ಮಂಡ್ಯ ಸಂಸದೆ ಸುಮಲತಾ ವಿರುದ್ಧ ಎಚ್ಡಿಕೆ ಅಸಮಾಧಾನ
ಬೆಂಗಳೂರು, ಜುಲೈ 05; " ಮಂಡ್ಯ ಜಿಲ್ಲೆಗೆ ಇಂತಹ ಸಂಸದೆ ಹಿಂದೆಯೂ ಬಂದಿಲ್ಲ, ಮುಂದೆಯೂ ಬರುವುದಿಲ್ಲ. ಕೆಆರ್ಎಸ್ ರಕ್ಷಣೆ ಮಾಡುತ್ತಾರಂತೆ. ಕೆಆರ್ಎಸ್ ಸೋರುತ್ತಿದ್ದರೆ ನೀರು ಹೋಗದಂತೆ ಅವರನ್ನೇ ಮಲಗಿಸಬೇಕು" ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹೇಳಿದರು.
ಸೋಮವಾರ ಎಚ್. ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಭೇಟಿ ಮಾಡಿದರು. ಬಳಿಕ ಮಾತನಾಡಿದ ಅವರು, "ರೈತ ಸಂಘದ ಮುಖಂಡರು ಭೇಟಿ ಮಾಡಿ ಮೈ ಶುಗರ್ ಕಾರ್ಖಾನೆ ಬಗ್ಗೆ ಚರ್ಚೆ ಮಾಡಿದ್ದಾರೆ. ಸರ್ಕಾರದ ಸ್ವಾಮ್ಯದಲ್ಲೇ ಇರಬೇಕು ಅನ್ನುವುದು ನಮ್ಮ ಅಭಿಲಾಷೆ" ಎಂದರು.
"ಮಂಡ್ಯ ಮೈ ಶುಗರ್ ಕಾರ್ಖಾನೆ ಖಾಸಗಿಯವರ ಪಾಲಗಬಾರದು. ಮುಖ್ಯಮಂತ್ರಿಗಳು ಖಾಸಗಿಯವರಿಗೆ ಕೊಡಲ್ಲ ಅಂತ ಭರವಸೆ ಕೊಟ್ಟಿದ್ದಾರೆ. ಅವರಿಗೆ ನಾನು ಮಂಡ್ಯ ಜನತೆ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ" ಎಂದು ಹೇಳಿದರು.

"40 ವರ್ಷ ಗುತ್ತಿಗೆ ಕೊಡಬೇಕು ಅಂತ ಸರ್ಕಾರದ ಮುಂದೆ ಪ್ರಸ್ತಾವನೆ ಇತ್ತು. ಆದರೆ ಅದನ್ನು ಅಂಗೀಕರಿಸಬಾರದು. ಖಾಸಗಿಯವರಿಗೆ ಕೊಡಬೇಕು ಎಂಬ ಬಗ್ಗೆ ಯಾರ ಒತ್ತಡವಿದೆ? ಎಂಬ ಬಗ್ಗೆ ಅವರನ್ನೇ ಕೇಳಬೇಕು" ಎಂದು ತಿಳಿಸಿದರು.
ಸುಮಲತಾ ವಿರುದ್ಧ ವಾಗ್ದಾಳಿ; ಎಚ್. ಡಿ. ಕುಮಾರಸ್ವಾಮಿ ಮಂಡ್ಯ ಸಂಸದೆ ಸುಮಲತಾ ವಿರುದ್ಧ ವಾಗ್ದಾಳಿ ನಡೆಸಿದರು. "ಮಂಡ್ಯ ಜಿಲ್ಲೆಗೆ ಇಂಥಹ ಸಂಸದೆ ಹಿಂದೆಯೂ ಬಂದಿಲ್ಲ, ಮುಂದೆಯೂ ಬರುವುದಿಲ್ಲ. ಇವರೇ ಕೆಆರ್ಎಸ್ ರಕ್ಷಣೆ ಮಾಡುವ ರೀತಿ ಮಾತನಾಡುತ್ತಾರೆ. ಯಾವುದೋ ಅನುಕಂಪದಲ್ಲಿ ಆಯ್ಕೆಯಾಗಿದ್ದಾರೆ. ಸಿಕ್ಕಿರುವ ಅವಕಾಶ ಉಪಯೋಗಿಸಿಕೊಂಡು ಕ್ಷೇತ್ರದ ಜನರ ಸೇವೆ ಮಾಡಲಿ" ಎಂದು ಸಲಹೆ ನೀಡಿದರು.
"ಕೆಆರ್ಎಸ್ ನೀರು ಸೋರದಂತೆ ಅವರನ್ನ ಮಲಗಿಸಿಬಿಟ್ರೆ ಸರಿಯಾಗುತ್ತೆ. ಕೆಲಸ ಬಗ್ಗೆ ಮಾಹಿತಿ ಇಲ್ಲದೇ ಕಾಟಾಚಾರಕ್ಕೆ ಯಾರದೋ ಮೇಲೆ ವೈಯಕ್ತಿಕ ದ್ವೇಷಕ್ಕೆ ಹೀಗೆ ಮಾತನಾಡಬಾರದು. ಇದು ಬಹಳ ದಿನ ನಡೆಯುವುದಿಲ್ಲ. ಜನತೆ ಋಣ ತೀರಿಸುವ ಕೆಲಸ ಮಾಡಬೇಕು" ಎಂದರು.
ಸುಮಲತಾ ತಿರುಗೇಟು; ಎಚ್. ಡಿ. ಕುಮಾರಸ್ವಾಮಿ ಹೇಳಿಕೆಗೆ ಸುಮಲತಾ ತಿರುಗೇಟು ನೀಡಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, "ಮೈಶುಗರ್ ಕಾರ್ಖಾನೆಯನ್ನು ಯಾವುದಾದರೂ ರೂಪದಲ್ಲಿ ಆರಂಭಿಸಿ ಅನ್ನೋದು ನನ್ನ ಮನವಿ ಆಗಿತ್ತು. ಅದು ಸರ್ಕಾರವೇ ಆರಂಭಿಸುತ್ತೋ ಅಥವಾ ಖಾಸಗಿಯಾಗಿ ಆರಂಭಿಸುತ್ತೋ ಅದು ಅವರಿಗೆ ಬಿಟ್ಟಿದ್ದು" ಎಂದರು.
"ಕುಮಾರಸ್ವಾಮಿ ಈ ರೀತಿಯ ಭಾಷೆ ಬಳಸಿ ಮಾತನಾಡಿದ್ದು ಸರಿಯಲ್ಲ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಯಾಕೆ ಕ್ರಮ ತೆಗೆದುಕೊಳ್ಳಲಿಲ್ಲ?. ಕುಮಾರಸ್ವಾಮಿ ಮಾತುಗಳಿಂದ ಅವರ ಸಂಸ್ಕಾರ ಏನು ಅಂತಾ ಗೊತ್ತಾಗುತ್ತೆ ಬಿಡಿ" ಎಂದು ತಿರುಗೇಟು ನೀಡಿದರು.












Click it and Unblock the Notifications