ಅಂಗನವಾಡಿಗಳಿಗೆ ಕಳಪೆ ಆಹಾರ ಪೂರೈಕೆ ನಿಲ್ಲಿಸಲು ಹೈಕೋರ್ಟ್ ಆದೇಶ
ಬೆಂಗಳೂರು ಮೇ 28. ಸಮಗ್ರ ಮಕ್ಕಳ ಅಭಿವೃದ್ಧಿ ಯೋಜನೆಯ (ಐಸಿಡಿಎಸ್) ಮೂಲಕ ರಾಜ್ಯದ ಎಲ್ಲ ಅಂಗನವಾಡಿ ಕೇಂದ್ರಗಳಿಗೆ (ಎಡಬ್ಲ್ಯುಸಿ) ಪೂರೈಕೆ ಮಾಡುತ್ತಿರುವ ಕಳಪೆ ಗುಣಮಟ್ಟದ ಆಹಾರವನ್ನು ಕೂಡಲೇ ಸ್ಥಗಿತಗೊಳಿಸುವಂತೆ ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಪರಿಷ್ಕೃತ ಪೌಷ್ಟಿಕಾಂಶ ಮತ್ತು ಆಹಾರದ ಮಾನದಂಡಗಳ ನಿರ್ದಿಷ್ಟತೆ ಮತ್ತು ಮಾನದಂಡಗಳಿಗೆ ಅನುಗುಣವಾಗಿಲ್ಲದ ಆಹಾರ ಉತ್ಪನ್ನಗಳನ್ನು ಯಾವುದೇ ಕಾರಣಕ್ಕೂ ಅಂಗನವಾಡಿ ಕೇಂದ್ರಗಳಿಗೆ ಪೂರೈಕೆ ಮಾಡಬಾರದು ಎಂದೂ ಸಹ ನ್ಯಾಯಾಲಯ ತಾಕೀತು ಮಾಡಿದೆ.
ಸಂಗೀತಾ ಗದಗಿನ್ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಗೂ ಐಸಿಡಿಎಸ್ ಚಟುವಟಿಕೆಯಲ್ಲಿ ತೊಡಗಿರುವ ಮಹಿಳಾ ಸಂಘಟನೆಗಳು ಸಲ್ಲಿಸಿದ್ದ ಎರಡು ಅರ್ಜಿಗಳನ್ನು ಇತ್ಯರ್ಥಪಡಿಸಿದ ವೇಳೆ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಮತ್ತು ನ್ಯಾಯಮೂರ್ತಿ ಎಸ್. ಆರ್. ಕೃಷ್ಣಕುಮಾರ್ ವಿಭಾಗೀಯಪೀಠ ಈ ಅದೇಶವನ್ನು ನೀಡಿದೆ.
ನ್ಯಾಯಾಲಯದ ಆದೇಶವೇನು?
2020ರ ಜುಲೈ, 2, 2021ರ ಮೇ 5ರ ಅಧಿಸೂಚನೆ ಮತ್ತು 2021ರ ಆಗಸ್ಟ್ 19ರ ತಾಂತ್ರಿಕ ತಜ್ಞರ ಸಮಿತಿಯ ವರದಿಯ ತನ್ನದೇ ಆದ ಸುತ್ತೋಲೆಯ ಪ್ರಕಾರ ಐಸಿಡಿಎಸ್ ಯೋಜನೆಯನ್ನು ಜಾರಿಗೊಳಿಸಲು ನ್ಯಾಯಾಲಯವು ಸರ್ಕಾರಕ್ಕೆ ನಿರ್ದೇಶಿಸಿದೆ.
ಕಾಲಕಾಲಕ್ಕೆ ನ್ಯಾಯಾಲಯ ಮತ್ತು ಐಸಿಡಿಎಸ್ (ಪರಿಷ್ಕೃತ ಪೌಷ್ಟಿಕಾಂಶ ಮತ್ತು ಆಹಾರ ನಿಯಮಗಳು) 2017 ಅನ್ನು ಕೇಂದ್ರ ಸರ್ಕಾರವು ಹೊರಡಿಸಿದೆ. ಅದನ್ನು ರಾಜ್ಯ ಸರ್ಕಾರ ಪಾಲನೆ ಮಾಡಬೇಕು ಎಂದು ನ್ಯಾಯಾಲಯ ಹೇಳಿದೆ.
ರಾಜ್ಯ ಸರ್ಕಾರ ರಚಿಸಿರುವ ತಾಂತ್ರಿಕ ತಜ್ಞರ ಸಮಿತಿಯು 2021ರ ಮೇ 5ರ ಅಧಿಸೂಚನೆಯ ಪ್ರಕಾರ ಐಸಿಡಿಎಸ್ ಯೋಜನೆಯನ್ನು ಜಾರಿಗೆ ತರುವುದು ಸೂಕ್ತವೆಂದು ನ್ಯಾಯಾಲಯವು ಹೇಳಿದೆ. ಐಸಿಡಿಎಸ್ ಯೋಜನೆ ಅಡಿಯಲ್ಲಿ ಸರಬರಾಜು ಮಾಡಲಾಗುತ್ತಿರುವ ಕಳಪೆ ಗುಣಮಟ್ಟದ ಆಹಾರಗಳ ಸರಣಿ ವರದಿಗಳ ನಂತರ ಇದನ್ನು ಹೊರಡಿಸಲಾಗಿದೆ. ಅಂಗನವಾಡಿ ಕೇಂದ್ರಗಳಿಗೆ ಪೌಷ್ಠಿಕ ಆಹಾರವನ್ನು ತಯಾರಿಸಿ ಸರಬರಾಜು ಮಾಡಲು ನಿಯೋಜಿಸಲಾದ ಮಹಿಳಾ ಪೂರಕ ಪೌಷ್ಟಿಕಾಂಶ ಉತ್ಪಾದನಾ ತರಬೇತಿ ಕೇಂದ್ರಗಳು ಪೌಷ್ಟಿಕ ಆಹಾರದ ಗುಣಮಟ್ಟವನ್ನು ಕಾಯ್ದುಕೊಳ್ಳುವಲ್ಲಿ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಪ್ರಮಾಣೀಕರಿಸಿದ ಅಥವಾ ಪರವಾನಗಿ ಪಡೆದ ಮಹಿಳಾ ಸ್ವ-ಸಹಾಯ ಗುಂಪುಗಳ ಸಹಾಯವನ್ನು ಪಡೆಯಬೇಕು ಎಂದು ಈ ಅಧಿಸೂಚನೆಯು ಕಡ್ಡಾಯಗೊಳಿಸಿದೆ ಎಂದು ನ್ಯಾಯಾಲಯ ಹೇಳಿದೆ.
ಅಲ್ಲದೆ, ಕೋವಿಡ್-19 ಸಾಂಕ್ರಾಮಿಕದ ಕಾರಣದಿಂದಾಗಿ ಐಸಿಡಿಎಸ್ ಯೋಜನೆಯ ಫಲಾನುಭವಿಗಳ ಸ್ಥಿತಿ ಗಣನೀಯವಾಗಿ ಹದಗೆಟ್ಟಿದೆ ಮತ್ತು ಹಾಗಾಗಿ ಫಲಾನುಭವಿಗಳಿಗೆ ಪೌಷ್ಠಿಕಾಂಶದ ಆಹಾರದ ಪೂರೈಕೆಯನ್ನು ಇನ್ನಷ್ಟು ವಿಳಂಬ ಮಾಡಬಾರದು ಎಂದು ನ್ಯಾಯಾಲಯವು ಸೂಚಿಸಿತು.
ಅರ್ಜಿದಾರರು ಆಕ್ಷೇಪ:
ಅರ್ಜಿದಾರರು 2021ರ ಮೇ 15 ಮತ್ತು 20 ರಂದು ಹೊರಡಿಸಿದ ಅಧಿಸೂಚನೆಗಳನ್ನು ಏಕಪಕ್ಷೀಯವಾಗಿ ಹಿಂತೆಗೆದುಕೊಂಡು 2021 ಮೇ5ರ ಅಧಿಸೂಚನೆ ಮತ್ತು 2020ರ ಜುಲೈ 2ರ ಸುತ್ತೋಲೆ ವಾಪಸ್ ಪಡೆದಿರುವ ಕಾನೂನು ಬದ್ಧತೆಯನ್ನು ಪ್ರಶ್ನಿಸಿದ್ದಾರೆ.
ಸುತ್ತೋಲೆ ಮತ್ತು ಅಧಿಸೂಚನೆಯನ್ನು ಹಿಂತೆಗೆದುಕೊಳ್ಳುವುದ ಸಂಪೂರ್ಣ ವಿವೇಚನಾ ರಹಿತ, ನಿರ್ದಿಷ್ಟವಲ್ಲದ ಮತ್ತು ಅನಿಯಂತ್ರಿತವಾಗಿದೆ. ಆದೇಶ ವಾಪಸ್ ಮಾಡಿರುವುದರಿಂದ ಮಕ್ಕಳಿಗೆ ಮತ್ತು ಗರ್ಭಿಣಿ ಮತ್ತು ಹಾಲುಣಿಸುವವರಿಗೆ ಪೌಷ್ಟಿಕಾಂಶದ ಆಹಾರ ಪೂರೈಕೆಯಲ್ಲಿ ವ್ಯತ್ಯಯವಾಗಿ ತೊಂದರೆಯಾಗಿದೆ ಎಂದು ಅರ್ಜಿದಾರರು ಹೇಳಿದ್ದರು.