ಖಾತೆ ಹಂಚಿದ್ದಾಯಿತು, ಈಗ ಮೈಸೂರು ಉಸ್ತುವಾರಿ ಸಚಿವ ಯಾರು?
ಬೆಂಗಳೂರು, ಮೇ 29: ಕೊನೆಗೂ ಕರ್ನಾಟಕ ಕ್ಯಾಬಿನೆಟ್ ನೂತನ ಮಂತ್ರಿಗಳಿಗೆ ಖಾತೆ ಹಂಚಿಕೆ ಮಾಡಲಾಗಿದೆ. ಆದರೆ ಈಗ ಪ್ರಮುಖ ಜಿಲ್ಲೆಯಾದ ಮೈಸೂರಿಗೆ ಉಸ್ತುವಾರಿ ಸಚಿವ ಯಾರು ಎಂಬ ಗೊಂದಲ ಶುರುವಾಗಿದೆ.
ಮೈಸೂರು ಜಿಲ್ಲೆಯ ಉಸ್ತುವಾರಿ ಸಚಿವರ ರೇಸ್ನಲ್ಲಿ ಜಿಲ್ಲೆಯ ಇಬ್ಬರು ಸಚಿವರು ರೇಸ್ನಲ್ಲಿ ಇದ್ದಾರೆ. ಒಬ್ಬರು ಸಮಾಜ ಕಲ್ಯಾಣ ಖಾತೆ ಸಚಿವ ಡಾ.ಎಚ್ಸಿ ಮಹದೇವಪ್ಪ ಮತ್ತೊಬ್ಬರು ಕೆ. ವೆಂಕಟೇಶ್ ಅವರು. ಈ ಇಬ್ಬರಲ್ಲಿ ಈಗ ಮೈಸೂರು ಉಸ್ತುವಾರಿಗಾಗಿ ಪೈಪೋಟಿ ಏರ್ಪಟ್ಟಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಆಪ್ತರಾದ ಎಚ್ಸಿ ಮಹದೇವಪ್ಪ ಹಾಗೂ ಕೆ. ವೆಂಕಟೇಶ್ ಅವರಿಗೆ ಸಚಿವ ಭಾಗ್ಯ ಕೊಟ್ಟು ಆಪ್ತ ವಲಯವನ್ನು ಕಾಯ್ದುಕೊಂಡಿದ್ದಾರೆ. ಆದರೆ ಜಿಲ್ಲಾ ಉಸ್ತುವಾರಿ ಖಾತೆ ಯಾರಿಗೆ ನೀಡಬೇಕು ಎಂಬುದು ಈಗ ತಲೆನೋವಾಗಿದೆ. ಸಚಿವ ಸ್ಥಾನ ಪಡೆದ ಜಿಲ್ಲೆಯ ಇಬ್ಬರೂ ಕಾಂಗ್ರೆಸ್ನ ಹಿರಿಯ ನಾಯಕರಾಗಿದ್ದಾರೆ. ಮಹದೇವಪ್ಪ ಅವರು ಈ ಹಿಂದೆ ಮೈಸೂರು ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಇದಲ್ಲದೆ ಅವರು ಹಾಸನ ಹಾಗೂ ಕೊಡಗು ಜಿಲ್ಲೆಯ ಉಸ್ತುವಾರಿ ಸಚಿವರೂ ಅಗಿದ್ದವರು. ವೆಂಕಟೇಶ್ ಅವರು ಕಳೆದ ಎರಡು ಬಾರಿ ಸಚಿವ ಸ್ಥಾನದಿಂದ ವಂಚಿತ ರಾಗಿದ್ದು, ಈ ಬಾರಿ ಮಂತ್ರಿಗಿರಿ ಪಡೆದಿದ್ದಾರೆ. ಹೀಗಾಗಿ ಅವರಿಗೆ ಜಿಲ್ಲಾಉಸ್ತುವಾರಿ ಸ್ಥಾನ ನೀಡಬೇಕನ್ನುವುದು ಬೆಂಬಲಿಗರ ಆಗ್ರಹ. ಇಬ್ಬರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯಾರಿಗೆ ಜಿಲ್ಲಾಉಸ್ತುವಾರಿ ಸಚಿವ ಸ್ಥಾನ ನೀಡಲಿದ್ದಾರೆ ಎಂಬುದನ್ನು ಮುಂದೆ ನೋಡಬೇಕಿದೆ.
ಆದರೆ ಈ ಇಬ್ಬರಲ್ಲಿ ಯಾರಿಗಾದರೂ ಜಿಲ್ಲಾಉಸ್ತುವಾರಿ ಸಚಿವ ಸ್ಥಾನ ನೀಡಿದರೂ ಸ್ವಾಗತಿಸುತ್ತೇವೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್ ಹೇಳಿದ್ದು, ಮಹದೇವಪ್ಪ ಮತ್ತು ವೆಂಕಟೇಶ್ ಅವರು ಇಬ್ಬರೂ ಸಿದ್ದರಾಮಯ್ಯನವರ ಆಪ್ತ ವಲಯಕ್ಕೆ ಸೇರಿದವರು. ಅವಿಭಜಿತ ಮೈಸೂರು ಜಿಲ್ಲೆಗೆ ಸೇರಿದಂತೆ ಚಾಮರಾಜನಗರದಿಂದ ಯಾರೂ ಸಚಿವರಿಲ್ಲ. ಆದ್ದರಿಂದ ಇಬ್ಬರಲ್ಲಿಒಬ್ಬರಿಗೆ ಮೈಸೂರು ಜಿಲ್ಲಾಉಸ್ತುವಾರಿ, ಮತೊಬ್ಬರಿಗೆ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ನೀಡಬಹುದು ಎಂಬ ಮಾತು ಈಗಾಗಲೇ ಕೇಳಿ ಬಂದಿದೆ.
ಪಿರಿಯಾಪಟ್ಟಣ ಶಾಸಕರಾಗಿರುವ ಕೆ ವೆಂಕಟೇಶ್ ಅವರಿಗೆ ಪಕ್ಕದ ಕೊಡಗು ಜಿಲ್ಲೆ ಕೂಡ ಹತ್ತಿರವಾಗಿರುವುದರಿಂದ ಕೊಡಗು ಜಿಲ್ಲೆಉಸ್ತುವಾರಿ ನೀಡಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ. ಇದಲ್ಲದೇ ನೆರೆಯ ಹಾಸನ ಜಿಲ್ಲೆಯಲ್ಲೂಒಬ್ಬರೂ ಕಾಂಗ್ರೆಸ್ ಸಚಿವರು ಇಲ್ಲದಿರುವುದರಿಂದ ಮಹದೇವಪ್ಪ ಹಾಗೂ ವೆಂಕಟೇಶ್ ಅವರಲ್ಲಿಒಬ್ಬರಿಗೆ ನೀಡಬಹುದು ಎಂಬ ಮಾತುಗಳು ಕೇಳಿ ಬಂದಿದೆ.












Click it and Unblock the Notifications