ಮಾಜಿ ಸಿಎಂ ಎಚ್‌ಡಿಕೆ ಪ್ರಕಾರ 'ಆಪರೇಶನ್ ಕಮಲ'ದ ರೂವಾರಿ ಯಾರು ಗೊತ್ತಾ?

ಬೆಂಗಳೂರು, ಅ. 08: "ಎದೆ ಸೀಳಿದರೆ ಸಿದ್ದು ಕಾಣುತ್ತಾರೆ' ಎನ್ನುತ್ತಿದ್ದ ಅನುಯಾಯಿಗಳು ಬಿಜೆಪಿಗೆ ಹಾರುದ್ದೇಕೆ ಎಂಬುದು 'ಸಿದ್ಧವನ'ದಲ್ಲಿ ಕುಳಿತಿದ್ದ 'ರಾಮ'ನಿಗೂ ಗೊತ್ತಿತ್ತು ಎನ್ನುವ ಮೂಲಕ ಮೈತ್ರಿ ಸರ್ಕಾರದ ಪತನಕ್ಕೆ ಯಾರು ಕಾರಣ ಎಂಬುದನ್ನು ಮಾಜಿ ಸಿಎಂ ಕುಮಾರಸ್ವಾಮಿ ಅವರು ನೇರವಾಗಿ ಹೇಳಿದ್ದಾರೆ.

ಸಾಂಪ್ರದಾಯಿಕ ವಿರೋಧಿಗಳಂತಾಗಿರುವ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹಾಗೂ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಅವರ ಮಧ್ಯೆ ವಾಗ್ಯುದ್ಧ ಜೋರಾಗಿಯೆ ಮುಂದುವರೆದಿದೆ. ಉಪ ಚುನಾವಣೆ ಹಿನ್ನೆಲೆಯಲ್ಲಿ ಆಡಳಿತ ಪಕ್ಷ ಬಿಜೆಪಿ ಹಾಗೂ ವಿರೋಧ ಪಕ್ಷ ಕಾಂಗ್ರೆಸ್ ಮಧ್ಯೆ ವಿನಿಯಮವಾಗಬೇಕಿದ್ದ ಹೇಳಿಕೆ-ಪ್ರತಿ ಹೇಳಿಕೆಗಳು ಕಾಂಗ್ರೆಸ್-ಜೆಡಿಎಸ್ ನಾಯಕರ ಮಧ್ಯೆ ವಿನಿಮಯವಾಗುತ್ತಿವೆ.

ಈ ಉಪ ಚುನಾವಣೆ ಸಂದರ್ಭದಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆ ಹಾಲಿ ಬಿಜೆಪಿ ಸರ್ಕಾರದ ಭವಿಷ್ಯಕ್ಕೂ ಮುಳುವಾಗುವಂತೆ ಕಾಣುತ್ತಿದೆ. ಯಾಕೆಂದರೆ ಕಾಂಗ್ರೆಸ್ ಪಕ್ಷದ ಹತ್ತಾರು ಮಂದಿ ಪೈಕಿ "ಎದೆ ಸೀಳಿದರೆ ಸಿದ್ದು ಕಾಣುತ್ತಾರೆ' ಎಂಬ ಅನುಯಾಯಿಗಳು ಬಿಜೆಪಿಗೆ ಹಾರಲು ಮಸಲತ್ತು ನಡೆಸಿದವರು ಯಾರೆಂಬುದು 'ಸಿದ್ಧವನ'ದಲ್ಲಿ ಕುಳಿತಿದ್ದ 'ರಾಮ'ನಿಗೂ ಗೊತ್ತಿತ್ತು ಎನ್ನುವ ಮೂಲಕ ಮೈತ್ರಿ ಸರ್ಕಾರದ ಪತನಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರೇ ಕಾರಣ ಎಂದು ಎಚ್‌ಡಿಕೆ ಕಿಡಿಕಾರಿದ್ದಾರೆ.

ಇಲ್ಲಿ ಸಿದ್ಧವನದಲ್ಲಿ ಕುಳಿತಿದ್ದ ರಾಮ ಎಂದರೆ ಸಿದ್ದರಾಮಯ್ಯ ಅವರು ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ. ಹೀಗಾಗಿ ಎಚ್‌ಡಿಕೆ ಅವರು ಏನೇನು ಹೇಳಿದ್ದಾರೆ ಎಂಬುದು ನಿಮಗಾಗಿ ಮುಂದಿದೆ!

ಕೈ'ವಾಡದಿಂದ ಮೈತ್ರಿ ಸರ್ಕಾರ ಪತನ

ಕೈ'ವಾಡದಿಂದ ಮೈತ್ರಿ ಸರ್ಕಾರ ಪತನ

ಕೆಲವರ 'ಕೈ'ವಾಡದಿಂದ ಮೈತ್ರಿ ಸರ್ಕಾರ ಪತನವಾಯಿತು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರು ನೇರವಾಗಿ ಸಿದ್ದರಾಮಯ್ಯ ಅವರ ಮೇಲೆ ಆರೋಪ ಮಾಡಿದ್ದಾರೆ. ಯಾರನ್ನು ಯಾರು ಎಲ್ಲಿಗೆ ಕಳುಹಿಸಿದರು? ಸ್ವಾರ್ಥ ರಾಜಕಾರಣಕ್ಕಾಗಿ ಮೂಲ ಕಾಂಗ್ರೆಸ್ಸಿಗರ ಮೇಲೆ ಯಾರು ಸವಾರಿ ಮಾಡುತ್ತಿದ್ದಾರೆ? ಎಂಬುದನ್ನು ತಿಳಿಯದಷ್ಟು ಜನ ಪೆದ್ದರಲ್ಲ. ನಮ್ಮ ಮೂವರು ಶಾಸಕರು ಪಕ್ಷದಿಂದ ಹೊರಹೋಗಲು ನಡೆದ ಸಂಚಿನಲ್ಲಿ ಹಣ ಅಧಿಕಾರದ ಆಮಿಷ ಮಾತ್ರವಲ್ಲ. ಕೆಲವರ 'ಕೈ'ವಾಡ ಕೂಡ ಕಾರಣ ಎಂದು ಟ್ವಿಟರ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಜೆಡಿಎಸ್ ಪಕ್ಷದ ಮೂವರು ಶಾಸಕರು ಬಿಜೆಪಿಗೆ ಹೋಗಲು ಕಾಂಗ್ರೆಸ್ ಪಕ್ಷದ ನಾಯಕರು ಕಾರಣ, ಅದರಲ್ಲಿಯೂ ಸಿದ್ದರಾಮಯ್ಯ ಅವರೇ ಕಾರಣ ಎಂದು ಪರೋಕ್ಷವಾಗಿ ಕುಮಾರಸ್ವಾಮಿ ವಾಗ್ದಾಳಿ ಮಾಡಿದ್ದಾರೆ.

ಆಪರೇಶನ್ ಕಮಲಕ್ಕೆ ಸಿದ್ದರಾಮಯ್ಯ ಕಾರಣ!

ಆಪರೇಶನ್ ಕಮಲಕ್ಕೆ ಸಿದ್ದರಾಮಯ್ಯ ಕಾರಣ!

ಮೈತ್ರಿ ಸರ್ಕಾರ ತೆಗೆಯಲು ಅಳಲೇಕಾಯಿ ಪಂಡಿತನಂತೆ ಔಷಧ ಅರೆದ ವ್ಯಕ್ತಿಗೆ ನಮ್ಮ ಮೂವರು ಶಾಸಕರು ಕದ್ದು ಓಡಿ ಹೋದರೋ? ನಾವೇ ಕತ್ತು ಹಿಡಿದು ನೂಕಿದವೋ? ಎಂದು ಗೊತ್ತಿಲ್ಲದ ಜಾಣ ಪೆದ್ದನಾಗಿದ್ದು ವಿಪರ್ಯಾಸ ಎನ್ನುವ ಮೂಲಕ ಮೈತ್ರಿ ಸರ್ಕಾರದ ಪತನಕ್ಕೆ ತಾವು ಕಾರಣರಲ್ಲ ಎಂದು ಮಾಜಿ ಸಿಎಂ ಎಚ್‌ಡಿಕೆ ಅವರು ಸಿದ್ದರಾಮಯ್ಯ ಮೇಲೆ ಹರಿಹಾಯ್ದಿದ್ದಾರೆ.

ಜೆಡಿಎಸ್ ಪಕ್ಷದ ಶಾಸಕರು ಪಕ್ಷ ತೊರೆಯಲು ಸಿದ್ದರಾಮಯ್ಯ ಅವರೇ ಕಾರಣ ಎಂದು ಪರೋಕ್ಷವಾಗಿ ಮತ್ತೆ ಒತ್ತಿ ಹೇಳಿದ್ದಾರೆ. ಹೀಗಾಗಿ ಆಪರೇಶನ್ ಕಮಲಕ್ಕೆ ಸಿದ್ದರಾಮಯ್ಯ ಅವರ ಪರೀಕ್ಷ ಬೆಂಬಲವಿತ್ತು ಎಂದು ಎಚ್‌ಡಿಕೆ ಹೇಳಿದಂತಾಗಿದೆ.

ಮತದಾರ 'ಕೈ' ಹಿಡಿಯುವುದಿಲ್ಲ!

ಮತದಾರ 'ಕೈ' ಹಿಡಿಯುವುದಿಲ್ಲ!

ಅಧಿಕಾರದಲ್ಲಿದ್ದಾಗಲೇ ಮತ್ತೆ ಅಧಿಕಾರ ನೀಡದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ರಾಜ್ಯದ ಜನತೆ ಅರ್ಧಚಂದ್ರ ಪ್ರಯೋಗ ಮಾಡಿದರು. ಈಗ ಉಪಚುನಾವಣೆಯಲ್ಲಿ ಕಾಂಗ್ರೆಸ್ ಕೈ ಹಿಡಿಯುತ್ತಾರೆ ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ಕೇವಲ ಭ್ರಮೆ ಎಂದು ಮಾಜಿ ಸಿಎಂ ಎಚ್‌ಡಿಕೆ ಟ್ವೀಟರ್‌ನಲ್ಲಿ ಲೇವಡಿ ಮಾಡಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕದ ಮತದಾರ ಈಗ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಮತ ಹಾಕುವುದಿಲ್ಲ, ಶಿರಾ ಕ್ಷೇತ್ರದಲ್ಲಿ ಮತದಾರ ಕಾಂಗ್ರೆಸ್ ಕೈಹಿಡಿಯುತ್ತಾರೆ ಎಂಬುದು ಭ್ರಮೆ ಎಂದು ಕುಮಾರಸ್ವಾಮಿ ಟೀಕೆ ಮಾಡಿದ್ದಾರೆ.

ಅಗ್ಗದ ಯೋಜನೆಗಳ ಸಿದ್ದರಾಮಯ್ಯ

ಅಗ್ಗದ ಯೋಜನೆಗಳ ಸಿದ್ದರಾಮಯ್ಯ

ಜನ ಕಲ್ಯಾಣಕ್ಕೆ ದೂರದೃಷ್ಟಿಯ ಕಾರ್ಯಸಾಧ್ಯವಾದ ಯೋಜನೆಗಳನ್ನು ರೂಪಿಸುವಲ್ಲಿ ಎಡವಿದ್ದ ಸಿದ್ದರಾಮಯ್ಯ ಅಗ್ಗದ ಯೋಜನೆಗಳ ಮೂಲಕ ಜನರ ತುಟಿಗೆ ತುಪ್ಪ ಸವರುವ ಆಡಳಿತಕ್ಕೆ ಕಳೆದ ಬಾರಿ ತಕ್ಕ ಶಾಸ್ತಿ ಮಾಡಿದ್ದರು. ಇವರ ದುರಾಡಳಿತವನ್ನು ಜನತೆ ಇನ್ನೂ ಮರೆತಿಲ್ಲ. ಉಪಚುನಾವಣೆಯಲ್ಲೂ ಕಾಂಗ್ರೆಸ್‌ಗೆ ಪಾಠ ಕಲಿಸಲಿದ್ದಾರೆ ಎಂದು ಟ್ವಿಟರ್‌ನಲ್ಲಿ ಕುಮಾರಸ್ವಾಮಿ ಅವರು ಭವಿಷ್ಯ ನುಡಿದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+