ಕುಮಾರಸ್ವಾಮಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಪಟ್ಟ?
ಬೆಂಗಳೂರು, ಏ. 24 : ಜೆಡಿಎಸ್ ರಾಜ್ಯಾಧ್ಯಕ್ಷ ಎ.ಕೃಷ್ಣಪ್ಪ ಅವರ ಅಕಾಲಿಕ ಮರಣ ಪಕ್ಷದ ನಾಯಕರಿಗೆ, ಕಾರ್ಯಕರ್ತರಿಗೆ ಅಘಾತ ಉಂಟುಮಾಡಿದೆ. ಇವುಗಳ ನಡುವೆಯೇ ಪಕ್ಷದ ಸಾರಥ್ಯವನ್ನು ಯಾರಿಗೆ ನೀಡಬೇಕೆಂಬ ಪ್ರಶ್ನೆ ಸಹ ಹುಟ್ಟಿಕೊಂಡಿದ್ದು, ಎಚ್.ಡಿ.ಕುಮಾರಸ್ವಾಮಿ ಅವರಿಗೆ ಪಕ್ಷದ ಅಧ್ಯಕ್ಷ ಸ್ಥಾನ ನೀಡುವಂತೆ ಕಾರ್ಯಕರ್ತರು ಒತ್ತಡ ಹೇರುವ ಸಾಧ್ಯತೆ ಇದೆ.
ಬುಧವಾರ ಹೃದಯಾಘಾತದಿಂದ ಜೆಡಿಎಸ್ ರಾಜ್ಯಾಧ್ಯಕ್ಷ ಎ.ಕೃಷ್ಣಪ್ಪ ಬೆಂಗಳೂರಿನಲ್ಲಿ ಮೃತಪಟ್ಟಿದ್ದಾರೆ. ಪಕ್ಷದ ಸಾರಥ್ಯ ವಹಿಸಿದ್ದ ಅವರು ಲೋಕಸಭೆ ಚುನಾವಣೆಯಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ತಿರುಗಿ ಪ್ರಚಾರ ನಡೆಸಿದ್ದರು. ಸ್ವತಃ ತುಮಕೂರು ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದರು. ಸದ್ಯ ಚುನಾವಣೆ ಮುಗಿದಿದ್ದು ಮತದಾರ ತನ್ನ ತೀರ್ಪನ್ನು ನೀಡಿದ್ದಾನೆ. ಒಂದು ವೇಳೆ ತುಮಕೂರಿನಲ್ಲಿ ಕೃಷ್ಣಪ್ಪ ಅವರು ಜಯಗಳಿಸಿದರೆ, ಉಪ ಚುನಾವಣೆ ನಡೆಸಬೇಕಾಗುತ್ತದೆ.

ವಿಧಾನಸಭೆ ಚುನಾವಣೆ ಮುಗಿದು ಜೆಡಿಎಸ್ ಪಕ್ಷದ 40 ಶಾಸಕರು ವಿಧಾನಸಭೆಗೆ ಆರಿಸಿ ಬಂದು, ಪ್ರತಿಪಕ್ಷ ಸ್ಥಾನವನ್ನು ಪಡೆಯುತ್ತಿದ್ದಂತೆ ಜೆಡಿಎಸ್ ಅಧ್ಯಕ್ಷರನ್ನು ಬದಲಾವಣೆ ಮಾಡುವ ಕಾರ್ಯಕ್ಕೆ ಚಾಲನೆ ಸಿಕ್ಕಿತ್ತು. ಕುಮಾರಸ್ವಾಮಿ ಅವರಿಗೆ ಪ್ರತಿಪಕ್ಷ ಸ್ಥಾನ ಮತ್ತು ಪಕ್ಷದ ಅಧ್ಯಕ್ಷ ಸ್ಥಾನ ನಿರ್ವಹಣೆ ಮಾಡುವುದು ಕಷ್ಟವಾಗುತ್ತದೆ ಎಂಬ ಹಿನ್ನಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸೆ.11ರಂದು ಎ.ಕೃಷ್ಣಪ್ಪ ಅವರನ್ನು ಆಯ್ಕೆ ಮಾಡಲಾಗಿತ್ತು. [ಕೃಷ್ಣಪ್ಪ ಸಾವಿಗೆ ಕಂಬನಿ ಮಿಡಿದ ಗಣ್ಯರು]
ಜೆಡಿಎಸ್ ಪಕ್ಷಕ್ಕೆ ಅಂಟಿರುವ ಅಪ್ಪ-ಮಕ್ಕಳ ಪಕ್ಷ ಎಂಬ ಹಣೆಪಟ್ಟಿಯನ್ನು ಕಿತ್ತೊಗೆಯಬೇಕು ಎಂದು ಪಕ್ಷದ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡ ಹಿಂದುಳಿದ ವರ್ಗದ ನಾಯಕ ಎ.ಕೃಷ್ಣಪ್ಪ ಅವರನ್ನು ಪಕ್ಷದ ರಾಜ್ಯಾಧ್ಯಕ್ಷರಾಗಿ ಆಯ್ಕೆ ಮಾಡಿದ್ದರು. ಆದರೆ, ಅವರ ಅಕಾಲಿಕ ಮರಣ ಮುಂದೆ ಪಕ್ಷದ ಸಾರಥ್ಯವಹಿಸಿಕೊಳ್ಳುವವರು ಯಾರು? ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ. [ಕೃಷ್ಣಪ್ಪ ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಆಯ್ಕೆ]
ಬುಧವಾರ ಸಂಜೆ ಕೃಷ್ಣಪ್ಪ ಮನೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ದೇವೇಗೌಡರು, ಪಕ್ಷಕ್ಕೆ ಪದೇ ಪದೇ ಪರೀಕ್ಷೆ ಎದುರಾಗುತ್ತಿದೆ. ಕೃಷ್ಣಪ್ಪ ಅವರ ಅಂತ್ಯಕ್ರಿಯೆ ಮುಗಿದ ಬಳಿಕ ಪಕ್ಷದ ಕಾರ್ಯಕರ್ತರೊಂದಿಗೆ ಚರ್ಚಿಸಿ, ಮುಂದಿನ ರಾಜ್ಯಾಧ್ಯಕ್ಷ ಯಾರು ಎಂಬ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಪಕ್ಷದ ಕಾರ್ಯಕರ್ತರು ಮತ್ತೊಮ್ಮೆ ಕುಮಾರಸ್ವಾಮಿ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡುವಂತೆ ಬೇಡಿಕೆ ಮುಂದಿಡಬಹುದಾಗಿದೆ.
ಕುಮಾರಸ್ವಾಮಿ ಲೋಕಸಭೆ ಚುಣಾವಣೆಗೆ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಒಂದು ವೇಳೆ ಅವರು ಚುನಾವಣೆಯಲ್ಲಿ ಜಯಗಳಿಸಿ ದೆಹಲಿ ವಿಮಾನವೇರಿದರೆ, ಕರ್ನಾಟಕದಲ್ಲಿನ ಇತರ ನಾಯಕರಿಗೆ ರಾಜ್ಯಾಧ್ಯಕ್ಷ ಹುದ್ದೆ ನೀಡಬಹುದು. ಆದರೆ, ಪಕ್ಷದ ಕಾರ್ಯಕರ್ತರ ಮೊದಲ ಆಯ್ಕೆ ಕುಮಾರಸ್ವಾಮಿ ಎಂಬುದು ಸ್ವತಃ ದೇವೇಗೌಡರಿಗೂ ತಿಳಿದಿದೆ. ಯಾರಿಗೆ ಅಧ್ಯಕ್ಷ ಪಟ್ಟ? ಎಂಬುದು ಕುತೂಹಲ ಕೆರೆಳಿಸಿರುವ ಪ್ರಶ್ನೆ.












Click it and Unblock the Notifications