕೇಜುಗಳ ಲೆಕ್ಕದಂತೆ ಮೊದಲ ಹಂತದಲ್ಲಿ 4,115 ಕೋಟಿ ರೂ. ಹಾಗೂ ಎರಡನೇ ಹಂತದಲ್ಲಿ 12,000 ಕೋಟಿ ರೂ. ಕೊಡಲು ಪ್ಯಾಕೇಜ್ ಮಾಡಿಕೊಂಡಿದೆ. ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳ ಜನರ ಹೆಸರಿನಲ್ಲಿ ಯಥೇಚ್ಛವಾಗಿ ಹಣ ಖರ್ಚು ಮಾಡಲಾಗುತ್ತಿದೆ" ಎಂದು ಕುಮಾರಸ್ವಾಮಿ ಹೇಳಿದರು.

ಮಳೆಗಾಲದಲ್ಲೇ ನೀರು ಪಂಪ್ ಮಾಡಿದ್ದರೆ ನೀರಿನ ಲಭ್ಯತೆಯ ಪ್ರಮಾಣ ತಿಳಿಯುತ್ತಿತ್ತು
"ನನಗೆ ಅಧಿಕಾರಿಗಳಿಂದ ಸಿಕ್ಕಿದ ಮಾಹಿತಿ ಪ್ರಕಾರ ಈಗಾಗಲೇ ಏಳು ಅಡ್ಡಕಟ್ಟೆ (ವೈಯರ್) ಗಳನ್ನು ನಿರ್ಮಾಣ ಮಾಡಲಾಗಿದ್ದು, ಎಂಟನೇ ಅಡ್ಡಕಟ್ಟೆಯ ಕಾಮಗಾರಿ 70% ಮುಗಿದೆಯಂತೆ. ಇಷ್ಟು ಹೊತ್ತಿಗೆ ಎಂಟೂ ಅಡ್ಡಕಟ್ಟೆಗಳನ್ನು ಪೂರ್ಣ ಮಾಡಿ ನೀರನ್ನು ಪಂಪ್ ಮಾಡಬೇಕಿತ್ತು. ಏಳು ಅಡ್ಡಕಟ್ಟೆಗಳು ಸಿದ್ಧವಿದ್ದು, ಹರವನಹಳ್ಳಿ ಬಳಿ ನಾಲ್ಕು ನೀರಿನ ಸಂಗ್ರಹಗಾರಗಳು ಸಿದ್ಧ ಇವೆ. ಈ ಮಳೆಗಾಲದಲ್ಲೇ ನೀರು ಪಂಪ್ ಮಾಡಿದ್ದರೆ ನೀರಿನ ಲಭ್ಯತೆಯ ಪ್ರಮಾಣ ತಿಳಿಯುತ್ತಿತ್ತು. ಅದನ್ನು ಸರಕಾರ ಮಾಡಿಲ್ಲ" ಎಂದು ಸರಕಾರದ ವಿರುದ್ದ ಕಿಡಿಕಾರಿದ್ದಾರೆ.

ಯಾವುದೇ ಯೋಜನೆ ಕಾರ್ಯಗತ ಮಾಡಬೇಕಾದರೆ, DPR ತಯಾರಿಸಿಯೇ ಮಾಡಬೇಕು
"ಎತ್ತಿನಹೊಳೆ ಅಡ್ಡಕಟ್ಟೆಗಳಿಂದ ಹರವನಹಳ್ಳಿಗೆ ನೀರು ಸಾಗಣೆ ಮಾಡುವ ಮಾರ್ಗದಲ್ಲಿನ 9 ಕಿ.ಮೀ. ಉದ್ದದ ಲೈನ್ ನಿರ್ಮಾಣ ಕಾಮಗಾರಿ ನೆನೆಗುದಿಗೆ ಬಿದ್ದಿದೆ. ಭೂಸ್ವಾಧೀನ ಸಮಸ್ಯೆಯಿಂದ ಅದು ವಿಳಂಬವಾಗಿದ್ದು, ಅದನ್ನು ಕ್ಲಿಯರ್ ಮಾಡುವ ಕೆಲಸವನ್ನು ಸರಕಾರ ಮಾಡಿಲ್ಲ. ಕೇವಲ ಲೈನ್ ಅಂದಾಜು ಮಾಡಿ ಕಾಮಗಾರಿ, ಯಾವುದೇ ಯೋಜನೆ ಕಾರ್ಯಗತ ಮಾಡಬೇಕಾದರೆ, DPR (ಸಮಗ್ರ ಯೋಜನಾ ವರದಿ) ತಯಾರಿಸಿಯೇ ಮಾಡಬೇಕು. ಆದರೆ, ಎತ್ತಿನಹೊಳೆ ಬಗ್ಗೆ ಹಾಗೆ ಮಾಡದೇ ಕೇವಲ ಲೈನ್ ಅಂದಾಜು ಮಾಡಿ ಕಾಮಗಾರಿ ಮಾಡಲಾಗುತ್ತಿದೆ"ಎಂದು ಕುಮಾರಸ್ವಾಮಿ ಹೇಳಿದರು.

ಗುತ್ತಿಗೆದಾರರ ಮೇಲೆ ಇರುವಷ್ಟು ಪ್ರೀತಿ ರೈತರ ಮೇಲೆ ಏಕಿಲ್ಲ? ಎಚ್ಡಿಕೆ ಪ್ರಶ್ನೆ
"ನಿರಂತರವಾಗಿ ಯೋಜನಾ ವೆಚ್ಚವನ್ನು ಮನಸೋ ಇಚ್ಛೆ ಹಿಗ್ಗಿಸಲಾಗುತ್ತಿದೆ. ಮುಂದೊಂದು ದಿನ ಇದೇ ದೊಡ್ಡ ಕರ್ಮಕಾಂಡ ಆಗುವ ಸಾಧ್ಯತೆ ಇದೆ. ಈಗಾಗಲೇ 9,000 ಕೋಟಿಗೂ ಹೆಚ್ಚು ಹಣ ವೆಚ್ಚವಾಗಿದೆ ಎಂದು ಸರಕಾರವೇ ಹೇಳಿಕೊಂಡಿದೆ. ಆದರೆ, ಭೂಮಿ ಕಳೆದುಕೊಂಡವರ ಬಗ್ಗೆ ಈ ನಿರ್ಲಕ್ಯ ಏಕೆ? ಗುತ್ತಿಗೆದಾರರ ಮೇಲೆ ಇರುವಷ್ಟು ಪ್ರೀತಿ ರೈತರ ಮೇಲೆ ಏಕಿಲ್ಲ? ಗುತ್ತಿಗೆದಾರರ ಕಣ್ಣಿಗೆ ಬೆಣ್ಣೆ, ರೈತರ ಕಣ್ಣಿಗೆ ಸುಣ್ಣ ಏಕೆ? ಕೊನೆಪಕ್ಷ ಮುಂದಿನ ಮುಂಗಾರಿನ ಹೊತ್ತಿಗಾದರೂ ನೆನೆಗುದಿಗೆ ಬಿದ್ದಿರುವ 9 ಕಿ.ಮೀ. ದೂರದ ಲೈನ್ ಕಾಮಗಾರಿ ಮುಗಿಸಿ ಹರವನಹಳ್ಳಿ ಜಲ ಸಂಗ್ರಹಗಾರಗಳಿಗೆ ನೀರು ಹರಿಸಲೇಬೇಕು. ಇದು ನನ್ನ ಆಗ್ರಹ" ಎಂದು ಕುಮಾರಸ್ವಾಮಿ ಹೇಳಿದರು.












Click it and Unblock the Notifications