ಡಿವೈಎಸ್ಪಿ ಕಲ್ಲಪ್ಪ ಬಗ್ಗೆ ಹೇಳಿಕೆ, ಶಾಸಕ ಬಾಲಕೃಷ್ಣ ಸ್ಪಷ್ಟನೆ
ರಾಮನಗರ, ಆಗಸ್ಟ್ 24 : ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ಅವರ ಬಗ್ಗೆ ನೀಡಿದ ಹೇಳಿಕೆಗೆ ಮಾಗಡಿ ಕ್ಷೇತ್ರದ ಜೆಡಿಎಸ್ ಶಾಸಕ ಎಚ್.ಸಿ.ಬಾಲಕೃಷ್ಣ ಸ್ಪಷ್ಟನೆ ಕೊಟ್ಟಿದ್ದಾರೆ. ಶಾಸಕರ ಹೇಳಿಕೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಹಂದಿಗುಂದ ಗ್ರಾಮಸ್ಥರು ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ.
ಭಾನುವಾರ ಮಾಗಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಬಾಲಕೃಷ್ಣ ಅವರು, ಕಲ್ಲಪ್ಪ ಹಂಡಿಭಾಗ್ ಅವರನ್ನು 'ಗಾಂಡು' ಎಂದು ಕರೆದಿದ್ದರು. ಈ ಕುರಿತ ವಿಡಿಯೋ ಮಂಗಳವಾರ ಟಿವಿ ವಾಹಿನಿಗಳಲ್ಲಿ ಪ್ರಸಾರವಾಗಿತ್ತು. ಹೇಳಿಕೆಯಿಂದ ವಿವಾದ ಉಂಟಾಗಿರುವ ಹಿನ್ನಲೆಯಲ್ಲಿ ಶಾಸಕರು ಸ್ಪಷ್ಟನೆ ನೀಡಿದ್ದಾರೆ.[ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ]
ಎಚ್.ಸಿ.ಬಾಲಕೃಷ್ಣ ಅವರು, 'ಹಂಡಿಭಾಗ್ ಅವರ ವಿಚಾರ ಪ್ರಸ್ತಾಪಿಸಿ ನೋಡಿ ಆಶ್ರಯ ಮನೆಯಲ್ಲಿ ಅವ್ನ ತಂದೆ ತಾಯಿ ವಾಸ ಮಾಡ್ತಿದಾರೆ. ಅಲ್ಲ ಅಷ್ಟು ಓದಿರೋ ಅವನಿಗೆ ಅದನ್ನ ಜೀರ್ಣಿಸಿಕೊಳ್ಳುವ ಶಕ್ತಿ ಇಲ್ಲ ಅಂತಂದ್ರೇ ಅವ್ನು ಗಾಂಡುನೇ' ಎಂದು ಹೇಳಿದ್ದರು.[ಹಂಡಿಭಾಗ್ ಆತ್ಮಹತ್ಯೆ, ಸಿಐಡಿಯಿಂದ ಇಬ್ಬರ ಬಂಧನ]
ಉದ್ಯಮಿಯನ್ನು ಅಪಹರಣ ಮಾಡಿದ ಆರೋಪ ಎದುರಿಸುತ್ತಿದ್ದ ಚಿಕ್ಕಮಗಳೂರು ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ಅವರು ಜುಲೈ 5ರಂದು ಬೆಳಗಾವಿಯ ಮಾವನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಸರ್ಕಾರ ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿದೆ....[ಕಲ್ಲಪ್ಪ ಆತ್ಮಹತ್ಯೆ ಹಿಂದೆ ಭಜರಂಗಿಗಳ ಕೈವಾಡ : ಪರಮೇಶ್ವರ]
ಶಾಸಕ ಬಾಲಕೃಷ್ಣ ಸ್ಪಷ್ಟನೆ
ಮಂಗಳವಾರ ಬಿಡದಿ ಹೋಬಳಿಯ ಉರಗಹಳ್ಳಿ ಗ್ರಾಮದಲ್ಲಿ ಮಾತನಾಡಿದ ಶಾಸಕರು, 'ಗಾಂಡು ಎನ್ನುವ ಪದವನ್ನು ಕೈಲಾಗದವ ಎನ್ನುವ ಅರ್ಥದಲ್ಲಿ ಮಾತ್ರ ಬಳಸಿದ್ದೆ. ಅದು ತಪ್ಪು ಎಂದಾದರೆ ಮತ್ತೆ ಆ ಪದ ಬಳಕೆ ಮಾಡುವುದಿಲ್ಲ. ಕೆಲವು ಸುದ್ದಿವಾಹಿನಿಗಳು ಟಿಆರ್ಪಿ ಹೆಚ್ಚಿಸಿಕೊಳ್ಳಲು ತಮ್ಮ ಹೇಳಿಕೆಯನ್ನು ಪದೇ-ಪದೇ ಪ್ರಸಾರ ಮಾಡುತ್ತಿವೆ' ಎಂದು ಹೇಳಿದರು.
'ಅವರ ಮನೆಗೆ ನಾನು ಭೇಟಿ ನೀಡಿದ್ದೆ'
'ಕಲ್ಲಪ್ಪ ಹಂಡಿಬಾಗ್ ಅವರನ್ನು ಗಾಂಡು ಎಂದು ಕರೆದದ್ದು ನಿಜ. ಆದರೆ, ಆ ಪದ ಬಳಕೆ ಹಿಂದಿನ ಅರ್ಥವೇ ಬೇರೆ. ಆತ್ಮಹತ್ಯೆ ಮಾಡಿಕೊಂಡ ನಂತರ ಅವರ ಮನೆಗೆ ನಾನು, ಚೆಲುವರಾಯ ಸ್ವಾಮಿ, ಜಮೀರ್ ಅಹಮದ್ ಭೇಟಿ ನೀಡಿದ್ದೆವು. ಆಗ ಅವರ ಪಾಲಕರು ಆಶ್ರಯ ಮನೆಯಲ್ಲಿ ವಾಸವಾಗಿರುವುದು ನೋಡಿದೆ. ತಂದೆ ಕಷ್ಪಪಟ್ಟು ದುಡಿದು ದೊಡ್ಡ ಅಧಿಕಾರಿಯನ್ನಾಗಿ ಮಾಡಿದ್ದರು. ಸಣ್ಣ ವಿಚಾರಗಳಿಗೆ ಆತ್ಮಹತ್ಯೆ ಮಾಡಿಕೊಂಡಿರುವುದು ಗಾಂಡುತನ ಎಂದು ಹೇಳಿದ್ದೆ' ಎಂದು ಶಾಸಕರು ಹೇಳಿದರು.
ಕ್ಷಮೆ ಕೇಳಲು ಗ್ರಾಮಸ್ಥರ ಒತ್ತಾಯ
ಮಾಗಡಿ ಶಾಸಕ ಬಾಲಕೃಷ್ಣ ಅವರು ಕಲ್ಲಪ್ಪ ಬಗ್ಗೆ ನೀಡಿರುವ ಹೇಳಿಕೆ ಬಗ್ಗೆ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ಬೆಳಗಾವಿಯಲ್ಲಿ ನಡೆಯುವ ಅಧಿವೇಶನದಲ್ಲಿ ಸದನದ ಒಳಗೆ ಹೋಗಲು ಅವರಿಗೆ ನಾವು ಅವಕಾಶ ನೀಡುವುದಿಲ್ಲ ಎಂದು ಹಂದಿಗುಂದ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಧನಸಹಾಯ ವಾಪಸ್ ಮಾಡುತ್ತೇವೆ
ಶಾಸಕ ಎಚ್.ಸಿ.ಬಾಲಕೃಷ್ಣ ಅವರು ಕಲ್ಲಪ್ಪ ಹಂಡಿಬಾಗ್ ಕುಟುಂಬಕ್ಕೆ 5 ಲಕ್ಷ ಧನಸಹಾಯ ಮಾಡಿದ್ದಾರೆ. ಗ್ರಾಮಸ್ಥರೆಲ್ಲರೂ ಸೇರಿ ದೇಣಿಗೆ ಸಂಗ್ರಹಿಸಿ ಅದನ್ನು ವಾಪಸ್ ನೀಡುತ್ತೇವೆ ಎಂದು ಹಂದಿಗುಂದ ಗ್ರಾಮಸ್ಥರು ಹೇಳಿದ್ದಾರೆ.[ಚಿತ್ರ ಕಲ್ಲಪ್ಪ ಹಂಡಿಭಾಗ್]
ಪ್ರಮುಖ ಆರೋಪಿ ಇನ್ನೂ ಸಿಕ್ಕಿಲ್ಲ
ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿ ನಡೆಸುತ್ತಿದೆ. ಈ ಪ್ರಕರಣದ ಪ್ರಮುಖ ಆರೋಪಿ ಪ್ರವೀಣ್ ಖಾಂಡ್ಯ ಇನ್ನೂ ಸಿಕ್ಕಿಲ್ಲ. ನಿರೀಕ್ಷಣಾ ಜಾಮೀನಿಗಾಗಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಚಿಕ್ಕಮಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಪ್ರಧಾನ ಸೆಷನ್ಸ್ ನ್ಯಾಯಾಲಯ ಖಾಂಡ್ಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಈಗಾಗಲೇ ತಿರಸ್ಕರಿಸಿದೆ.