ಇ-ಖಾತಾ ಅರ್ಜಿಗಳ ಶೀಘ್ರ ವಿಲೇವಾರಿಗೆ ಕಾರ್ಯತಂತ್ರ ರೂಪಿಸಿ; ಕೋರ್ಟ್
ಬೆಂಗಳೂರು, ಮಾರ್ಚ್ 26; ಸುಮಾರು ದಿನಗಳು ಕಳೆದರೂ ಇ-ಖಾತಾ ಅಡಿಯಲ್ಲಿ ಸಲ್ಲಿಸಿದ್ದ ಮನವಿ ಇತ್ಯರ್ಥವಾಗದ್ದಕ್ಕೆ ಕರ್ನಾಟಕ ಹೈಕೋರ್ಟ್ ತೀವ್ರ ಬೇಸರ ವ್ಯಕ್ತಪಡಿಸಿದೆ. ಅಲ್ಲದೇ, ಇ-ಖಾತಾ ಅರ್ಜಿಗಳನ್ನು ಸಲ್ಲಿಸಿದ ಕೂಡಲೇ ಸಕಾಲದಲ್ಲಿ ಆ ಅರ್ಜಿಗಳನ್ನು ವಿಲೇವಾರಿ ಮಾಡಲು ಸೂಕ್ತ ಕಾರ್ಯತಂತ್ರ ರೂಪಿಸುವಂತೆ ಹೈಕೋರ್ಟ್ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದೆ. ಅಲ್ಲದೇ, ಹೊಸ ವಿಧಾನ ಜಾರಿ ಬಗ್ಗೆ ಏಪ್ರಿಲ್ 6ರೊಳಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ಸೂಚನೆ ನೀಡಿದೆ.
ಬೆಂಗಳೂರು ನಗರ ಜಿಲ್ಲೆಯ ದೊಡ್ಡಜಾಲ ಗ್ರಾಮ ಪಂಚಾಯಿತಿ ತಮ್ಮ ಇ-ಖಾತಾ ಅರ್ಜಿಯನ್ನು ಪರಿಗಣಿಸಿಲ್ಲವೆಂದು ರೇಣುಕಾ ಮನ್ಘನಾನಿ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ. ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಪೀಠ, ಅರ್ಜಿದಾರರು ಇ-ಖಾತಾ ಕೋರಿ ಸಲ್ಲಿಸಿರುವ ಮನವಿಯನ್ನು ಮೂರು ವಾರಗಳಲ್ಲಿ ಪರಿಗಣಿಸುವಂತೆ ಆದೇಶಿಸಿದೆ. 'ಅರ್ಜಿದಾರರು 2019ರಲ್ಲಿ ಸಲ್ಲಿಸಿರುವ ಅರ್ಜಿಯನ್ನು ಇನ್ನೂ ಪರಿಗಣಿಸದೇ ಇರುವುದು ನಿಜಕ್ಕೂ ಅಚ್ಚರಿ ಮೂಡಿಸುವಂತಹುದು. ಅದಕ್ಕಾಗಿ ಅರ್ಜಿದಾರರು ನ್ಯಾಯಾಲಯದ ಮೆಟ್ಟಿಲೇರಬೇಕಾಗಿ ಬಂದಿರುವುದು ಸರಿಯಲ್ಲ' ಎಂದು ನ್ಯಾಯ ಪೀಠ ಹೇಳಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವೆಬ್ಸೈಟ್ನಲ್ಲಿ ಪ್ರತಿಯೊಂದು ಗ್ರಾಮ ಪಂಚಾಯಿತಿಗಳಡಿ ಸಲ್ಲಿಕೆಯಾಗುವ ಇ-ಖಾತಾ ಅರ್ಜಿಗಳನ್ನು ನಿರ್ದಿಷ್ಟ ಕಾಲಮಿತಿಯಲ್ಲಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಾಲಯ, ಆರ್ಡಿಪಿಆರ್ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಆದೇಶ ನೀಡಿದೆ. ಆ ವೆಬ್ಸೈಟ್ನಲ್ಲಿಅರ್ಜಿದಾರರು ಹೆಸರು, ಆಸ್ತಿಯ ವಿವರಗಳು, ಇ-ಖಾತಾ ಅರ್ಜಿ ಸಲ್ಲಿಸಿದ ದಿನ ಮತ್ತು ಇ-ಖಾತಾ ವಿತರಿಸಿದ ದಿನಾಂಕಗಳನ್ನು ಉಲ್ಲೇಖಿಸಬೇಕು. ಇ-ಸುಗಮ ನಿಯಮದ ಪ್ರಕಾರ ಇ-ಖಾತೆಗೆ ಅರ್ಜಿ ಸಲ್ಲಿಸಿದರೆ ಅಂತಹ ಅರ್ಜಿಗಳನ್ನು 30 ದಿನಗಳೊಳಗೆ ಇತ್ಯರ್ಥಪಡಿಸಬೇಕು. ಒಂದು ವೇಳೆ 30 ದಿನಕ್ಕೂ ವಿಳಂಬವಾದರೆ ಏಕೆ ವಿಳಂಬವಾಗುತ್ತಿದೆ? ಎಂಬ ಅಂಶ ವೆಬ್ಸೈಟ್ನಲ್ಲಿಯೇ ಪ್ರತಿಫಲಿಸುವಂತಾಗಬೇಕು ಎಂದು ನ್ಯಾಯಾಲಯ ಆದೇಶದಲ್ಲಿಸೂಚಿಸಿದೆ.
ಖಾತಾ ಆಸ್ತಿಯ ದಾಖಲೆಯ ಪತ್ರವಲ್ಲ, ಅದು ಇರುವುದು ಆಸ್ತಿಯನ್ನು ಆನಂದಿಸಲು ಮತ್ತು ಅದಕ್ಕೆ ವಿಳಂಬ ಮಾಡುವುದು ಸರಿಯಲ್ಲ ಎಂದು ಹೇಳಿರುವ ನ್ಯಾಯಾಲಯ, ಹೊಸ ವಿಧಾನವನ್ನು ಜಾರಿಗೊಳಿಸಿ ಆ ಕುರಿತು ನ್ಯಾಯಾಲಯಕ್ಕೆ ಏಪ್ರಿಲ್ 6ರೊಳಗೆ ಸಮಗ್ರ ವರದಿಯನ್ನು ಸಲ್ಲಿಸಬೇಕು ಎಂದು ನಿರ್ದೇಶನ ನೀಡಿದೆ.
ಅರ್ಜಿದಾರರಿಗೆ 27.60 ಲಕ್ಷ ದಂಡ: ಬಿಡಿಎಗೆ ಜಮೀನು ಬಿಟ್ಟುಕೊಟ್ಟು ಪರಿಹಾರ ಪಡೆದ 45 ವರ್ಷಗಳ ನಂತರ ಮತ್ತೆ ಹಕ್ಕು ಮಂಡಿಸಲು ಮುಂದಾಗಿದ್ದ ಅರ್ಜಿದಾರರಿಗೆ ಹೈಕೋರ್ಟ್ 27.60 ಲಕ್ಷ ರೂ. ದಂಡ ವಿಧಿಸುವ ಮೂಲಕ ತಕ್ಕಪಾಠ ಕಲಿಸಿದೆ. ಜೀವನಹಳ್ಳಿಯ ಕಾಕ್ಸ್ಟೌನ್ ನಿವಾಸಿ ಎ. ರಾಮಮೂರ್ತಿ, ಎ. ಅಶ್ವತ್ಧ ಮೂರ್ತಿ ಮತ್ತು ಕೆ. ಉಮಾಶಂಕರ್ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯಪೀಠ ವಜಾಗೊಳಿಸಿದೆ. ಮೂವರೂ ಅರ್ಜಿದಾರರು ಪ್ರಕರಣದ 138 ಜನ ಪ್ರತಿವಾದಿಗಳಿಗೆ ತಲಾ 20 ಸಾವಿರದಂತೆ ಒಟ್ಟು 27.60 ಲಕ್ಷ ಮೊತ್ತವನ್ನು ಪಾವತಿಸಬೇಕು ಎಂದು ಆದೇಶಿಸಿದೆ. ಅರ್ಜಿದಾರರು ಆದೇಶ ಹೊರಬಿದ್ದ ಆರು ವಾರಗಳಲ್ಲಿ ದಂಡ ಪಾವತಿಸಬೇಕು, ಇಲ್ಲವಾದಲ್ಲಿ ವಾರಕ್ಕೆ ಒಂದು ಸಾವಿರ ರೂಪಾಯಿಯಂತೆ ಹೆಚ್ಚುವರಿ ದಂಡ ತೆರಬೇಕಾಗುತ್ತದೆ ಎಂದೂ ನ್ಯಾಯಪೀಠ ತಾಕೀತು ಮಾಡಿದೆ.

ಭೂಸ್ವಾಧೀನ, ಪುನರ್ವಸತಿ, ನ್ಯಾಯಯುತ ಪರಿಹಾರ ಮತ್ತು ಪಾರದರ್ಶಕತೆ ಕಾಯ್ದೆ-2013ರ ಕಲಂ 24 (2) ರದ್ದಾಗಿರುವುದರಿಂದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕಾಯ್ದೆಯ ಅಡಿ 1980ರಲ್ಲಿ ಹೊರಡಿಸಿರುವ ಅಂತಿಮ ಅಧಿಸೂಚನೆ ರದ್ದುಪಡಿಸಬೇಕು ಎಂದು ಅರ್ಜಿದಾರರು ಕೋರಿದ್ದರು.












Click it and Unblock the Notifications