'ಹರ್ ಘರ್ ತಿರಂಗಾ' ಹವಾ: ತಿರಂಗಾ ನಡೆಗೆ ಜೋಶಿ ಚಾಲನೆ
ಬೆಂಗಳೂರು ಆಗಸ್ಟ್ 12: ದೇಶದಲ್ಲಿ ನಾಳೆಯಿಂದ ಆರಂಭವಾಗಲಿರುವ 'ಹರ್ ಘರ್ ತಿರಂಗಾ ಅಭಿಯಾನ' ಒಂದು ಮುನ್ನವೇ ಕರ್ನಾಟಕದಲ್ಲಿ ಆರಂಭವಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರ ಖಾತೆ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಶುಕ್ರವಾರ ಉತ್ತರ ಕರ್ನಾಟಕದ ಅವಳಿ ನಗರಗಳಾದ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ಆಯೋಜಿಸಿದ್ದ 'ತಿರಂಗಾ ನಡೆ' ಯಾತ್ರೆಗೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು ಉದ್ಘಾಟಿಸಿದರು.
ವಿಶೇಷವಾಗಿ ಪ್ರಹ್ಲಾದ್ ಜೋಶಿಯವರು ಡೋಳ್ಳು ಹಾಗೂ ವೀರಗಾಸೆ ವಾದ್ಯಗಳನ್ನು ಬಾರಿಸುವ ಮೂಲಕ 'ಹರ್ ಘರ್ ತಿರಂಗಾ' ಅಭಿಯಾನದ ಭಾಗವಾದ 'ತಿರಂಗಾ ಯಾತ್ರೆಗೆ' ಚಾಲನೆ ನೀಡಿದರು. ಈ ವೇಳೆ ಪ್ರಹ್ಲಾದ್ ಜೋಶಿ ಅವರಿಗೆ ಸಾಥ್ ನೀಡಿದ ಮಾಜಿ ಮುಖ್ಯಮಮತ್ರಿ ಜಗದೀಶ್ ಶೆಟ್ಟರ್ ಅವರು ಡೊಳ್ಳು ಮೊಳಗುತ್ತಿದ್ದಂತೆ ವೀರಗಾಸೆ ಕಲಾವಿದರ ಜೊತೆ ಹೆಜ್ಜೆ ಹಾಕಿ ಸಂಭ್ರಮಿಸಿದರು.
ಪ್ರತಿ ಮನೆಗಳಲ್ಲಿ ತ್ರಿವರ್ಣ ಧ್ವಜ ಹಾರಿಸಲು ಕರೆ
ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ್ ಜೋಶಿ ಅವರು, 'ಹರ್ ಘರ್ ತಿರಂಗಾ' ಅಭಿಯಾನವು ಕರ್ನಾಟಕದಲ್ಲಿ ಒಂದು ದಿನ ಮೊದಲೇ ಆರಂಭವಾಗಿರುವುದು ಎಲ್ಲರಲ್ಲೂ ಸಂತಸ ಮೂಡಿಸಿದೆ. ಪ್ರತಿಯೊಬ್ಬರು ಮನೆಗಳಲ್ಲಿ ತ್ರಿವರ್ಣ ಹಾರಿಸುವ ಮುಖೇನ ಅಭಿಯಾನದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಅವರು ಕರೆ ನೀಡಿದರು.
ಆಗಸ್ಟ್ 15ರಂದು ಕಾತರದಿಂದ ಕಾಯುತ್ತಿರುವ 75ನೇ ಸ್ವಾತಂತ್ರ್ಯ ದಿನಾಚರಣೆ ಜರುಗಲಿದೆ. ಅದಕ್ಕೂ ಮುನ್ನವೇ ಅಮೃತ ಮಹೋತ್ಸವಕ್ಕೆ ಮೆರಗು ನೀವಂತೆ ಕರ್ನಾಟದಲ್ಲಿ ತಿರಂಗಾ ಹವಾ ಶುರುವಾಗಿದೆ. ಇದರ ಭಾಗವಾಗಿ ನಾಡಿನ ಪ್ರತಿ ಮನೆ ಮನೆಗಳಲ್ಲೂ ತ್ರಿವರ್ಣ ಧ್ವಜ ಹಾರಾಡಬೇಕು ಎಂದರು.
ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 75 ವರ್ಷಗಳು ತುಂಬುತ್ತಿರುವ ಈ ಶುಭ ಸಂದರ್ಭದಲ್ಲಿ, ದೇಶದ ಪ್ರತಿ ಮನೆಯ ಮೇಲೆ 'ರಾಷ್ಟ್ರಧ್ವಜ'ವನ್ನು ಹಾರಿಸಿ ನಮ್ಮಗಳ ರಾಷ್ಟ್ರ ಭಕ್ತಿಯನ್ನು ವ್ಯಕ್ತಪಡಿಸಬೇಕು. ಈ ಅಭಿಯಾನವನ್ನು ಎಲ್ಲರು ಸೇರಿ ಯಶಸ್ವಿಗೊಳಿಸೋಣ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಈ ವೇಳೆ ಬಿಜೆಪಿ ಯ ಸ್ಥಳೀಯ ಮುಖಂಡರು, ನೂರಾರು ಕಾರ್ಯಕರ್ತರು, ಸಾರ್ವಜನಿಕರು ತ್ರಿವರ್ಣ ಧ್ವಜ ಹಿಡಿದು ಹುಬ್ಬಳ್ಳಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.
Recommended Video