ಹರ್ಷ ಕೊಲೆ ಪ್ರಕರಣ: ಪೊಲೀಸ್ ಪಾತ್ರದ ಬಗ್ಗೆ ತನಿಖೆ ನಡೆಸಲು ಡಿಜಿಪಿಗೆ ಗೃಹ ಸಚಿವರ ಪತ್ರ
ಬೆಂಗಳೂರು, ಫೆಬ್ರವರಿ 23: ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತ ಹರ್ಷನ ಕೊಲೆಯ ಹಿಂದೆ ಅನೇಕ ಸಂಘಟನೆಗಳ ಕೈವಾಡ ಇರುವ ಸಾಧ್ಯತೆ ಇದೆ. ಆರೋಪಿಗಳಿಗೆ ಯಾರ ಲಿಂಕ್ ಇದೆ, ಘಟನೆಯ ಹಿಂದೆ ಯಾರು ಇದ್ದಾರೆ ಎನ್ನುವುದರ ಕುರಿತು ತನಿಖೆ ಆಗುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವರು, ಶಿವಮೊಗ್ಗ ಈಗ ಸಂಪೂರ್ಣವಾಗಿ ಶಾಂತವಾಗಿದ್ದು, ಇನ್ನಷ್ಟು ದಿನ ಪೊಲೀಸ್ ಭದ್ರತೆ ಇರುತ್ತದೆ. ಈಗಾಗಲೇ ಘಟನೆಗೆ ಸಂಬಂಧಿಸಿ 8 ಜನರ ಬಂಧನ ಆಗಿದೆ. ಅವರ ಮೇಲೆ ಅನೇಕ ಕೇಸ್ ಇದೆ. ಈ ಕುರಿತು ತನಿಖೆ ನಡೆಯುತ್ತಿದ್ದು, ಶಿವಮೊಗ್ಗದಲ್ಲಿ 144 ಸೆಕ್ಷನ್ ಮುಂದುವರಿಸುತ್ತೇವೆ ಎಂದು ಹೇಳಿದರು.
ಅನೇಕ ಹಿಂದೂ ಕಾರ್ಯಕರ್ತರಿಗೆ ಬೆದರಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವ ಆರಗ ಜ್ಞಾನೇಂದ್ರ, ಬೆದರಿಕೆ ಬಂದ ಕೂಡಲೇ ಪೊಲೀಸರಿಗೆ ದೂರು ಕೊಡಿ, ಭದ್ರತೆ ಕೊಡುತ್ತೇವೆ. ಪರಿಷತ್ ಸದಸ್ಯ ಅರುಣ್ಕುಮಾರ್ ಸೇರಿದಂತೆ ಎಲ್ಲರಿಗೂ ಭದ್ರತೆ ಕೊಡುತ್ತೇವೆ ಎಂದು ಭರವಸೆ ನೀಡಿದರು.

ಶಿವಮೊಗ್ಗದ ಕೋಟೆ ಮತ್ತೆ ದೊಡ್ಡಪೇಟೆ ಸ್ಟೇಷನ್ನಲ್ಲಿ ಆರೋಪಿಗಳ ವಿರುದ್ಧ ತನಿಖೆಯಾಗುತ್ತಿದೆ. 5 ವರ್ಷ ಹಿಂದಿನ ಸಂಪೂರ್ಣ ತನಿಖೆ ನಡೆಸಲು ಕ್ರೈಂ ಆಡಿಟ್ಗೆ ಸೂಚನೆ ನೀಡಲಾಗಿದೆ. ಆರೋಪಿಗಳ ಮೇಲೆ ಅನೇಕ ಕೇಸ್ ಇವೆ. ಆದರೂ ಪೊಲೀಸರು ಈವರೆಗೆ ಏನು ಮಾಡುತ್ತಿದ್ದರೂ ಎಂದು ತನಿಖೆ ನಡೆಯುತ್ತಿದೆ.
ಬಂಧಿತರಾದ ಆರೋಪಿಗಳು ಒಂದಕ್ಕಿಂತ ಹೆಚ್ಚು ಅಪರಾಧ ಕೃತ್ಯಗಳನ್ನು ಮಾಡಿದ್ದು, ಇವರ ಬೆಳವಣಿಗೆಗೆ ಕಡಿವಾಣ ಹಾಕಲು ವಿಫಲರಾದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಬಗ್ಗೆಯೂ ಸಾರ್ವಜನಿಕರಿಂದ ದೂರುಗಳು ಬಂದಿದ್ದು, ತನಿಖೆ ನಡೆಸಿ ವರದಿ ನೀಡಲು ಸೂಚಿಸಲಾಗಿದೆ.

ಈ ಬಗ್ಗೆ ಡಿಜಿಪಿಗೆ ಪತ್ರ ಬರೆದಿರುವ ಸಚಿವರು, ಒಂದು ವಾರದಲ್ಲಿ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ನಿರ್ದೇಶಿಸಿದ್ದಾರೆ. ಪೊಲೀಸರು ಲೋಪ ಮಾಡಿದರೆ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ಎಸ್ಡಿಪಿಐ ಮತ್ತು ಪಿಎಫ್ಐ ಸಂಘಟನೆ ಬ್ಯಾನ್ ವಿಚಾರವಾಗಿ ಮಾತನಾಡಿದ ಅವರು, ಶಾಸಕರ ಆದಿಯಾಗಿ ಎಲ್ಲರೂ ಇದಕ್ಕೆ ಒತ್ತಾಯ ಮಾಡಿದ್ದಾರೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.
ಶಿವಮೊಗ್ಗ ಘಟನೆಯಲ್ಲಿ ಕಲ್ಲು ತೂರಾಟದಿಂದ ಆದ ಹಾನಿ ಬಗ್ಗೆ ಲೆಕ್ಕ ಹಾಕಲಾಗುತ್ತಿದೆ. ನಾವು ಈ ಪ್ರಕರಣವನ್ನು ಸಾಮಾನ್ಯ ಪ್ರಕರಣ ಅಂತ ಅಂದುಕೊಂಡಿಲ್ಲ. ಇದರ ಹಿಂದೆ ಯಾರೆಲ್ಲ ಇದ್ದಾರೆ ಎನ್ನುವ ಸಂಪೂರ್ಣ ತನಿಖೆ ಆಗುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಎಲ್ಲರೂ ಸಣ್ಣ ವಯಸ್ಸಿನವರು
ಬಂಧಿತ ಆರೋಪಿಗಳೆಲ್ಲ 21ರಿಂದ 22 ವರ್ಷ ವಯಸ್ಸಿನವರು. ಖಾಸಿಫ್ ಮಾತ್ರ 30 ವರ್ಷದವನು. ಎಲ್ಲರೂ ಕ್ಲಾರ್ಕ್ ಪೇಟೆ ನಿವಾಸಿಗಳಾಗಿದ್ದಾರೆ. ಇವರು ಒಟ್ಟಿಗೆ ಇರುತ್ತಿದ್ದರು. ಇತ್ತೀಚೆಗೆ ಎಲ್ಲರೂ ಬೇರೆ ಬೇರೆ ಕಡೆ ವಾಸವಾಗಿದ್ದಾರೆ. ಖಾಸಿಫ್ ಮಾತ್ರ ಕ್ಲಾರ್ಕ್ ಪೇಟೆಯಲ್ಲಿ ವಾಸವಾಗಿದ್ದಾನೆ ಎಂದು ಶಿವಮೊಗ್ಗ ಎಸ್ಪಿ ಮಾಹಿತಿ ನೀಡಿದರು.
ಈವರೆಗೆ 12 ಮಂದಿಯ ವಿಚಾರಣೆ
ಹತ್ಯೆ ಪ್ರಕರಣ ಸಂಬಂಧ 12 ಮಂದಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಶಿವಮೊಗ್ಗ ಎಸ್ಪಿ ಲಕ್ಷ್ಮಿಪ್ರಸಾದ್ ತಿಳಿಸಿದ್ದು, ಪ್ರಕರಣ ಸಂಬಂಧ ಮತ್ತಷ್ಟು ಮಂದಿಯನ್ನು ಬಂಧಿಸುವ ಸಾಧ್ಯತೆ ಇದೆ ಎಂದರು.
ಹತ್ಯೆಗೆ ಕಾರಣವೇನು?
ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಬಂಧಿತರ ವಿಚಾರಣೆ ಬಳಿಕ ಈ ಕುರಿತು ಸ್ಪಷ್ಟತೆ ಸಿಗಲಿದೆ. ಭಾನುವಾರ ರಾತ್ರಿ ಹರ್ಷನನ್ನು ಸ್ವಲ್ಪ ದೂರದವರೆಗೆ ಓಡಿಸಿಕೊಂಡು ಹೋಗಿ ಹತ್ಯೆ ಮಾಡಿದ್ದಾರೆ ಎಂದು ಶಿವಮೊಗ್ಗ ಎಸ್ಪಿ ಲಕ್ಷ್ಮಿಪ್ರಸಾದ್ ತಿಳಿಸಿದರು.












Click it and Unblock the Notifications