ಎಚ್.ಡಿ.ಕುಮಾರಸ್ವಾಮಿ ಸರ್ಕಾರ ಪತನವಾಗುವುದಿಲ್ಲ, 5 ಕಾರಣಗಳು!
Recommended Video

ಬೆಂಗಳೂರು, ಆಗಸ್ಟ್ 28 : ಕರ್ನಾಟಕದಲ್ಲಿನ ಮೈತ್ರಿ ಸರ್ಕಾರ ಶೀಘ್ರದಲ್ಲೇ ಪತನಗೊಳ್ಳಲಿದೆ ಎಂದು ಬಿಜೆಪಿ ನಾಯಕರು ಪ್ರತಿ ದಿನ ಹೇಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಸರ್ಕಾರದ ವಿರುದ್ಧವೇ ಅಸಮಾಧಾನ ಉಂಟಾಗಿದೆ. ಆದರೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸರ್ಕಾರ ಪತನವಾಗುವುದಿಲ್ಲ. ಇದಕ್ಕೆ ಹಲವಾರು ಕಾರಣಗಳಿವೆ.
ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದು ಆ.23ಕ್ಕೆ ಮೂರು ತಿಂಗಳು ಕಳೆದಿದೆ. ಸರ್ಕಾರ ಅಸ್ತಿತ್ವಕ್ಕೆ ಬಂದ ದಿನದಿಂದ ಪ್ರತಿಪಕ್ಷ ಬಿಜೆಪಿ ಮೈತ್ರಿ ಸರ್ಕಾರ ಶೀಘ್ರದಲ್ಲೇ ಪತನವಾಗಲಿದೆ ಎಂದು ಹೇಳಿಕೆ ನೀಡುತ್ತಲೇ ಇದೆ.
ಕಾಂಗ್ರೆಸ್ ಪಕ್ಷದಲ್ಲಿನ ಕೆಲವು ನಾಯಕರು ಸಮ್ಮಿಶ್ರ ಸರ್ಕಾರದ ವಿರುದ್ಧ ಅಸಮಾಧಾನಗೊಂಡಿರುವುದು ಗುಟ್ಟಾಗಿ ಉಳಿದಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 'ನಾನು ಮತ್ತೆ ಮುಖ್ಯಮಂತ್ರಿಯಾಗುವೆ' ಎಂದು ನೀಡಿದ ಹೇಳಿಕೆ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ.
2018ರ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡು ಹೈಡ್ರಾಮ ನಡೆದ ಬಳಿಕ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಎಷ್ಟು ಅಸಮಾಧಾನ, ಗುಂಪುಗಾರಿಗೆ ಉಂಟಾದರೆ ಎಚ್.ಡಿ.ಕುಮಾರಸ್ವಾಮಿ ಅವರ ಸರ್ಕಾರ ಸದ್ಯಕ್ಕಂತೂ ಭದ್ರವಾಗಿದೆ. ಲೋಕಸಭೆ ಚುನಾವಣೆ ಮುಗಿದು ಫಲಿತಾಂಶ ಹೊರಬರುವ ತನಕ ಸರ್ಕಾರ ಪತನವಾಗುವುದಿಲ್ಲ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ....

ಹೈಕಮಾಂಡ್ ತೀರ್ಮಾನಕ್ಕೆ ಎಲ್ಲರೂ ಬದ್ಧ
ಕರ್ನಾಟಕದಲ್ಲಿ ಜೆಡಿಎಸ್ ಜೊತೆ ಸೇರಿ ಸರ್ಕಾರ ರಚನೆ ಮಾಡಿ, ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಸೂತ್ರ ಮುಂದಿಟ್ಟಿದ್ದು ಕಾಂಗ್ರೆಸ್ ಹೈಕಮಾಂಡ್. ರಾಷ್ಟ್ರಮಟ್ಟದಲ್ಲಿ ಮೈತ್ರಿ ಸರ್ಕಾರವನ್ನು ಉಳಿಸಿಕೊಂಡು ಹೋಗುವ ಅನಿವಾರ್ಯತೆ ಕಾಂಗ್ರೆಸ್ ಪಕ್ಷಕ್ಕೆ ಇದೆ.
ಆದ್ದರಿಂದ, ಪಕ್ಷದಲ್ಲಿ ಏನೇ ಅಸಮಾಧಾನಗಳು ಉಂಟಾದರೂ ಕೆಲವೊಂದು ಬದಲಾವಣೆಗಳು ಆಗಬಹುದು ಹೊರತು ಸರ್ಕಾರ ಪತನಗೊಳ್ಳುವುದಿಲ್ಲ. ಅಸಮಾಧಾನಗೊಂಡ ನಾಯಕರಿಗೆ ಹೈಕಮಾಂಡ್ ಒಂದು ಸಂದೇಶ ಕಳಿಸಿದರೆ ಸಾಕು ಎಲ್ಲವೂ ತಣ್ಣಗಾಗುತ್ತದೆ.

2019ರ ಲೋಕಸಭೆ ಚುನಾವಣೆ
2019ರ ಲೋಕಸಭೆ ಚುನಾವಣೆಗೆ ಕೆಲವು ತಿಂಗಳು ಮಾತ್ರ ಬಾಕಿ ಇದೆ. ಕಾಂಗ್ರೆಸ್ ಮತ್ತು ಬಿಜೆಪಿಯ ರಾಷ್ಟ್ರ ಮಟ್ಟದ ನಾಯಕರು ರಾಜ್ಯದಲ್ಲಿನ ಬೆಳವಣಿಗೆ ಬಗ್ಗೆ ಹೆಚ್ಚಿನ ಗಮನ ಹರಿಸಲು ಸಮಯವಿಲ್ಲ. ಎಲ್ಲಾ ನಾಯಕರು ಲೋಕಸಭೆ ಚುನಾವಣೆಯ ಸಿದ್ಧತೆಯತ್ತ ಗಮನ ಹರಿಸಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗಳಿಸುವ ಅನಿವಾರ್ಯತೆ ಇದೆ. ಅದಕ್ಕಾಗಿ ಪಕ್ಷ ಅಧಿಕಾರದಲ್ಲಿರುವ ರಾಜ್ಯದಲ್ಲಿ ಮೊದಲು ಹೆಚ್ಚು ಸಂಸದರು ಆರಿಸಿ ಬರಬೇಕು. ಆದ್ದರಿಂದ, ಚುನಾವಣೆ ಮುಂದಿಟ್ಟುಕೊಂಡು ಸರ್ಕಾರಕ್ಕೆ ನೀಡಿರುವ ಬೆಂಬಲ ವಾಪಸ್ ಪಡೆಯುವಂತಹ ಕೆಲವವನ್ನು ಪಕ್ಷ ಮಾಡುವುದಿಲ್ಲ. ಆದ್ದರಿಂದ, ಮೈತ್ರಿ ಸರ್ಕಾರ ಪತನವಾಗುವುದಿಲ್ಲ.

ಅಧಿಕಾರ ಎಲ್ಲರಿಗೂ ಬೇಕು
ಕಾಂಗ್ರೆಸ್ ಪಕ್ಷದಲ್ಲಿ ಸಚಿವರಾಗದ, ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಸಿಗದ ಕೆಲವು ನಾಯಕರು ಅಸಮಾಧಾನಗೊಂಡಿರಬಹುದು. ಆದರೆ, ಸರ್ಕಾರ ಪತನಗೊಳ್ಳುವುದು ಅವರಿಗೂ ಬೇಕಾಗಿಲ್ಲ. ಸ್ಥಾನಮಾನ ಸಿಕ್ಕರೆ ಎಲ್ಲವೂ ಸರಿಹೋಗುತ್ತದೆ.
ಕಾಂಗ್ರೆಸ್ ಪಕ್ಷ ಸಮ್ಮಿಶ್ರ ಸರ್ಕಾರದ ಭಾಗವಾಗಿದೆ. ಉಪ ಮುಖ್ಯಮಂತ್ರಿ, ಹೆಚ್ಚಿನ ಸಚಿವ ಸ್ಥಾನಗಳು ಕಾಂಗ್ರೆಸ್ ಪಕ್ಷಕ್ಕೆ ಸೇರಿವೆ. ಇರುವ ಅಧಿಕಾರವನ್ನು ಕಳೆದುಕೊಳ್ಳಲು ಯಾವುದೇ ನಾಯಕರು ಇಷ್ಟ ಪಡುವುದಿಲ್ಲ. ಅಸಮಾಧಾನ, ಗುಂಪುಗಾರಿಕೆ ಇದ್ದರೂ ಸರ್ಕಾರ ಹೀಗೆ ಮುಂದುವರೆಯಲಿದೆ.

ಕುಮಾರಸ್ವಾಮಿಯೇ ಮುಖ್ಯಮಂತ್ರಿ
ಜೆಡಿಎಸ್ ಪಕ್ಷಕ್ಕೆ ಸರ್ಕಾರ ಪತನವಾಗುವುದು ಬೇಕಾಗಿಲ್ಲ. ತಳ ಮಟ್ಟದ ಕಾರ್ಯಕರ್ತರಲ್ಲಿ ಏನೇ ಅಸಮಾಧಾನಗಳು ಇದ್ದರೂ ಪಕ್ಷದ ಶಾಸಕರೇ ಮುಖ್ಯಮಂತ್ರಿಯಾಗಿದ್ದಾರೆ. ಆದ್ದರಿಂದ, ಪಕ್ಷ ಸರ್ಕಾರ ಪತನಗೊಳಿಸುವಂತಹ ಕೆಲಸಕ್ಕೆ ಕೈ ಹಾಕುವುದಿಲ್ಲ.
ಜೆಡಿಎಸ್ ನಾಯಕರಿಗೆ ಹಲವು ವರ್ಷಗಳ ಬಳಿಕ ಅಧಿಕಾರ ಸಿಕ್ಕಿದೆ. ಅದನ್ನು ಉಳಿಸಿಕೊಂಡು ಹೋಗಲು ಕಾಂಗ್ರೆಸ್ ಜೊತೆ ಅವರು ಹಲವು ಹೊಂದಾಣಿಕೆಗಳನ್ನು ಮಾಡಿಕೊಳ್ಳುತ್ತಾರೆ. ಸರ್ಕಾರ ಪತನದ ಹೇಳಿಕೆ ಬಗ್ಗೆ ವಿವಿಧ ನಾಯಕರು ನೀಡುತ್ತಿರುವ ಹೇಳಿಕೆಗೆ ಅದಕ್ಕೆ ಜೆಡಿಎಸ್ ಪ್ರತಿಕ್ರಿಯೆ ನೀಡುತ್ತಿಲ್ಲ.

ಚುನಾವಣೆ ಯಾರಿಗೂ ಬೇಡ
ರಾಜ್ಯದಲ್ಲಿರುವ ಮೈತ್ರಿ ಸರ್ಕಾರ ಪತನವಾದರೆ ಮತ್ತೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಬೇಕು. ಅದಕ್ಕೆ ಬಹುಮತ ಸಿಗುವುದು ಕಷ್ಟ. ಆಗ ಉಳಿದಿರುವ ದಾರಿ ಮತ್ತೆ ಚುನಾವಣೆಗೆ ಹೋಗುವುದು.
ಆದರೆ, ಯಾವ ಪಕ್ಷಗಳಿಗೂ ಈಗ ಚುನಾವಣೆ ಬೇಕಾಗಿಲ್ಲ. ಎಲ್ಲಾ ಪಕ್ಷಗಳು 2019ರ ಲೋಕಸಭೆ ಚುನಾವಣೆಯತ್ತ ಗಮನ ಹರಿಸಿವೆ. ಸರ್ಕಾರವನ್ನು ಪತನವಾಗಿ ವಿಧಾನಸಭೆ ಚುನಾವಣೆ ನಡೆಯುವುದು ಯಾವ ಪಕ್ಷಕ್ಕೂ ಬೇಕಾಗಿಲ್ಲ. ಆದ್ದರಿಂದ, ಕುಮಾರಸ್ವಾಮಿ ಅವರ ಸರ್ಕಾರ ಭದ್ರವಾಗಿರಲಿದೆ.












Click it and Unblock the Notifications