ಉಪ ಚುನಾವಣೆಯಲ್ಲಿ ಮುಸ್ಲಿಂ ಅಭ್ಯರ್ಥಿಗಳನ್ನು JDS ಕಣಕ್ಕಿಳಿಸಿದ್ಯಾಕೆ? ದೇವೇಗೌಡರು ಕೊಟ್ಟ ಕಾರಣ!
ಬೆಂಗಳೂರು, ನ. 04: ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೋಲಿಸಲು ಜೆಡಿಎಸ್ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು ಎಂಬ ಆರೋಪಗಳನ್ನು 'ಕೈ' ನಾಯಕರು ಮಾಡಿದ್ದರು. ಹೀಗಾಗಿಯೇ ಎರಡೂ ಕ್ಷೇತ್ರಗಳಲ್ಲಿ ಮುಸ್ಲಿಂ ಅಭ್ಯರ್ಥಿಗಳನ್ನು ಜೆಡಿಎಸ್ ಕಣಕ್ಕಿಳಿಸಿತ್ತು ಎಂಬ ಆರೋಪವನ್ನು ಕಾಂಗ್ರೆಸ್ ನಾಯಕರು ಮಾಡಿದ್ದರು. ಇದೇ ವಿಚಾರ ಉಪ ಚುನಾವಣೆಯಲ್ಲಿ ಮುಸ್ಲಿಂ ಮತದಾರರ ಮೇಲೆ ಬಹಳಷ್ಟು ಪರಿಣಾಮ ಬೀರಿತ್ತಾ? ಅದರಿಂದಾಗಿ ಜೆಡಿಎಸ್ಗೆ ತೀರಾ ಹಿನ್ನಡೆ ಆಯ್ತಾ? ಆ ಚರ್ಚೆಗೆ ಇದೀಗ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಬೆಂಗಳೂರಿನ ರಾಜ್ಯ ಜೆಡಿಎಸ್ ಕಚೇರಿಯಲ್ಲಿ ಮಾಜಿ ಪ್ರಧಾನಿ ದೇವೇಗೌಡ ಮಾತನಾಡಿದ್ದಾರೆ. ಇದೇ ಸಂದರ್ಭದಲ್ಲಿ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದು ಯಾಕೆ? ಎಂಬುದನ್ನೂ ಅವರು ವಿವರಿಸಿದ್ದಾರೆ. ಅದಕ್ಕೆ ಕಾರಣಗಳನ್ನೂ ದೇವೇಗೌಡರು ತಿಳಿಸಿದ್ದಾರೆ. ಅಷ್ಟಕ್ಕೂ ಜೆಡಿಎಸ್ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು ಯಾಕೆ? ಆ ಅಭ್ಯರ್ಥಿಗಳು ಠೇವಣಿ ಕಳೆದುಕೊಳ್ಳುವಂಥದ್ದು ಏನಾಗಿತ್ತು? ಮುಂದಿದೆ ದೇವೇಗೌಡರು ಕೊಟ್ಟಿರುವ ಮಾಹಿತಿ!
ಠೇವಣಿ ಕಳೆದುಕೊಂಡಿದ್ದ ಜೆಡಿಎಸ್ ಅಭ್ಯರ್ಥಿಗಳು!
ಸಿಂದಗಿ ಉಪ ಚುನಾವಣೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಬಹಳಷ್ಟು ಪ್ರಚಾರ ನಡೆಸಿದ್ದರು. ಜೊತೆಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ದೇವೇಗೌಡರ ಕುಟುಂಬದ ಸದಸ್ಯರು ಹಾಗೂ ಜೆಡಿಎಸ್ ನಾಯಕರು ಭರ್ಜರಿ ಪ್ರಚಾರ ನಡೆಸಿದ್ದರು. ಆದರೂ ಜೆಡಿಎಸ್ ಅಭ್ಯರ್ಥಿಗಳು ಎರಡೂ ಕ್ಷೇತ್ರಗಳಲ್ಲಿ ಠೇವಣಿ ಕಳೆದುಕೊಂಡಿದ್ದು ಅಚ್ಚರಿ ಮೂಡಿಸಿತ್ತು. ಅದು ರಾಜ್ಯ ಜೆಡಿಎಸ್ ನಾಯಕರ ಮೇಲೆ ಬಹಳಷ್ಟು ಪರಿಣಾಮ ಬೀರಿತ್ತು. ಜೊತೆಗೆ ಬಿಜೆಪಿಗೆ ಸಹಾಯ ಮಾಡಲೆಂದೆ ಜೆಡಿಎಸ್ ಉಪ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಹಾಕಿದೆ ಎಂಬ ಆರೋಪಗಳೂ ಕೇಳಿ ಬಂದಿದ್ದವು. ಅದಕ್ಕೆ ಮಾಜಿ ಪ್ರಧಾನಿಗಳು ಸ್ಪಷ್ಟನೆ ಕೊಟ್ಟಿದ್ದಾರೆ.
ನಮ್ಮಲ್ಲಿ ಹಣವಿರಲಿಲ್ಲ ಎಂದ ದೇವೇಗೌಡರು!
ಸಿಂದಗಿ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಸೋಲಿನ ಕುರಿತು ದೇವೇಗೌಡರು ಮಾತನಾಡಿದ್ದಾರೆ. ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಅವರು, "ಯಾವುದೇ ಪಕ್ಷವನ್ನ ಕಟ್ಟಬೇಕಾದರೇ ಆರ್ಥಿಕ ಶಕ್ತಿ ಬೇಕು. ಜೆಡಿಎಸ್ ಪ್ರಾದೇಶಿಕ ಪಕ್ಷ. ಇದನ್ನು ಉಳಿಸಬೇಕು, ಆ ನಿಟ್ಟಿನಲ್ಲಿ ಪಕ್ಷದ ಎಲ್ಲ ಮುಖಂಡರ ಜೊತೆ ಚರ್ಚಿಸಿ ಪ್ರತಿ ಜಿಲ್ಲೆಯ ಕಾರ್ಯಕರ್ತರ ನೆರವಿನೊಂದಿಗೆ ರಾಜ್ಯದಂತ ಪಕ್ಷ ಕಟ್ಟುವ ಕೆಲಸ ಮಾಡುತ್ತೇವೆ" ಎಂದಿದ್ದಾರೆ. ಆ ಮೂಲಕ ಎರಡೂ ರಾಷ್ಟ್ರೀಯ ಪಕ್ಷಗಳು ಹಣದ ಮೂಲಕ ಚುನಾವಣೆ ಮಾಡಿವೆ ಎಂಬ ಪರೋಕ್ಷ ಆರೋಪವನ್ನು ದೇವೇಗೌಡರು ಮಾಡಿದ್ದಾರೆ.
ಮುಸ್ಲಿಂ ಮತಗಳು ಯಾರಿಗೆ ಹೋಗಿವೆ?
ಸಿಂದಗಿ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಸೋಲು ಕುರಿತು ಮಾತನಾಡಿದ ಮಾಜಿ ಪ್ರಧಾನಿ ದೇವೇಗೌಡರು, ಎರಡೂ ಕ್ಷೇತ್ರಗಳಲ್ಲಿ ನಾವು ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದವು. ಸಿಂದಗಿಯಲ್ಲಿ 38 ಸಾವಿರ ಮುಸ್ಲಿಂ ಮತದಾರರಿದ್ದಾರೆ. ಆದರೆ ಆ ಮತಗಳು ಯಾರಿಗೆ ಹೋಯ್ತು? ಬಿಜೆಪಿಗಾ? ನಮಗೆ ಮತ ಹಾಕಿಲ್ಲ ಅಂದ್ರೆ ಕಾಂಗ್ರೆಸ್ಗೆ ಹಾಕುತ್ತಾರೆ. ಕಾಂಗ್ರೆಸ್ ಸೋಲಿಸಲು ಹೀಗೆ ಮಾಡಿದ್ದಾರೆ ಎಂದಿದ್ದಾರೆ. ಈ ಬಗ್ಗೆ ನಾನು ಮಾತನಾಡಲ್ಲ. ಉಪಚುನಾವಣೆ ಪ್ರಚಾರಕ್ಕೆ ಹೋಗಲ್ಲ. ಆದರೆ ಅಲ್ಲಿಗೆ ಪ್ರಚಾರಕ್ಕೆ ಹೋಗಿದ್ದೆ. ಆದರೂ ಸೋಲಾಗಿದೆ ಇದರ ಬಗ್ಗೆ ಪಕ್ಷದಲ್ಲಿ ಚರ್ಚಿಸುತ್ತೇವೆ ಎಂದು ಹೇಳಿದ್ದಾರೆ.
ಮುಸ್ಲಿಂ ಅಭ್ಯರ್ಥಿ ನಿಲ್ಲಿಸಿದ್ದರ ಕಾರಣ ಹೇಳಿದ ಎಚ್ಡಿಡಿ!
ಈ ಬಾರಿಯ ಉಪಚುನಾವಣೆಯಲ್ಲಿ ಮುಸ್ಲಿಂ ಅಭ್ಯರ್ಥಿ ಆಯ್ಕೆ ಮಾಡಿದ್ದೆವು. ಸಿಂದಗಿಯಲ್ಲಿ ಅಂಗಡಿ ಪ್ಯಾಮಿಲಿಗೆ ಒಳ್ಳೆಯ ಹೆಸರಿದೆ ಸಿಂದಗಿಯಲ್ಲಿ ಹಿಂದು-ಮುಸ್ಲಿಂ ಎಂಬ ಬೇಧವಿಲ್ಲ. ಹೀಗಾಗಿ ನಾವು ಅಂಗಡಿ ಕುಟುಂಬದವರಿಗೆ ಟಿಕೆಟ್ ಕೊಟ್ಟಿದ್ದೇವು. ಕಾಂಗ್ರೆಸ್ ಪಕ್ಷದವರು ಚೆನ್ನಾಗಿ ಕೆಲಸ ಮಾಡಿದ್ದಾರೆ. ಉಪ ಚುನಾವಣೆಯಲ್ಲಿ ಕಾಂಗ್ರೆಸ್ಗಿಂತ ಹೆಚ್ಚು ಹಣವನ್ನು ಬಿಜೆಪಿ ಖರ್ಚು ಮಾಡಿದೆ. ಒಂದು ಮತಕ್ಕೆ 10ಸಾವಿರ ರೂ. ಕೊಟ್ಟಿದ್ದಾರೆ ಅಂತಾ ಚರ್ಚೆ ಇದೆ.
ಜೊತೆಗೆ ಕಾಂಗ್ರೆಸ್ ಪಕ್ಷವವರೂ ಚನ್ನಾಗಿ ಖರ್ಚು ಮಾಡಿದ್ದಾರೆ ಎಂಬ ಮಾಹಿತಿಯಿದೆ. ನಾನ್ಯಾಕೆ ಸಿಂದಗಿ ಪ್ರಚಾರಕ್ಕೆ ಹೋಗಿದ್ದೆ ಅಂದರೆ, ಸಿಂದಗಿಯಲ್ಲಿ ಹಸಿರು ತುಂಬಿದೆ, ಅಭಿವೃದ್ಧಿಯಾಗಿದೆ. ಇದಕ್ಕೆ ಯಾರು ಕಾರಣ? ಈ ಉಪಚುನಾವಣೆ ಫಲಿತಾಂಶದಿಂದ ನಾನು ದೃತಿಗೆಟ್ಟಿಲ್ಲ. ಇನ್ನು ಒಂದುವರೆ ವರ್ಷ ಹೋರಾಡುತ್ತೇನೆ ಎಂದು ಎಚ್.ಡಿ. ದೇವೇಗೌಡರು ಜೆಡಿಎಸ್ ಕಾರ್ಯಕರ್ತರಿಗೆ ಭರವಸೆ ಕೊಟ್ಟಿದ್ದಾರೆ.