'ಮನಸ್ಸು ಮಾಡಿದ್ದರೆ ಯಡಿಯೂರಪ್ಪ ದಾರಿ ತಪ್ಪಿಸಬಹುದಿತ್ತು'
ಬೆಂಗಳೂರು, ಸೆಪ್ಟೆಂಬರ್, 08 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲಾಗುತ್ತದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಘೋಷಿಸಿದ್ದಾರೆ. 'ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ರಾಷ್ಟ್ರೀಯ ಪಕ್ಷಗಳ ಮುಖಂಡರು ಒಟ್ಟಿಗೆ ಸೇರಿಯೇ ಜೆಡಿಎಸ್ ಕುತ್ತಿಗೆ ಕೊಯ್ದಿದ್ದಾರೆ' ಎಂದು ಅವರು ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಕುಮಾರಸ್ವಾಮಿ ಅವರು, 'ಕಾಂಗ್ರೆಸ್ ಮತ್ತು ಬಿಜೆಪಿ ಅವರಿಗೆ ಯಾವಾಗ ಜೆಡಿಎಸ್ ಕಂಡರೆ ಪ್ರೀತಿ ಉಕ್ಕುತ್ತದೆ, ಯಾವಾಗ ದ್ವೇಷ ಬರುತ್ತದೆ ಎಂಬುದರ ಅನುಭವ ನನಗಿದೆ. ಆದರೆ, ಜೆಡಿಎಸ್ ಎಂದೂ ಇವರ ಬೆನ್ನಿಗೆ ಚೂರಿ ಹಾಕಿಲ್ಲ' ಎಂದು ಸ್ಪಷ್ಟಪಡಿಸಿದರು. [ಮೈತ್ರಿ ಗೊಂದಲ ಬಗೆಹರಿಸಿದ ಎಚ್ಡಿಕೆ]
'ಬಿಬಿಎಂಪಿ ಚುನಾವಣೆ ಬಳಿಕ ಪಕ್ಷೇತರ ಪಾಲಿಕೆ ಸದಸ್ಯರು ಬಿಜೆಪಿ ನಾಯಕರ ಮನೆ ಬಾಗಿಲಿಗೆ ಹೋದಾಗ ಗೌರವದಿಂದ ನಡೆದುಕೊಂಡಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ಈಗ ಮೈತ್ರಿ ಮಾಡಿಕೊಂಡ ಬಳಿಕ ಜೆಡಿಎಸ್ ಅವಕಾಶವಾದಿ ಎಂದು ಬಿಜೆಪಿ ದೂರುತ್ತಿದೆ' ಎಂದು ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು. [ಮೇಯರ್ ಆಯ್ಕೆಗೆ ಸೆ.11ರಂದು ಚುನಾವಣೆ]
'ಜೆಡಿಎಸ್ ಅವಕಾಶವಾದಿ ಎಂದು ಟೀಕಿಸುವ ರಾಷ್ಟ್ರೀಯ ಪಕ್ಷಗಳು ಹೇಗೆ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂಬುದು ತಿಳಿದಿದೆ. ನಾನು ಮನಸ್ಸು ಮಾಡಿದ್ದರೆ ಧರ್ಮಸಿಂಗ್ ಮುಖ್ಯಮಂತ್ರಿಯಾಗಿದ್ದಾಗ ಸಚಿವ ಸ್ಥಾನ ಕೇಳಿಕೊಂಡು ಬಂದಿದ್ದ ಯಡಿಯೂರಪ್ಪ ಅವರನ್ನು ದಾರಿ ತಪ್ಪಿಸಬಹುದಾಗಿತ್ತು' ಎಂದು ಹೇಳಿದರು. ಕುಮಾರಸ್ವಾಮಿ ಹೇಳಿದ್ದೇನು? ಚಿತ್ರಗಳಲ್ಲಿ ನೋಡಿ.......

'ಸಮಯ ನೋಡಿ ಪಾತ್ರ ಬದಲಾಯಿಸುತ್ತಾರೆ'
'ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೈತ್ರಿ ವಿಚಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ಹೇಳಿಕೆಗಳನ್ನು ಗಮನಿಸಿದ್ದೇನೆ. ಎರಡೂ ಪಕ್ಷಗಳ ನಾಯಕರು ಸಮಯ ನೋಡಿ ಪಾತ್ರ ಬದಲಿಸುತ್ತಾರೆ' ಎಂದು ಎಚ್.ಡಿ.ಕುಮಾರಸ್ವಾಮಿ ಟೀಕಿಸಿದರು.

'ಜೆಡಿಎಸ್ ಇವರ ಬೆನ್ನಿಗೆ ಚೂರಿ ಹಾಕಿಲ್ಲ'
'ಕಾಂಗ್ರೆಸ್ ಮತ್ತು ಬಿಜೆಪಿ ಅವರಿಗೆ ಯಾವಾಗ ಜೆಡಿಎಸ್ ಕಂಡರೆ ಪ್ರೀತಿ ಉಕ್ಕುತ್ತದೆ, ಯಾವಾಗ ದ್ವೇಷ ಬರುತ್ತದೆ ಎಂಬುದರ ಅನುಭವ ನನಗಿದೆ. ಬಿಬಿಎಂಪಿ ಮೈತ್ರಿ ವಿಚಾರ ಬಂದಾಗ ಬಿಜೆಪಿಯವರು ಜೆಡಿಎಸ್ ಅವಕಾಶವಾದಿ ಎಂದು ಟೀಕಿಸುತ್ತಾರೆ. ಅವರು ನಮ್ಮ ಪಕ್ಷಕ್ಕೆ ಹೇಗೆ ಚೂರಿ ಹಾಕಿದರು ಎನ್ನುವುದು ಎಲ್ಲರಿಗೂ ಗೊತ್ತಿದೆ' ಎಂದು ಕುಮಾರಸ್ವಾಮಿ ಹೇಳಿದರು.

'ಯಡಿಯೂರಪ್ಪ ದಾರಿ ತಪ್ಪಿಸಬಹುದಿತ್ತು'
'ನಾನು ಮನಸ್ಸು ಮಾಡಿದ್ದರೆ ಧರ್ಮಸಿಂಗ್ ಅವರು ಮುಖ್ಯಮಂತ್ರಿಗಳಾಗಿದ್ದಾಗಲೇ ಸಚಿವ ಸ್ಥಾನ ಕೇಳಿಕೊಂಡು ಬಂದಿದ್ದ ಯಡಿಯೂರಪ್ಪ ಅವರನ್ನು ದಾರಿ ತಪ್ಪಿಸಬಹುದಿತ್ತು. ಆದರೆ, ನನಗೆ ಅಂತಹ ದುರ್ಬುದ್ಧಿ ಇರಲಿಲ್ಲ. ಅಂದು ಬಿಜೆಪಿ ತೊರೆದು ಬರುತ್ತೇನೆ ಎಂದಿದ್ದ ಯಡಿಯೂರಪ್ಪ ಅವರನ್ನು ನಾನೇ ಸಮಾಧಾನ ಮಾಡಿ ವಾಪಸ್ ಕಳುಹಿಸಿದ್ದೆ. ಈ ಘಟನೆಗೆ ಸಾಕ್ಷಿಯಾದ ಅನೇಕರು ಈಗಲೂ ಜೀವಂತವಾಗಿದ್ದಾರೆ' ಎಂದು ಕುಮಾರಸ್ವಾಮಿ ತಿಳಿಸಿದರು.

'ಬೆಂಗಳೂರಿನ ಹಿತದೃಷ್ಟಿಯಿಂದ ಮೈತ್ರಿ'
'ಬಿಬಿಎಂಪಿಯಲ್ಲಿ ಕಾಂಗ್ರೆಸ್ಗೆ ಬೆಂಬಲ ನೀಡುವ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ. ಕಾಂಗ್ರೆಸ್ಗೆ ಬೇಷರತ್ ಬೆಂಬಲ ನೀಡಲಾಗುವುದು. ಈ ವಿಷಯದಲ್ಲಿ ಯಾರಿಗೂ ಅನುಮಾನ ಬೇಡ. 10 ವರ್ಷಗಳ ಅವಧಿಯಲ್ಲಿ ಕಾಂಗ್ರೆಸ್ನಿಂದ ಸಾಕಷ್ಟು ಅಪಮಾನವಾಗಿದೆ. ಆದರೆ, ಅವೆಲ್ಲವನ್ನೂ ಸಹಿಸಿಕೊಂಡು ಬೆಂಬಲ ನೀಡುತ್ತಿದ್ದೇವೆ. ಬೆಂಗಳೂರಿನ ಹಿತದೃಷ್ಟಿಯಿಂದ ಈ ತೀರ್ಮಾನಕ್ಕೆ ಬಂದಿದ್ದೇವೆ' ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

'ತನಿಖೆ ನಡೆಸುವ ಷರತ್ತು ಹಾಕಬೇಕಿತ್ತು'
'ಮೈತ್ರಿ ಮಾತುಕತೆಯ ಸಂದರ್ಭದಲ್ಲಿ ಬಿಬಿಎಂಪಿ ವಿಭಜನೆಗೆ ವಿರೋಧ ಮತ್ತು ಪಾಲಿಕೆಯಲ್ಲಿ ನಡೆದ ಅವ್ಯವಹಾರಗಳ ತನಿಖೆ ನಡೆಸಬೇಕು ಎಂದು ಷರತ್ತು ಹಾಕಲು ನಾನು ನಿರ್ಧರಿಸಿದ್ದೆ. ಆದರೆ, ಪಕ್ಷದ ರಾಷ್ಟ್ರೀಯ ಅಧ್ಯಕ್ಷರೇ ಬೇಷರತ್ ಬೆಂಬಲ ಎಂದು ಹೇಳಿದ್ದರಿಂದ ನಾನು ಸುಮ್ಮನಾಗಿದ್ದೇನೆ' ಎಂದು ಕುಮಾರಸ್ವಾಮಿ ಹೇಳಿದರು.

'ಹಸ್ತಕ್ಷೇಪ ಮಾಡುವುದಿಲ್ಲ'
'ಬಿಬಿಎಂಪಿಯಲ್ಲಿ ಅಧಿಕಾರ ಹಂಚಿಕೆ, ಸ್ಥಾಯಿ ಸಮಿತಿಗಳ ನೇಮಕ ಮುಂತಾದ ವಿಚಾರದಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ. ಯಾರು ಉಪ ಮೇಯರ್ ಆಗಬೇಕು? ಮುಂತಾದ ವಿಚಾರಗಳ ಬಗ್ಗೆ ಶಾಸಕರಾದ ಜಮೀರ್ ಅಹಮದ್ ಖಾನ್, ಗೋಪಾಲಯ್ಯ, ಅಖಂಡ ಶ್ರೀನಿವಾಸ ಮೂರ್ತಿ ಅವರು ತೀರ್ಮಾನ ಕೈಗೊಳ್ಳುತ್ತಾರೆ' ಎಂದು ಕುಮಾರಸ್ವಾಮಿ ತಿಳಿಸಿದರು.

'ದೂರವಾಣಿ ಮೂಲಕ ಮಾತುಕತೆ ನಡೆಸಿದ್ದೇನೆ'
'ಮೈತ್ರಿ ಬಗ್ಗೆ ಪರಮೇಶ್ವರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದೇನೆ. ಅಗತ್ಯವಿದ್ದರೆ ಖುದ್ದಾಗಿ ಭೇಟಿ ಮಾಡಿ ಮಾತುಕತೆ ನಡೆಸಲಾಗುತ್ತದೆ. ದೇವೇಗೌಡರೇ ಒಪ್ಪಿಗೆ ಕೊಟ್ಟ ಮೇಲೆ ಹೆಚ್ಚು ಮಾತನಾಡುವುದಿಲ್ಲ. ಆದ್ದರಿಂದ, ಪರಮೇಶ್ವರ ಅವರನ್ನು ಭೇಟಿಯಾಗಿಲ್ಲ' ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.












Click it and Unblock the Notifications