ಜನವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ದಿನಗಣನೆ ಆರಂಭವಾಯಿತೇ..?- ಬಿ.ವೈ ವಿಜಯೇಂದ್ರ
ಬೆಂಗಳೂರು, ನವೆಂಬರ್ 22: ಮೈಸೂರು ಕಾಂಗ್ರೆಸ್ ಕಚೇರಿಯನ್ನು ಆದಷ್ಟು ಬೇಗ ಕಟ್ಟಿಬಿಡಿ. ಮುಂದೆ ಏನಾಗುತ್ತೋ ಗೊತ್ತಾಗಲ್ಲ, ಮುಂದೆ ರಾಜಕೀಯ ಹೇಗೋ ಏನೋ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ನೀಡಿರುವ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ರಾಜ್ಯದಲ್ಲಿ ಆಡಳಿತದಲ್ಲಿರುವ ಪಕ್ಷದ ಸಚಿವರೇ ಈ ರೀತಿ ಹೇಳಿಕೆ ನೀಡಿರುವುದು ವಿಪಕ್ಷಗಳಿಗೆ ಸರ್ಕಾರದ ಮೇಲೆ ಸಚಿವರಿಗೆ ನಂಬಿಕೆ ಇಲ್ಲ ಎನ್ನುವ ಹೊಸ ಅಸ್ತ್ರ ಸಿಕ್ಕಂತಾಗಿದೆ.
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿಕೆಯನ್ನು ಪ್ರಸ್ತಾಪಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಕಾಂಗ್ರೆಸ್ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದ್ದಾರೆ. ಸದ್ಯದ ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದು ಎಷ್ಟು ವಾಸ್ತವವೋ, ಅಷ್ಟೇ ಕಟು ಸತ್ಯ ಎಂಬುದು ಆಗಿಂದಾಗ್ಗೆ ಬಯಲಾಗುತ್ತಲೇ ಇದೆ ಎಂದು ಹೇಳಿದ್ದಾರೆ.

ಅನುದಾನವಿಲ್ಲದೇ ಆಡಳಿತ ಪಕ್ಷದ ಶಾಸಕರುಗಳೇ ಸರ್ಕಾರದ ವಿರುದ್ಧ ತಿರಿಗಿ ಬಿದ್ದಿದ್ದಾರೆ. ಈ ಹುಳುಕುಗಳನ್ನು ಮುಚ್ಚಿಕೊಳ್ಳಲು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಶಾಸಕರ ಒತ್ತಡಗಳನ್ನು ಸಹಿಸಲಾಗದೇ ಆಪರೇಷನ್ ಕಮಲದ ಗಾಳಿಯಲ್ಲಿ ಗುಂಡು ಪ್ರಯೋಗಿಸಿದ್ದರು. ಇದೀಗ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಬೇಗ ಮೈಸೂರು ಕಾಂಗ್ರೆಸ್ ಕಚೇರಿ ಕಟ್ಟಿಬಿಡಿ, ಮುಂದೆ ರಾಜಕೀಯ ಹೇಗೋ ಏನೋ? ಎಂದು ಅವರ ಪಕ್ಷದ ವೇದಿಕೆಯಲ್ಲಿ ಆಡಿರುವ ಮಾತುಗಳು ಈ ಜನವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ದಿನಗಣನೆ ಆರಂಭವಾಯಿತೇ ಎಂಬ ಸಂಶಯ ಹುಟ್ಟುಹಾಕಿದೆ ಎಂದಿದ್ದಾರೆ.
ನಮ್ಮ ಬಿಜೆಪಿ ಸರ್ಕಾರದ ಮೇಲೆ 40% ಎಂಬ ಸುಳ್ಳು ಅಪಪ್ರಚಾರ ಬಿತ್ತರಿಸಿ, ಸುಳ್ಳುಗಳ ಮೂಲಕ ಅಧಿಕಾರಕ್ಕೆ ಬಂದ ಕಾಂಗ್ರೆಸ್ಸಿಗರಿಗೆ ಸುಳ್ಳು ಹಾಗೂ ಆಮಿಷಗಳ ಮೂಲಕ ಅಧಿಕಾರಕ್ಕೆ ಬಂದ ಯಾವ ಸರ್ಕಾರವೂ ಜನಾಕ್ರೋಶದ ಮುಂದೆ ಉಳಿದ ಇತಿಹಾಸವಿಲ್ಲ ಎಂಬುದು ಜ್ಞಾನೋದಯವಾಗುತ್ತಿರುವಂತಿದೆ ಎಂದು ಕಾಂಗ್ರೆಸ್ ಸರ್ಕಾರ ಹಾಗೂ ಕಾಂಗ್ರೆಸ್ ನಾಯಕರ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದೇನು..?
ನಿನ್ನೆ ಗುರುವಾರ ಮೈಸೂರು ನಗರದ ಕಾಂಗ್ರೆಸ್ ಭವನದಲ್ಲಿ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, 18 ಕೋಟಿಯಲ್ಲಿ ಈಗ ಮೈಸೂರು ಕಾಂಗ್ರೆಸ್ ಕಚೇರಿ ನಿರ್ಮಾಣಕ್ಕೆ ಹೊರಟಿರುವುದು ಉತ್ತಮ ಬೆಳವಣಿಗೆ. ಇವತ್ತಿನ ರಾಜಕೀಯ ಬೆಳವಣಿಗೆ ನೋಡಿದರೆ ಏನೂ ಹೇಳಲಿಕ್ಕೆ ಆಗಲ್ಲ ರಾಜಕೀಯ ಹೇಗೋ ಏನೋ ಗೊತ್ತಿಲ್ಲ, ಆದಷ್ಟು ಬೇಗ ನಿರ್ಮಾಣವಾಗಲಿ, ನಮ್ಮ ಸರ್ಕಾರ ಇರುವಾಗಲೇ ಶಂಕುಸ್ಥಾಪನೆ ನೆರವೇರಿಸಿ. ಕಾಂಗ್ರೆಸ್ ಕಚೇರಿ ಕಟ್ಟಲೇಬೇಕು ಎಂದು ಕೋಪದಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಗೆ ಹಿಂದೆಯೇ ಹೇಳಿದ್ದೆ ಎಂದು ಸಭೆಯಲ್ಲಿ ಹೇಳಿದ್ದರು.












Click it and Unblock the Notifications