ಸಾರಿಗೆ ನೌಕರರ ಮೇಲೆ ಹಗೆತನ ಬೇಡ; ಸರ್ಕಾರಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ತರಾಟೆ
ಬೆಂಗಳೂರು, ಅಕ್ಟೋಬರ್ 05: ರಾಜ್ಯ ಸಾರಿಗೆ ನೌಕರಿಗೆ ವೇತನ ವಿಳಂಬ ಮಾಡುತ್ತಿರುವ ಸರ್ಕಾರದ ನಡೆಯನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಟುವಾಗಿ ಟೀಕಿಸಿದ್ದಾರೆ.
ಈ ಬಗ್ಗೆ ಸರಣಿ 'ಕೂ' ಮಾಡಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಅವರು, ಕೂಡಲೇ ಸಾರಿಗೆ ನೌಕರರಿಗೆ ವೇತನ ಪಾವತಿ ಮಾಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರನ್ನು ಒತ್ತಾಯಿಸಿದ್ದಾರೆ.
ರಸ್ತೆ ಗುಂಡಿ ಮುಚ್ಚಲು ಇಟ್ಟಿದ್ದ 20,000 ಕೋಟಿ ರೂ. ಎಲ್ಲಿ ಹೋಯಿತು?: ಎಚ್ಡಿಕೆ ಪ್ರಶ್ನೆ
ಕೊರೊನಾ ಸೋಂಕಿನಿಂದ ತತ್ತರಿಸಿರುವ ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ನೌಕರರ ಮೇಲೆ ಸರಕಾರಕ್ಕೆ ಅನಾದರ ಏಕೆ? ಈ ನೌಕರರಿಗೆ ಆಗಸ್ಟ್ ತಿಂಗಳಲ್ಲಿ ಅರ್ಧ ಸಂಬಳ ಆಗಿದೆ. ಸೆಪ್ಟೆಂಬರ್ ತಿಂಗಳ ಪೂರ್ಣ ಸಂಬಳ ಆಗಿಲ್ಲ ಎನ್ನುವ ಮಾಹಿತಿ ನನಗೆ ಬಂದಿದೆ ಎಂದು ಬರೆದುಕೊಂಡಿದ್ದಾರೆ.
ಮಕ್ಕಳು ತಪ್ಪು ಮಾಡುವುದು ಸಹಜ. ತಂದೆ ತಾಯಿ ಸ್ಥಾನದಲ್ಲಿರುವ ಸರ್ಕಾರ ಅವರನ್ನು ಕ್ಷಮಿಸಿ ಔದಾರ್ಯ ತೋರಿಸುವ ದೊಡ್ಡ ಮನಸ್ಸು ಮಾಡಬೇಕು. ಸಾರಿಗೆ ನೌಕರರ ಮೇಲೆ ಹಗೆತನ ಸಾಧಿಸುವುದು ಬೇಡ. ಜೀವದ ಹಂಗು ತೊರೆದು, ಮಹಾಮಾರಿಯನ್ನು ಲೆಕ್ಕಿಸದೆ ಅವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಸಾರಿಗೆ ನೌಕರರ ವೇತನ ವಿಳಂಬ ಮಾಡುವುದನ್ನು ಒಪ್ಪಲು ಸಾಧ್ಯವಿಲ್ಲ. ತಕ್ಷಣವೇ ವೇತನ ಬಿಡುಗಡೆ ಮಾಡಬೇಕು. ಪ್ರತಿ ತಿಂಗಳು ಸಕಾಲಕ್ಕೆ ವೇತನ ಪಾವತಿಸಲು ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರು ಕೂಡಲೇ ಕ್ರಮ ವಹಿಸಬೇಕು ಎಂದು ನಾನು ಒತ್ತಾಯ ಮಾಡುತ್ತೇನೆ ಎಂದಿದ್ದಾರೆ.
ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳ ನೌಕರರ ಮುಷ್ಕರದ ಸಂದರ್ಭದಲ್ಲಿ ವಜಾ, ಅಮಾನತು ಮತ್ತು ವರ್ಗಾವಣೆಗೊಂಡ 6,444 ಪ್ರಕರಣಗಳಲ್ಲಿ 4,344 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ವಿಧಾನಸಭೆಯಲ್ಲಿ ತಿಳಿಸಿದ್ದರು.
ಸಿಎಂ ಹುದ್ದೆಗೆ ಅಡ್ಡಿಯಾದ ನಾಯಕರ ಸೋಲಿಗೆ ಕಾರಣ ಯಾರು?; ಡಿಕೆಶಿಗೆ ಖಡಕ್ ಪ್ರಶ್ನೆ ಹಾಕಿದ ಎಚ್ಡಿಕೆ
ಇದೇ ತಿಂಗಳ ಆರಂಭದಲ್ಲಿ ರಾಜ್ಯ ಸಾರಿಗೆ ನಿಗಮದ ಕುರಿತು ಬೊಮ್ಮಾಯಿ ಭರವಸೆಗಳನ್ನು ನೀಡಿದ್ದರು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಸ್ಥಾಪನೆಯಾಗಿ 60 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದ ಅವರು, ಸಾರಿಗೆ ನಿಗಮದ ಸಂಬಂಧ ಹಲವು ಮಾಹಿತಿಗಳನ್ನು ಹಂಚಿಕೊಂಡಿದ್ದರು.
'ಮುಂದಿನ ದಿನಗಳಲ್ಲಿ ನಿಗಮದ ಆದಾಯ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕಾಗಿದೆ. ನಿಗಮವನ್ನು ಲಾಭದತ್ತ ಒಯ್ಯಲು ಚಿಂತನೆ, ಕಾರ್ಯವಿಧಾನಗಳಲ್ಲಿ ಬದಲಾವಣೆ ಅಗತ್ಯವಿದೆ. ಜೊತೆಗೆ ಕ್ಷಮತೆಯಿಂದ ನಿಗಮವನ್ನು ಮುನ್ನಡೆಸಲು ಸರ್ಕಾರ ಬದ್ಧವಾಗಿದೆ. ಅದರೊಂದಿಗೆ ನಿಗಮದ ಸುಧಾರಣೆಯೊಂದಿಗೆ ನೌಕರರ ಜೀವನಮಟ್ಟ ಸುಧಾರಣೆಗೂ ಆದ್ಯತೆ ನೀಡಲಾಗುವುದು' ಎಂದು ಹೇಳಿದ್ದರು.
'ನಿಗಮ ಸಂಕಷ್ಟದಲ್ಲಿದೆ. ಆದರೆ ಸಮಸ್ಯೆಯನ್ನು ಬೆಳೆಯಲು ಬಿಡದೆ ನಾವು ಪರಿಹಾರ ಕಂಡುಕೊಳ್ಳಬೇಕಾಗಿದೆ. ಆದಾಯೋತ್ಪನ್ನ ಮಾದರಿಯಿದ್ದರೂ, ನಿಗಮ ನಷ್ಟದಲ್ಲಿರಲು ಕಾರಣಗಳನ್ನು ವಿಶ್ಲೇಷಿಸುವುದರೊಂದಿಗೆ, ನಿಗಮವನ್ನು ಲಾಭದಾಯಕವಾಗಿಸಲು ಸಲಹೆ ಸೂಚನೆಗಳನ್ನು ನೀಡಲು ಈ ಸಮಿತಿ ರಚಿಸಲಾಗುವುದು' ಎಂದು ತಿಳಿಸಿದ್ದರು.
'ಕೋವಿಡ್ 19ರ ಸಂಕಷ್ಟದ ಅವಧಿಯಲ್ಲಿ ನೌಕರರ ವೇತನ ಸೇರಿದಂತೆ, ನಿಗಮಕ್ಕೆ ಬೆಂಬಲ ನೀಡಲು ರಾಜ್ಯ ಸರ್ಕಾರ 2300 ಕೋಟಿ ರೂ. ಬಿಡುಗಡೆ ಮಾಡಿದೆ. ತಾವು ಮುಖ್ಯಮಂತ್ರಿಯಾದ ನಂತರವೂ 108 ಕೋಟಿ ರೂ. ಬಿಡುಗಡೆ ಮಾಡಲಾಗಿದೆ' ಎಂದು ಹೇಳಿದ್ದರು.
Recommended Video
ಇದೀಗ ಮಾಜಿ ಸಿಎಂ ಕುಮಾರಸ್ವಾಮಿ, ಸಾರಿಗೆ ನಿಗಮದ ನೌಕರರಿಗೆ ವೇತನ ವಿಳಂಬ ಮಾಡುತ್ತಿರುವ ಸರ್ಕಾರದ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.